ರಕ್ಷಣಾ ನೇಮಕಾತಿ ಯೋಜನೆಗಳು ದೇಶದ ಸುರಕ್ಷತೆಗೆ ಸಾಮಾಜಿಕ ಸುಸ್ಥಿರತೆಗೆ ಮಾರಕವಾಗಬಾರದು
2013ರ ಸೆಪ್ಟಂಬರ್ 15ರಂದು ಹರಿಯಾಣದ ರೇವಾರಿಯಲ್ಲಿ, ನರೇಂದ್ರ ಮೋದಿ ಮಾಜಿ ಯೋಧರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 2014ರ ಲೋಕಸಭಾ ಚುನಾವಣೆಗಳ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಅಂದು ಮಾಡಿದ ಭಾಷಣದಲ್ಲಿ ನರೇಂದ್ರ ಮೋದಿ ಎಲ್ಲ ಸೈನಿಕರಿಗೂ “ ಒಂದು ಶ್ರೇಣಿ ಒಂದು ಪಿಂಚಣಿ” (ಒಆರ್ಒಪಿ) ಜಾರಿಗೆ ತರುವುದಾಗಿ ಘೋಷಿಸಿದ್ದರು. ಅಂದು ಕಾವ್ಯಾತ್ಮಕವಾಗಿ ಪ್ರಚಾರ ಮಾಡುತ್ತಿದ್ದ ಹಾಲಿ ಪ್ರಧಾನಿ ನರೇಂದ್ರ ಮೋದಿ 9 ವರ್ಷಗಳ ನಂತರ, ಸೇನೆಗೆ ಅಲ್ಪಕಾಲಿಕ ಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸುವ ಮೂಲಕ, ಆಳಿಕೆಯ ವಾಸ್ತವಿಕ ನೆಲೆಯಲ್ಲಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರವನ್ನು ಮಬ್ಬುಗೊಳಿಸಲು ಎಷ್ಟೇ ಪ್ರಯತ್ನಿಸಿದರೂ, ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ತಲೆಕೆಳಗು ಮಾಡಿ ಶ್ರೇಣಿಯೂ ಇಲ್ಲದ ಪಿಂಚಣಿಯೂ ಇಲ್ಲದ ಯೋಜನೆಯನ್ನು ಜಾರಿಗೊಳಿಸಲು ಆರ್ಥಿಕ ಕಾರಣಗಳೇ ಮೂಲ ಎನ್ನುವುದು ಸ್ಪಷ್ಟವಾಗಿದೆ.
ಒಮ್ಮೆ ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರಿಗೆ ಒಆರ್ಒಪಿ ಬೇಡಿಕೆಯನ್ನು ಈಡೇರಿಸುವುದು ಕಗ್ಗಂಟಿನ ಪ್ರಶ್ನೆಯಾಗಿತ್ತು. ಆದರೂ 2015ರ ನವಂಬರ್ ಮಾಸದಲ್ಲಿ 25 ಲಕ್ಷ ನಿವೃತ್ತ ಯೋಧರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದು ಸರ್ಕಾರದ ಬೊಕ್ಕಸಕ್ಕೆ ಆ ಕ್ಷಣದಲ್ಲೇ 7123.38 ಕೋಟಿ ರೂಗಳ ಹಣಕಾಸು ಹೊರೆಯನ್ನು ಸೃಷ್ಟಿಸಿತ್ತು. ಇದರೊಂದಿಗೆ 2014ರ ಜುಲೈ 1ರಿಂದ 2015ರ ಡಿಸೆಂಬರ್ 31ರವರೆಗಿನ ಬಾಕಿ ವೇತನದ ಮೊತ್ತ 10,392.35 ಕೋಟಿ ರೂಗಳಷ್ಟಾಗಿತ್ತು. ಕ್ರಮೇಣ ಈ ಹಣಕಾಸು ಹೊರೆ ಹೆಚ್ಚಾಗುತ್ತಲೂ ಇದ್ದುದರಿಂದ ವಾರ್ಷಿಕ ಬಜೆಟ್ನಲ್ಲಿ ರಕ್ಷಣಾ ವೆಚ್ಚವೂ ಹೆಚ್ಚಾಗುತ್ತಲೇ ಹೋಯಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ 1,19,696 ಕೋಟಿ ರೂಗಳನ್ನು ಪಿಂಚಣಿಗಾಗಿಯೇ ಮೀಸಲಿರಿಸಲಾಗಿದ್ದು ಇದರೊಂದಿಗೆ ವೇತನ ಪಾವತಿಗಾಗಿ 1,63,453 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಅಂದರೆ ಒಟ್ಟು ರಕ್ಷಣಾ ವೆಚ್ಚದ ಶೇ 54ರಷ್ಟು ವೇತನ ಮತ್ತು ಪಿಂಚಣಿಗೆ ವ್ಯಯವಾಗುತ್ತದೆ.
