ಅಂಕಣಗಳು

ರಾಜೀನಾಮೆಯ ಆಗ್ರಹವೂ ಉತ್ತರದಾಯಿತ್ವದ ಕೊರತೆಯೂ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದಿವೆ. ಯಾವುದೇ ಚುನಾಯಿತ ಸರ್ಕಾರಕ್ಕೆ ಎರಡು ವರ್ಷಗಳ ಆಡಳಿತ ಎಂದರೆ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿದೆ ಎಂದೇ ಅರ್ಥ. ಈ ಅಧಿಕಾರಾವಧಿಯಲ್ಲಿ ಹಲವು ಸಾಧನೆಗಳೊಂದಿಗೆ ಹಲವಾರು ಪ್ರಮಾದಗಳಿಗೆ ಕಾರಣವಾಗಿರುವ ಸಿದ್ದರಾಮಯ್ಯ ಸರ್ಕಾರದ ಮೌಲ್ಯಮಾಪನ ಮಾಡಿದರೆ, ಸಂಪೂರ್ಣವಾಗಿ ಸಮಾಧಾನಕರ ಚಿತ್ರಣ ಕಾಣುವುದಿಲ್ಲ. ಹೆಚ್ಚುತ್ತಿರುವ ಅಪರಾಧಗಳು, ಮಹಿಳಾ ದೌರ್ಜನ್ಯಗಳು ಕಾನೂನು ಪಾಲನೆಯ ವೈಫಲ್ಯವನ್ನು ತೋರಿಸು ವಂತಿದೆ.

ಆದಾಗ್ಯೂ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ, ಫಲಾನುಭವಿಗಳ ಸಕಾರಾತ್ಮಕ ಸ್ಪಂದನೆ ಮತ್ತು ಇದರೊಂದಿಗೆ ಬಹುಮತದ ಸರ್ಕಾರವೊಂದು ಹೊಸ ಆಡಳಿತ ನೀತಿ ಮತ್ತು ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಗುತ್ತಿರುವಾಗ, ಹಾದಿಯಲ್ಲಿ ಸಂಭವಿಸಬಹುದಾದ ರಾಜಕೀಯ ಪಲ್ಲಟಗಳು ಮತ್ತು ನೀತಿ ವ್ಯತ್ಯಯಗಳು ಸಹಜ. ಇಲ್ಲಿ ಪ್ರಶ್ನೆ ಇರುವುದು ವಿರೋಧ ಪಕ್ಷ ನಿರ್ವಹಿಸಬೇಕಾದ ಜವಾಬ್ದಾರಿಯುತ ಪಾತ್ರ ಮತ್ತು ಸದನದಲ್ಲಿ ಧ್ವನಿಸಬೇಕಾದ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಕುರಿತು.

ತಪ್ಪುಗಳನ್ನೇ ಮಾಡದ ಸರ್ಕಾರಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಚರಿತ್ರೆಯಲ್ಲಿ ದಾಖಲಾಗಿರುವುದೂ ಇಲ್ಲ. ಸಹಜವಾಗಿಯೇ ವಿರೋಧ ಪಕ್ಷಗಳು ಈ ತಪ್ಪುಗಳನ್ನು ಎತ್ತಿತೋರಿಸುವ ನೈತಿಕ ಜವಾಬ್ದಾರಿ ಹೊಂದಿರು ವಂತೆಯೇ, ಸೂಕ್ತ ಪರ್ಯಾಯವನ್ನು ಜನತೆಯ ಮುಂದಿಡುವ ಸಾಂವಿಧಾನಿಕ ಕರ್ತವ್ಯವನ್ನೂ ಹೊಂದಿರುತ್ತವೆ. ಆದರೆ ರಾಜ್ಯ ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡ ಹತಾಶೆ ಮತ್ತು ಅಧಿಕಾರ ರಹಿತವಾಗಿ ಇರಲಾರದ ತೊಳಲಾಟಗಳ ನಡುವೆ ಸಿಲುಕಿ ಪರದಾಡುತ್ತಿರುವುದು ಮೇಲ್ನೋಟಕ್ಕೆ ಕಾಣಿಸುವಂತಿದೆ.

