ಅಂಕಣಗಳು

ಬಿಹಾರ: ಎನ್‌ಡಿಎ – ಮಹಾಘಟಬಂಧನ್ ಹಣಾಹಣಿಗೆ ಅಖಾಡ ಸಜ್ಜು

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಯ ಕಹಳೆ ಊದಿದ ಬಿಹಾರದ ನೆಲದಲ್ಲಿ ಈಗ ಚುನಾವಣೆಯ ರಣಕಹಳೆ. ಬಿಹಾರದ ೨೪೩ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ ೬ ಮತ್ತು ೧೧ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಎನ್‌ಡಿಎ ಹಾಗೂ ಮಹಾಘಟಬಂಧನದ ಮಧ್ಯೆ ನೇರ ಹಣಾಹಣಿ. ಕಣದಲ್ಲಿ ಕದನ ಕುತೂಹಲ.

ಬಿಹಾರ ಚುನಾವಣೆಯ ರಣರಂಗದ ಚಿತ್ರಣ ಸ್ಪಷ್ಟ. ಒಂದೆಡೆ ಮುಖ್ಯಮಂತ್ರಿ ಜೆಡಿಯುನ ನಿತೀಶ್‌ಕುಮಾರ್ ನೇತೃತ್ವದ ಎನ್‌ಡಿಎ. ಮತ್ತೊಂದೆಡೆ ಆರ್‌ಜೆಡಿಯ ತೇಜಸ್ವಿ ಯಾದವ್ ನೇತೃತ್ವದ ಮಹಾಘಟ ಬಂಧನ್. ಇವುಗಳ ನಡುವೆ ಚುನಾವಣಾ ತಂತ್ರಗಳ ನಿಪುಣ ಪ್ರಶಾಂತ್ ಕಿಶೋರ್ ಸ್ಥಾಪಿಸಿರುವ ಜನ್ ಸುರಾಜ್ ಪಕ್ಷ. ನವೆಂಬರ್ ೧೪ ರಂದು ಫಲಿತಾಂಶ.

ಮಹಾಘಟಬಂಧನ್ ವಿಧಾನಸಭೆ ಪ್ರತಿಪಕ್ಷದ ನಾಯಕ, ಆರ್‌ಜೆಡಿಯ ತೇಜಸ್ವಿ ಯಾದವ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ವಿಕಾಸ್‌ಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಾರಿದೆ. ಮಹಾಘಟಬಂಧನ್ ಈ ನಡೆ ನಿರೀಕ್ಷಿತ. ಏಕೆಂದರೆ, ಬಿಹಾರದಲ್ಲಿ ಕಾಂಗ್ರೆಸ್ ದುರ್ಬಲ. ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರನ್ನು ಹಿಂಬಾಲಿಸಿಯೇ ಕಾಂಗ್ರೆಸ್ ಹೆಜ್ಜೆ ಇರಿಸಬೇಕು. ತೇಜಸ್ವಿ ಯಾದವ್ ಆ ರಾಜ್ಯದ ಒಬ್ಬ ಮಾಸ್ ಲೀಡರ್. ಆರ್ ಜೆಡಿಯದು ಯಾದವ-ಮುಸ್ಲಿಂ ಸಮೀಕರಣ ಲೆಕ್ಕಾಚಾರದ ರಾಜಕಾರಣ.

