ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಪಠ್ಯಕ್ರಗಳಲ್ಲಿರುವ ಅವೈಜ್ಞಾನಿಕ ಹಾಗೂ ಅಸಂವಿಧಾನ ಅಂಶಗಳನ್ನು ಪರಿಷ್ಕರಿಸಲಾಗುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ತಂದೆ ತಾಯಿ ಫೋಟೊಗೆ ಪೂಜೆ ಸಲ್ಲಿಸಿ ಕಾರ್ಯಾರಂಭಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದಿನ ಬಿಜೆಪಿ ಸರ್ಕಾರ ಪಠ್ಯಕ್ರಮಗಳಲ್ಲಿ ಕೆಲವು ಆಕ್ಷೇಪಾರ್ಹ ವಿಷಯಗಳನ್ನು ಸೇರ್ಪಡೆ ಮಾಡಿದೆ. ಅವುಗಳನ್ನು ಪರಿಷ್ಕರಿಸಲು ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಶಿಕ್ಷಣ ತಜ್ಞರುಗಳ ಜೊತೆ ಹಲವು ಸುತ್ತಿನ ಚರ್ಚೆಗಳಾಗಿವೆ. ಸಾಹಿತಿಗಳು, ಲೇಖಕರು ಕೂಡ ಸಲಹೆಯನ್ನು ಕೊಟ್ಟಿದ್ದಾರೆ ಎಂದರು.
ಮಾಧ್ಯಮಗಳಲ್ಲಿ ಈ ವರ್ಷ ಪಠ್ಯಪುಸ್ತಕ ಬದಲಾವಣೆ ಇಲ್ಲ. ಮುಂದಿನ ವರ್ಷ ಮಾಡಲಾಗುತ್ತದೆ ಎಂಬ ಮಾಹಿತಿ ಭಿತ್ತರವಾಗುತ್ತಿವೆ. ಆದರೆ ಮಕ್ಕಳು ತಪ್ಪು ಓದಬಾರದು. ತಪ್ಪು ಪಠ್ಯ ಸರಿ ಪಡಿಸಲು ಮುಂದಿನ ವರ್ಷದವರೆಗೂ ಕಾಯಬೇಕಿಲ್ಲ. ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಪಠ್ಯದಲ್ಲಿ ಯಾವ ಅಂಶಗಳನ್ನು ಮುಂದುವರಿಸಬೇಕು. ಆಕ್ಷೇಪಾರ್ಹ ವಿಷಯಗಳನ್ನು ಪರಿಷ್ಕರಿಸುವ ಬಗ್ಗೆ ತಜ್ಞರು ಶಿಫಾರಸ್ಸು ಮಾಡಲಿದ್ದಾರೆ. ಅದನ್ನು ಆಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ತಿದ್ದೋಲೆ ಕಳುಹಿಸಲಾಗಿದೆ. ಈಗಾಗಲೇ ಪಠ್ಯ ಪುಸ್ತಕಗಳು ಶಾಲೆಗಳಿಗೆ ತಲುಪಿರುವುದರಿಂದ ಪರಿಷ್ಕರಣೆಯ ಮೂಲಕ ಮರುಮುದ್ರಣೆ ಸಾಧ್ಯವಿಲ್ಲ. ಹಾಗಾಗಿ ತಿದ್ದೋಲೆಯ ಮಾರ್ಗವನ್ನು ಅನುಸರಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಠ್ಯ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿ ಅವರು ಸಹ ಆಸಕ್ತಿ ಹೊಂದಿದ್ದಾರೆ. ಪೂರಕ ಪಠ್ಯ ಪುಸ್ತಕವನ್ನು ಒದಗಿಸಲಾಗುತ್ತದೆ. ಯಾವ ಪಾಠ ಮಾಡಬೇಕು ಯಾವುದು ಬೇಡ ಎಂಬುದನ್ನು ಶಿಕ್ಷಕರಿಗೆ ಸೂಚಿಸಲಾಗುತ್ತದೆ. ಈಗಾಗಲೇ ಶಾಲೆಗಳಿಗೆ ಪಠ್ಯ ಪುಸ್ತಕ ತಲುಪದಿರುವುದರಿಂದ ಪೂರಕ ಪಠ್ಯ ಪುಸ್ತಕ ಒದಗಿಸಲು ಅವಕಾಶ ಇದೆ ಎಂದರು.
