ಅಂಕಣಗಳು

ಗೊನೆಯಲ್ಲಿ ತಂದ ಭತ್ತ ಕುಟ್ಟಿದ ಹೊಸ ಅಕ್ಕಿ…

• ಡಾ.ಪಿ.ಕೆ.ರಾಜಶೇಖರ

ನಿಸರ್ಗದ ವಿದ್ಯಶಕ್ತಿಗಳ ಆರಾಧನೆಯಲ್ಲಿ ಸೂರ್ಯನಿಗೆ ಅಗಸ್ಥಾನ. ಸೂರ್ಯನು ಕತ್ತಲೆಯನ್ನು ಓಡಿಸುವುದು ಮಾತ್ರವಲ್ಲ ಸಕಲ ಜೀವಿಗಳಿಗೂ ಚೈತನ್ಯದಾಯಕ ಹಾಗೂ ನಿರಂತರ ಪೋಷಕ, ಸಮೃದ್ಧಿ, ಸಂತೃಪ್ತಿಗಳಿಗೆ ಹಾಗೂ ಮಳೆ-ಬೆಳೆ, ರೋಗ ರುಜಿನ ಮುಂತಾದವುಗಳಿಗೆಲ್ಲ ಸೂರ್ಯನೇ ಮೂಲ. ಇಂತಹ ಸೂರ್ಯದೇವನು ತನ್ನ ಪಥವನ್ನು ಬದಲಿಸುವ ಪರ್ವದಿನವನ್ನು ‘ಸಂಕ್ರಾಂತಿ’ ಎಂದು ಆಚರಿಸಲಾಗುತ್ತಿದೆ. ಇಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ ಆರು ತಿಂಗಳುಗಳ ಕಾಲ ಪ್ರಯಾಣಿಸುವನು.

ಈ ಪಥ ಬದಲಾವಣೆಯ ದಿನವನ್ನು ಮಕರ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಭಾರತೀಯರು ಈ ಕಾಲವನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುವರು. ಮಾಗಿ ಒಂದು ರೀತಿಯ ಸುಗ್ಗಿಯ ಕಾಲವೂ ಆಗಿದೆ. ವ್ಯವಸಾಯದ ಕೆಲಸಗಳು ಮುಗಿದು ರೈತರ ಮನೆಯಲ್ಲಿ ಸಮೃದ್ಧಿ ನಲಿದಾಡುತ್ತಿರುವುದರಿಂದ ರೈತರ ಸುಖಸಂತೋಷಗಳ ಕಾಲವೇ ಸಂಕ್ರಾಂತಿ, ಸಂಕ್ರಾಂತಿ ಶಿಷ್ಟಜನರು ಯೋಚಿಸುವ ಮಕರ ಸಂಕ್ರಮಣದ ಕಲ್ಪನೆಯೂ ಅಲ್ಲ; ನಾಗರಿಕರು ಎಳ್ಳು ಬೀರಿ ಆಚರಿಸುವ ಹಬ್ಬವೂ ಅಲ್ಲ. ಅದು ರೈತನ ಇಡೀ ವರ್ಷದ ದುಡಿಮೆಗೆ ಭೂಮಿತಾಯಿ ಕೊಟ್ಟ ಬೆಳೆಯನ್ನು ಕಂಡು ಹಿಗ್ಗುವ ‘ಸುಗ್ಗಿ ಹಬ್ಬ’.

ಭೂಮಿತಾಯಿಗೆ ಪೂಜಿಸಿ ಕೃತಜ್ಞತೆಯನ್ನು ಸಲ್ಲಿಸಿ ಸಂಭ್ರಮಿಸುವ ಸಡಗರದ ಹಬ್ಬ. ಭಾರತದಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಿದರೂ ದಕ್ಷಿಣ ಭಾರತದಲ್ಲಿ ಬಹಳ ವಿಶೇಷವಾದ ಹಬ್ಬ. ಅದರಲ್ಲಿಯೂ ತಮಿಳರು ಇದನ್ನು ಹೊಸ ವರ್ಷಾರಂಭ ಮಾತ್ರವಲ್ಲ ಪೊಂಗಲ್ (ಪೊನ್ + ವೊಳ್, ಚಿನ್ನದಂಥ ಅನ್ನ) ಹಬ್ಬವೆಂದು ಆಚರಿಸುತ್ತಾರೆ.

