ಅಂಕಣಗಳು

ವಯನಾಡಿಗೆ ಆಗಿದ್ದು ಕಾಫಿನಾಡಿಗೂ ಆಗಬಹುದು

• ಉಷಾ ಪ್ರೀತಮ್, ವಿರಾಜಪೇಟೆ

ವಯಾಡಿನಲ್ಲಿ ಸಂಭವಿಸಿದ ಘೋರ ದುರಂತ ನೂರಾರು ಜನರ ಜೀವ, ಜೀವನವನ್ನು ಬಲಿಪಡೆದುಕೊಂಡಿದೆ. ಪ್ರಕೃತಿ ಮುನಿದರೆ ತಾನೇನು ಮಾಡಬಹುದು ಎಂಬುದಕ್ಕೆ ವಯನಾಡು ನಮ್ಮ ಮುಂದಿರುವ ಸಾಕ್ಷಿ.

ವಯನಾಡಿನ ದುರಂತ ಇತರೆ ಭಾಗಗಳಲ್ಲಿ ಬೆಟ್ಟದ ಮೇಲೆ, ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯ ಘಂಟೆಯಾಗಿರುವುದಂತೂ ನಿಜ. ಕರ್ನಾಟಕದ ನಾನಾ ಭಾಗಗಳಲ್ಲಿಯೂ ಭೂಕುಸಿತ ಗಳಾಗುತ್ತಿವೆ. ಈಗಲೇ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ರಾತ್ರಿ ನಿದ್ರೆ ಬರುತ್ತಿಲ್ಲ. ಮಳೆ ಜೋರಾದರೆ ಅದರ ಸದ್ದು ಕಿವಿಗೆ ಅಪ್ಪಳಿಸುತ್ತದೆ… ಇಂತಹದೊಂದು ಆತಂಕ ಈಗ ಕೊಡಗಿನ ವಿರಾಜಪೇಟೆಯಲ್ಲಿನ ಮಲೆತಿರಿಕೆ ಬೆಟ್ಟದ ತಪ್ಪಲಿನ ಹಾಗೂ ಬೆಟ್ಟದ ಮೇಲೆ ವಾಸಿಸುವ ಜನರನ್ನು ಕಾಡುತ್ತಿದೆ.

ವಿರಾಜಪೇಟೆ ಒಂದು ಕಣಿವೆಯಂತಹ ನಗರಿ. ಮಲೆತಿರಿಕೆ ಬೆಟ್ಟವು ಈ ನಗರವನ್ನು ಸುತ್ತುವರಿದಿದೆ. ಈ ಕಿರಿದಾದ ನಗರದಲ್ಲಿ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಪರಿಣಾಮ ಬೆಟ್ಟದ ಮೇಲ್ಬಾಗದಲ್ಲಿಯೂ ಜನಸಂಖ್ಯೆ ಹೆಚ್ಚುತ್ತಿದೆ. ಈ ಬೆಟ್ಟ ಅಪಾಯದ ಅಂಚಿನಲ್ಲಿರುವ ಬಗ್ಗೆ ಈಗಾಗಲೇ ಭಾರತೀಯ ಭೂಸರ್ವೇಕ್ಷಣಾ ಇಲಾಖೆಯ ವರದಿಗಳಿದ್ದರೂ ಜನರ ಸುರಕ್ಷತೆ ಕಾಪಾಡುವುದನ್ನು ಸರ್ಕಾರ ಮರೆತಂತಿದೆ. ಕೆಲ ವರ್ಷಗಳ ಹಿಂದೆ ಈ ಬೆಟ್ಟದ ತಪ್ಪಲಿನಲ್ಲಿರುವ ಕೀರ್ತಿ ಬಡಾವಣೆಯ ಸಮೀಪ ನಡೆಸುತ್ತಿದ್ದ ಕಲ್ಲು ಕ್ವಾರಿಯ ತಡೆಗೋಡೆ ಕುಸಿದು ಮೂರು ಮನೆಗಳು ಜಖಂಗೊಂಡಿದ್ದವು. ಆ ಬಳಿಕ ಕ್ವಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಬೆಟ್ಟದ ಮತ್ತೊಂದು ಭಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಲು ಬೆಟ್ಟದ ಬುಡವನ್ನು ಬಗೆದು ಅಲ್ಲಿನ ಶಿಲಾಪದರವನ್ನೂ ಸಡಿಲಗೊಳಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸದ್ಯ ಈ ಕೆಲಸಗಳು ನಿಂತಿದ್ದರೂ ಅವುಗಳ ಪರಿಣಾಮ ಬೆಟ್ಟವನ್ನು ಸಡಿಲಗೊಳಿಸಿರುವುದಂತೂ ಸುಳ್ಳಲ್ಲ. ಇವುಗಳೊಂದಿಗೆ ರೆಸಾರ್ಟ್ ನಿರ್ಮಾಣ, ಈಜುಕೊಳಗಳ ನಿರ್ಮಾಣಕ್ಕಾಗಿ ಅನಧಿಕೃತವಾಗಿ ಬೆಟ್ಟದ ತಪ್ಪಲನ್ನು ಅಗೆದಿರುವುದು ಬೆಟ್ಟವನ್ನು ಸಡಿಲಗೊಳಿಸಿದೆ.