ಏನೇ ಬದಲಾವಣೆ ಮಾಡಿದರೂ ಮಕ್ಕಳ ಒಳಿತನ್ನೇ ಗಮನದಲ್ಲಿಟ್ಟುಕೊಂಡು ಮಾಡುತ್ತೇವೆ. ಈ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಸೂಕ್ಷ್ಮ ವಿಷಯ. ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಬೇಕಿದೆ. ಚುನಾವಣೆ ಪೂರ್ವದಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದೆವು.
ಅದರಂತೆ ತಜ್ಞರು ಹಿರಿಯರ ಸಲಹೆ, ಅಭಿಪ್ರಾಯ ಪಡೆದಿದ್ದೇವೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸಹ ಸಲಹೆ ಕೊಟ್ಟಿದ್ದಾರೆ. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುವುದಿದ್ದರೆ ಮಾತ್ರ ನಾವು ಅದನ್ನು ಸರಿಪಡಿಸಲು ಮುಂದುವರೆಯುತ್ತೇವೆ. ಅದನ್ನು ಬಿಟ್ಟು ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಸದ್ಯ ಸರ್ಕಾರಿ ಶಾಲೆಗಳಲ್ಲಿ ಸೇತುಬಂಧ ತರಗತಿಗಳು ನಡೆಯುತ್ತಿದೆ. ಇನ್ನೂ ಪಠ್ಯಕ್ರಮಗಳು ಆರಂಭಗೊಂಡಿಲ್ಲ. ಸರ್ಕಾರ ಸೂಕ್ತ ಕಾಲಕ್ಕೆ ಅದಕ್ಕೆ ಮಾರ್ಗಸೂಚಿಗಳನ್ನು ರವಾನಿಸಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಬದ್ಧವಾಗಿದೆ. ಆದರೆ ನೇಮಕಾತಿ ಪ್ರಕ್ರಿಯೆಗೆ ಕಾನೂನಾತ್ಮಕ ತೊಡಕುಗಳಿವೆ. ಅವುಗಳ ಪರಿಹಾರಕ್ಕೆ ಅಡ್ವಕೇಟ್ ಜನರಲ್ ಜೊತೆ ಚರ್ಚೆ ನಡೆಸಲಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕಾತಿಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಖಾಯಂ ಶಿಕ್ಷಕರ ನೇಮಕಾತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೆಂಗಳೂರು: ರಾಜ್ಯ ಸರ್ಕಾರವು 2000 ಗೃಹಲಕ್ಷ್ಮೀ ಹಣ ಪಡೆಯುತ್ತಿರುವ ಫಲಾನುಭವಿಗಳಿಗಾಗಿ ಗೃಹಲಕ್ಷ್ಮೀ ಸಹಕಾರ ಸಂಘಗಳನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದೆ. ಈ…
ಮಹಾದೇಶ್ ಎಂ ಗೌಡ ಹನೂರು: ಲೊಕ್ಕನಹಳ್ಳಿ ಗ್ರಾಮದ ತಮಿಳ್ ಸೆಲ್ವ ಎಂಬುವವರ ಜಮೀನಿನಲ್ಲಿ ಬೆಳೆದಿರುವ ಬಾಳೆ, ಬೆಳ್ಳುಳ್ಳಿ, ಕೃಷಿ ಪರಿಕರಗಳನ್ನು…
ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ರಾಜಶೇಖರ್ ಸಾವಿಗೆ ಕಾರಣವಾದ ಬಳ್ಳಾರಿ ಹಿಂಸಾಚಾರಕ್ಕೆ ರಾಜಕೀಯ ಅಸೂಯೆ ಕಾರಣ ಎಂದು ಕಾಂಗ್ರೆಸ್ನ ಸತ್ಯಶೋಧನಾ…
ರಾಮನಗರ: ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡುಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.…
ಬೆಂಗಳೂರು: ರಾಜ್ಯಪಾಲರು ದ್ವೇಷಭಾಷಣ ಬಿಲ್ ಸ್ವೀಕಾರವೂ ಮಾಡಿಲ್ಲ. ತಿರಸ್ಕಾರವೂ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು…
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬಂದು…