ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಹಲವು ಲಿಂಗಾಯತ ಮಠಗಳಿಗೆ ಮುಖ್ಯಮಂತ್ರಿ ಡಿಕೆಶಿ ಅವರು ಆಪ್ಯಾಯಮಾನ
ಕರ್ನಾಟಕದಲ್ಲಿ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲು ಕೇಂದ್ರದ ಬಿಜೆಪಿ ನಾಯಕರು ನಿರ್ಧರಿಸಿzರೆ. ಇದಕ್ಕೆ ಕರ್ನಾಟಕ ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳು ಮಾತ್ರವಲ್ಲ,ಆಡಳಿತಾ ರೂಢ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೂ ಮುಖ್ಯ ಕಾರಣ.
ನೇರವಾಗಿ ಹೇಳಬೇಕೆಂದರೆ ಭವಿಷ್ಯದ ಕರ್ನಾಟಕದ ರಾಜಕಾರಣ ಯಾವ ನೆಲೆಯಲ್ಲಿ ಇಬ್ಭಾಗವಾಗಿ ನಿಲ್ಲಲಿದೆ ಎಂಬ ಬಗ್ಗೆ ಬಿಜೆಪಿ ವರಿಷ್ಠರ ಮುಂದೆ ಒಂದು ಚಿತ್ರ ಇತ್ತು. ಅದರ ಪ್ರಕಾರ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ವರ್ಗ, ಒಕ್ಕಲಿಗರು ಮತ್ತು ಒಂದು ಪ್ರಮಾಣದಲ್ಲಿ ದಲಿತ, ಹಿಂದುಳಿದ ವರ್ಗಗಳ ಮತಗಳು ಬಿಜೆಪಿ ಜತೆ ನಿಂತು, ಒಕ್ಕಲಿಗ ಪಾಕೇಟಿನ ಒಂದಷ್ಟು ಮತಗಳ ಜತೆ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಒಂದಷ್ಟು ಪ್ರಮಾಣದ ಮತಗಳು ಕಾಂಗ್ರೆಸ್ ಜತೆ ನಿಲ್ಲಲಿವೆ ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರಿಗೆ ಇತ್ತು.
ಆದರೆ ದಿನ ಕಳೆದಂತೆ ಬಿಜೆಪಿ ನಾಯಕರಿಗೆ ಬರುತ್ತಿರುವ ವರ್ತಮಾನ ಬೇರೆಯೇ ಇದೆ. ಅದರ ಪ್ರಕಾರ, ಪ್ರಬಲ ಲಿಂಗಾಯತ ಸಮುದಾಯ ಸಾಲಿಡ್ಡಾಗಿ ಬಿಜೆಪಿ ಜತೆ ನಿಲ್ಲುವುದು ಕಷ್ಟ. ಕಾರಣ ಈ ಹಿಂದೆ ಬಿಜೆಪಿ ಸೈನ್ಯದ ಮುಂದೆ ಯಡಿಯೂರಪ್ಪ ಅವರು ನಿಂತಿದ್ದಾಗ ಲಿಂಗಾಯತ ಸಮುದಾಯ ಒಂದು ಭರವಸೆಯೊಂದಿಗೆ ಬಿಜೆಪಿ ಜತೆ ನಿಂತಿತ್ತು.
ಆ ಸಮುದಾಯ ಹೀಗೆ ಸಾಲಿಡ್ಡಾಗಿ ಬಿಜೆಪಿ ಜತೆ ನಿಲ್ಲಲು ರಾಜದ್ಯಂತ ಹರಡಿಕೊಂಡಿರುವ ಲಿಂಗಾಯತ ಮಠಗಳು ಕೂಡ ಬಹು ಮುಖ್ಯ ಕಾರಣ. ಗಮನಿಸಬೇಕಾದ ಸಂಗತಿ ಎಂದರೆ ಯಡಿಯೂರಪ್ಪ ಅವರು ಅಧಿಕಾರದಲ್ಲಿರುವವರೆಗೂ ರಾಜ್ಯದ ಬಹುತೇಕ ಲಿಂಗಾಯತ ಮಠಾಧಿಪತಿಗಳು ಅವರ ಜತೆ ನಿಂತಿದ್ದರು.
