ಆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿತ್ತು. ಮಕ್ಕಳು ಒಬ್ಬೊಬ್ಬರಾಗಿ ತಮ್ಮ ಕನಸುಗಳೇನು, ತಾವು ಮುಂದೆ ಏನಾಗಬೇಕೆಂದಿದ್ದೇವೆ ಎಂಬುದನ್ನು ಹೇಳಿಕೊಳ್ಳಬೇಕಿತ್ತು. ಅದರಂತೆ ಬಾಲಕ ಹರಿಶ್ಚಂದ್ರ ಸುಧೆಯ ಸರದಿ ಬಂದಾಗ ಅವನು ಎದ್ದು ನಿಂತು, ‘ಗಾಂಧೀಜಿ ಕಂಡ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡುವಂತಹ ಜಗತ್ತನ್ನು ನಿರ್ಮಿಸಬೇಕೆಂದಿದ್ದೇನೆ’ ಎಂದು ತನ್ನ ಕನಸನ್ನು ಹೇಳಿಕೊಂಡನು.
ಅವನ ಕನಸು ಕೇಳಿ ಹಲವರು ನಕ್ಕರು. ಅದಕ್ಕೆ ಕಾರಣವೂ ಇತ್ತು. ಹರಿಶ್ಚಂದ್ರ ಸುಧೆಯ ಒಂದು ಕಣ್ಣು ಕುರುಡು, ಇನ್ನೊಂದರಲ್ಲಿ ಸ್ವಲ್ಪವೇ ಸ್ವಲ್ಪ ದೃಷ್ಟಿ ಉಳಿದಿದೆ. ಆದರೆ, ಅವನ ದನಿಯಲ್ಲಿ ಮುಂದೊಂದು ದಿನ ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೂಲಕ ತಾನು ಕಂಡ ಕನಸನ್ನು ನನಸಾಗಿಸುವ ದೃಢಸಂಕಲ್ಪವಿದ್ದುದು ಅವರ ಅರಿವಿಗೆ ಬರಲಿಲ್ಲ. ಹರಿಶ್ಚಂದ್ರ ಸುಧೆ ಐದು ವರ್ಷದ ಬಾಲಕನಾಗಿದ್ದಾಗ ಸಿಡುಬು ತಗುಲಿ ಅವರ ಒಂದು ಕಣ್ಣು ಕುರುಡಾಗಿ ಇನ್ನೊಂದರ ದೃಷ್ಟಿ ದುರ್ಬಲವಾಯಿತು. ಮುಖದ ಮೇಲೆಲ್ಲ ಕಲೆಗಳಾದವು. ಬದುಕುಳಿದರೂ ಅಕ್ಕಪಕ್ಕದ ಬೇರೆ ಮಕ್ಕಳು ಅವರನ್ನು ತಮ್ಮ ಹತ್ತಿರ ಬರಗೊಡುತ್ತಿರಲಿಲ್ಲ.
ಅದೇ ವರ್ಷ, ಅವರನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅವನ ತಾಯಿಯೂ ತೀರಿಕೊಂಡರು. ತಾಯಿ ತೀರಿ ಹೋದ ಬೆನ್ನಿಗೇ ಮನೆಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಹನ್ನೆರಡು ವರ್ಷದ ಅವರ ಅಕ್ಕನನ್ನು ಮದುವೆ ಮಾಡಿ ಕಳಿಸಲಾಯಿತು. ಅವರ ತಂದೆ ಮತ್ತು ಅಣ್ಣಂದಿರು ಹೊಲದಲ್ಲಿ ದುಡಿಯಲು ಹೋಗುತ್ತಿದ್ದರು. ಬಾಲಕ ಹರಿಶ್ಚಂದ್ರನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಹಾಗಾಗಿ, ಅವರನ್ನು ಲಾತೂರಿನಲ್ಲಿದ್ದ ಅಜ್ಜಿ ಮನೆಗೆ ಕಳಿಸಿಕೊಟ್ಟರು. ಅಜ್ಜಿ ಮನೆಗೆ ಬಂದುದು ಹರಿಶ್ಚಂದ್ರ ಸುಧೆಗೆ ಬಹಳ ಒಳ್ಳೆಯದಾಯಿತು. ಅಜ್ಜಿಯ ಪ್ರೀತಿಯಲ್ಲಿ ದೊಡ್ಡವನಾದರು. ಮುಂದೆ, ಅವರು ಲಾತೂರಿನ ಕಾಲೇಜಿಗೆ ಸೇರಿದರು.