2018ರ ಆಗಸ್ಟ್ 13ರಂದು ಈ ಮಲೆತಿರಿಕೆ ಬೆಟ್ಟದಲ್ಲಿ ಸುಮಾರು 200 ಅಡಿಗಳ ಆಳಕ್ಕೆ ಭೂಮಿ ಬಿರುಕು ಬಿಟ್ಟಿತ್ತು. ಆಗ ಘಟನಾ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಭಾರಿ ಮಳೆಯಾದರೆ ಭೂಗರ್ಭದಿಂದ ನೀರು ಉಕ್ಕಿ ಭಾರೀ ಪ್ರಮಾಣದ ಭೂಕುಸಿತವಾಗಬಹುದು, ಮನೆಗಳೂ ಕುಸಿಯಬಹುದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಧಾರಾಕಾರ ಮಳೆಯಾಗುವ ಸಂದರ್ಭದಲ್ಲಿ ಇಲ್ಲಿ ಜನರು ವಾಸ ಮಾಡುವುದು ಸೂಕ್ತವಲ್ಲ ಎಂಬುದು ಅವರ ಸೂಚನೆಯಾಗಿತ್ತು. ಈ ವರದಿ ಬಂದು 7 ವರ್ಷಗಳೇ ಕಳೆದಿವೆ. ಆರಂಭದ ನಾಲ್ಕು ವರ್ಷಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸಲಾಯಿತು. ತದನಂತರ ವರದಿಯನ್ನು ಕಡೆಗಣಿಸಲಾಗಿದೆ ಅನಿಸುತ್ತದೆ.

ಬೆಟ್ಟದ ನಿವಾಸಿಗಳೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೋ ಇಲ್ಲವೋ ತಿಳಿಯದು. ಕಾಳಜಿ ಕೇಂದ್ರಕ್ಕೂ ಬಾರದೆ ‘ನಾವು ಬರುವುದಿಲ್ಲ. ಸತ್ತರೂ ಇಲ್ಲಿಯೇ ಸಾಯುತ್ತೇವೆ’ ಎಂದು ಪಟ್ಟುಹಿಡಿದು ಕುಳಿತಿದ್ದಾರೆ.