ಹಾಗೆ ನೋಡಿದರೆ ೨೦೦೪ ರ ಚುನಾವಣೆಯ ನಂತರ ಯಡಿಯೂರಪ್ಪ ಲಿಂಗಾಯತ ನಾಯಕರಾಗಿ ಎಮರ್ಜ್ ಆಗಲು ಲಿಂಗಾಯತ ಮಠಾಧಿಪತಿಗಳೇ ಮುಖ್ಯ ಕಾರಣ. ಅವತ್ತು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದಾಗ ರಾಜ್ಯ ಬಿಜೆಪಿಯ ಪ್ರಬಲ ನಾಯಕರೊಬ್ಬರು, ಯಡಿಯೂರಪ್ಪನವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ಕೂಡಾ ಸಿಗದಂತೆ ನೋಡಿಕೊಳ್ಳಲು ಯತ್ನಿಸಿದರು.
ಇದು ಯಾವಾಗ ಗೊತ್ತಾಯಿತೋ?ಆಗ ಬೆಂಗಳೂರಿನಲ್ಲಿ ಆಯೋಜನೆಗೊಂಡ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಸಮಾರಂಭ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಿಸಿತು.ಅರ್ಥಾತ್, ಅವತ್ತು ಆ ಸಮಾರಂಭದಲ್ಲಿ ಭಾಗವಹಿಸಿದ್ದ ಲಿಂಗಾಯತ ಮಠಾಧಿಪತಿಗಳು ಯಡಿಯೂರಪ್ಪ ಅವರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಬಿಜೆಪಿ ವರಿಷ್ಠರಿಗೆ ರವಾನಿಸಿದರು.
ಈ ಸಂದೇಶವನ್ನು ಗ್ರಹಿಸಿದ ಬಿಜೆಪಿ ವರಿಷ್ಠರು ಯಡಿಯೂರಪ್ಪ ಇಲ್ಲಿಗೆ, ಅನಂತಕುಮಾರ್ ದಿಲ್ಲಿಗೆ ಎಂಬ ಸೂತ್ರವನ್ನು ರಚಿಸಿ ಕೈ ತೊಳೆದುಕೊಂಡರು. ಇದಾದ ಸುಮಾರು ಇಪ್ಪತ್ತು ವರ್ಷಗಳಷ್ಟು ಕಾಲ ಯಡಿಯೂರಪ್ಪ ರಾಜ್ಯ ಬಿಜೆಪಿಯ ನಿರ್ವಿವಾದ ನಾಯಕರಾಗಿ ಮೆರೆದರು. ಆದರೆ ಈಗ ಯಡಿಯೂರಪ್ಪ ಅವರು ರಾಜಕೀಯ ನೇಪಥ್ಯಕ್ಕೆ ಸರಿಯುತ್ತಿರುವ ಸಂದರ್ಭದಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಭರವಸೆ ತುಂಬಬಲ್ಲ ನಾಯಕರು ಕಾಣುತ್ತಿಲ್ಲ. ಪರಿಣಾಮ ರಾಜ್ಯದ ಹಲವು ಲಿಂಗಾಯತ ಮಠಗಳಿಗೀಗ ಕಾಂಗ್ರೆಸ್ ನಾಯಕ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಪ್ಯಾಯ ಮಾನವಾಗಿ ಕಾಣುತ್ತಿದ್ದಾರೆ. ಕಾರಣ ಸಾಫ್ಟ್ ಸೆಕ್ಯೂಲರ್ ಆಗಿರುವ ಡಿ. ಕೆ.ಶಿವಕುಮಾರ್ ರಾಜ್ಯದ ಇತಿಹಾಸದ ಹಿಂದೆಂದೂ ನಡೆಯದ ಒಂದು ಕೆಲಸವನ್ನು ತಮ್ಮ ಪ್ರಮಾಣ ವಚನ ಸಮಾರಂಭದಲ್ಲಿ ಮಾಡಿದರು.