ಆದರೆ, ಕಾಲೇಜು ಫೀಸು ಕೊಡುವುದು ಕಷ್ಟವಾಗತೊಡಗಿತು. ಆಗ, ಅವರ ಬಗ್ಗೆ ತಿಳಿದಿದ್ದ ಕಾಲೇಜಿನ ಪ್ರಿನ್ಸಿಪಾಲ್ ಕಾಲೇಜಿನಲ್ಲಿ ಅವರಿಗೆ ಸಣ್ಣದೊಂದು ಕೆಲಸ ಕೊಡಿಸಿ, ಅದರಿಂದ ಅವರ ಶಾಲಾ ಫೀಸಿಗೆ ವ್ಯವಸ್ಥೆ ಮಾಡಿಕೊಟ್ಟರು. ಮುಂದೆ, ಅವರು ಪದವಿ ಶಿಕ್ಷಣ ಮುಗಿಸಿದಾಗ ಅವರ ಕುಟುಂಬದಲ್ಲಿ ಮಾತ್ರವಲ್ಲ, ಅವರ ಇಡೀ ಹಳ್ಳಿಯಲ್ಲಿ ಅವರೇ ಪ್ರಪ್ರಥಮ ಪದವೀಧರ ಎನಿಸಿಕೊಂಡರು. ಅಂತಹ ಸಾಧನೆ ಮಾಡಿದ ಹರಿಶ್ಚಂದ್ರ ಸುಧೆ ನಗರದಲ್ಲಿ ಏನಾದರೂ ಉದ್ಯೋಗ ಪಡೆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಸಹಜವಾಗೇ ಅವರ ತಂದೆ ನಿರೀಕ್ಷಿಸಿದ್ದರು.
ಆದರೆ, ಹರಿಶ್ಚಂದ್ರ ಸುಧೆಯ ಆಲೋಚನೆ ಬೇರೆಯೇ ದಿಕ್ಕಿನಲ್ಲಿತ್ತು. ಬಾಲ್ಯದಿಂದಲೂ ಅವರು ಸಮಾಜದ ಕೆಲವು ವರ್ಗಗಳು ತಮ್ಮ ಪರಿಸ್ಥಿತಿಯ ಸುಧಾರಣೆಗೆ ಬೇಕಾದ ಅವಕಾಶಗಳಿಂದ ವಂಚಿತವಾಗುತ್ತಿದ್ದುದನ್ನು ನೋಡಿದ್ದರು. ಆ ವರ್ಗಗಳ ಜನ ಸಮಾಜದ ಅಂಚಿಗೆ ಸರಿಸಲ್ಪಟ್ಟು ಯಾವತ್ತೂ ಇತರರ ಮೇಲೆ ಅವಲಂಬಿತವಾಗಿ ಜೀವಿಸಬೇಕಾಗುತ್ತಿತ್ತು. ಹರಿಶ್ಚಂದ್ರರ ಗುರಿ ತನ್ನ ಸ್ವಂತಕ್ಕೆ ಉದ್ಯೋಗ ಪಡೆಯುವುದು ಆಗಿರಲಿಲ್ಲ. ಬದಲಿಗೆ, ಇಂತಹ ನಿರ್ಲಕ್ಷಿತ ವರ್ಗಗಳ ಸಹಾಯಕ್ಕೆ ನಿಲ್ಲುವುದಾಗಿತ್ತು. ಅಂತೆಯೇ ಅವರು ಲಾತೂರು ಜಿಲ್ಲೆಯ ತನ್ನ ಹಳ್ಳಿಗೆ ವಾಪಸಾಗಿ, ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ಪದವೀಧರನೊಬ್ಬ ಹೀಗೆ ತಮ್ಮಂತೆ ಮೈ ಕೈ ಕೆಸರು ಮಾಡಿಕೊಂಡು ಗದ್ದೆಗಳಲ್ಲಿ ಕೆಲಸ ಮಾಡುವುದನ್ನು ನೋಡಿ ಹಳ್ಳಿಯ ಜನ ನಗತೊಡಗಿದರು. ಕೆಲವರು ಹಿಂದಿನಿಂದ ಅವರೊಬ್ಬ ಹುಚ್ಚ ಎಂದು ಟೀಕಿಸತೊಡಗಿದರು.
