BREAKING NEWS

ಐಟಿ-ಇಡಿ ದಾಳಿಗಳು ವಿರೋಧ ಪಕ್ಷದ ಮೇಲಷ್ಟೇ ನಡೆಯುತ್ತದೆ ಏಕೆ.? : ಖರ್ಗೆ ಪ್ರಶ್ನೆ

ಬೆಂಗಳೂರು : ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ದಾಳಿಗಳು, ತನಿಖೆಗಳು ವಿರೋಧ ಪಕ್ಷದ ನಾಯಕರ ಮೇಲಷ್ಟೆ ಏಕೆ ನಡೆಯುತ್ತಿವೆ ಎಂದು ಪ್ರಶ್ನಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಎಲೆಕ್ಷನ್ ಕಲೆಕ್ಷನ್ ಎಂದು ಆರೋಪ ಮಾಡುವವರು ಕೇಂದ್ರದ ತನಿಖೆ ಸಂಸ್ಥೆಗಳಿಂದ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆ ಖರ್ಚಿಗೆ ಕರ್ನಾಟಕದಲ್ಲಿ ಹಣ ಸಂಗ್ರಹಿಸಿ ಕಳುಹಿಸಲಾಗುತ್ತಿದೆ ಎಂಬ ಆರೋಪ ನಿರಾಧಾರ ಎಂದರು.

ಆದಾಯ ತೆರಿಗೆ, ಸಿಬಿಐ, ಜಾರಿ ನಿರ್ದೇಶನಾಲಯ ಎಲ್ಲವೂ ಬಿಜೆಪಿಯವರ ಕೈನಲ್ಲೇ ಇವೆ. ಅವುಗಳಿಂದ ತನಿಖೆ ಮಾಡಿಸುವುದು ಬೇಡ ಎಂದು ಯಾರು ಹೇಳಿದ್ದಾರೆ. ಕುಮಾರಸ್ವಾಮಿಯವರು ಆರೋಪ ಮಾಡುತ್ತಿದ್ದಾರೆ. ಈಗ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರ ಮಾತುಗಳನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರು ಕೇಳುತ್ತಾರೆ.

ತಾವು ಮಾಡಿದ ಆರೋಪಗಳಿಗೆ ಪೂರಕವಾಗಿ ದಾಖಲೆಗಳನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಲಿ, ತನಿಖೆ ಮಾಡಿಸಲಿ, ತಪ್ಪು ಮಾಡಿದ್ದವರು ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಪ್ರಚಾರಕ್ಕಾಗಿ ಆರೋಪ ಮಾಡುತ್ತಾ ಏಕೆ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಚೈತ್ರ ಕುಂದಾಪುರ ಪ್ರಕರಣದಲ್ಲಿ ಪ್ರಮುಖ ನಾಯಕರಿಗೆ ಹಣ ರವಾನೆಯಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆ ಪ್ರಕರಣದಲ್ಲಿ ಏಕೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿಲ್ಲ. ವಿರೋಧ ಪಕ್ಷಗಳ ನಾಯಕರ ಮೇಲಷ್ಟೆ ಏಕೆ ದಾಳಿಗಳಾಗುತ್ತಿವೆ. ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಾಗಲೆಲ್ಲಾ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ. ಹಿಂದೆ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಬಹುತೇಕ ಕಡೆ ಈ ರೀತಿ ರಾಜಕಾರಣ ನಡೆಸಿದೆ ಎಂದರು.

