ಬಿಜೆಪಿಯ ಧರ್ಮಾಧಾರಿತ ಕ್ರೋಢೀಕರಣ ಕಾಂಗ್ರೆಸ್‌ನ ಜಾತಿ ರಾಜಕಾರಣ

ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಒಡೆದು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪ್ರಯತ್ನಿಸುತ್ತಿದೆ ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತು! 

ಯಾವಾಗ ಕಾಂಗ್ರೆಸ್ ಪಕ್ಷ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತೋ? ಆಗ ತೊಡಕು ಅನುಭವಿಸುವ ಸ್ಥಿತಿಗೆ ತಲುಪಿದ್ದು ಜೆಡಿಎಸ್. ಯಾಕೆಂದರೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿ ಮೂರು ಮಂದಿಯನ್ನು, ಕಾಂಗ್ರೆಸ್ ಇಬ್ಬರನ್ನು ಕಣಕ್ಕಿಳಿಸಿದ್ದರಿಂದ ತನ್ನ ಅಭ್ಯರ್ಥಿಗೆ ತೊಡಕು ಎಂಬುದು ಅದಕ್ಕೆ ಮನದಟ್ಟಾಯಿತು.

ಇದೇ ಕಾರಣಕ್ಕಾಗಿ ಜೆಡಿಎಸ್ ವರಿಷ್ಟರು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಸಂಪರ್ಕಿಸಿ: ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಲು ಕೇಳಿದರಾದರೂ ಸೋನಿಯಾಗಾಂಧಿ ಈ ವಿಷಯದಲ್ಲಿ ಅಸಹಾಯಕರಾಗಿದ್ದರು.

ರಾಜ್ಯದಲ್ಲಿ ಹಿಂದೂ ಮತ ಬ್ಯಾಂಕಿಗೆ ಬಿಜೆಪಿ, ಬಿಜೆಪಿಯೆತರ ಮತ ಬ್ಯಾಂಕಿಗೆ ಕಾಂಗ್ರೆಸ್ ಲಗ್ಗೆ ಹಾಕಿರುವ ರೀತಿ ಇಂಟರೆಸ್ಟಿಂಗ್ ಆಗಿದೆ.
ಅಂದ ಹಾಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿರುವವರೆಗೆ ರಾಜ್ಯ ಬಿಜೆಪಿಗೆ ಧರ್ಮಾಧಾರಿತ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಏನೂ ಇರಲಿಲ್ಲ.

ಬಿಜೆಪಿಯ ಧೋರಣೆ ಮೂಲತ: ಹಿಂದೂ ಮತ ಬ್ಯಾಂಕ್ ಅನ್ನು ಬಲಿಷ್ಟಗೊಳಿಸುವುದೇ ಆದರೂ, ಅದು ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲಿ ಯಶಸ್ವಿ ಸೂತ್ರವಲ್ಲ. ದಕ್ಷಿಣ ಭಾರತದ ರಾಜಕಾರಣವನ್ನು ಗಮನಿಸಿದರೆ ಸಾಕು, ಈ ವಿಷಯ ಸ್ಪಷ್ಟವಾಗುತ್ತದೆ. ಇದು ಗೊತ್ತಿದ್ದುದರಿಂದಲೇ ಜಾತಿ ಆಧಾರಿತ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವ ಯಡಿಯೂರಪ್ಪ ಅವರ ನಡೆಯನ್ನು ಬಿಜೆಪಿ ಹೈಕಮಾಂಡ್ ಅನಿವಾರ್ಯವಾಗಿ ಒಪ್ಪಿಕೊಂಡಿತ್ತು.

ಆದರೆ ಯಾವಾಗ ಅವರನ್ನು ಪದಚ್ಯುತಗೊಳಿಸಲಾಯಿತೋ? ಇದಾದ ನಂತರ ರಾಜ್ಯ ಬಿಜೆಪಿಗೆ ಜಾತಿ ಆಧಾರಿತ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸಿಕೊಳ್ಳುವ ಕೆಲಸ ಕಷ್ಟವಾಗುತ್ತಾ ಹೋಗುತ್ತಿದೆ.