ಇದೆಲ್ಲದರಿಂದ ಮನನೊಂದ ಹರಿಶ್ಚಂದ್ರ ಪೂನಾಕ್ಕೆ ಹೋಗಿ, ಕೆಲವು ಸಾಮಾಜಿಕ ಕಾರ್ಯಕರ್ತರಿಂದ ಸಲಹೆ ಕೇಳಿದರು. ಹರಿಶ್ಚಂದ್ರ ಸುಧೆ ಹೀಗೆ ಭೇಟಿಯಾದ ಸಮಾಜ ಸೇವಕರಲ್ಲಿ ಬಾಬಾ ಆಮ್ಟೆಯವರೊಬ್ಬರು. ಅವರು ಶಿಕ್ಷಕ ಕೆಲಸ ಪಡೆದು ಮೊದಲು ಆರ್ಥಿಕವಾಗಿ ಸ್ವತಂತ್ರನಾಗು ಎಂದು ಅವರಿಗೆ ಹೇಳಿದರು. ಹರಿಶ್ಚಂದ್ರ ಕಲಿತ ಕಾಲೇಜಿನ ಎದುರು ಒಂದು ಅಂಧ ಮಕ್ಕಳ ಶಾಲೆಯಿತ್ತು. ಅವರು ಅಲ್ಲಿ ಶಿಕ್ಷಕರಾಗಿ ಸೇರಿದರು. ಅಲ್ಲಿ ಕೆಲಸಕ್ಕೆ ಸೇರಿದ ನಂತರ, ಶಾಲೆಯ ಅಂಧ ಮಕ್ಕಳು ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಹಾಗೂ ಅವರನ್ನು ನೋಡಿಕೊಳ್ಳಲು ಬೇಕಾದ ಸವಲತ್ತುಗಳ ಕೊರತೆಯ ಕಾರಣಕ್ಕೆ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ವರ್ಗಾಯಿಸಲ್ಪಡುತ್ತಿದ್ದುದು ಅವರ ಗಮನಕ್ಕೆ ಬಂತು. ಅದರಿಂದ ಆ ಮಕ್ಕಳ ಕಲಿಕೆ ಹಾಗೂ ಬೆಳವಣಿಗೆಗೆ ತಡೆಯಾಗುತ್ತಿತ್ತು. ಆಗ ಹರಿಶ್ಚಂದ್ರ ಸುಧೆ ಈ ನಿಟ್ಟಿನಲ್ಲಿ ತಾನು ಆ ಅಂಧ ಮಕ್ಕಳಿಗೆ ಏನಾದರೂ ಮಾಡಬೇಕು ಎಂದು ನಿಶ್ಚಯಿಸಿದರು. ಆ ಅಂಧ ಮಕ್ಕಳಿಗೆ ಒಂದು ದೃಢ ನೆಲೆ ಒದಗಿಸಲು ‘ಸ್ವಾಧಾರ್ ಕೇಂದ್ರ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕುವ ಯೋಜನೆ ರೂಪಿಸಿ, ಅವರು ಕೆಲಸ ಬಿಟ್ಟು ಪುನಃ ತನ್ನ ಹಳ್ಳಿಗೆ ಹೋದರು.
ಹರಿಶ್ಚಂದ್ರ ಹಾಗೆ ಹಳ್ಳಿಗೆ ಹಿಂತಿರುಗುವಾಗ ಒಬ್ಬ ಅಂಧ ವಿದ್ಯಾರ್ಥಿ ಅವರ ಜೊತೆಗೆ ಬಂದನು. ಅವನಿಗೆ ಬಹಳ ಚೆನ್ನಾಗಿ ಹಾಡಲು ಮತ್ತು ನೃತ್ಯ ಮಾಡಲು ಬರುತ್ತಿತ್ತು. ಅವನ ಹಾಡು ಮತ್ತು ನೃತ್ಯದ ಸಹಾಯದಿಂದ ಹರಿಶ್ಚಂದ್ರ ಹಳ್ಳಿಗರ ಗಮನ ಸೆಳೆಯುವಲ್ಲಿ ಸಫಲರಾದರು. ಹಳ್ಳಿಯ ಸರಪಂಚ ಹರಿಶ್ಚಂದ್ರರನ್ನು ಮಹಾರಾಷ್ಟ್ರ ರಾಜ್ಯಪಾಲರ ಬಳಿ ಕರೆದುಕೊಂಡು ಹೋದನು. ಹರಿಶ್ಚಂದ್ರರ ಆಲೋಚನೆಯನ್ನು ಕೇಳಿದ ರಾಜ್ಯಪಾಲರು ಅವರಿಗೆ ನಲವತ್ತು ಚದರಡಿ ವಿಸ್ತೀರ್ಣದ ಒಂದು ಜಾಗವನ್ನು ಮಂಜೂರು ಮಾಡಿದರು. ಹರಿಶ್ಚಂದ್ರ ಆ ಜಾಗದಲ್ಲಿ ಒಂದು ಗುಡಿಸಲು ನಿರ್ಮಿಸಿ, ಅದರಲ್ಲಿ ಬೆಡ್ ಶೀಟ್ ಮತ್ತು ಕಂಬಳಿಗಳನ್ನು ತಯಾರಿಸಿ ಮಾರುವ ಕೆಲಸ ಶುರು ಮಾಡಿದರು. ಜನ ಭಾಗಶಃ ಅಂಧನಾದ ವ್ಯಕ್ತಿಯೊಬ್ಬ ಅಂತಹ ಕೆಲಸವನ್ನು ಹೇಗೆ ಮಾಡಬಲ್ಲ ಎಂದು ಆಶ್ಚರ್ಯಪಡತೊಡಗಿದರು. ಹೀಗೆ, ಜನ ಹರಿಶ್ಚಂದ್ರರ ಕೆಲಸದ ಬಗ್ಗೆ ಮಾತಾಡತೊಡಗಿ, ಒಬ್ಬರಿಂದೊಬ್ಬರಿಗೆ ವಿಷಯ ತಿಳಿದು ಇನ್ನೂ ಕೆಲವು ಅಂಧ ವ್ಯಕ್ತಿಗಳು ಹರಿಶ್ಚಂದ್ರರನ್ನು ಸೇರಿಕೊಂಡರು. ಮತ್ತಷ್ಟು ಗುಡಿಸಲುಗಳು ತಲೆ ಎತ್ತಿ, ಅವರ ಕನಸು ಸ್ಪಷ್ಟ ರೂಪ ಪಡೆಯತೊಡಗಿತು.
ಆಗ ಇದ್ದಕ್ಕಿದ್ದಂತೆ ಒಂದು ಅನಾಹುತ ಬಂದೆರಗಿತು. ಒಂದು ಮಳೆಗಾಲದಲ್ಲಿ ಭಯಂಕರ ಮಳೆಯಾಗಿ, ನೆರೆ ಎದ್ದು, ಅವರ ಗುಡಿಸಲುಗಳಿದ್ದ ಪ್ರದೇಶ ಜಲಾವೃತವಾಯಿತು. ಗುಡಿಸಲುಗಳ ಸಮೇತ ಅವರು ತಯಾರಿಸಿದ ಸರಕುಗಳೆಲ್ಲ ನೆರೆ ನೀರಲ್ಲಿ ಕೊಚ್ಚಿ ಹೋದವು. ಹರಿಶ್ಚಂದ್ರ ಮುಂದೇನು ಮಾಡುವುದೆಂದು ತಿಳಿಯದೆ ತನ್ನ ಮನೆಗೆ ಹೋಗಿ, ತಂದೆಯ ಸಹಾಯ ಕೇಳಿದರು. ಅವರ ಕುಟುಂಬಕ್ಕೆ ಸ್ವಲ್ಪ ಪೂರ್ವಜರ ಜಮೀನಿತ್ತು. ಹರಿಶ್ಚಂದ್ರ ಅದರಲ್ಲಿ ಕಾನೂನು ಪ್ರಕಾರ ತಮಗೆ ಬರಬೇಕಾದ ಪಾಲನ್ನು ಕೇಳಿ ಪಡೆದರು. ಮತ್ತು ತನ್ನ ಪಾಲಿಗೆ ಬಂದ ಜಮೀನನ್ನು ಮಾರಿ, ಅದರಿಂದ ಬಂದ ಹಣದಿಂದ ಲಾತೂರು ಜಿಲ್ಲೆಯ ಔಸಾ ಬ್ಲಾಕಿನ ಬುಧೋಡಾ ಎಂಬ ಹಳ್ಳಿಯಲ್ಲಿ ಜಮೀನು ಖರೀದಿಸಿ, ಅದರಲ್ಲಿ ‘ಗ್ರಾಮೀಣ್ ಶ್ರಮಿಕ್ ಪ್ರತಿಷ್ಠಾನ್’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.
ಕಳೆದ ನಾಲ್ಕು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ‘ಗ್ರಾಮೀಣ್ ಶ್ರಮಿಕ್ ಪ್ರತಿಷ್ಠಾನ್’ ಸುತ್ತಮುತ್ತಲ ಹಳ್ಳಿಗಳ ಅಂಗವಿಕಲ ವ್ಯಕ್ತಿಗಳಿಗೆ ಹಳೇ ಸೀರೆಗಳಿಂದ ಮ್ಯಾಟ್ಗಳನ್ನು ತಯಾರಿಸುವುದು, ನೇಕಾರಿಕೆ, ಬೇರೆ ಬೇರೆ ರೀತಿಯ ಮಸಾಜಿಂಗ್, ವಿಡಿಯೋ ಎಡಿಟಿಂಗ್, ರೀಲ್ ಮೇಕಿಂಗ್, ಸೋಷಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ ಮೊದಲಾದವುಗಳಲ್ಲಿ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸ್ವಾಲಂಬಿಗಳನ್ನಾಗಿ ರೂಪಿಸುತ್ತಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…