ಅದೆಂದರೆ ಲಿಂಗಾಯತ ಪೀಠದ ಗುರುಗಳೊಬ್ಬರ ಫೋಟೋ ಇಟ್ಟುಕೊಂಡು ಅದಕ್ಕೆ ನಮನ ಸಲ್ಲಿಸಿದರು. ಒಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಂತಹ ಬೆಳವಣಿಗೆ ನಡೆದಿರಲಿಲ್ಲ. ಇದು ಒಂದು ಕಡೆಗಾದರೆ ಮೊನ್ನೆ ತುಂಗಭದ್ರಾ ಅಣೆಕಟ್ಟಿನ ಸ್ಟೀಲ್ ಗೇಟ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಲ್ಲೂ ಕೂಡಾ ಅದೇ ಕೆಲಸ ಮಾಡಿದರು. ಹೀಗೆ ದಿನ ಕಳೆದಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಲಿಂಗಾಯತ ಸಮುದಾಯಕ್ಕೆ ರವಾನಿಸುತ್ತಿರುವ ಸಂದೇಶಗಳು ಸಹಜವಾಗಿಯೇ ಹಲವು ಲಿಂಗಾಯತ ಪೀಠಗಳ ಗಮನ ಸೆಳೆದಿದೆ.ಮೂಲಗಳ ಪ್ರಕಾರ, ಈ ಹಿಂದೆ ಬಿಜೆಪಿಯ ಬೆಂಬಲಕ್ಕೆ ದೊಡ್ಡ ಮಟ್ಟದಲ್ಲಿ ನಿಂತಿದ್ದ ಮಠಾಧಿಪತಿಯೊಬ್ಬರು ಈಗ ಡಿ.ಕೆ. ಶಿವಕುಮಾರ್ ಅವರ ಜತೆ ನಿಂತಿದ್ದಾರೆ ಎಂಬುದು.
ಹೀಗೆ ದಿನ ಕಳೆದಂತೆ ಡಿ.ಕೆ.ಶಿವಕುಮಾರ್ ಅವರು ಲಿಂಗಾಯತ ಪಾಳೇಪಟ್ಟಿನಲ್ಲಿ ಜನಪ್ರಿಯರಾಗುತ್ತಾ ನಡೆದಿರುವ ರೀತಿ ಸಹಜವಾಗಿಯೇ ಬಿಜೆಪಿ ವರಿಷ್ಠರಿಗೆ ತಲೆನೋವಾಗಿ ಕಾಡತೊಡಗಿದೆ. ಇದೇ ರೀತಿ ಈಡಿಗ ಸಮುದಾಯದ ನಾಯಕ ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾಗಿರುವ ಬೆಳವಣಿಗೆ ಕೂಡಾ ಬಿಜೆಪಿ ವರಿಷ್ಠರ ಲೆಕ್ಕಾಚಾರ ಬದಲಾಗಲು ಮತ್ತೊಂದು ಕಾರಣ. ಏಕೆಂದರೆ ಕಟ್ಟರ್ ಸೆಕ್ಯೂಲರ್ ಆಗಿರುವ ಬಿ.ಕೆ.ಹರಿಪ್ರಸಾದ್ ಅವರು ಬಿಜೆಪಿ ಮತ್ತು ಸಂಘಪರಿವಾರದ ಕಟ್ಟಾ ವಿರೋಧಿ. ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಅಗ್ರೆಸಿವ್ ಆಗಿ ನಡೆದುಕೊಳ್ಳುತ್ತಿರುವ ರೀತಿ ಇದೇ ರೀತಿ ಮುಂದುವರಿದರೆ ಮತ್ತು ಆ ಸಮುದಾಯದ ನಾಯಕರಿಗೆ ಬಿಜೆಪಿಯಲ್ಲಿ ಆದ್ಯತೆ ದಕ್ಕದೆ ಹೋದರೆ ಈಡಿಗ ಮತ ಬ್ಯಾಂಕು ಕಾಂಗ್ರೆಸ್ ಕಡೆ ಸಾಲಿಡ್ಡಾಗಿ ವಾಲಿಕೊಳ್ಳಬಹುದು ಎಂಬುದು ಆ ಪಕ್ಷದ ವರಿಷ್ಠರ ಯೋಚನೆ. ಅರ್ಥಾತ್, ಕರ್ನಾಟಕದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ರಾಜಧ್ಯಕ್ಷರು ಮತ್ತು ಪ್ರತಿಪಕ್ಷದ ನಾಯಕರನ್ನು ಬದ ಲಿಸಿ, ಬೇರೆಯವರನ್ನು ಆ ಜಗಕ್ಕೆ ತಂದು ಕೂರಿಸುವ ಲೆಕ್ಕಾಚಾರ ಬಿಜೆಪಿ ವರಿಷ್ಠರಲ್ಲಿದೆ.