ಒಂದೆರಡು ದಶಕಗಳ ನಂತರ ಕಂಡುಬರುವ, ಪಿಂಚಣಿಯ ಮೊತ್ತದಲ್ಲಿ ಆಗುವ ಉಳಿಕೆಯನ್ನು ರಕ್ಷಣಾ ಪಡೆಗಳ ಆಧುನಿಕೀಕರಣಕ್ಕಾಗಿ ಖರ್ಚು ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ ರಕ್ಷಣಾ ಪಡೆಗಳ ಆಧುನಿಕೀಕರಣ ಪ್ರಕ್ರಿಯೆ ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಇದಕ್ಕಾಗಿ ದೀರ್ಘ ಕಾಲ ಕಾಯುವಂತಹ ಪರಿಸ್ಥಿತಿ ಇಲ್ಲ. ಈ ತಕ್ಷಣಕ್ಕೇ ಹಣಕಾಸಿನ ಅವಶ್ಯಕತೆ ಇದೆ . ಭಾರತೀಯ ವಾಯುಸೇನೆಯಲ್ಲಿ 42 ಸ್ಕ್ವಾಡ್ರನ್ಗಳ ಅವಶ್ಯಕತೆ ಇದ್ದರೂ ಈಗ 30 ಸ್ಕ್ವಾಡ್ರನ್ಗಳಿವೆ. ನೌಕಾ ಸೇನೆಯಲ್ಲಿ 200 ಯುದ್ಧ ನೌಕೆಗಳ ಅವಶ್ಯಕತೆ ಇದ್ದು 130 ನೌಕೆಗಳಿವೆ. ಭಾರತೀಯ ಸೇನೆಯಲ್ಲಿ ಈಗಾಗಲೇ ಒಂದು ಲಕ್ಷ ಸಿಬ್ಬಂದಿಯ ಕೊರತೆ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಅಗ್ನಿವೀರ್ ಯೋಜನೆಯನ್ನು ಘೋಷಿಸಿರುವುದು, ಭಾರತಕ್ಕೆ ಅವಶ್ಯವಾದ ಸಶಸ್ತ್ರ ಸೇನಾ ಪಡೆಗಳನ್ನು ಪೋಷಿಸಲು ದೇಶದ ಅರ್ಥವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಒಪ್ಪಿಕೊಂಡಂತಾಗಿದೆ. ಭಾರತ ಎರಡು ನೆರೆ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದಿಂದ ನಿರಂತರ ಅಪಾಯ ಎದುರಿಸುತ್ತಿದೆ. ಮತ್ತೊಂದೆಡೆ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಈ ವಾಸ್ತವಗಳನ್ನು ಅಲ್ಲಗಳೆಯಲಾಗುವುದಿಲ್ಲ. ಸೇನೆಯನ್ನು ಬೆಂಬಲಿಸಲು ಅರ್ಥವ್ಯವಸ್ಥೆಯನ್ನು ವಿಸ್ತರಿಸುವ ಬದಲು ಸರ್ಕಾರವು ಸೇನೆಯನ್ನೇ ಕುಗ್ಗಿಸಲು ಯೋಚಿಸುತ್ತಿದೆ.
