ಅಂಕಣಗಳು

ದೆಹಲಿ ಧ್ಯಾನ | ರಾಜಾ ಢಾಲೆ ಎಂಬ ದಲಿತ ಖಡ್ಗವ ನೆನೆಯುತ್ತ…

– ಡಿ.ಉಮಾಪತಿ

ದಲಿತ ಅಸ್ಮಿತೆಯನ್ನು ಮನುವಾದಿ ಮುಖ್ಯಧಾರೆಯ ಮಾರುಕಟ್ಟೆಗೆ ಮಾರಿಕೊಂಡ ಮೋಸಗಾರ ರಾಜಕಾರಣಿಗಳಿಂದ ದೂರ ನಿಲ್ಲುವವರು ಢಾಲೆ!

ಬ್ರಾಹ್ಮಣರ ಹೊಲಗಳನ್ನು ಹಾದು ಹೋದ ಕಾರಣಕ್ಕಾಗಿ ಆಕೆಯ ಮೇಲೆ ಈ ದೌರ್ಜನ್ಯಕ್ಕೆ ಗುರಿ ಮಾಡಲಾಗಿತ್ತು. ಮತ್ತು ಇಂತಹ ಕೃತ್ಯಕ್ಕೆ ನೀಡಲಾದ ಶಿಕ್ಷೆಯಾದರೂ ಏನು? ಒಂದು ತಿಂಗಳ ಜೈಲುವಾಸ ಮತ್ತು ೫೦ ರುಪಾಯಿ ದಂಡ. ರಾಷ್ಟ್ರೀಯ ಧ್ವಜವನ್ನು ಗೌರವಿಸಲು ಎದ್ದು ನಿಲ್ಲದವನಿಗೆ ವಿಧಿಸಲಾಗುವ ದಂಡ ೩೦೦ ರುಪಾಯಿ. .. ರಾಷ್ಟ್ರವೊಂದು ಅಸ್ತಿತ್ವಕ್ಕೆ ಬರುವುದು ತನ್ನ ಜನಗಳಿಂದ. ಜನರಿಗೆ ತೋರುವ ಅಗೌರವ ಹೆಚ್ಚು ದುಃಖ ನೀಡುವುದೇ ಅಥವಾ ಚಿಹ್ನೆಗೆ ಅನಾದರ ತೋರುವುದು ಹೆಚ್ಚು ದುಃಖಕರವೇ? ನಮ್ಮ ಘನತೆಯ ಬೆಲೆಯು ಕೇವಲ ಒಂದು ಸೀರೆಯ ಬೆಲೆಗೆ ಸಮವಾಗಿ ಬಿಟ್ಟಿದೆ…ಹೀಗಾಗಿ ಬೆತ್ತಲು ಮಾಡುವ ದುಷ್ಟ ನಡೆಯನ್ನು ತೀವ್ರವಾಗಿ ಶಿಕ್ಷಿಸುವುದು ಅತ್ಯಗತ್ಯ. ಇಲ್ಲವಾದರೆ ದೇಶಪ್ರೇಮ ಬದುಕಿ ಬಾಳುವುದಾದರೂ ಹೇಗೆಬರೆಹಗಾರ, ಹೋರಾಟಗಾರ, ದಲಿತ್ ಪ್ಯಾಂಥರ್ ಸಹ ಸಂಸ್ಥಾಪಕ ರಾಜಾ ಢಾಲೆ ನಿಧನರಾಗಿ ಇತ್ತೀಚೆಗೆ ಮೂರು ವರ್ಷಗಳು ಉರುಳಿದವು. ೨೦೦೧೯ರಜುಲೈ ೧೬ರಂದು ಕೊನೆಯುಸಿರೆಳೆದಾಗ ಅವರಿಗೆ ೭೮ ವರ್ಷ ವಯಸ್ಸು.. ಅಂದ ಹಾಗೆ ಢಾಲೆ ಎಂಬುದರ ಅರ್ಥ ಗುರಾಣಿ. ದಲಿತ ಜನಸಮುದಾಯಗಳ ಪಾಲಿನ ಗುರಾಣಿಯಾಗಿಯೂ, ಬ್ರಾಹ್ಮಣವಾದದ ವಿರುದ್ಧ ಝಳಪಿಸುವ ಖಡ್ಗವಾಗಿಯೂ ಬದುಕಿದರು ಅವರು.ಭಾರತೀಯ ದಲಿತ ಹೋರಾಟಗಳ ಮಹತ್ವದ ಮೈಲಿಗಲ್ಲು ಎನಿಸಿದ ‘ದಲಿತ್ ಪ್ಯಾಂಥರ್’ (ದಲಿತ ಚಿರತೆ) ಸಂಘಟನೆಯನ್ನು ೧೯೭೨ರಲ್ಲಿ ಹುಟ್ಟು ಹಾಕಿದ ಕೆಲವೇ ಮುಖ್ಯರಲ್ಲೊಬ್ಬರು ಢಾಲೆ.

ಬ್ರಿಟಿಷರಿಂದ ಭಾರತ ಬಿಡುಗಡೆಯಾಗಿ ೨೫ ವರ್ಷಗಳು ತುಂಬಲಿದ್ದ ೧೯೭೨ರ ಆಗಸ್ಟ್ ೧೫ರ ಸಂಚಿಕೆಯಲ್ಲಿ, ಪುಣೆಯ ‘ಸಾಧನಾ’ ಎಂಬ ಸಮಾಜವಾದಿ ನಿಯತಕಾಲಿಕವು ರಾಜಾ ಢಾಲೆಯವರ ‘ಕರಾಳ ಸ್ವಾತಂತ್ರ್ಯ ದಿನ’ ಎಂಬ ಸುಡುಕೆಂಡದಂತಹ ಮೂರು ಪುಟಗಳ ಪ್ರಬಂಧವನ್ನು ಪ್ರಕಟಿಸಿತು. ಬೆಂಕಿಯುಗುಳುವ ಜಾತಿವಿರೋಧಿ ಹೋರಾಟಗಾರ, ಕವಿ, ವ್ಯಂಗ್ಯಚಿತ್ರಕಾರ ಢಾಲೆ ವಯಸ್ಸು ಆಗ ೩೨ ವರ್ಷ. ಮುಂಬಯಿಯ ದಲಿತ ಯುವ ಜಗತ್ತಿನಲ್ಲಿ ಪ್ರಚಂಡ ಸುಂಟರ ಗಾಳಿಯನ್ನೇ ಎಬ್ಬಿಸಿತ್ತು ಅವರ ಮಾತು ಮತ್ತು ಬರೆಹ.ಪ್ರಬಂಧದಲ್ಲಿ ಅವರು ಬರೆದದ್ದು- ಬ್ರಹ್ಮಗಾಂವ್ ಎಂಬ ಬ್ರಾಹ್ಮಣ ಹಳ್ಳಿಯಲ್ಲಿ ಬೆತ್ತಲು ಮಾಡಿದ್ದು ಬೌದ್ಧ ಹೆಣ್ಣುಮಗಳನ್ನೇ ವಿನಾ ಬ್ರಾಹ್ಮಣ ಹೆಣ್ಣುಮಗಳನ್ನಲ್ಲ. ಬ್ರಾಹ್ಮಣರ ಹೊಲಗಳನ್ನು ಹಾದು ಹೋದ ಕಾರಣಕ್ಕಾಗಿ ಆಕೆಯ ಮೇಲೆ ಈ ದೌರ್ಜನ್ಯಕ್ಕೆ ಗುರಿ ಮಾಡಲಾಗಿತ್ತು. ಮತ್ತು ಇಂತಹ ಕೃತ್ಯಕ್ಕೆ ನೀಡಲಾದ ಶಿಕ್ಷೆಯಾದರೂ ಏನು? ಒಂದು ತಿಂಗಳ ಜೈಲುವಾಸ ಮತ್ತು ೫೦ ರುಪಾಯಿ ದಂಡ. ರಾಷ್ಟ್ರೀಯ ಧ್ವಜವನ್ನು ಗೌರವಿಸಲು ಎದ್ದು ನಿಲ್ಲದವನಿಗೆ ವಿಧಿಸಲಾಗುವ ದಂಡ ೩೦೦ ರುಪಾಯಿ. .. ರಾಷ್ಟ್ರವೊಂದು ಅಸ್ತಿತ್ವಕ್ಕೆ ಬರುವುದು ತನ್ನ ಜನಗಳಿಂದ. ಜನರಿಗೆ ತೋರುವ ಅಗೌರವ ಹೆಚ್ಚು ದುಃಖ ನೀಡುವುದೇ ಅಥವಾ ಚಿಹ್ನೆಗೆ ಅನಾದರ ತೋರುವುದು ಹೆಚ್ಚು ದುಃಖಕರವೇ? ನಮ್ಮ ಘನತೆಯ ಬೆಲೆಯು ಕೇವಲ ಒಂದು ಸೀರೆಯ ಬೆಲೆಗೆ ಸಮವಾಗಿ ಬಿಟ್ಟಿದೆ…ಹೀಗಾಗಿ ಬೆತ್ತಲು ಮಾಡುವ ದುಷ್ಟ ನಡೆಯನ್ನು ತೀವ್ರವಾಗಿ ಶಿಕ್ಷಿಸುವುದು ಅತ್ಯಗತ್ಯ. ಇಲ್ಲವಾದರೆ ದೇಶಪ್ರೇಮ ಬದುಕಿ ಬಾಳುವುದಾದರೂ ಹೇಗೆ?