ಬಿಜೆಪಿ ಸ್ಥಳೀಯ ನಾಯಕರು ಮತ್ತು ರಾಷ್ಟ್ರೀಯ ನಾಯಕರೂ ಕೂಡ, ಸರ್ಕಾರದ ಯೋಜನೆಗಳ ವಿರುದ್ಧ ದನಿ ಎತ್ತುವ ಭರದಲ್ಲಿ, ಅವುಗಳಿಂದ ಸಮಾಜದ ನಿರ್ಲಕ್ಷಿತ ಸಮುದಾಯಗಳಿಗೆ ಆಗುತ್ತಿ ರುವ ಉಪಯೋಗಗಳನ್ನೇ ಮರೆತಿರುವುದು ರಾಜಕೀಯ ಅಪ್ರಬುದ್ಧತೆಯ ದ್ಯೋತಕ. ಅಷ್ಟೇ ಅಲ್ಲದೆ ಪ್ರತಿಯೊಂದು ತಪ್ಪು ಹೆಜ್ಜೆಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿರುವುದು, ಪಕ್ಷದ ಗುರಿ ಸರ್ಕಾರಕ್ಕಿಂತಲೂ ಹೆಚ್ಚಾಗಿ ವ್ಯಕ್ತಿಗತವಾಗಿ ಸಿದ್ದರಾಮಯ್ಯನವರೇ ಎನ್ನುವುದನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

ಇದೇನೇ ಇರಲಿ, ಭಾರತದ ರಾಜಕಾರಣದಲ್ಲಿ, ವಿಶೇಷವಾಗಿ ಕಳೆದ ೨೫ ವರ್ಷಗಳಲ್ಲಿ, ನಿರ್ದಿಷ್ಟವಾಗಿ ೨೦೧೪ರ ನಂತರ ಬದಲಾದ ಭಾರತದಲ್ಲಿ, ಯಾವುದೇ ಸರ್ಕಾರವಾದರೂ, ಮುಖ್ಯಮಂತ್ರಿ/ಸಚಿವರಾಗಲೀ ಅಥವಾ ಇಡಿಯಾಗಿ ಸರ್ಕಾರವೇ ಆಗಲಿ, ಸಾರ್ವಜನಿಕ ಜೀವನದಲ್ಲಿ ಸಂಭವಿಸುವ ದುರ್ಘಟನೆಗಳಿಗೆ ಕಾನೂನು ಭಂಜಕ ಚಟುವಟಿಕೆಗಳಿಗೆ, ಸಮಾಜದ ಸೌಹಾರ್ದತೆಗೆ ಹಾನಿ ಉಂಟುಮಾಡುವ ಪ್ರಸಂಗಗಳಿಗೆ ಅಥವಾ ತನ್ನ ಆಡಳಿತ ನೀತಿ ಮತ್ತು ಅದರೊಳಗಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ವಹಿತಾಸಕ್ತಿ, ಒಳಜಗಳಗಳ ಪರಿಣಾಮವಾಗಿ ಸಂಭವಿಸುವ ದುರಾಡಳಿತಗಳಿಗೆ ನೈತಿಕ ಹೊಣೆ ಹೊತ್ತು,

ಉತ್ತರದಾಯಿತ್ವವನ್ನು ಒಪ್ಪಿಕೊಂಡು, ತಮ್ಮ ಸ್ಥಾನ ತ್ಯಜಿಸಿರುವ ನಿದರ್ಶನಗಳು ಇದೆಯೇ? ಮಹಿಳಾ ದೌರ್ಜನ್ಯಗಳು ನಡೆದರೆ ಸಂತ್ರಸ್ತರನ್ನೆ ಕಾರಣಕರ್ತರನ್ನಾಗಿ ನೋಡುವ, ಮೂಲ ಸೌಕರ್ಯ ಕೊರತೆಗಳಿಗೆ ಅಧಿಕಾರಶಾಹಿಯನ್ನು ದೂರುವ, ನೈಸರ್ಗಿಕ ಅನಾಹುತಗಳಿಗೆ ಪ್ರಕೃತಿಯನ್ನೇ ಜವಾಬ್ದಾರಿ ಮಾಡುವ ಒಂದು ಹೊಸ ಆಲೋಚನಾ ವಿಧಾನ ಕಳೆದ ೨೫ ವರ್ಷಗಳಲ್ಲಿ ಪಕ್ಷಾತೀತವಾಗಿ ರೂಢಿಗತವಾಗಿದೆ . ವಿಪರ್ಯಾಸವೆಂದರೆ ವರ್ತಮಾನದ ಭಾರತದಲ್ಲಿ ಆಡಳಿತ ವ್ಯವಸ್ಥೆ, ಸರ್ಕಾರದ ಉತ್ತರದಾಯಿತ್ವ ಮತ್ತು ನೈತಿಕ ಜವಾಬ್ದಾರಿ ಎರಡೂ ಔದಾತ್ಯಗಳು ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿವೆ.