ಹಾನಿಕಾರಕ ಪರಿಣಾಮಗಳು
ಅಲ್ಪಕಾಲಿಕ ನೇಮಕಾತಿ ನೀತಿಯನ್ನು ತಾತ್ವಿಕವಾಗಿಯೂ ರೂಪಿಸಿಲ್ಲವಾದ್ದರಿಂದ ಮತ್ತು ಯಾವುದೇ ರೀತಿಯ ಪ್ರಾಯೋಗಿಕ ಯೋಜನೆಯನ್ನು ಕೈಗೊಂಡಿಲ್ಲವಾದ್ದರಿಂದ, ಇದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಮಾತ್ರವೇ ಸ್ಪಷ್ಟವಾಗುತ್ತವೆ. ಆದರೆ ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು ಸ್ಪಷ್ಟವಾಗಿ ಕಾಣುವಂತಿವೆ. ಈ ಯೋಜನೆಯ ಅಡಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಯುವ ಸೈನಿಕರು ರೂಪುಗೊಳ್ಳುತ್ತಾರೆ, ಈ ನಿಟ್ಟಿನಲ್ಲಿ ತರಬೇತು ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ, ಮೂಲ ಸೌಕರ್ಯಗಳನ್ನು ಒದಗಿಸುವುದೇ ಅಲ್ಲದೆ ಸೈನಿಕರ ನೇಮಕಾತಿ, ಬಿಡುಗಡೆ ಮತ್ತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತಾತ್ಮಕ ವ್ಯವಸ್ಥೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಭಾರತೀಯ ವಾಯು ಸೇನೆ ಮತ್ತು ನೌಕಾ ಸೇನೆಯಲ್ಲಿ ತಮ್ಮ ಸಿಬ್ಬಂದಿಯನ್ನು ವಿಶಿಷ್ಟ ಪಾತ್ರ ವಹಿಸಲೆಂದೇ ನೇಮಿಸಿಕೊಳ್ಳುತ್ತವೆ. ಇವರಿಂದ ಹೆಚ್ಚಿನ ತಾಂತ್ರಿಕ ಕೌಶಲ್ಯ ಮತ್ತು ಅತ್ಯುನ್ನತ ಮಟ್ಟದ ತರಬೇತಿ ಹಾಗೂ ಅನುಭವವನ್ನೂ ಅಪೇಕ್ಷಿಸಲಾಗುತ್ತದೆ. ಈ ಸಿಬ್ಬಂದಿಯೇ ದೇಶದ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತಾರೆ. ಯುದ್ಧ ನೌಕೆಗಳನ್ನು ಕಡಲಿನಲ್ಲೂ, ಯುದ್ಧ ವಿಮಾನಗಳನ್ನು ಗಗನದಲ್ಲೂ ಸದಾ ನಿರ್ವಹಿಸುತ್ತಿರುತ್ತಾರೆ. ಅಗ್ನಿವೀರ್ ಯೋಜನೆಯ, ಅಲ್ಪಕಾಲಿಕ ಗುತ್ತಿಗೆ ಆಧಾರಿತ ಸೈನಿಕರು ಪೂರ್ಣ ಪ್ರಮಾಣದಲ್ಲಿ ಸಾಂಘಿಕ ಮಟ್ಟದಲ್ಲಿ ಕಾರ್ಯನಿರತರಾಗಲು ಇನ್ನೂ ಕೆಲವು ವರ್ಷಗಳೇ ಬೇಕಾಗುವುದರಿಂದ, ಕಾರ್ಯಾಚರಣೆಯ ಹಂತದಲ್ಲಿ ಉಂಟಾಗಬಹುದಾದ ಕೊರತೆಗಳೂ ಸಹ ಆ ಸಂದರ್ಭದಲ್ಲೇ ಕಾಣಿಸಿಕೊಳ್ಳುತ್ತವೆ.