ಪ್ರಚೋದನಕಾರಿಯಾಗಿದ್ದ ಅವರ ಪ್ರಬಂಧ ಪ್ಯಾಂಥರ್ ರಾಜಕಾರಣದ ಸೋಪಾನವಾಗಿತ್ತು. ಪ್ರಸಿದ್ಧ ಮಾರಾಠಿ ಸಾಹಿತಿ ಮತ್ತು ಮರಾಠೀ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ದುರ್ಗಾ ಭಾಗವತ್ ಅವರ ಮೇಲೆ ಕಟು ಮಾತುಗಳ ದಾಳಿ ನಡೆಸಿದ್ದರು. ಸಾಮಾಜಿಕ ಸಮತೋಲನ ಕಾಪಾಡಲು ವೇಶ್ಯೆಯರು ಕೊಡುಗೆ ನೀಡುತ್ತಾರಾದ ಕಾರಣ ಅವರು ತಮ್ಮ ಕಸುಬನ್ನು ಮುಂದುವರೆಸುವುದು ಸೂಕ್ತ ಎಂದು ವಾದಿಸಿದ್ದರು ದುರ್ಗಾ. ‘ಸಮತೋಲನ ಕಾಪಾಡಿಕೊಳ್ಳುವ ಈ ಕೆಲಸವನ್ನು ನೀವು ಅಥವಾ ನಿಮ್ಮ ಸಮುದಾಯದ ಜನರೇ ಯಾಕೆ ಮುಂದಾಗಿ ಮಾಡಬಾರದು’ ಎಂದು ಪ್ರಶ್ನಿಸಿದ್ದರು. ಅಂದಿನ ಮರಾಠೀ ಸಮಾಜದಲ್ಲಿ ಢಾಲೆ ಮಾತುಗಳು ಭೂಕಂಪ ಹುಟ್ಟಿಸಿದ್ದವು.

ಸ್ವತಂತ್ರ ಆಲೋಚನೆಯ ಚಿಂತಕರಾಗಿದ್ದ ಢಾಲೆ ತಮಗನಿಸಿದ್ದನ್ನು ಹೇಳಲು ಎಂದೂ ಹಿಂಜರಿದವರಲ್ಲ. ತಮ್ಮ ಪ್ರಬಂಧದಲ್ಲಿ ಮುಂಬಯಿಯ ಬ್ರಾಹ್ಮಣ ಬರೆಹಗಾರರು ಮತ್ತು ರಾಜಕೀಯ ಚಿಂತಕರಿಗೆ ಬಹಿರಂಗ ಸವಾಲೆಸೆದಿದ್ದರು. ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯ ಕುರಿತ ಅವರ ಪರಿಕಲ್ಪನೆಯನ್ನು ಮತ್ತು ಅವರ ವಿಚಾರಹೀನ ವೈದಿಕ ವರ್ಗವಿಭಜನೆಗಳ ಕುರಿತು ಕಾಲು ಕೆರೆದು ಕದನಕ್ಕೆ ಕರೆಯುತ್ತಿದ್ದರು.

