ಏಪ್ರಿಲ್ 24, ಈ ದಿನ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’. ದೇಶವೇ ಈ ದಿನವನ್ನು ಆಚರಿಸುವ ಸಂಭ್ರಮದಲ್ಲಿದೆ. ಆದರೆ ಈ ಬಾರಿ ಕರ್ನಾಟಕದ ಪಾಲಿಗೆ ಈ ದಿನ ವಿಷಾದದ ದಿನ. ನಾವು ಸಂಭ್ರಮ ಪಡುವ ಸ್ಥಿತಿಯಲ್ಲಿ ಇಲ್ಲವೇ ಇಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಹಿಡಿದು ಇಂದಿನ ಸಿದ್ದರಾಮಯ್ಯ ಸರ್ಕಾರದ ಆಡಳಿತಾವಧಿವರೆಗೆ ನಮ್ಮ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಪಾಲಿಗೆ ಕೆಟ್ಟ ದಿನಗಳನ್ನು ಕೊಟ್ಟಿರುವಾಗ ಸಂಭ್ರಮಕ್ಕೆ ಅರ್ಥವೇ ಇಲ್ಲ. ಏನಿದು ಪಂಚಾಯತ್ ರಾಜ್ ದಿನ ? ಈ ದಿನ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಆಶಯಕ್ಕೆ ಇಂಬು ಕೊಡುವಂತೆ ಇರಬೇಕಿತ್ತು. ಪ್ರಜೆಗಳಿಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶಗಳು ಸಿಗಬೇಕಿತ್ತು.
My notion of democracy is that under it the weakest should have the same opportunity as the strongest ಎನ್ನುವ ಗಾಂಧೀಜಿ ಅವರ ಹಾರೈಕೆ ನಿಜ ಆಗುವ ದಾರಿಯಲ್ಲಿ ಅಧಿಕಾರ ವಿಕೇಂದ್ರೀಕರಣದ ಹೆಜ್ಜೆಗಳು ದಾಪುಗಾಲಿಟ್ಟು ಮುನ್ನಡೆಯುವ ಹೆಮ್ಮೆ ನಮ್ಮದಾಗಬೇಕಿತ್ತು. ಸಂವಿಧಾನದ 73ನೇ ತಿದ್ದುಪಡಿಯ ಉದ್ದೇಶ, ಗುರಿ ಎಡೆಗೆ ನಮ್ಮ ಪಯಣ ಸಾಗಬೇಕಿತ್ತು.
ನಮಗೆ ಗೊತ್ತಿರುವಂತೆ ಸಂವಿಧಾನದ 73ನೇ ತಿದ್ದುಪಡಿ ದೇಶದಲ್ಲಿ ಅನುಷ್ಠಾನಕ್ಕೆ ಬಂದ ಏಪ್ರಿಲ್ 24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನದ 73ನೇ ತಿದ್ದುಪಡಿ 1992ರ ಡಿಸೆಂಬರ್ 22ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆಯಿತು. ಡಿಸೆಂಬರ್ 23ರಂದು ರಾಜ್ಯಸಭೆಯ ಅನುಮೋದನೆಯೂ ಸಿಕ್ಕಿತು.
ಆಗ ದೇಶದಲ್ಲಿ ಆಸ್ತಿತ್ವದಲ್ಲಿದ್ದ 17 ರಾಜ್ಯ ಸರ್ಕಾರಗಳ ಒಪ್ಪಿಗೆಯೂ ದೊರಕಿತು.
ಇದಾದ ನಂತರ 1993ರ ಏಪ್ರಿಲ್ 23ರಂದು ರಾಷ್ಟ್ರಪತಿಗಳು ಈ ತಿದ್ದುಪಡಿ ವಿದೇಯಕಕ್ಕೆ ಅಂಕಿತ ಹಾಕಿದರು.
1993ರ ಏಪ್ರಿಲ್ 24ರಿಂದ ಸಂವಿಧಾನದ 73ನೇ ತಿದ್ದುಪಡಿಯನ್ನು ಭಾರತದ ದೇಶದಲ್ಲಿ ಅನುಷ್ಠಾನ ಮಾಡುವುದು ಕಡ್ಡಾಯವಾಯಿತು.
ಹೀಗಾಗಿ ಏಪ್ರಿಲ್ 24ನ್ನು ‘ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’ ಎಂದು ಆಚರಿಸಲಾಗುತ್ತಿದೆ.