ರೈತರಿಗೆ ಸಂಕ್ರಾಂತಿ ಎಂದರೆ ಮಕರ ಸಂಕ್ರಮಣವೆಂದು ಹೇಳಿದರೆ ಅವರಿಗೆ ಅರ್ಥವಾಗುವುದಿಲ್ಲ. ರೈತರಿಗೆ ಇದು ಸುಗ್ಗಿ ಹಬ್ಬ. ಅದು ರೈತರಿಗೆ ಹಿಗ್ಗಿನ ಹಬ್ಬ. ಕೊಯ್ದಾಟ ಹಾಗೂ ಒಕ್ಕುವಾಟ. ಬೆಳೆದ ಫಸಲನ್ನು ಮೆದೆ ಹಾಕಿ ಕಣವನ್ನು ಮಾಡುವುದೇ ಒಂದು ಚೆಂದ ನೆಲವನ್ನು ಮಟ್ಟಮಾಡಿ, ಕಣದ ಮಧ್ಯಭಾಗಕ್ಕೆ ಮೇಟಿ ದೇವರನ್ನು ನಿಲ್ಲಿಸಿ ಪೂಜೆ ಮಾಡಿ ಎಳ್ಳಕ್ಕಿ, ಕಡಲೆಬೆಲ್ಲ, ಕೊಬ್ಬರಿ ಸಕ್ಕರೆಗಳನ್ನು ಎಲ್ಲರಿಗೂ ಕೊಟ್ಟು ಉಲಿಗೋ ವಾಸ್ತೇವ ಎಂದು ಕಾಕು ಹಾಕಿ ಆನಂದಿಸುತ್ತಾರೆ.

ಕಣದಲ್ಲಿ ಒಟಬೂದಿಯಲ್ಲಿ ವ್ಯವಸಾಯೋಪಕರಣಗಳಾದ ನೇಗಿಲು, ಕುಂಟೆ, ಹಲುಬೆ, ನೊಗ, ಏಣಿ, ಕೊಂಗ, ಗೆರಸಿ, ವಂದಿ ಮುಂತಾದ ಸಾಮಗ್ರಿಗಳನ್ನಿಟ್ಟು ಪೂಜಿಸುವ ಜತೆಗೆ ಬಸವಣ್ಣ, ಸೂರ್ಯ-ಚಂದ್ರರ ಚಿತ್ರಗಳನ್ನು ಬಿಡಿಸುತ್ತಾರೆ. ಸಾಯಂಕಾಲದ ವೇಳೆಗೆ ಮೇಟಿಯ ತಲೆಯ ಮೇಲೆ ಸಗಣಿ ಉಂಡೆ ಮಡಗಿ ಅಣ್ಣೆಹೂವು, ಅವರೇ ಹೂವು, ಉತ್ರಾಣಿಕಡ್ಡಿ, ಹಸುವಿನ ಬಾಲದ ಕೂದಲು, ಮಾವಿನ ಸೊಪ್ಪು, ಅಂಟಿಕೊಳಕಡ್ಡಿ, ಜೋಳದ ತೆನೆ, ಮೂಗುಬೊಟ್ಟಿನ ಹೂವು ಇತ್ಯಾದಿಗಳನ್ನಿಟ್ಟು ಹೊಂಬಾಳೆಯನ್ನು ಕಟ್ಟಿ ಪೂಜಿಸುತ್ತಾರೆ.

ಬೇಯಿಸಿದ ಅವರೇಕಾಯಿಗಳನ್ನು ಮೆದೆಯ ಮೇಲಕ್ಕೆ ಎರಚಿ ‘ಉಲಿಗೋ ವಾದ್ದೇವ’ ಎಂದು ಕಾಕು ಹಾಕಿ ವಾಯುದೇವನನ್ನು ಆಹ್ವಾನಿಸುತ್ತಾರೆ. ಮೇಟಿ ದೇವರ ಮೇಲೂ ಹೀಗೆಯೇ ಬೆಂದ ಅವರೇ ಕಾಳುಗಳನ್ನು ಎರಚುತ್ತಾರೆ. ಹೀಗೆ ಮಾಡುವುದರಿಂದ ಬೆಳೆಯು ಹೆಚ್ಚಾಗಿ ಧಾನ್ಯ ಲಕ್ಷ್ಮೀಯು ಮನೆಗೆ ಶುಭಪ್ರದಳಾಗಿ ಪ್ರವೇಶಿಸುತ್ತಾಳೆ ಎಂಬುದು ನಂಬಿಕೆ.

ಮಕರ ಸಂಕ್ರಮಣದ ಹಿಂದಿನ ದಿನವನ್ನು ‘ಭೋಗಿ’ ಎಂದು ಕರೆದು ಹಬ್ಬವನ್ನಾಗಿ ಆಚರಿಸುವ ಕ್ರಮ. ಉತ್ತರ ಕರ್ನಾಟಕದಲ್ಲಿದೆ. ಈ ದಿನದಲ್ಲಿ ಮುತ್ತೈದೆಯರು ಮಂಗಳಕರ ವಸ್ತುಗಳಿಂದ ಬಾಗಿನವನ್ನು ಕೊಡುತ್ತಾರೆ. ಧನುರ್ಮಾಸದ ಕೊನೆಯ ದಿನವಾದ ಇಂದು ದೇವರಿಗೆ ಹುಗ್ಗಿಗೊಜ್ಜು, ಸಜ್ಜೆಯ ರೊಟ್ಟಿ ವಡೆ, ಪಾಯಸಗಳ ನೈವೇದ್ಯ ಮಾಡುತ್ತಾರೆ.

ಮರುದಿನ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಸಮಯವೇ ಸಂಕ್ರಮಣ ಪುಣ್ಯಕಾಲ, ಇಂದು ಎಲ್ಲರೂ ಎಳ್ಳುಚಟ್ಟನ್ನು ಮೈಗೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವರು. ಇಂದಿನ ಹಬ್ಬದ ಸವಿಯೂಟದಲ್ಲಿ ಎಳ್ಳುಬೆಲ್ಲದ ಸಿಹಿತಿನಿಸುಗಳಿಗೆ ಹೆಚ್ಚಿನ ಪ್ರಾಶಸ್ತ್ರ ಪರಸ್ಪರ ಎಳು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಕದಬಳ್ಳಿಯಲ್ಲಿ ಸಂಕ್ರಾಂತಿಯನ್ನು ಬೇಟೆಯ ಹಬ್ಬವನ್ನಾಗಿ ಆಚರಿಸುತ್ತಾರೆ. ಇಲ್ಲಿರುವ ಕಾವೇಟಿ ರಂಗಸ್ವಾಮಿಯ ದೇವಾಲಯದಲ್ಲಿರುವ ರಂಗನಾಥನ ವಿಗ್ರಹದ ಅಕ್ಕಪಕ್ಕದಲ್ಲಿ ಎರಡು ನರಿಗಳು ಕಾವಲು ಕಾಯುತ್ತಿರುವಂತೆ ಕೆತ್ತಲಾಗಿದೆ. ಈ ಹಬ್ಬಕ್ಕೂ ಈ ನರಿಗಳಿಗೂ ಏನು ಸಂಬಂಧ ಎಂಬುದು ಎಲ್ಲಿಯೂ ಉತ್ತರ ಸಿಗದ ಪ್ರಶ್ನೆ.

ಮೈಸೂರು, ಕೊಡಗಿನಲ್ಲಿಯೂ ಕೆಲ ಊರುಗಳಲ್ಲಿ ಸಂಕ್ರಾಂತಿ ಎಂದರೆ ಬೇಟೆಯ ಹಬ್ಬ. ಊರ ಜನರೆಲ್ಲರೂ ಆನೆಚೌಕೂರಿಗೆ ಹೋಗುವ ರಸ್ತೆಯಲ್ಲಿರುವ ಮುತ್ತುರಾಯಸ್ವಾಮಿ ದೇವಸ್ಥಾನಕ್ಕೆ ಮುಂಜಾನೆಯೇ ಹೋಗಿ ಪೂಜೆ ಮಾಡಿ ಬೇಟೆ ಹಾಡುಗಳನ್ನು ಹಾಡುತ್ತಾರೆ. ನಂತರ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾರೆ.