ಇಲ್ಲಿನ ನಾಂಗಾಲ ಗ್ರಾಮದ ಬಳಿ ಭೂಮಿ ಖರೀದಿಸಿ ಜನರನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತೇವೆ ಎಂದಿದ್ದ ಸರ್ಕಾರ ಈವರೆಗೂ ಅದರ ಗೋಜಿಗೇ ಹೋಗದಿರುವ ಪರಿಣಾಮ ಇಲ್ಲಿನ ಸುಮಾರು 64 ಕುಟುಂಬಗಳ ಸ್ಥಳಾಂತರ ಪ್ರಕ್ರಿಯೆ ಹಾಗೆಯೇ ಉಳಿದಿದೆ. ಸ್ಥಳಾಂತರ ಮಾಡುತ್ತೇವೆ ಎನ್ನುತ್ತಲೇ ನಾಲ್ಕು ವರ್ಷಗಳು ಉರುಳಿವೆ ಅಷ್ಟೇ. ಜಿಲ್ಲಾಡಳಿತ ಹಾಗೂ ಪುರಸಭೆ ಕಳೆದ ಐದಾರು ವರ್ಷಗಳಿಂದ ಯೆಲ್ಲೋ ಅಲರ್ಟ್, ರೆಡ್ ಅಲರ್ಟ್ ಎಂದು ಎಚ್ಚರಿಕೆಗಳನ್ನು ನೀಡುತ್ತಿದ್ದದ್ದನ್ನೂ ಈಗ ನಿಲ್ಲಿಸಿದೆ. ಎಚ್ಚರಿಕೆ ನೀಡಿದರೂ ಹೆಚ್ಚಾಗಿ ಕೂಲಿ ಕಾರ್ಮಿಕರೇ ವಾಸವಿರುವ ಈ ಪ್ರದೇಶದಲ್ಲಿ ಅದರ ಮಾಹಿತಿ ಸುಲಭವಾಗಿ ತಲುಪುತ್ತದೆ ಎಂಬ ಭರವಸೆ ಕಡಿಮೆ. ಮಳೆ ಬಂದರೆ ಸ್ಥಳಾಂತರ, ಮತ್ತೆ ಅಲ್ಲಿಯೇ ವಾಸ. ಇದರಿಂದ ಬೇಸತ್ತ ಇಲ್ಲಿನ ಜನರ ಉತ್ತರ ಈಗ ಒಂದೇ: ‘ನಾವು ಬೆಟ್ಟದ ಮೇಲೆ ಇದ್ದೇವೆ ಎಂದು ನಮ್ಮನ್ನು ಸ್ಥಳಾಂತರ ಮಾಡುತ್ತಾರೆ. ಅದೇ ಬೆಟ್ಟ ಕುಸಿದರೆ ಬೆಟ್ಟದ ತಪ್ಪಲಿನ ತೆಲುಗರ ಬೀದಿ, ದಬ್ಬನಿ ಮೊಹಲ್ಲಾ, ಸುಂಕದಕಟ್ಟೆ ಬೀದಿಯ ಜನರಿಗೂ ತೊಂದರೆಯಾಗುತ್ತದೆ ಅಲ್ಲವೇ? ಅವರನ್ನೂ ಏಕೆ ಕಾಳಜಿ ಕೆಂದ್ರಕ್ಕೆ ಕರೆತರುವುದಿಲ್ಲ?’ ಅವರ ಮಾತಿನಲ್ಲಿ ಅರ್ಥವಿಲ್ಲದಿಲ್ಲ. ಬೆಟ್ಟ ಕುಸಿದರೆ ಬೆಟ್ಟದ ತಪ್ಪಲಿನ ಜನರಿಗೂ ತೊಂದರೆಯೇ ಅಲ್ಲವೆ?

ಇಲ್ಲಿನ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಪ್ರತಿ ಮಳೆಗಾಲದಲ್ಲಿಯೂ ಅಪಾಯಕಾರಿ ಮನೆಗಳನ್ನು ಗುರುತಿಸಿ ಅವರನ್ನು ಕಾಳಜಿ ಕೇಂದ್ರಕ್ಕೆ ತರುವುದು, ಮಳೆ ಕಡಿಮೆಯಾದ ಮೇಲೆ ಅವರನ್ನು ಮನೆಗೆ ಕಳುಹಿಸುವುದರಲ್ಲಿಯೇ ಇದ್ದಾರೆ. ಹೀಗಾದರೆ ಅವರು ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವುದಾದರೂ ಹೇಗೆ?

ಕರ್ನಾಟಕದಲ್ಲಿ ಭೂ ಕುಸಿತಗಳು ಸಂಭವಿಸಬಹುದಾದ ಅಪಾಯಕಾರಿ 32 ಸ್ಥಳಗಳ ಪಟ್ಟಿಯಲ್ಲಿ ವಿರಾಜಪೇಟೆ ತಾಲ್ಲೂಕೂ ಇದೆ. ಇದನ್ನು ಅಧಿಕಾರಿಗಳು ಮನಗಾಣುವುದು ಅಗತ್ಯವಿದೆ. ಮಲೆತಿರಿಕೆ ಬೆಟ್ಟದ ಸಮೀಪ ವಯನಾಡಿನಂತೆ ಯಾವುದೇ ನದಿ ಹರಿಯುತ್ತಿಲ್ಲವಾದರೂ ಪ್ರತಿ ಮಳೆಗಾಲದ ಸಂದರ್ಭದಲ್ಲಿ ಈ ಬೆಟ್ಟದ ಮೇಲಿಂದ ಸಣ್ಣ ಸಣ್ಣ ತೊರೆಗಳು ಹರಿದು ಬರುತ್ತವೆ. ಮಳೆ ಹೆಚ್ಚಾದಂತೆ ಹರಿಯುವ ನೀರಿನ ಪ್ರಮಾಣವೂ ಮತ್ತು ರಭಸವೂ ಹೆಚ್ಚಾಗುತ್ತದೆ.

ಬೆಟ್ಟ ಅಪಾಯಕಾರಿಯಾಗಿ ಕಾಣುತ್ತಿದ್ದರೂ ಸರ್ಕಾರವಾಗಲಿ, ಅಧಿಕಾರಿ ಗಳಾಗಲಿ ಅಲ್ಲಿನ ಜನರನ್ನು ಯಾವ ರೀತಿ ರಕ್ಷಿಸಬಹುದು ಎಂಬುದರ ಬಗ್ಗೆ ಒಂದು ಸ್ಪಷ್ಟ ನಿಲುವು ಪಡೆದಿಲ್ಲ. ದುರ್ಘಟನೆ ಸಂಭವಿಸಿದ ಬಳಿಕ ಕಾರ್ಯಪ್ರವೃತ್ತರಾಗುವ ಬದಲು, ಮುನ್ನೆಚ್ಚರಿಕೆ ವಹಿಸಿದರೆ ಆಗುವ ಅನಾಹುತವನ್ನು ತಪ್ಪಿಸಬಹುದು.

ವಿರಾಜಪೇಟೆಯ ಈ ಬೆಟ್ಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಅಧಿಕೃತ ವರದಿ ಬಂದಿದೆ. ಕಳೆದ ವರ್ಷ ವಿರಾಜಪೇಟೆಯಲ್ಲಿ 935.76 ಮಿ.ಮೀ. ಮಳೆಯಾಗಿತ್ತು. ಈ ವರ್ಷ ಹೆಚ್ಚು ಮಳೆಯಾಗಿದ್ದು, 2141.69 ಮಿ.ಮೀ. ದಾಖಲಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಷ್ಟೆಲ್ಲ ಮಾಹಿತಿ ಇದ್ದರೂ ಬೆಟ್ಟದ ಮೇಲಿನ ಹಾಗೂ ತಪ್ಪಲಿನ ಜನರ ರಕ್ಷಣೆಯ ಬಗ್ಗೆ ಜಿಲ್ಲಾಡಳಿತ ಯಾವುದೇ ಕಾಳಜಿ ವಹಿಸದೆ ಬೇಜವಾಬ್ದಾರಿ ತೋರುತ್ತಿದೆ. ಈಗ ಎಚ್ಚೆತ್ತುಕೊಂಡು ಅನಾಹುತ ಸಂಭವಿಸುವ ಮೊದಲು ಜನರ ರಕ್ಷಣೆಯಾಗಲಿದೆಯೇ? ಜನರಿಗೆ ಶಾಶ್ವತ ಪರಿಹಾರ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚಾ.ಬೆಟ್ಟ: ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…

2 hours ago

ಓದುಗರ ಪತ್ರ: ಕೆಎಚ್‌ಬಿ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆಂಚಲಗೂಡು ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ)ಯಿಂದ ನಿರ್ಮಿಸಿರುವ ಬಡಾವಣೆಯಲ್ಲಿ ನೀರು,…

2 hours ago

ಓದುಗರ ಪತ್ರ: ಬೈಕ್ ಟ್ಯಾಕ್ಸಿ ಚಾಲಕರು ನಿಯಮ ಪಾಲಿಸಲಿ

ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ…

2 hours ago

ಓದುಗರ ಪತ್ರ: ‘ಉದಯರವಿ’ಯನ್ನು ಸ್ಮಾರಕವನ್ನಾಗಿ ರೂಪಿಸಿ

ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ‘ಉದಯರವಿ’ ಮನೆಯನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಸಾಹಿತ್ಯಾಸಕ್ತರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸಂಬಂಧಪಟ್ಟವರು…

2 hours ago

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ಸಮರ್ಥ ಕಾಯ್ದೆ ಪಾಲನಾ ವ್ಯವಸ್ಥೆ ಮುಖ್ಯ

ಪ್ರೊ.ಆರ್.ಎಂ.ಚಿಂತಾಮಣಿ ನುರಿತ ಹಣಕಾಸು ಆಡಳಿತಗಾರ ಮತ್ತು ದೇಶದ ಹಣಕಾಸು ಮತ್ತು ಬಂಡವಾಳ ಪೇಟೆಗಳ ಬೆಳವಣಿಗೆ ಮತ್ತು ನಿಯಂತ್ರಣದ ಉನ್ನತಾಧಿಕಾರವುಳ್ಳ ಭಾರತೀಯ…

2 hours ago

ಕಾಫಿ ಬೆಳೆಗಾರರ ನಿದ್ದೆಗೆಡಿಸಿದ ದರ ಕುಸಿತ

ಲಕ್ಷ್ಮಿಕಾಂತ್ ಕೊಮಾರಪ್ಪ ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ ಸೋಮವಾರಪೇಟೆ: ಕಾರ್ಮಿಕರ ಕೊರತೆ,…

2 hours ago