ಸಂವಿಧಾನದ ೭೩ನೇ ತಿದ್ದುಪಡಿಯ ಹಿನ್ನೆಲೆ : ಭಾರತದ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾದ ಜನತಾ ಪಕ್ಷದ ಆಡಳಿತದ ಅವಽಯಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸ್ಥಳೀಯ ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಅಶೋಕ್ ಮೆಹತಾ ಅಧ್ಯಕ್ಷತೆಯ ಸಮಿತಿಯನ್ನು ನೇಮಿಸಿದರು. ಈ ಸಮಿತಿಯ ಶಿಫಾರಸುಗಳು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಽಕಾರ ವಿಕೇಂದ್ರೀಕರಣದ ಮಹತ್ವವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು. ಆದರೆ ಸಮಿತಿಯ ವರದಿಯನ್ನು ಆಧರಿಸಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವ ಸಂಸದೀಯ ಚರ್ಚೆ ಆರಂಭ ಆಗುವ ಮೊದಲೇ ಮೊರಾರ್ಜಿ ಸರ್ಕಾರ ಪತನ ಆಗಿ ಹೋಯಿತು. ಇಂದಿರಾ ಗಾಂಧಿ ಅವರು ಮತ್ತೆ ಪ್ರಧಾನಿ ಆದರು. ಸಮಿತಿಯ ಶಿಫಾರಸುಗಳು ಮೂಲೆ ಸೇರಿದವು.
ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರಪ್ರದೇಶ ತೋರಿಸಿದ ದಾರಿ : ಈ ಸಂದರ್ಭದಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳು ಆಡಳಿತ ನಡೆಸುತ್ತಿದ್ದವು. ಬಂಗಾಳದಲ್ಲಿ ಜ್ಯೋತಿ ಬಸು, ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ, ಆಂಧ್ರದಲ್ಲಿ ಎನ್. ಟಿ. ರಾಮರಾವ್ ಮುಖ್ಯಮಂತ್ರಿಗಳಾಗಿದ್ದರು. ಮೊದಲಿಗೆ ಜ್ಯೋತಿ ಬಸು ಅವರ ಸರ್ಕಾರ ಅಶೋಕ್ ಮೆಹತಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಧೈರ್ಯ ಮಾಡಿತು. 1974ರಲ್ಲಿ ಹೊಸ ಪಂಚಾಯತ್ರಾಜ್ ವ್ಯವಸ್ಥೆಗೆ ಪ. ಬಂಗಾಳ ರಾಜ್ಯದಲ್ಲಿ ಚುನಾವಣೆ ನಡೆಯಿತು. ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ಎನ್ನುವ ಎರಡು ಸ್ತರಗಳ ಪಂಚಾಯತ್ ರಾಜ್ಯ. ತಳ ಹಂತದಲ್ಲಿ ಪ್ರಜೆಗಳಿಗೆ ಆಡಳಿತದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವ ಗ್ರಾಮಸಭಾಗಳು. ಜೊತೆಗೆ ಕಾರ್ಯಕ್ರಮಗಳು, ಸಿಬ್ಬಂದಿ ಮತ್ತು ಹಣಕಾಸು ವಿಕೇಂದ್ರೀಕರಣಕ್ಕೆ ಒತ್ತು. ಮೊದಲ ಬಾರಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಮಹಿಳೆಯರಿಗೆ ರಾಜಕೀಯ ಮೀಸಲಾತಿ ದೊರಕಿತು. ಇದು ಸ್ಥಳೀಯ ಆಡಳಿತ ವ್ಯವಸ್ಥೆಯ ಇತಿಹಾಸದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿತ್ತು.
ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಪಂಚಾಯತ್ ರಾಜ್ ಸಚಿವರಾ ಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಅದಕ್ಕಾಗಿ ಅವರು ಪಕ್ಷದ ಒಳಗೆ ಮತ್ತು ಹೊರಗೆ ತೀವ್ರವಾದ ಪ್ರತಿರೋಧವನ್ನೂ ಎದುರಿಸಬೇಕಾಗಿ ಬಂತು. ಈ ಕುರಿತು ಇಲ್ಲಿ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಆದರೆ ವಿಧಾನ ಸಭೆಯ ಅಧಿವೇಶನದಲ್ಲಿ ಅವರು ಆಡಿದ ಒಂದು ಮಾತು ಅಧಿಕಾರ ವಿಕೇಂದ್ರೀಕರಣಕ್ಕೆ ಅವರ ಬದ್ಧತೆಯನ್ನು ಸೂಚಿಸುತ್ತದೆ. “ನಾನು ಕರ್ನಾಟಕ ರಾಜ್ಯದಲ್ಲಿ ಕಲೆಕ್ಟರ್ ರಾಜ್ ಕಿತ್ತು ಹಾಕಿ ಪಂಚಾಯತ್ ರಾಜ್ ಸ್ಥಾಪನೆ ಮಾಡುತ್ತೇನೆ”.