ಕೇಂದ್ರ ಲೆಕ್ಕ ಪರಿಶೋಧನೆ ಸಂಸ್ಥೆ ನರೇಂದ್ರ ಮೋದಿ ಸರ್ಕಾರದಲ್ಲಿ 30 ರಿಂದ 40 ಸಾವಿರ ಕೋಟಿ ಹಗರಣಗಳಾಗಿವೆ ಎಂದು ವರದಿ ನೀಡಿದೆ. ಈ ಆರೋಪ ಕುರಿತು ತನಿಖೆ ನಡೆಯುತ್ತಿಲ್ಲ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ದಾಳಿಗಳಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಬಿಜೆಪಿ ಮನೆಯೊಂದು ನೂರು ಬಾಗಿಲು ಎಂಬಂತಾಗಿದೆ. ಅಲ್ಲಿ ಯಾರು ಮುಖಂಡರು ಎಂದೇ ಗೋತ್ತಾಗುತ್ತಿಲ್ಲ. ಸರ್ಕಾರ ರಚನೆಯಾಗಿ ನಾಲ್ಕೈದು ತಿಂಗಳಾದರೂ ಈವರೆಗೂ ವಿರೋಧ ಪಕ್ಷದ ನಾಯಕನ್ನಾಗಿ ಮಾಡಲಾಗಿಲ್ಲ. ದೆಹಲಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದೆ, ಆ ವೇಳೆ ನಡೆದ ಮಾತುಕತೆಯಲ್ಲಿ ರಾಜ್ಯದ ಒಬ್ಬ ಬಿಜೆಪಿ ನಾಯಕರು ಹಾಜರಿರಲಿಲ್ಲ. ಬಿಜೆಪಿ ಮನೆ ಖಾಲಿಯಾಗಿದೆ. ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕಾಗಿ ಸಿಬಿಐ, ಆದಾಯ ತೆರಿಗೆ ಛೂ ಬಿಡುವುದನ್ನು ಬಿಟ್ಟು ಇನ್ನೇನು ಮಾಡಲು ಬರುತ್ತದೆ ಅವರಿಗೆ ಎಂದು ಪ್ರಶ್ನಿಸಿದರು.

ಜೆಡಿಎಸ್-ಬಿಜೆಪಿ ಬಗ್ಗೆ ಸಂಸದ ಡಿ.ವಿ.ಸದಾನಂದಗೌಡರು, ಮಾಜಿ ಶಾಸಕ ರೇಣುಕಾಚಾರ್ಯ ಏನು ಹೇಳಿಕೆ ನೀಡಿದ್ದಾರೆ ಎಂದು ಜನರ ಕಣ್ಣೆದುರೇ ಇದೆ. ರಾಜ್ಯ ಬಿಜೆಪಿ ನಾಯಕರು ಬೆನ್ನೆಲುಬು ಕಳೆದುಕೊಂಡಿದ್ದಾರೆ. ಅಧಿಕಾರ ಇದ್ದಾಗಲಂತೂ ರಾಜ್ಯದ ಪರವಾಗಿ ಮಾತನಾಡಲು ಆಗಿರಲಿಲ್ಲ. ಈಗ ನಮ್ಮ ಪಾಡಿಗೆ ಗೌರವವಾಗಿ ಬದುಕಲು ಬಿಡಿ ಎಂದು ಹೈಕಮಾಂಡ್ ಬಳಿ ಕೇಳಲು ಅವರಿಗೆ ಆಗುತ್ತಿಲ್ಲ ಎಂದರು.

ಹಿಂದೆ ನಾವು ದಾಖಲೆಗಳನ್ನು ಇಟ್ಟು ಆರೋಪ ಮಾಡಿದ್ದೆವು. ಅವರು ತನಿಖೆ ಮಾಡಿರಲಿಲ್ಲ. ಈಗ ಬಿಜೆಪಿಯವರು ಆರೋಪ ಮಾಡುತ್ತಾರೆ, ಮಾಡಲಿ ಆದರೆ ಆರೋಪಕ್ಕೆ ದಾಖಲೆ ಕೊಡಲಿ, ನಾವು ತನಿಖೆ ಮಾಡಲು ಸಿದ್ಧರಿದ್ದೇವೆ. ಗಾಳಿಯಲ್ಲಿ ಗುಂಡು ಹೊಡೆಯುವವರಿಗೆ ಏನು ಮಾಡಲು ಸಾಧ್ಯ ಎಂದು ಪ್ರಶ್ನೆಸಿದರು.

ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಮೇಲೆ ಬಿಜೆಪಿ ಆತಂಕದಲ್ಲಿದೆ. ಛತ್ತಿಸ್‍ಗಡದಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿಯ ಸಮೀಕ್ಷೆಗಳೇ ಹೇಳುತ್ತಿವೆ. ತೆಲಂಗಾಣದಲ್ಲಿ ಬಿಜೆಪಿ ಅಡ್ರೆಸ್‍ಗೆ ಇಲ್ಲ, ಮಧ್ಯ ಪ್ರದೇಶದಲ್ಲಿ ಹಾಲಿ ಮುಖ್ಯಮಂತ್ರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮೂರನೆ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಸೋಲಿನ ಭಯ ಅವರನ್ನು ಕಾಡುತ್ತಿದೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ದೊಡ್ಡ ನಾಯಕರು, ಅನುಭವಸ್ಥರು, ಬಹುತೇಕ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ಮಾತನಾಡುವಾಗ ಘನತೆಯಿಂದ ವರ್ತಿಸಬೇಕು. ನಮ್ಮಂತೆ ಹುಡುಗರ ರೀತಿ ಮಾಡನಾಡಲು ಸಾಧ್ಯವೇ. ಯಾವುದೇ ಆರೋಪ ಮಾಡಬೇಕಾದರೂ ದಾಖಲೆ ಇಟ್ಟು ಮಾತನಾಡಬೇಕಲ್ಲ ಎಂದರು.