ಉದಾಹರಣೆಗೆ ಚಾರ್ ಧಾಮ್ ಕ್ಷೇತ್ರದ, ಉತ್ತರಖಂಡದ ನೈಸರ್ಗಿಕ ವಿಕೋಪ, ವಯನಾಡಿನ ಪ್ರಕೃತಿ ನಾಶದ ದುಷ್ಪರಿಣಾಮ, ಈಗ ಹಿಮಾಚಲ ಪ್ರದೇಶದಲ್ಲಿ ಸಂಭವಿಸುತ್ತಿರುವ ದುರಂತಗಳು ಇವೆಲ್ಲದಕ್ಕೂ ಕಾರಣ ಸರ್ಕಾರಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಳ್ಳುವ ಮೂಲ ಸೌಕರ್ಯ ಯೋಜನೆಗಳು. ಈ ದುರಂತ ಗಳಲ್ಲಿ ಮಡಿದವರ ಸಂಖ್ಯೆ, ಆದ ಅನಾಹುತಗಳು, ಎಷ್ಟೇ ಇರಲಿ, ಯಾವುದೇ ಸರ್ಕಾರ ಉತ್ತರದಾಯಿತ್ವವನ್ನು ಹೊತ್ತಿದೆಯೇ ? ಅಥವಾ ಜನಸಾಮಾನ್ಯರ ಅತಿರೇಕದ ಶ್ರದ್ಧಾಭಕ್ತಿಗಳ ಪರಿಣಾಮವಾಗಿ ಉತ್ತರಪ್ರದೇಶದ ಪ್ರಯಾಗ, ಹರಿಯಾಣ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮುಂತಾದೆಡೆಗಳಲ್ಲಿ ಸಂಭವಿಸಿದ ಕಾಲ್ತುಳಿತದ ಸಾವುಗಳು ಎಷ್ಟು ಸರ್ಕಾರಗಳನ್ನು, ಅಧಿಕಾರ ಕೇಂದ್ರದ ರಾಜಕಾರಣಿಗಳನ್ನು ಪಲ್ಲಟಗೊಳಿಸಿವೆ. ಯಾವುದೇ ಪ್ರಕರಣ ದಲ್ಲಾದರೂ ಅಧಿಕಾರಶಾಹಿ ಅಥವಾ ಕಾನೂನು ಪಾಲಕರು ಶಿಕ್ಷೆಗೊಳಗಾಗಿ ರುವುದೇ ಹೊರತು, ರಾಜಕೀಯ ನಾಯಕರನ್ನು ಅಲುಗಾಡಿಸಲೂ ಸಾಧ್ಯವಾಗಿಲ್ಲ. ಈ ಘಟನೆಗಳಿಗೆ ಉತ್ತರದಾಯಿತ್ವ ಹೊತ್ತು ರಾಜೀನಾಮೆ ನೀಡುವ ಒಂದು ಪ್ರಸಂಗವನ್ನಾದರೂ ಕಾಣಲು ಸಾಧ್ಯವೇ ?