ಭಾರತೀಯ ಸೇನೆಯ ವಿಚಾರದಲ್ಲಿ ದುಪ್ಪಟ್ಟು ಸವಾಲುಗಳು ಎದುರಾಗುತ್ತವೆ. ಭಾರತೀಯ ಸೇನೆಯು 1748ರಿಂದಲೇ ಗುರುತಿಸಬಹುದಾದ ವಿಶಿಷ್ಠ ಪರಂಪರೆಯಲ್ಲಿ ರೂಪುಗೊಂಡಿದೆ. ಆರಂಭಿಕ ವರ್ಷಗಳಲ್ಲಿ ಶಿಸ್ತು ಮತ್ತು ದಕ್ಷತೆಗೇ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದ್ದು, ವಿಘಟಿತ ಭಾರತೀಯ ಸಮಾಜದಿಂದ ಪ್ರತ್ಯೇಕವಾಗಿಯೇ ನಿರ್ವಹಿಸಲಾಗುತ್ತಿತ್ತು ಎಂದು ಹುಸೇನ್ ಶಹೀದ್ ಸೊಹರ್ವರ್ದಿ ಹೇಳುತ್ತಾರೆ. ಇದರಿಂದ ಭಾರತೀಯ ಸೈನಿಕರು ವೃತ್ತಿಪರರಾಗಿ, ಐಕಮತ್ಯದೊಂದಿಗೆ ಒಂದು ಪಡೆಯ ಸ್ವಾಯತ್ತತೆಯಿಂದ ಹೋರಾಡುವ ಶಕ್ತಿಯಾಗಿ ರೂಪುಗೊಂಡಿದ್ದಾರೆ. ತಮಗೆ ಸೇವಾ ಭದ್ರತೆ ಮತ್ತು ಪಿಂಚಣಿ ಸೌಲಭ್ಯವನ್ನು ಒದಗಿಸುವಂತಹ, ಪೂರ್ಣಕಾಲ ಮತ್ತು ದೀರ್ಘಕಾಲ ಸೇವೆ ಸಲ್ಲಿಸುವ ಏಕರೂಪದ ಸೇನಾ ಪಡೆಗಳಿಗೇ ಈ ಸೈನಿಕರು ನಿಷ್ಠರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಸ್ಟೀಫನ್ ರೋಸನ್ ಹೇಳುತ್ತಾರೆ. ಬಂಗಾಲದ ಸೇನೆಯ ಎಕರೂಪತೆಯೇ 1857ರ ಸಿಪಾಯಿ ದಂಗೆಗೆ ಮುಖ್ಯ ಕಾರಣಗಳಲ್ಲೊಂದಾಗಿತ್ತು. ಈ ಕಾರಣಕ್ಕಾಗಿಯೇ ಬ್ರಿಟೀಷ್ ಸರ್ಕಾರವು ಆನಂತರದಲ್ಲಿ ಭಾರತೀಯ ಸೇನೆಯಲ್ಲಿ ಜಾತಿ ಮತ್ತು ವರ್ಗಗಳ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬಂದಿತ್ತು ಎಂದು ರೋಸನ್ ಹೇಳುತ್ತಾರೆ.
(ಮುಂದುವರೆಯುತ್ತದೆ.)
(ಮೂಲ : ದ ಹಿಂದೂ) ಅನುವಾದ : ನಾ ದಿವಾಕರ
ಜೆರುಸಲೆಮ್ : ಇಸ್ರೇಲ್ನ ಸೇನಾ ದಾಳಿಯಲ್ಲಿ ಇರಾನ್ನ ಹಿರಿಯ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹತ್ಯೆಯಾದ್ದಾರೆ ಎಂದು ಇಸ್ರೇಲ್ ರಕ್ಷಣಾ…
ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ 2026ರ ಎಸ್ಎಸ್ಎಲ್ಸಿ ಪರೀಕ್ಷೆ-1 ಆರಂಭವಾಗಲಿದ್ದು, ಒಟ್ಟು 9,02,899 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಏಪ್ರಿಲ್ 2ರ ವರೆಗೂ…
ಕಾಬೂಲ್ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷ ಈಗ ಭೀಕರ ಯುದ್ಧಕ್ಕೆ ತಿರುಗಿದ್ದು, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್…
ಅಹಮದಬಾದ್ : 47,000 ಟನ್ ಎಲ್ಪಿಜಿ ಹೊತ್ತ ನಂದಾದೇವಿ ಹಡಗು ಗುಜರಾತ್ನ ಕಾಂಡ್ಲಾ ಬಂದರಿಗೆ ಸುರಕ್ಷಿತವಾಗಿ ಇಂದು(ಮಾರ್ಚ್.17) ತಲುಪಿರುವುದಾಗಿ ವರದಿಯಾಗಿದೆ.…
ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಪ್ರತೀಕಾರಿ ದಾಳಿಗಳನ್ನು ಕಂಡು "ನಾವು ನಿಜಕ್ಕೂ ಆಘಾತಗೊಂಡಿದ್ದೇವೆ" ಎಂದು…
ವಾಷಿಂಗ್ಟನ್ : ಇರಾನ್ ವಿರುದ್ಧದ ಅಮೆರಿಕಾ-ಇಸ್ರೇಲ್ ಯುದ್ಧದ ಪರಿಣಾಮ ಪ್ರಪಂಚದ ಅತಿ ಮುಖ್ಯ ತೈಲ ಮಾರ್ಗ ಹೊರ್ಮುಜ್ ಜಲಸಂಧಿಯ ಮೂಲಕ…