ಸಂಕ್ರಾಂತಿ ಹಬ್ಬ ಕರ್ನಾಟಕದ ಕೆಲವು ಕಡೆ ದನಗಳ ಹಬ್ಬವಾಗಿಯೂ ಆಚರಿಸುಲ್ಪಡುತ್ತದೆ. ಇದಕ್ಕೆ ‘ಪುಣ್ಯಕೋಟಿ’ ಎಂಬ ಹೆಸರಿನ ಹಸು ಕಾರಣವೆಂದು ಹೇಳುವ ಗೋವಿನ ಹಾಡು ಹೆಚ್ಚು ಪ್ರಸಿದ್ಧವಾಗಿದೆ. ವಿಶೇಷವಾಗಿ ಮಂಡ್ಯ, ಮೈಸೂರು, ಮಳವಳ್ಳಿಗಳಲ್ಲಿ ನಡೆಯುವ ದನಗಳ ಹಬ್ಬ ಪ್ರಸಿದ್ಧವಾಗಿದೆ. ಪುಣ್ಯಕೋಟಿ ಹಸುವನ್ನು ವ್ಯಾಘ್ರ ತಿನ್ನದೇ ಬಿಟ್ಟ ದಿನವನ್ನು ಮಕರ ಸಂಕ್ರಾಂತಿ ದಿನ ಎಂಬ ಹೆಸರಿನಿಂದ ದನಗಳ ಹಬ್ಬವನ್ನಾಗಿ ಆಚರಿಸುವುದಾಗಿ ಹೇಳುತ್ತಾರೆ.
ಈ ಹಬ್ಬದ ದಿನದಂದು ದನಗಳ ಕಿಚ್ಚು ಹಾಯಿಸುವುದು ಹೆಚ್ಚು ಮಹತ್ವ ಪಡೆದಿದೆ. ಊರಿನ ಪ್ರಮುಖ ಸ್ಥಳದಲ್ಲಿ ರಸ್ತೆಗೆ ಅಡ್ಡಲಾಗಿ ಕಿಚ್ಚು ಹಾಕಿ ದನಗಳನ್ನು ಹಾಯಿಸಲಾಗುತ್ತದೆ. ಕಿಚ್ಚನ್ನು ಹಾಯಿಸುವಾಗ ಜನರೂ ದನಗಳನ್ನು ಹಿಡಿದು ಕಿಚ್ಚನ್ನು ಹಾಯುತ್ತಾರೆ. ಹೀಗೆ ಓಡಿಸಿಕೊಂಡ ಬಂದ ದನಗಳನ್ನು ಮನೆ ಬಾಗಿಲಿನಲ್ಲಿ ನಿಲ್ಲಿಸುತ್ತಾರೆ. ಅಷ್ಟು ಹೊತ್ತಿಗೆ ಹೆಂಗಸರು ಆರತಿಯೊಡನೆ ಅವುಗಳನ್ನು ಎದುರುಗೊಳ್ಳುತ್ತಾರೆ. ಗೋವುಗಳ ಪಾದತೊಳೆದು ಪೂಜಿಸಿ ಅವುಗಳ ಕಾಲಿಗೆ ಚಿನ್ನವನ್ನು ತಾಕಿಸಿ ಶರಣು ಮಾಡುತ್ತಾರೆ.

ಆಟೋಪಗಳೆಲ್ಲ ಮುಗಿದ ಬಳಿಕ ಗೋವಿನ ಹಾಡುಗಳನ್ನು ರಾಗ ವಾಗಿ ಹಾಡುತ್ತಾರೆ. ಉಳಿದವರೆಲ್ಲ ತನ್ಮಯತೆಯಿಂದ ಕುಳಿತು ಕೇಳುತ್ತಾರೆ. ಗೊನೆಯಲ್ಲಿ ತಂದ ಭತ್ತ ಕುಟ್ಟಿದ ಹೊಸ ಅಕ್ಕಿ
ಉಕ್ಕಿಸಿ ಹೆಚ್ಚಾದ ಬೆಲ್ಲದನ್ನಣ
ಉಕ್ಕಿನ ಹೆಚ್ಚಾದ ಬೆಲ್ಲದನ್ನ ಬಸವಯ
ಪಡುಸೋಗ ಸಂಕ್ರಾಂತಿ ಸುಕುವಾಯ್ತುಣ
ಸಂಕ್ರಾಂತಿ ಹಬ್ಬದಲ್ಲಿ ಸಂಭ್ರಮವೇ ನಮ್ಮ
ಬೆಳೆದು ಬೀಗ್ಯಾಳೆ ಭೂಮಿ ತಾಯಿಣ
ಎಳ್ಳು ಬೆಲ್ಲವ ಗೊಟ್ಟ ಒಳ್ಳೆ ಬಾಳನುಗೊಟ್ಟ
ಎಲ್ಲರಿಗೂ ಸುಖಸಂಪತ್ತು ಕೊಟ್ಟಣ
(ಲೇಖಕರು ಖ್ಯಾತ ಜಾನಪದ ವಿದ್ವಾಂಸರು ಮತ್ತು ಗಾಯಕರು)

andolanait

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಫೆ.14 ಶನಿವಾರ

2 hours ago

ಪೂರ್ಣ ಸಿದ್ಧವಾಗದ ಎಕ್ಸ್‌ಪ್ರೇಸ್‌ ವೇ : ಟೋಲ್‌ ಕಡಿತ

ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…

12 hours ago

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

13 hours ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

13 hours ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

13 hours ago

ರೈಲ್‌ಒನ್‌ ಆಪ್‌ : ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಬೆಂಗಳೂರು : ಭಾರತೀಯ ರೈಲ್ವೆಯು ತನ್ನ ಅಧಿಕೃತ ಆಪ್ ‘ರೈಲ್‌ಒನ್’ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ…

14 hours ago