ಬಿಹಾರದಲ್ಲಿ ಎನ್‌ಡಿಎ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ತಮ್ಮ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಲು ಬಿಜೆಪಿ ಬಿಲ್‌ಕುಲ್ ತಯಾರಿಲ್ಲ. ಆದರೆ, ಸಿಎಂ ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಬಹುಮತ ಪಡೆದ ನಂತರ ನೂತನ ಶಾಸಕರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಎಚ್ಚರಿಕೆ ಹೆಜ್ಜೆ ಇರಿಸಿದೆ. ಇದು ಎದುರಾಳಿ ಮಹಾಘಟಬಂಧನಕ್ಕೆ ಟೀಕಿಸಲು ಅಸ್ತ್ರ ಒದಗಿಸಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ ೧೦೧ ಅಸೆಂಬ್ಲಿ ಕ್ಷೇತ್ರಗಳನ್ನು ಸ್ಪರ್ಧಿಸಲು ಹಂಚಿಕೊಂಡಿವೆ. ನಿತೀಶ್ ಕುಮಾರ್ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆಯಲು ಶಕ್ತರಾಗಿಲ್ಲ. ಅಷ್ಟರಮಟ್ಟಿಗೆ ಈಗ ಅವರು ಬಿಜೆಪಿ ಎದುರು ದುರ್ಬಲರು.

ಇದನ್ನು ಓದಿ: ದಕ್ಷಿಣದ ರಾಜ್ಯಗಳಲ್ಲಿ ಸಾಲಗಾರ ಕುಟುಂಬಗಳು ಹೆಚ್ಚು 

ಎನ್‌ಡಿಎ ಸ್ಥಾನ ಹೊಂದಾಣಿಕೆಯಲ್ಲಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷ (ರಾಮ್ ವಿಲಾಸ್ ) ೨೯, ಉಪೇಂದ್ರ ಕುಶ್ವಾಹ ನಾಯಕತ್ವದ ರಾಷ್ಟ್ರೀಯ ಲೋಕ ಮೋರ್ಚಾ ಹಾಗೂ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದುಸ್ತಾನಿ ಅವಾಮ್ ಮೋರ್ಚಾಗೆ (ಜಾತ್ಯತೀತ) ತಲಾ ಆರು ಸ್ಥಾನಗಳು ದಕ್ಕಿವೆ. ಎನ್‌ಡಿಎ ಕೂಟವೇನೂ ಗೊಂದಲದಿಂದ ಮುಕ್ತವಾಗಿಲ್ಲ. ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ ೧೪೩, ಕಾಂಗ್ರೆಸ್ ೬೧ ಸ್ಥಾನಗಳಿಗೆಸೀಟು ಹಂಚಿಕೆಯಾಗಿವೆ. ಕಾಂಗ್ರೆಸ್ ಕಳೆದ ಬಾರಿ ೭೦ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

ಮಹಾಘಟಬಂಧನ್ ಅಂಗಪಕ್ಷಗಳೇ ಕೆಲವು ಕ್ಷೇತ್ರಗಳಲ್ಲಿ ಸೆಣಸಾಡುತ್ತಿವೆ. ಮಹಾಘಟಬಂಧನ್‌ನಲ್ಲಿರುವ ಇತರ ಪಕ್ಷಗಳು- ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ-ಎಂಎಲ್), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ವಿಕಾಸಶೀಲ ಇನ್ಸಾನ್ ಪಕ್ಷ. ಬಿಹಾರದಲ್ಲಿ ಈ ಬಾರಿ ಜನ್ ಸುರಾಜ್ ಪಕ್ಷ ಕಣಕ್ಕೆ ಧುಮುಕಿ ಸದ್ದು ಮಾಡುತ್ತಿದೆ. ಚುನಾವಣಾ ತಂತ್ರಗಳ ನಿಪುಣ ಪ್ರಶಾಂತ ಕಿಶೋರ್ ಈ ಪಕ್ಷದ ಸಂಸ್ಥಾಪಕ. ಪ್ರಶಾಂತ ಕಿಶೋರ್ ಎಲ್ಲ ೨೪೩ ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಉಮೇದುವಾರರನ್ನು ಕಣಕ್ಕೆ ಇಳಿಸಿದ್ದಾರೆ. ಪ್ರಶಾಂತ ಕಿಶೋರ್ ಯಾವ ಮೈತ್ರಿಕೂಟದ ಮತಗಳನ್ನು ಸೆಳೆಯುತ್ತಾರೆಂಬುದರ ಮೇಲೆ ಕೆಲವು ಕ್ಷೇತ್ರಗಳಲ್ಲಿ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಇದೆ. ಮಂಡಲ ಚಳವಳಿ ನಂತರ ಬಿಹಾರದ ರಾಜಕೀಯ ಚಿತ್ರಣವೇ ಬದಲಾಯಿತು. ಬಿಹಾರ ಹಿಂದುಳಿದ ವರ್ಗಗಳ ರಾಜಕಾರಣದ ಎಪಿಕ್ ಸೆಂಟರ್.