ಇನ್ನು ಭ್ರಷ್ಟಾಚಾರದ ಭಂಡಾರವನ್ನು ತೆರೆದು ನೋಡಿದರೆ ಅಲ್ಲಿ ಪಕ್ಷಾತೀತವಾಗಿ, ತತ್ವ ಸಿದ್ಧಾಂತಗಳಿಂದಾಚೆಗೆ ಎಲ್ಲ ರಾಜಕೀಯ ಪಕ್ಷಗಳ ಚಹರೆಗಳೂ ಕಾಣುತ್ತವೆ. ಪಕ್ಷಾಂತರದ ಹಾದಿಯಲ್ಲಿ ಆಡಳಿತ ಪಕ್ಷಕ್ಕೆ ಹಾರಿದರೆ ಭ್ರಷ್ಟರೆಲ್ಲರೂ ಪರಿಶುದ್ಧರಾಗುವ ಒಂದು ಯಾಂತ್ರಿಕ ವ್ಯವಸ್ಥೆಯನ್ನು ಬಿಜೆಪಿ ೨೦೧೪ರಿಂದಲೇ ಚಾಲ್ತಿಯಲ್ಲಿರಿಸಿದೆ. ಹಾಗಾಗಿ ಕೇಂದ್ರದಿಂದ ರಾಜ್ಯದವರೆಗೆ, ಸಂಸತ್ತಿನಿಂದ ವಿಧಾನಸಭೆಗಳವರೆಗೆ, ರಾಜ್ಯ ಸರ್ಕಾರದಿಂದ ಜಿಲ್ಲಾ ಪಂಚಾಯತ್ವರೆಗೆ, ಆಡಳಿತ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳಲ್ಲೂ ವ್ಯಾಪಕವಾಗಿ ಕಾಣುವ, ಬಹಿರಂಗವಾಗಿರುವ, ತನಿಖೆಗೊಳಗಾಗಿರುವ ಭ್ರಷ್ಟಾಚಾರದ ಹಗರಣಗಳು ಈಗ ಚುನಾವಣೆಗಳಷ್ಟೇ ನಿಯತ ಕಾಲಿಕ ವಿದ್ಯಮಾನಗಳಾಗಿವೆ. ಅಷ್ಟೇ ರೆಗ್ಯುಲರ್ ಆಗಿ ಎಲ್ಲ ರಾಜ್ಯಗಳಲ್ಲೂ ಕಾಣು ವುದು ಮಹಿಳಾ ದೌರ್ಜನ್ಯಗಳು, ಅತ್ಯಾಚಾರಗಳು, ದಲಿತರ ಮೇಲಿನ ಅಮಾನುಷ ದಾಳಿಗಳು, ಅಸ್ಪೃಶ್ಯತೆ-ಸಾಮಾಜಿಕ ಬಹಿಷ್ಕಾರದ ಪ್ರಸಂಗಗಳು, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಮತಾಂಧ ಶಕ್ತಿಗಳ ಅಟ್ಟಹಾಸಗಳು.

ಈ ಯಾವುದೇ ಪ್ರಕರಣಗಳಲ್ಲಿ, ಅಧಿಕಾರಸ್ಥರ ರಾಜೀನಾಮೆ ಒತ್ತಟ್ಟಿಗಿರಲಿ, ಯಾವ ಸರ್ಕಾರ ಅಥವಾ ಸಚಿವರಾದರೂ ನೈತಿಕ ಹೊಣೆ ಹೊತ್ತು, ರಾಜೀನಾಮೆ ಕೊಡುವುದು ದೂರದ ಮಾತು, ಸಮಾಜದ ಮುಂದೆ ಒಪ್ಪಿಕೊಂಡಿರುವ ನಿದರ್ಶನಗಳಿವೆಯೇ ? ಹೀಗಿದ್ದರೂ ಕರ್ನಾಟಕದಲ್ಲಿ ಪ್ರಧಾನ ವಿರೋಧ ಪಕ್ಷ ಬಿಜೆಪಿ ಗಳಿಗೆಗೊಮ್ಮೆ ಮುಖ್ಯಮಂತ್ರಿಗಳ ಮತ್ತು ಸರ್ಕಾರದ ರಾಜೀನಾಮೆಗಾಗಿ ಆಗ್ರಹಿಸುವ ಚಟವನ್ನು ಬೆಳೆಸಿಕೊಂಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಎಷ್ಟು ಪ್ರಸಂಗಗಳಲ್ಲಿ ರಾಜೀನಾಮೆಗೆ ಆಗ್ರಹಿಸಲಾಗಿದೆ, ಸರ್ಕಾರದ ಪತನಕ್ಕೆ ಎಷ್ಟು ದಿನಾಂಕಗಳನ್ನು ನಿಗದಿ ಪಡಿಸಲಾಗಿದೆ, ಮುಖ್ಯಮಂತ್ರಿಗಳ ಪದಚ್ಯುತಿಗೆ ಎಷ್ಟು ಬಾರಿ ಸಮಯ ನಿಗದಿ ಮಾಡಲಾಗಿದೆ ಎಂದು ಲೆಕ್ಕ ಇಡಲು ಸಾಧ್ಯವಿಲ್ಲ.

ಮುಡಾ ಹಗರಣವನ್ನೇ ನಿರ್ದಿಷ್ಟ ನಿದರ್ಶನವಾಗಿ ನೋಡಿದರೆ, ಮುಖ್ಯಮಂತ್ರಿಯ ಜೈಲುವಾಸ, ರಾಜೀನಾಮೆ, ಸರ್ಕಾರದ ಪತನ ಇವೆಲ್ಲದಕ್ಕೂ ದಿನಾಂಕಗಳನ್ನೂ ನಿಗದಿಪಡಿಸಲಾಗಿತ್ತು. ತನ್ನ ಅಧಿಕಾರಾವಧಿಯಲ್ಲಿ ಪಾಲಿಸದ ಔನ್ನತ್ಯಗಳನ್ನು ವಿರೋಧಪಕ್ಷ ವಾಗಿದ್ದಾಗ ಆಗ್ರಹಿಸುವ ಒಂದು ರಾಜಕೀಯ ಚಾಳಿಯ ಹಾಗೆಯೇ ರಾಜೀನಾಮೆಗಾಗಿ ಆಗ್ರಹಿಸುವ ಚಟವೂ ಸಹ ರಾಜ್ಯ ರಾಜಕಾರಣವನ್ನು ಅಂಟಿಕೊಂಡಿದೆ. ಒಂದು ರೈಲು ಅಪಘಾತಕ್ಕಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸ್ತ್ರಿ, ಫೋನ್ ಕದ್ದಾಲಿಕೆಯ ಆರೋಪಕ್ಕೆ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಹೆಗ್ಡೆ ಈಗ ಗ್ರಾಂಥಿಕ ಉಲ್ಲೇಖಗಳಾಗಿದ್ದಾರೆಯೇ ಹೊರತು, ರಾಜಕೀಯ ನೈತಿಕತೆ ಮತ್ತು ಪ್ರಾಮಾಣಿಕ ಆಳ್ವಿಕೆಗೆ ಪೂರ್ವನಿದರ್ಶನವಾಗಿ ಉಳಿದಿಲ್ಲ. ಭ್ರಷ್ಟಾಚಾರ ಸರ್ವವ್ಯಾಪಿಯಾದಂತೆಯೇ ಭ್ರಷ್ಟಾಚಾರದ ಕಳಂಕವೂ ಸರ್ವವ್ಯಾಪಿಯಾಗಿ ಎಲ್ಲ ರಾಜಕಾರಣಿಗಳಿಗೂ ಅಂಟಿರುವುದರಿಂದ, “ ನಿಮಗಿಂತ ನಾನು ಮೇಲು ! ” ಎಂಬ ದಾರ್ಷ್ಟ್ಯ ಎಲ್ಲರನ್ನೂ ಜನತಾ ನ್ಯಾಯಾಲಯದ ಕಟಕಟೆಗಳಿಂದ ದೂರ ಇರಿಸಿದೆ. ಹೀಗಿದ್ದಾಗಲೂ, ಪ್ರತಿ ಬಾರಿಯೂ ರಾಜೀನಾಮೆಯನ್ನೇ ಪ್ರಧಾನವಾಗಿ ಬಿಂಬಿಸಿ, ಜನಸಾಮಾನ್ಯರ ನೈಜ ಸಮಸ್ಯೆಗಳಿಗೆ ಕುರುಡಾಗುವುದು ವಿರೋಧ ಪಕ್ಷಗಳ ವಿಷಯ ದಾರಿದ್ರ್ಯಕ್ಕೆ ಸಾಕ್ಷಿ ಎಂದರೆ ಅತಿಶಯೋಕ್ತಿಯಾಗಲಾರದು.

ʼ ತಪ್ಪುಗಳನ್ನೇ ಮಾಡದ ಸರ್ಕಾರಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಚರಿತ್ರೆಯಲ್ಲಿ ದಾಖಲಾಗಿರುವುದೂ ಇಲ್ಲ. ಸಹಜವಾಗಿಯೇ ವಿರೋಧ ಪಕ್ಷಗಳು ಈ ತಪ್ಪುಗಳನ್ನು ಎತ್ತಿತೋರಿಸುವ ನೈತಿಕ ಜವಾಬ್ದಾರಿ ಹೊಂದಿರುವಂತೆಯೇ, ಸೂಕ್ತ ಪರ್ಯಾಯವನ್ನು ಜನತೆಯ ಮುಂದಿಡುವ ಸಾಂವಿಧಾನಿಕ ಕರ್ತವ್ಯವನ್ನೂ ಹೊಂದಿರುತ್ತವೆ.”

-ನಾ ದಿವಾಕರ

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

4 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

5 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

6 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

7 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

7 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

7 hours ago