andolanait

Recent Posts

ಓದುಗರ ಪತ್ರ: ಸ್ವಾಗತಾರ್ಹ ಸಂಕಲ್ಪ!

ಸ್ವಾಗತಾರ್ಹ ಸಂಕಲ್ಪ! ಮತ್ತೆ ಗುಡಿಗಿದ್ದಾರೆ ಮುಖ್ಯಮಂತ್ರಿಗಳು ‘ಭ್ರಷ್ಟಾಚಾರಿಗಳ ಬಡಿದು ಹಾಕುವೆ’ಎಂದು ಅಭಿವೃದ್ಧಿಗೆ ಮಾರಕ ಪ್ರಜೆಗಳ ಶೋಷಕ ಈ ಭ್ರಷ್ಟಾಚಾರ ಎಂಬ…

3 hours ago

ಓದುಗರ ಪತ್ರ: ಸತ್ಪ್ರಜೆಗಳಾಗಿ ಜೀವಿಸುವುದೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನೀಡುವ ಗೌರವ

ಆಗಸ್ಟ್ ಹದಿನೈದು ಬಂತೆಂದರೆ ಸಾಕು, ನಮ್ಮಲ್ಲಿ ದೇಶಪ್ರೇಮದ ರೋಮಾಂಚನ. ಶಾಲೆ-ಕಚೇರಿಗಳಲ್ಲಿ ರಾಷ್ಟ್ರಧ್ವಜರೋಹಣ, ಸಿಹಿತಿಂಡಿ ಹಂಚಿಕೆ, ದೇಶಭಕ್ತಿ ಗೀತೆಗಳು ಮತ್ತು ಭಾಷಣಗಳು…

3 hours ago

ಓದುಗರ ಪತ್ರ: ಸೇತುವೆ ಅವ್ಯವಸ್ಥೆ; ಸಂಚಾರ ದುಸ್ತರ

ಮೈಸೂರು ತಾಲ್ಲೂಕಿನ ಬ್ಯಾತಹಳ್ಳಿ ಮತ್ತು ದಡದಹಳ್ಳಿ ನಡುವೆ ಹರಿಯುತ್ತಿರುವ ಎಣ್ಣೆಹೊಳೆ ದಾಟಲು ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ದುಸ್ಥಿತಿಯಲ್ಲಿದೆ. ಈ…

3 hours ago

ಕಪ್ಪು ವರ್ಣೀಯರ ಕಣ್ಣೀರ ಕಥನ

ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ…

3 hours ago

ಯಶ್: ‘ಟಾಕ್ಸಿಕ್’ ಬೆನ್ನೇರಿದ ಯಶೋ ಮಾರ್ಗ

ವೈಡ್‌ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ‘ಫಸ್ಟ್ , ಯು ಹ್ಯಾವ್ ಟು ಬಿಲೀವ್ ಇನ್ ಇಟ್, ದೆನ್…

3 hours ago

ರೈತರ ಪಾಲಿಗೆ ಕಹಿಯಾದ ಸಿಹಿಗುಂಬಳ

ದಾ.ರಾ.ಮಹೇಶ್ ಹನಗೋಡು ಹೋಬಳಿ ರೈತರು ಬೆಳೆದ ಸಿಹಿಗುಂಬಳಕ್ಕೆ ದೊರೆಯದ ಮಾರುಕಟ್ಟೆ  ವೀರನಹೊಸಹಳ್ಳಿ: ಜೋಳ, ಶುಂಠಿ, ಮತ್ತಿತರ ಸಾಂಪ್ರದಾಯಿಕ ಕೃಷಿ ಬಿಟ್ಟು…

3 hours ago