ಆದರೆ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವರಾದ ವಿ. ಸೋಮಣ್ಣ, ಪ್ರಹ್ಲಾದ್ ಜೋಶಿ ಇಲ್ಲವೇ ಅರವಿಂದ ಬೆಲ್ಲದ್ ಅವರು ಬಂದು ಕೂರಬಹುದು ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಈಡಿಗ ಸಮುದಾಯದ ನಾಯಕ, ಮಾಜಿ ಸಚಿವ ವಿ.ಸುನಿಲ್ ಕುಮಾರ್ ಬಂದು ಕೂರಬಹುದು ಎಂಬುದು ಬಿಜೆಪಿ ಮೂಲಗಳ ಮಾತು. ಹಾಗಾಗುತ್ತದಾ?ಗೊತ್ತಿಲ್ಲ. ಕಾದು ನೋಡಬೇಕು.
” ದಿನ ಕಳೆದಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಲಿಂಗಾಯತ ಸಮುದಾಯಕ್ಕೆ ರವಾನಿಸುತ್ತಿರುವ ಸಂದೇಶಗಳು ಸಹಜವಾಗಿಯೇ ಹಲವು ಲಿಂಗಾಯತ ಪೀಠಗಳ ಗಮನ ಸೆಳೆದಿದೆ. ಮೂಲಗಳ ಪ್ರಕಾರ, ಈ ಹಿಂದೆ ಬಿಜೆಪಿಯ ಬೆಂಬಲಕ್ಕೆ ದೊಡ್ಡ ಮಟ್ಟದಲ್ಲಿ ನಿಂತಿದ್ದ ಮಠಾಽಪತಿಯೊಬ್ಬರು ಈತ ಡಿ.ಕೆ.ಶಿವಕುಮಾರ್ ಅವರ ಜತೆ ನಿಂತಿದ್ದಾರೆ ಎಂಬುದು.”
ಉತ್ತರ ಪ್ರದೇಶದ ಅಯೋಧ್ಯಾ ರಾಮಮಂದಿರದಲ್ಲಿ ಕಾಣಿಕೆ ಹಣ ಹಾಗೂ ದೇಣಿಗೆಯನ್ನು ದುರ್ಬಳಕೆ ಮಾಡಿರುವುದು ಅನೂಹ್ಯ ಪ್ರಕರಣ. ಇದರಿಂದ ಕೋಟ್ಯಂತರ ಜನರ…
ಭೇರ್ಯ ಮಹೇಶ್ ಕೆ.ಆರ್.ನಗರ: ಧರ್ಮಸ್ಥಳ ಸಂಸ್ಥೆಯಿಂದ ಕೆರೆ ಅಭಿವೃದ್ಧಿ; ಗ್ರಾಮಸ್ಥರು, ರೈತರಿಂದಲೂ ಸಹಕಾರ ಕೆ.ಆರ್.ನಗರ: ಹೂಳು ತುಂಬಿ ಅವನತಿಯ ಹಾದಿ…
ಆನಂದ್ ಹೊಸೂರು ಕಬ್ಬಿಗೆ ಕಾರ್ಖಾನೆಗಳಿಂದ ಬೇಡಿಕೆಯಿದ್ದರೂ ರೈತರಿಗೆ ದುಬಾರಿ ಸಾಗಣೆ ವೆಚ್ಚ ಭರಿಸುವ ಅನಿವಾರ್ಯತೆ ಹೊಸೂರು: ಮಾಜಿ ಶಾಸಕ ದಿವಂಗತ…
ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ, ರಾಜಶೇಖರ ಕೋಟಿ ನೆನಪು ಕಾರ್ಯಕ್ರಮ ಪತ್ರಿಕಾರಂಗ ಸೇರಿ ಬಹುತೇಕ ಕ್ಷೇತ್ರಗಳಿಗೆ ಕೋಟಿ ಕೊಡುಗೆ:ಮಹದೇವಸ್ವಾಮಿ ಮೈಸೂರು:…
ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮಕ್ಕೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಶನಿವಾರ ಆಗಮಿಸಿದ್ದರು. ಅವರು ಮೊದಲು…