ಬಿಹಾರದಲ್ಲಿ ಕಳೆದ ಸುಮಾರು ೩೫ ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರು ನಾಯಕರದ್ದೇ ಪಾರುಪತ್ಯ. ಮೊದಲು ೧೫ ವರ್ಷಗಳ ಕಾಲ ಲಾಲೂಪ್ರಸಾದ್ ಯಾದವ್ ಅವರ ರಾಜ್ಯಭಾರ. ನಂತರ ೨೦ ವರ್ಷಗಳಿಂದ ನಿತೀಶ್ ಅವರ ಆಡಳಿತ. ನಿತೀಶ್ ಕುಮಾರ್ ಅವರು ಕುರ್ಮಿ ಸಮಾಜಕ್ಕೆ ಸೇರಿದವರು. ಆ ಸಮಾಜ ಅವರ ಬೆನ್ನಿಗಿದೆ. ಮೇಲ್ವರ್ಗದ ಭೂಮಿಹಾರ್, ಕಾಯಸ್ಥ, ರಜಪೂತರು ನಿತೀಶ್ ಅವರ ರಾಜಕೀಯ ಏಳಿಗೆಗೆ ಬೆಂಬಲಿಸಿದ್ದಾರೆ. ನಿತೀಶ್ ಕುಮಾರ್ ತಮ್ಮ ಆಡಳಿತದಲ್ಲಿ ಮಹಾದಲಿತ ಆಯೋಗ ಹಾಗೂ ಅತಿ ಹಿಂದುಳಿದ ಜಾತಿ ಆಯೋಗವನ್ನು ರಚಿಸಿದರು. ಅತಿ ಹಿಂದುಳಿದ ಜಾತಿ ಹಾಗೂ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸಿದರು. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದರು. ಇದು ಅವರ ನಾಯಕತ್ವವನ್ನು ಗಟ್ಟಿಗೊಳಿಸಿತು. ಅವರು ನಡೆಸಿದ ಜಾತಿ ಗಣತಿ ಅವರ ಕೈಹಿಡಿಯಿತು. ನಿತೀಶ್ ಅವರ ಗೆಲುವಿನಲ್ಲಿ ಮಹಿಳಾ ಮತದಾರರದ್ದೇ ಪ್ರಮುಖ ಪಾತ್ರ.

ನಿತೀಶ್‌ಕುಮಾರ್ ಕಳೆದ ೨೦ ವರ್ಷಗಳ ಅವಽಯಲ್ಲಿ ಒಂಬತ್ತು ತಿಂಗಳು ಮಾತ್ರ ಮುಖ್ಯಮಂತ್ರಿ ಆಗಿರಲಿಲ್ಲ. ಐದು ಬಾರಿ ಅವರು ತಮ್ಮ ದೋಸ್ತಿ ಯನ್ನು ಬದಲಿಸಿದ್ದಾರೆ. ಪ್ರತಿಸಲ ದೋಸ್ತಿ ಬದಲಿಸಿದಾಗಲೂ ಅವರೇ ಮುಖ್ಯಮಂತ್ರಿ. ಅದು ನಿತೀಶ್ ಅವರ ತಾಕತ್ತು. ಆದರೆ, ನಿತೀಶ್‌ರ ಜನಪ್ರಿಯತೆ ಈಗ ಕುಗ್ಗುತ್ತಾ ಬಂದಿದೆ. ಅವರ ಆರೋಗ್ಯದ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಆದರೂ, ೭೪ ವರ್ಷದ ನಿತೀಶ್ ಕುಮಾರ್ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿಲ್ಲ. ನಿತೀಶ್ ಅವರ ಜೆಡಿಯು ಅಸೆಂಬ್ಲಿ ಚುನಾವಣೆಯಲ್ಲಿ ಯಾವತ್ತೂ ಬಹುಮತ ಪಡೆದಿಲ್ಲ ಎಂಬುದೂ ವಾಸ್ತವ.