ಢಾಲೆ ಒಬ್ಬ ನಿರಂತರ ಬಂಡುಕೋರ. ಮಹಾರಾಷ್ಟ್ರದಲ್ಲಿ ಪುಟ್ಟ ನಿಯತಕಾಲಿಕಗಳ ಆಂದೋಲನದಲ್ಲಿ ಬಿಡದೆ ತೊಡಗಿಸಿಕೊಂಡಿದ್ದವರು. ೬೦ ಮತ್ತು ೭೦ರ ದಶಕಗಳ ಹಲವಾರು ನಿಯತಕಾಲಿಕಗಳ ಸಂಪಾದಕರಾಗಿದ್ದವರು. ಬ್ರಾಹ್ಮಣ- ಸವರ್ಣಗಳು ನಿರ್ಲಕ್ಷಿಸಿ ಅಂಚಿಗೆ ನೂಕಿದ್ದ ಜನವರ್ಗಗಳ ಜೊತೆ ಈ ನಿಯತಕಾಲಿಕಗಳು ಸಂವಾದಿಸುತ್ತಿದ್ದವು.

ಬೌದ್ಧ ಮತ ಮತ್ತು ಅಂಬೇಡ್ಕರ್ ವಾದಗಳು ಮಾತ್ರವೇ ದಲಿತರನ್ನು ಮುಂದಕ್ಕೆ ಒಯ್ಯಬಲ್ಲವು ಎಂದು ಬಲವಾಗಿ ನಂಬಿದ್ದರು ಢಾಲೆ. ಹೀಗಾಗಿ ಪ್ಯಾಂಥರ್ ಆಂದೋಲನದ ನಂತರ ಮಾಸ್ ಮೂವ್ಮೆಂಟ್ ಎಂಬ ಮತ್ತೊಂದು ಸಂಘಟನೆ ಸ್ಥಾಪಿಸಿ ಸಕ್ರಿಯರಾದರು. ದಲಿತ್ ಪ್ಯಾಂಥರ್‌ನ್ನು ಸ್ಥಾಪಿಸಿದ್ದ ವ್ಯಕ್ತಿ, ಕಾಲಾನುಕ್ರಮದ ಪಯಣದಲ್ಲಿ ದಲಿತ ಎಂಬ ಪದವನ್ನೇ ತಿರಸ್ಕರಿಸಿದರು. ದಲಿತನೆಂಬುದು ನನ್ನ ಅಸ್ಮಿತೆ ಅಲ್ಲ. ನಾನು ಗುಲಾಮನಲ್ಲ. ಮಾನಸಿಕವಾಗಿ ಗುಲಾಮರಾದವರು ಎಂದೆಂದಿಗೂ ಬಿಡುಗಡೆ ಪಡೆಯಲಾರರು. ಅವರು ಹುಟ್ಟಾ ಗುಲಾಮರು. ಆದರೆ ಯಾರ ಮೇಲೆ ಗುಲಾಮಗಿರಿಯನ್ನು ಹೇರಲಾಗಿದೆಯೋ ಅವರನ್ನು ವಿಮೋಚನೆಗೊಳಿಸುವ ತನಕ ವಿರಮಿಸಲಾರೆ ಎಂದು ಸಾರಿದರು.

ದಲಿತ ಆಂದೋಲನಗಳಲ್ಲಿ ಒಗ್ಗಟ್ಟಿಲ್ಲ ಎಂಬುದು ಅವರ ಬಹುದೊಡ್ಡ ಕೊರಗಾಗಿತ್ತು. ಮರಾಠರು ಬಹುತೇಕ ಮಹಾರಾಷ್ಟ್ರಕ್ಕೆ ಸೀಮಿತರು. ಆದರೂ ತಾವು ಬಲಿಷ್ಠರೆಂಬುದನ್ನು ನಿತ್ಯ ಬದುಕಿನಲ್ಲಿ ಅನುಭವಿಸಿ ಜೀವಿಸುತ್ತಾರೆ. ಆದರೆ ಅಸ್ಪೃಶ್ಯರು ದೇಶಾದ್ಯಂತ ಕೋಟಿ ಕೋಟಿ ಸಂಖ್ಯೆಯಲ್ಲಿ ಹಬ್ಬಿದ್ದಾರೆ. ನಾವೆಲ್ಲ ಒಟ್ಟಿಗೆ ಹೋರಾಡಿದರೆ ಏನಾದೀತು ಎಂಬುದನ್ನು ಕಲ್ಪಿಸಿಕೊಳ್ಳಬೇಕು ಎಂದಿದ್ದರು.