ಅದರಲ್ಲೂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ವಿಧಾನಪರಿಷತ್ ಟಿಕೆಟ್ ಕೊಡಲು ವರಿಷ್ಟರು ನಿರಾಕರಿಸಿದ ನಂತರವಂತೂ ಇದು ಮತ್ತಷ್ಟು ಕಷ್ಟವಾಗಲಿದೆ ಎಂಬುದು ರಾಜಕೀಯ ವಲಯಗಳ ವಿಶ್ಲೇಷಣೆ. ಹೀಗಾಗಿ ಇನ್ನು ಬಿಜೆಪಿ ವರಿಷ್ಟರು ಕರ್ನಾಟಕದ ನೆಲೆಯಲ್ಲಿ ಧರ್ಮಾಧಾರಿತ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವುದು ಅನಿವಾರ್ಯ. ಈಗಿನ ಎಲ್ಲ ಬೆಳವಣಿಗೆಗಳು ಅದನ್ನೇ ಪುಷ್ಟೀಕರಿಸುತ್ತಿವೆ.

ಪಠ್ಯಪುಸ್ತಕ ವಿವಾದದ ವಿಷಯವೂ ಇದರಲ್ಲಿ ಒಂದು. ಹಿಜಾಬ್,ಹಲಾಲ್ ಕಟ್, ವ್ಯಾಪಾರ ಧರ್ಮದ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳು ರಾಜ್ಯ ಬಿಜೆಪಿಯನ್ನುಇದೇ ನೆಲೆಯಲ್ಲಿ ಮುಂದುವರಿಸುತ್ತಿರುವುದು ನಿಜ.

ಪರಿಣಾಮ? ಬಿಜೆಪಿಯ ಈ ಹೆಜ್ಜೆ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ಅನುಕೂಲಕರವಾಗಿ ಪರಿಣಮಿಸುತ್ತಿದೆ. ಅಂದ ಹಾಗೆ ತನಗಿರುವ ಬಲದಿಂದ ಸಧ್ಯದ ಸ್ಥಿತಿಯಲ್ಲಿ ಅದು ವಿಧಾನಪರಿಷತ್ತು, ರಾಜ್ಯಸಭೆ ಚುನಾವಣೆಗಳಲ್ಲಿ ದೊಡ್ಡ ಯಶಸ್ಸು ಪಡೆಯುವುದು ಸಾಧ್ಯ ಆಗಿರಬಹುದು.

ಆದರೆ ಜನತಾ ನ್ಯಾಯಾಲಯಕ್ಕೆ ಹೋದಾಗ ಈಗಿನ ಸಂಖ್ಯಾಬಲ ಏನೇನೂ ಕೆಲಸ ಮಾಡುವುದಿಲ್ಲ. ಬದಲಿಗೆ ಅದರ ಮತಬ್ಯಾಂಕ್ ಶಕ್ತಿಯೇ ಅದರ ಯಶಸ್ಸನ್ನು ನಿರ್ಧರಿಸುತ್ತದೆ.

ಈ ಲೆಕ್ಕಾಚಾರದ ದೃಷ್ಟಿಯಿಂದ ಪ್ರತಿಪಕ್ಷ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅದು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆಡಿದ ರೀತಿಯೇ ಅದರ ಮುಂದಿನ ದಾರಿ ಏನು ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.

ಅಂದ ಹಾಗೆ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದ್ದೇ ಆಗಿದ್ದರೆ, ಅದರ ಯಶಸ್ಸು ಜೆಡಿಎಸ್ ಗೆ ಹೋಗುತ್ತಿತ್ತು.

ಗಮನಿಸಬೇಕಾದ ಸಂಗತಿ ಎಂದರೆ ಜೆಡಿಎಸ್ ಪಕ್ಷ ಒಂದು ಕಡೆ ಬಿಜೆಪಿ ಜತೆ ಹೊಂದಾಣಿಕೆಯ ಭಾವವನ್ನೂ ವ್ಯಕ್ತಪಡಿಸುತ್ತದೆ. ಮತ್ತೊಂದು ಕಡೆ ತಮ್ಮದು ಸೆಕ್ಯೂರ್ಲ ನೀತಿ ಎನ್ನುತ್ತದೆ.

ಏನೇ ಆದರೂ ಒಟ್ಟಿನಲ್ಲಿ ಪರಿಸ್ಥಿತಿಯನ್ನು ತನಗೆ ಅನುಕೂಲವಾಗುವಂತೆ ತೂಗಿಸಿಕೊಂಡು ಹೋಗುವುದು ಅದರ ಲೆಕ್ಕಾಚಾರ. ಇದೇ ರೀತಿ ಈ ಸಲ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುವಾಗ ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುರ್ಮಾ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸಹಮತ ಪಡೆಯಿತು.