ಅವರು ನುಡಿದಂತೆ ಸಾಧಿಸಿ ತೋರಿಸಿದರು. 1987ರಿಂದ 1992ರ ಅವಧಿಯಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಮಂಡಲ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ವ್ಯವಸ್ಥೆ ಒಂದು ಯಶಸ್ವಿ ಮಾದರಿ ಆಗಿತ್ತು. ನಜೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣ ಹೇಗಿರಬೇಕು? ಅದರ ಸಾಮರ್ಥ್ಯ ಏನು? ಪ್ರಜೆಗಳ ಕೈಗೆ ಅಧಿಕಾರ ಕೊಡುವುದು ಹೇಗೆ ಎನ್ನುವುದನ್ನು ಸಾಬೀತು ಮಾಡಿದರು. ಅವರ ಈ ಮಾದರಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಆಂಧ್ರಪ್ರದೇಶ ರಾಜ್ಯದ ಅಂದಿನ ಮುಖ್ಯ ಮಂತ್ರಿ ಎನ್. ಟಿ. ರಾಮರಾವ್ ಕರ್ನಾಟಕದ ಮಾದರಿಯನ್ನು ತಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡರು. ಒಂದು ಭಾಗದಲ್ಲಿ ಭಾರತದ ಪಂಚಾಯತ್ ರಾಜ್ ವ್ಯವಸ್ಥೆ ಕುಂಟುತ್ತಿದ್ದರೆ ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಜನಾಧಿಕಾರದ ಪತಾಕೆಯನ್ನು ಎತ್ತಿ ಹಿಡಿದಿದ್ದವು.
ಸಂವಿಧಾನದ 73ನೇ ತಿದ್ದುಪಡಿ: ಮೇಲೆ ವಿವರಿಸಿದ ಮೂರು ರಾಜ್ಯಗಳ ಸಾಧನೆಯಿಂದ ಪ್ರೇರಿತರಾದ ಅಂದಿನ ಯುವ ಪ್ರಧಾನಿ ರಾಜೀವ್ ಗಾಂಧಿ ಅವರು ಡಾ. ಎಲ್. ಎನ್. ಸಿಂ ಅವರ ಅಧ್ಯಕ್ಷತೆಯ ಸಮಿತಿಯನ್ನು ನೇಮಿಸಿದರು. ಈ ಸಮಿತಿಯ ವರದಿಯೇ ಮುಂದೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳಿಗೆ ಕಾರಣವಾಯಿತು. ರಾಜೀವ್ ಗಾಂಧೀ ಅವರು ಪ್ರಧಾನಿ ಆಗಿದ್ದಾಗಲೇ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ತಿದ್ದುಪಡಿಯಾಗಿ ಚರ್ಚೆಗೆ ಬಂದಿತ್ತು. ಲೋಕಸಭೆಯಲ್ಲಿ ಅಂಗೀಕಾರ ಪಡೆದಿತ್ತು. ಆದರೆ ರಾಜ್ಯಸಭೆಯಲ್ಲಿ ಒಂದು ಮತದ ಕೊರತೆಯಿಂದ ಬಿದ್ದುಹೋಯಿತು. ಮುಂದೆ ಪಿ. ವಿ. ನರಸಿಂಹರಾವ್ ಅವರು ಪ್ರಧಾನಿ ಆದಾಗ ಬಹಳ ಮುತುವರ್ಜಿ ವಹಿಸಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ಎರಡೂ ಸದನಗಳಲ್ಲಿ ಅಂಗಿಕಾರ ಆಗುವಂತೆ ನೋಡಿಕೊಂಡರು. ಈ ಮಸೂದೆಗಳಿಗೆ ವಿರುದ್ಧವಾಗಿದ್ದ ಡಿಎಂಕೆ ಸಂಸದರು ಮಸೂದೆಯನ್ನು ಮತಕ್ಕೆ ಹಾಕುವ ಸಮಯದಲ್ಲಿ ಸಭಾತ್ಯಾಗ ಮಾಡುವಂತೆ ಮನ ಒಲಿಸುವ ತಂತ್ರವನ್ನು ಪಿ. ವಿ. ನರಸಿಂಹರಾವ್ ಯಶಸ್ವಿಯಾಗಿ ಬಳಸಿದ್ದರು.