ವೈಚಾರಿಕ ಶಿಸ್ತು, ಸೂಕ್ಷ್ಮ ನಾಟಕೀಯತೆ, ಅಸಾಧಾರಣ ಕಲ್ಪನಾಶಕ್ತಿ, ತೀಕ್ಷ್ಣ ವಿಮರ್ಶಾ ಸಾಮರ್ಥ್ಯ ಹಾಗೂ ಕಠೋರ ತರ್ಕಗಳು ಅವರ ಬರವಣಿಗೆ ಮತ್ತು ಮಾತುಗಾರಿಕೆಯ ಶಕ್ತಿಯಾಗಿದ್ದವು. ವೈದಿಕ ವಲಯದಲ್ಲಿ ಸೃಷ್ಟಿಯಾದ ಸಾಹಿತ್ಯ ವಿಜೃಂಭಿಸಿದ್ದಾಗ ದಲಿತ ಸಾಹಿತ್ಯದ ಪರವಾಗಿ ಗುರಾಣಿ ಹಿಡಿದಿದ್ದವರು ಢಾಲೆ. ಹಾಗೆಯೇ ಅವರು ಖಡ್ಗ ಹಿರಿದು ದಲಿತ ಸಾಹಿತ್ಯದ ಸ್ರೋತದ ಬದಿಗೆ ನಿಲ್ಲದೆ ಹೋಗಿದ್ದರೆ ದಲಿತ ಸಾಹಿತ್ಯ ನಿಶ್ಚಿತವಾಗಿಯೂ ಭ್ರೂಣ ಹತ್ಯೆಗೆ ಗುರಿಯಾಗುತ್ತಿತ್ತು ಎಂದು ಪವಾರ್ ಬಣ್ಣಿಸಿದ್ದಾರೆ.

ದಲಿತ ಅಸ್ಮಿತೆ ಮತ್ತು ತಾವೇ ಕಟ್ಟಿದ್ದ ಪ್ಯಾಂಥರ್ ಅಸ್ಮಿತೆಯನ್ನು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಿದ ನಂತರ ಅವರು ತಮ್ಮನ್ನು ಗುರುತಿಸಿಕೊಂಡದ್ದು ಬೌದ್ಧ ಅನುಯಾಯಿ ಎಂದು. ದಲಿತ ಆಂದೋಲನ ಎಂಬ ಹೆಸರಿಗೆ ಬದಲಾಗಿ ಫುಲೆ-ಅಂಬೇಡ್ಕರ್ ವಾದಿ ಆಂದೋಲನ ಎಂಬ ಹೆಸರನ್ನು ಚಾಲ್ತಿಗೆ ತರಲು ಶ್ರಮಿಸಿದರು.

ದಲಿತ ಅಸ್ಮಿತೆಯನ್ನು ಮನುವಾದಿ ಮುಖ್ಯಧಾರೆಯ ಮಾರುಕಟ್ಟೆಗೆ ಮಾರಿಕೊಂಡ ಮೋಸಗಾರ ರಾಜಕಾರಣಿಗಳಿಂದ ದೂರ ನಿಲ್ಲುವವರು ಢಾಲೆ ಎಂದು ಅವರನ್ನು ಬಣ್ಣಿಸಲಾಗಿದೆ. ಆದರೆ ಬಿಜೆಪಿ ಜೊತೆ ಕೈ ಜೋಡಿಸಿ ಮೋದಿ ಮಂತ್ರಿಮಂಡಲದಲ್ಲಿ ಜಾಗ ಗಿಟ್ಟಿಸಿದ್ದ ರಾಮದಾಸ ಅಥಾವಳೆಯವರನ್ನು ಕಡೆಯ ತನಕ ತಮ್ಮ ಶಿಷ್ಯನೆಂದು ಅವರು ಬಹಿರಂಗವಾಗಿ ಗುರುತಿಸಿದ್ದು, ವಿರೋಧಾಭಾಸದ ಸಂಗತಿ.

andolanait

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 21 ಶುಕ್ರವಾರ

2 hours ago

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

14 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

15 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

17 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

17 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

20 hours ago