ಅಂದ ಹಾಗೆ ಭವಿಷ್ಯದಲ್ಲಿ ಮೈತ್ರಿಕೂಟ ಸರ್ಕಾರ ರಚಿಸುವುದು ಅನಿವಾರ್ಯವಾದರೆ ಜೆಡಿಎಸ್ ಜತೆ ಕೈಗೂಡಿಸಬೇಕು ಎಂಬ ವಿಷಯದಲ್ಲಿ ಡಿಕೆಶಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಬ್ಬರಿಗೂ ಸಹಮತವಿದೆ.

ಅದೇ ರೀತಿ ಜೆಡಿಎಸ್ ವತಿಯಿಂದ ಕಣಕ್ಕಿಳಿದ ಕುಪೇಂದ್ರ ರೆಡ್ಡಿ ಅವರು ಕೂಡಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರು. ಹೀಗಾಗಿ ಕುಪೇಂದ್ರ ರೆಡ್ಡಿ ಅವರ ಸ್ಪರ್ಧೆಗೆ ಖರ್ಗೆ ಸಹಮತ ಸಿಗುವುದು ಸಹಜವೇ.

ಆದರೆ ಯಾವಾಗ ಇಂತಹ ಎಲ್ಲ ಅಂಶಗಳನ್ನು ಸಿದ್ಧರಾಮಯ್ಯ ಗಮನಿಸಿದರೋ? ಆಗ ಪಕ್ಷದ ವರಿಷ್ಟರ ಮೇಲೆ ಒತ್ತಡ ಹೇರಿ: ರಾಜ್ಯಸಭೆ ಚುನಾವಣೆಯಲ್ಲಿ ನಾವು ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಬಹುದು. ಆದರೆ ಎರಡನೇ ಸ್ಥಾನ ಗೆಲ್ಲಲಾಗದಿದ್ದರೂ ಜೆಡಿಎಸ್ ಅಭ್ಯರ್ಥಿ ಗೆಲ್ಲದಂತೆ ನೋಡಿಕೊಳ್ಳಬೇಕು ಎಂದು ಪಟ್ಟು ಹಿಡಿದರು.

ಯಾರೇನೇ ಹೇಳಲಿ, ಇವತ್ತು ಸಿದ್ಧರಾಮಯ್ಯ ಅವರ ಹೆಜ್ಜೆಗೆ ನಕಾರ ಸೂಚಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ .ಹೀಗಾಗಿ ಅದು ಸಿದ್ಧರಾಮಯ್ಯ ಹೇಳಿದ್ದಕ್ಕೆ ಸಹಮತ ವ್ಯಕ್ತಪಡಿಸಿತು. ಮನ್ಸೂರ್ ಅಲಿ ಖಾನ್ ಅವರು ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಹೀಗೆ.

ಯಾವಾಗ ಕಾಂಗ್ರೆಸ್ ಪಕ್ಷ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತೋ? ಆಗ ತೊಡಕು ಅನುಭವಿಸುವ ಸ್ಥಿತಿಗೆ ತಲುಪಿದ್ದು ಜೆಡಿಎಸ್. ಯಾಕೆಂದರೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಬಿಜೆಪಿ ಮೂರು ಮಂದಿಯನ್ನು, ಕಾಂಗ್ರೆಸ್ ಇಬ್ಬರನ್ನು ಕಣಕ್ಕಿಳಿಸಿದ್ದರಿಂದ ತನ್ನ ಅಭ್ಯರ್ಥಿಗೆ ತೊಡಕು ಎಂಬುದು ಅದಕ್ಕೆ ಮನದಟ್ಟಾಯಿತು.

ಇದೇ ಕಾರಣಕ್ಕಾಗಿ ಜೆಡಿಎಸ್ ವರಿಷ್ಟರು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಸಂಪರ್ಕಿಸಿ: ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಲು ಕೇಳಿದರಾದರೂ ಸೋನಿಯಾಗಾಂಧಿ ಈ ವಿಷಯದಲ್ಲಿ ಅಸಹಾಯಕರಾಗಿದ್ದರು.

ಈ ಅಂಶವೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯ ಅವರನ್ನು ಎಷ್ಟು ನೆಚ್ಚಿಕೊಂಡಿದೆ ಎಂಬುದಕ್ಕೆ ಸಾಕ್ಷಿ. ಅಂದ ಹಾಗೆ ಫಲಿತಾಂಶದ ಸ್ವರೂಪ ನೋಡಿದರೆ ಜೆಡಿಎಸ್ ಗೆ ಅಡ್ಡಗಾಲು ಹಾಕುವ ಅವರ ಲೆಕ್ಕಾಚಾರ ಬಿಜೆಪಿ ವಿರೋಧಿ ಮತಗಳನ್ನು ಕಾಂಗ್ರೆಸ್ ಕಡೆ ಸೆಳೆದುಕೊಳ್ಳುವ ನೇರ ಯತ್ನ ಅನ್ನುವುದು ಸ್ಪಷ್ಟ.

ಇವತ್ತು ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಒಡೆದು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪ್ರಯತ್ನಿಸುತ್ತಿದೆ ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತು. ಸಿ.ಎಂ.ಇಬ್ರಾಹಿಂ ಅವರಂತಹ ನಾಯಕನನ್ನು ಕೈ ಪಾಳೆಯದಿಂದ ಎಳೆದ ಅದರ ಯತ್ನ ಕೂಡಾ ಇದೇ ನೆಲೆಯದ್ದು ಎಂಬುದು ಸಿದ್ಧರಾಮಯ್ಯ ಅವರಿಗೆ ಗೊತ್ತು.

ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಅವರು ಹೊರಟಿದ್ದಾರೆ. ಕಳೆದ ಹಲವು ಕಾಲದಿಂದ ಬಿಜೆಪಿ ವಿರೋಧಿ ಮತಗಳನ್ನು ಪಡೆಯುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವೇ ಎದುರಾಳಿ.

ಇಂತಹ ಎದುರಾಳಿ ದುರ್ಬಲವಾದರೆ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಲಾಭ ಎಂಬುದು ಕೂಡಾ ಸಿದ್ಧರಾಮಯ್ಯ ಅವರಿಗೆ ಗೊತ್ತು. ಈ ದೃಷ್ಟಿಯಿಂದ ಅವರು ಉರುಳಿಸಿದ ದಾಳ ರಾಜ್ಯ ರಾಜಕೀಯದಲ್ಲಿ ಸಹಜವಾಗಿಯೇ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೀಗೆ ಒಂದು ಕಡೆಯಿಂದ ಜೆಡಿಎಸ್ ಅನ್ನು ದುರ್ಬಲಗೊಳಿಸುವ ಮತ್ತೊಂದು ಕಡೆ ಧರ್ಮಾಧಾರಿತ ಮತಗಳನ್ನು ಕ್ರೋಢೀಕರಿಸಲು ಹೊರಟಿಸುವ ಬಿಜೆಪಿಗೆ ಜಾತಿ ಆಧಾರಿತ ರಾಜಕಾರಣದ ಮೂಲಕ ಉತ್ತರ ಕೊಡುವುದು, ಮುಂದಿನ ಚುನಾವಣೆಯಲ್ಲಿ ಗೆದ್ದು ಕೈ ಪಾಳೆಯ ಅಧಿಕಾರ ಹಿಡಿಯುವಂತೆ ಮಾಡುವುದು ಅವರ ಲೆಕ್ಕಾಚಾರ.

ಯಾವ ದೃಷ್ಟಿಯಿಂದ ನೋಡಿದರೂ ಇದು ಇಂಟರೆಸ್ಟಿಂಗ್ ಅಲ್ಲವೇ?

andolana

Recent Posts

ಚಿರತೆಗಳು ಕಾಣಿಸಿಕೊಳ್ಳುವಿಕೆ: ಮೈಸೂರಿನ ಅಭಿವೃದ್ಧಿಯ ಮತ್ತೊಂದು ಮುಖ

ಮೈಸೂರು ನಗರವು ತನ್ನ ಸಾಂಸ್ಕೃತಿಕ ಪರಂಪರೆ, ಹಸಿರು ಪರಿಸರ ಮತ್ತು ಸುಸ್ಥಿರ ಜೀವನಶೈಲಿಗಾಗಿ ಬಹಳ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ…

17 mins ago

ಮಾನವ ಹಕ್ಕುಗಳನ್ನು ಪೋಷಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ

ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…

42 mins ago

ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಕಿರಿಕಿರಿ

ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…

1 hour ago

ಅಂಗನವಾಡಿಗಳಿಗೆ ೬ ತಿಂಗಳಿಂದ ಬಾರದ ಮೊಟ್ಟೆ ಹಣ!

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…

4 hours ago

‘ತ್ಯಾಜ್ಯ ಸಂಸ್ಕರಣೆ, ವಿಲೇವಾರಿಗೆ ಕ್ರಮಕೈಗೊಳ್ಳಬೇಕು’

ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…

4 hours ago

ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಪರದಾಟ

ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…

4 hours ago