ಇದನ್ನು ಓದಿ: ಅರಳುತ್ತಿರುವ ಬಾಲಪ್ರತಿಭೆ ಕೆ.ಎಸ್.ಆದಿತ್ಯ

ಬಿಹಾರದಲ್ಲಿ ಈಗ ರಾಜಕೀಯ ಪಕ್ಷಗಳಿಂದ ಆಶ್ವಾಸನೆಗಳ ಸುರಿಮಳೆ. ಸಿಎಂ ನಿತೀಶ್ ಕುಮಾರ್ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗವನ್ನು ಸೃಷ್ಟಿಸುವ ಭರವಸೆ ನೀಡಿದ್ದಾರೆ. ಆರ್‌ಜೆಡಿ ನಾಯಕತೇಜಸ್ವಿ ಯಾದವ್ ಅವರಿಂದ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಮನೆಯಿಂದಲೂ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುತ್ತೇವೆ. ಇದಕ್ಕಾಗಿ ಮುಖ್ಯಮಂತ್ರಿಯಾದ ೨೦ ದಿನಗಳಲ್ಲೇ ಶಾಸನ ರೂಪಿಸುತ್ತೇವೆ. ೨೦ ತಿಂಗಳಲ್ಲಿ ಸರ್ಕಾರಿ ಉದ್ಯೋಗ ಕೊಡುತ್ತೇವೆ ಎಂಬ ಆಶ್ವಾಸನೆ. ಬಿಹಾರದ ಜನಸಂಖ್ಯೆಯಲ್ಲಿ ಅತಿ ಹಿಂದುಳಿದ ವರ್ಗದವರು (ಇಬಿಸಿ) ಶೇ.೩೬, ಇತರ ಹಿಂದುಳಿದ ವರ್ಗಗಳು ಶೇ.೨೬, ಪರಿಶಿಷ್ಟ ಜಾತಿ ಶೇ.೧೯.೬೫, ಪರಿಶಿಷ್ಟ ಪಂಗಡ ಶೇ.೧.೬೮, ಮೇಲ್ವರ್ಗದವರು ಶೇ.೧೫.೫, ಮುಸ್ಲಿಮರು ಶೇ.೧೮ರಷ್ಟು ಇದ್ದಾರೆ.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಎನ್‌ಡಿಎ-ಮಹಾಘಟಬಂಧನ್ ತಲಾ ಶೇ.೩೭ರಷ್ಟು ಮತಗಳನ್ನು ಹಂಚಿಕೊಂಡಿತ್ತು. ಆದರೆ, ಸೀಟುಗಳ ವಿಚಾರದಲ್ಲಿ ಎನ್‌ಡಿಎ ೧೨೫, ಮಹಾಘಟಬಂಧನ್ ೧೧೦ ಸ್ಥಾನಗಳನ್ನು ಗಳಿಸಿತ್ತು. ಆರ್‌ಜೆಡಿ ೭೫, ಬಿಜೆಪಿ ೭೪, ಜೆಡಿಯು ೪೩, ಕಾಂಗ್ರೆಸ್ ೧೯ ಸೀಟುಗಳನ್ನು ಪಡೆದಿತ್ತು. ಆರ್‌ಜೆಡಿ ಶೇ.೨೩.೧, ಬಿಜೆಪಿ ಶೇ.೧೯.೫, ಜೆಡಿಯು ಶೇ.೧೫.೪, ಕಾಂಗ್ರೆಸ್ ಶೇ.೯.೫ ಮತಗಳನ್ನು ಗಳಿಸಿತ್ತು.

” ನಿತೀಶ್‌ಕುಮಾರ್ ಕಳೆದ ೨೦ ವರ್ಷಗಳ ಅವಧಿಯಲ್ಲಿ ಒಂಬತ್ತು ತಿಂಗಳು ಮಾತ್ರ ಮುಖ್ಯಮಂತ್ರಿ ಆಗಿರಲಿಲ್ಲ. ಐದು ಬಾರಿ ಅವರು ತಮ್ಮ ದೋಸ್ತಿಯನ್ನು ಬದಲಿಸಿದ್ದಾರೆ. ಪ್ರತಿಸಲ ದೋಸ್ತಿ ಬದಲಿಸಿದಾಗಲೂ ಅವರೇ ಮುಖ್ಯಮಂತ್ರಿ. ಅದು ನಿತೀಶ್ ಅವರ ತಾಕತ್ತು. ಆದರೆ, ನಿತೀಶ್‌ರ ಜನಪ್ರಿಯತೆ ಈಗ ಕುಗ್ಗುತ್ತಾ ಬಂದಿದೆ. ಅವರ ಆರೋಗ್ಯದ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಆದರೂ, ೭೪ ವರ್ಷದ ನಿತೀಶ್ ಕುಮಾರ್ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿಲ್ಲ.”

ಕೂಡ್ಲಿ ಗುರುರಾಜ

ಆಂದೋಲನ ಡೆಸ್ಕ್

Recent Posts

ಸಂಪ್ರದಾಯವಾಗಿ ನಡೆಯದ ವಿವಾಹ ಅಮಾನ್ಯ ; ಗುಜರಾತ್ ಹೈಕೋರ್ಟ್ ತೀರ್ಪು

ಸಪ್ತಪದಿ ಹಿಂದೂ ವಿವಾಹದ ಅಡಿಪಾಯ ; ಗುಜರಾತ್‌ ಹೈಕೋರ್ಟ್‌ ತೀರ್ಪು ಅಹಮದಾಬಾದ್ : ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಸಮಾರಂಭಗಳನ್ನು…

4 hours ago

ಬೋರ್‌ವೆಲ್, ಪಂಪ್‌ಸೆಟ್ ಕೇಬಲ್‌ ಕಳ್ಳತನ ಯುವಕರಿಗೆ ಧರ್ಮದೇಟು

ಮಂಡ್ಯ : ಬೋರ್‌ವೆಲ್, ಪಂಪ್‌ಸೆಟ್ ಕೇಬಲ್ ಕಳವು ಮಾಡುತ್ತಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ…

5 hours ago

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ; ಸುಟ್ಟು ಹೋದ 6 ಎಕರೆ ಕಬ್ಬು

ಹನೂರು : ಅತಿಯಾದ ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಜಮೀನಿನಲ್ಲಿದ್ದ 6 ಎಕರೆ ಕಬ್ಬು…

6 hours ago

ಆಷಾಢ ಶುಕ್ರವಾರ, ಶನಿವಾರ, ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಆಷಾಢ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಚಿವ ಯತೀಂದ್ರ…

10 hours ago

ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’

ಮೈಸೂರು: ಜೀವವೈವಿಧ್ಯ ತಾಣವಾಗಿರುವn ಹಾಗೂ ಪ್ರಕೃತಿಯ ಸೊಬಗಿನ ವಾತಾವರಣದಿಂದ ಕೂಡಿರುವ ಕಾರಂಜಿ ಕೆರೆ ಉದ್ಯಾನದಲ್ಲಿ ‘ಪರಿಸರ ಅನುಭವ ವಲಯ’ ನಿರ್ಮಾಣ…

11 hours ago

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

17 hours ago