ಕರ್ನಾಟಕ ರಾಜ್ಯದಲ್ಲಿ ಈಗಿನ ಸ್ಥಿತಿ : ಸಂವಿಧಾನದ 73ನೇ ತಿದ್ದುಪಡಿಯನ್ನು ಮೊತ್ತ ಮೊದಲಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕ. ಆಗ ವೀರಪ್ಪ ಮೊಯ್ಲಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಎಂ. ವೈ. ಘೋರ್ಪಡೆಯವರು ಪಂಚಾಯತ್ ರಾಜ್ ಸಚಿವರಾಗಿದ್ದರು.
ಕೆ. ಪಿ. ಆರ್. ಕಾಯಿದೆ 1993ನ್ನು ವಿಧಾನ ಮಂಡಲದ ಅಽವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆದು ಮೂರೂ ಹಂತಗಳ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಮೂಲಕ ದೇಶಕ್ಕೆ ಮಾದರಿಯಾದ ರಾಜ್ಯ ನಮ್ಮದು. ನಂತರದಲ್ಲೂ ಕಾಲ ಕಾಲಕ್ಕೆ ಅಗತ್ಯ ತಿದ್ದುಪಡಿಗಳನ್ನು ತಂದು ಕಾಯಿದೆಗೆ ಶಕ್ತಿ ತುಂಬುವ ಕಾರ್ಯವೂ ನಡೆದಿದೆ.
ಆದರೆ ಇತ್ತೀಚಿನ 5-6 ವರ್ಷಗಳಲ್ಲಿ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ.
ಕಳೆದ 4 ವರ್ಷಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ಗಳಿಗೆ ಚುನಾವಣೆಯನ್ನು ಮುಂದೂಡಲಾಗಿದೆ
ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರ ಶಾಹಿ ದರ್ಬಾರ್ ನಡೆದಿದೆ. ರಮೇಶ್ ಕುಮಾರ್ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಪಂಚಾಯತ್ ಸಬಲೀಕರಣದ ಉದ್ದೇಶದಿಂದ ತಂದಿದ್ದ ಕೆಲವು ಪ್ರಮುಖ ತಿದ್ದುಪಡಿಗಳನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಹಿಂದೆ ಪಡೆದಿದೆ. ಈಗಿನ ಸರ್ಕಾರ ಇವುಗಳನ್ನು ಮರು ಸ್ಥಾಪಿಸಲು ಆಸಕ್ತಿ ತೋರಿಸುತ್ತಿಲ್ಲ
2015ರಲ್ಲಿ ಕಾಯಿದೆಗೆ ತಂದಿದ್ದ ಕೆಲವು ತಿದ್ದುಪಡಿಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಸರ್ಕಾರ ತೋರಿಸುತ್ತಿಲ್ಲ
ಅಧಿಕಾರ ವಿಕೇಂದ್ರೀಕರಣದ ಜೊತೆಜೊತೆಗೆ ಭ್ರಷ್ಟಾಚಾರದ ವಿಕೇಂದ್ರೀಕರಣ ನಡೆದಿದೆ.
2025-26ನೇ ಸಾಲಿನ ರಾಜ್ಯದ ಆಯವ್ಯಯದಲ್ಲಿ ಪಂಚಾಯತ್ ರಾಜ್ಗೆ ಯಾವುದೇ ವಿಶೇಷ ಕಾರ್ಯಕ್ರಮಗಳು ಮತ್ತು ಹೆಚ್ಚು ಅನುದಾನ ಲಭ್ಯವಾಗಿಲ್ಲ. ಇದು ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಗೆ ತುಂಬಾ ನಿರಾಸೆ ಹುಟ್ಟಿಸಿದೆ.
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…
ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…
ಬುದ್ಧನ ಚಿಂತನೆಗಳನ್ನು ಭಾರತದಿಂದ ಓಡಿಸಿದಂತೆ, ಮಹಾತ್ಮ ಗಾಂಧೀಜಿಯವರನ್ನು ಭಾರತೀಯರ ಮನಸ್ಸಿನಿಂದಿಂದಲೇ ತೆಗೆದುಹಾಕುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕುತಂತ್ರ ಬಯಲಾಗಿದೆ.…
ಮಹದೇವ ಶಂಕನಪುರ ಎಚ್.ಎಸ್.ಶಿವಪ್ರಕಾಶ್ ಅವರ ನಾಟಕ ‘ಮಾದಾರಿ ಮಾದಯ್ಯ’ ಕಳೆದ ೩೫ ವರ್ಷಗಳಿಂದಲೂ ಕನ್ನಡ ನೆಲದಲ್ಲಿ ಅಭಿನಯಿಸಲ್ಪಡುತ್ತಿದೆ. ಮೊದಲಿಗೆ ೧೯೯೦ರಲ್ಲಿ…
ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…
ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ…