ಹಿರಿಯ ಸಮಾಜವಾದಿ, ಚಿಂತಕ, ಹೋರಾಟಗಾರ ಪ. ಮಲ್ಲೇಶ್ ಅವರು ಇಂದು (ಜ.19) ನಿಧನರಾಗಿದ್ದಾರೆ. ಹೋರಾಟಕ್ಕಾಗಿಯೇ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಮಲ್ಲೇಶ್ ಅವರು “ಆಂದೋಲನʼ ಪತ್ರಿಕೆಯ ಆರಂಭಿಕ ದಿನಗಳ ಹೋರಾಟದಲ್ಲಿ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರಿಗೆ ಜೊತೆಯಾದವರು. ಆಂದೋಲನ 50 ರ ಸಂಭ್ರಮದ ವಿಶೇಷ ಸಂಚಿಕೆಗೆ ಅವರು ಬರೆದ ಲೇಖನದಲ್ಲಿ ತಾವು ಮತ್ತು ಪೂರ್ಣಚಂದ್ರ ತೇಜಸ್ವಿ ಅವರು ಕೋಟಿ ಅವರನ್ನುಧಾರವಾಡದಿಂದ ಮೈಸೂರಿಗೆ ಕರೆ ತಂದ ಘಟನೆಯನ್ನು ವಿವರಿಸಿದ್ದಾರೆ.
ಆಂದೋಲನ ಕೇವಲ ಪತ್ರಿಕೆಯಲ್ಲ;ಅದೊಂದು ಸಿದ್ಧಾಂತ
-ಪ.ಮಲ್ಲೇಶ್,
ಹಿರಿಯ ಹೋರಾಟಗಾರರು, ಮೈಸೂರು.
ನನಗಿನ್ನು ನೆನಪಿದೆ. ಧಾರವಾಡದಲ್ಲಿ ನಡೆದ ಸಮಾಜವಾದಿ ಯುವಜನ ಸಭಾದ ಸಭೆ ಮುಗಿದ ನಂತರ ಮೈಸೂರಿನ ಸ್ನೇಹಿತರು ರಾಜಶೇಖರ ಕೋಟಿಯನ್ನು ಮಾತನಾಡಿಸಿದೆವು. ಸಮಾಜವಾದಿ ಯುವಜನ ಸಭಾದಲ್ಲಿ ಭಾಗವಹಿಸುತ್ತಲೇ ತಮ್ಮ ಪತ್ರಿಕೆಯನ್ನು ಸಭೆಯಲ್ಲಿದ್ದ ಸ್ನೇಹಿತರಿಗೆಲ್ಲ ಕೊಡುತ್ತಿದ್ದರು. ಕೋಟಿ ನಮ್ಮನ್ನು ಆಕರ್ಷಿಸಿದ್ದು ಪತ್ರಿಕೆಯ ಮೂಲಕ. ಪಾಟೀಲ ಪುಟ್ಟಪ್ಪ ಅವರ ಪ್ರಪಂಚದಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಮಗೆಲ್ಲ ಪರಿಚಯವಾಗಿತ್ತು. ಮೈಸೂರಿನ ನಮಗೆಲ್ಲರಿಗೂ ಪತ್ರಿಕೆಗಿಂತ ಪತ್ರಿಕೆ ಹೆಸರು ಗಮನ ಸೆಳೆದಿತ್ತು. “ಆಂದೋಲನʼ ಕೆಂಪು ಶಾಯಿಯಲ್ಲಿ ಅಚ್ಚಾದ ಹೆಸರು. ಆ ಹೆಸರನ್ನು ಓದುತ್ತಿದ್ದಂತೆ ನಾನು ಕಣ್ಮುಚ್ಚಿ ಕೆಲ ನಿಮಿಷಗಳು ಆ ಹೆಸರಿನ ಗುಂಗಿನಲ್ಲೇ ಮೈಮರೆತಿದ್ದೆ. ಸಮಾಜವಾದಿ ಚಳವಳಿ,- ಹೋರಾಟ- ಆಂದೋಲನ-ದ ನೆನಪಾಗಿ ಮನಸ್ಸು ತುಂಬಿ ಬಂತು.
ಕೆಂಪು ಅಕ್ಷರಗಳಲ್ಲಿ ಆಂದೋಲನ ಕಣ್ಣಿಗೆ ರಾಚುತ್ತಿತ್ತು. ಆದರೆ, ಸುಮಾರಾದ ಕಾಗದದಲ್ಲಿ ಅಚ್ಚಾಗಿದ್ದ ಕಾರಣಕ್ಕೇನೋ ಅಚ್ಚು ಚೆನ್ನಾಗಿರಲಿಲ್ಲ. ಪತ್ರಿಕೆಯನ್ನು ನಾವೆಲ್ಲರೂ ತಿರುವಿ ಹಾಕಿದೆವು. ಪ್ರತಿಪುಟದಲ್ಲೂ ಅಚ್ಚಾಗಿದ್ದ ಸುದ್ದಿಗಳು, ಅದರ ಭಾಷೆ, ನನಗೆ ತಕ್ಷಣವೇ ಬೆಂಗಳೂರಿನ ಶೇಷಪ್ಪನವರ “ಕಿಡಿʼ ಪತ್ರಿಕೆ ನೆನಪಾಯಿತು. ವಾರಪತ್ರಿಕೆಯಾದ್ದರಿಂದ ಸುದ್ದಿಗಿಂತ ಹೆಚ್ಚಾಗಿ ಪ್ರಕರಣಗಳು, ಘಟನೆಗಳು ಚಿತ್ರಗಳ ಸಹಿತ ಅಚ್ಚಾಗಿದ್ದು ಸಮಾಜದಲ್ಲಿನ ತರತಮಗಳ ಸಂಕ್ಷಿಪ್ತ ವರದಿಗಳು ತುಂಬಿದ್ದವು. ಒಟ್ಟಾರೆಯಾಗಿ ಎಡಪಂಥೀಯ ಧೋರಣೆ ಪತ್ರಿಕೆಯ ಪ್ರಣಾಳಿಕೆ ಆಂದೋಲನದ ರೂಪದಲ್ಲೇ ಪ್ರಕಟವಾಗಿತ್ತು.
ಪತ್ರಿಕೆಯ ಹುಚ್ಚನ್ನು ತಲೆಗೆ ಕಟ್ಟಿಕೊಂಡು ಮೈಸೂರಿಗೆ ಬಂದು ಮುದ್ರಣಾಲಯವನ್ನು ಸ್ಥಾಪಿಸಿ ಕೇವಲ ಮುದ್ರಣಕ್ಕೆ ಮಾತ್ರ ಸೀಮಿತವಾಗಿ. ಪತ್ರಿಕೆಯ ಗುಂಗಿನಲ್ಲಿ ಇದ್ದ ನಾನು “ಆಂದೋಲನʼವನ್ನು ನೋಡುತ್ತಿದ್ದಂತೆ ಸ್ನೇಹಿತರ ಮುಖಗಳನ್ನು ನೋಡುತ್ತ ಕೋಟಿಯವರಿಗೆ, “”ನೀವೇಕೆ ಮೈಸೂರಿಗೆ ಬರಬಾರದು. ಪತ್ರಿಕೆಯನ್ನು ಚೆನ್ನಾಗಿ ಬೆಳೆಸಿ ರಾಜ್ಯ ಮಟ್ಟಕ್ಕೆ ಕೊಂಡೊಯ್ಯೋಣʼʼ ಎಂದೆ. ಹರ ಎನ್ನಲಿಲ್ಲ, ಶಿವ ಎನ್ನಲಿಲ್ಲ ಕೋಟಿ…
ಮೈಸೂರಿಗೆ ವಾಪಾಸಾಗಿ ಎಂಟು- ಹತ್ತು ದಿನಗಳೇ ಆಗಿತ್ತು. ಮುದ್ರಣಾಲಯದಲ್ಲಿ ಪ್ರೂಫ್ ನೋಡುತ್ತ ಕುಳಿತಿದ್ದೆ. “ಸಾರ್ʼ, ಎನ್ನುವ ಧ್ವನಿ ಕೇಳಿ, ಯಾರು ಎಂದು ತಲೆ ಎತ್ತಿದೆ. ನನ್ನ ಆಶ್ಚರ್ಯಕ್ಕೆ ಕೋಟಿ ನಿಂತಿದ್ದರು. “” ಅರರೆ,- ಯಾವಾಗ ಬಂದಿರಿ ಕೋಟಿ-, ಬನ್ನಿ ಕುಳಿತುಕೊಳ್ಳಿʼʼ ಎಂದು ಪಕ್ಕದಲ್ಲಿದ್ದ ಬೆಂಚು ತೋರಿಸಿದೆ. ಅಷ್ಟರಲ್ಲಿ ತೇಜಸ್ವಿ ದಿಢೀರನೆ ನುಗ್ಗಿ ನನ್ನ ಟೇಬಲ್ ಮೇಲೆ ನೋಟಿನ ಕಂತೆ ಎಸೆದು “”ಮಲ್ಲೇಶ, ಒಂದು ಸಾವಿರ ಇದೆ. ಇನ್ನು ಮುಂದೆ ಆಂದೋಲನ ನಿಮ್ಮದು, ನನ್ನ ಪಾಡು ನನಗೆʼʼ ಎಂದು ಹೇಳಿ ನಿಲ್ಲೊ ಎಂದು ಕೂಗಿದರೂ ಕೇಳಿಸಿಕೊಳ್ಳದೆ ದುರ್ದಾನ ತೆಗೆದುಕೊಂಡಂತೆ ಹೊರಟೇ ಹೋದ. ಕೋಟಿ ನಿಂತೇ ಇದ್ದರು…
ಕೂತ್ಕೊಳ್ಳಿ ಎಂದರೂ ನಿಂತೇ ಇದ್ದವರನ್ನು ನಾನು ದಿಟ್ಟಿಸಿ ನೋಡಿದೆ. ದೇಹದ ಕಣಕಣದಲ್ಲೂ ಪತ್ರಿಕೋದ್ಯಮವನ್ನು ಹರವಿಕೊಂಡಂತಿದ್ದರು. ಒಂದು ಇಸ್ತ್ರಿ ಕಾಣದ ಖಾದಿ ಪೈಜಾಮ- ಪ್ಯಾಂಟ್-, ದೊಗಲೆ ಶರ್ಟ್, ಜಬ್ಬು- ಮುಖದ ತುಂಬ ಬೆಳೆದು -23 ಇಂಚು ಇಳಿಬಿದ್ದಿದ್ದ ಗಡ್ಡ, ಕೆದರಿದ ಕೂದಲು- ನರಪೇತಲನಂತಿದ್ದ ದೇಹ …- “” ನಡೀರಿ, ತಿಂಡಿ ತಿಂದು ಬರೋಣ ಎನ್ನುತ್ತಿದ್ದಂತೆ “” ಬೇಡ ಆಯಿತು. ತೇಜಸ್ವಿ-, ನಾನು ತಿಂಡಿ ತಿಂದೆವು” ಎಂದರು. ಆಗ ನನಗೆ ಅರ್ಥವಾಯಿತು, ಇದು ಪೂರ್ವಯೋಜಿತ ವ್ಯವಸ್ಥೆʼ ಎಂದು.. !
ಈ ಪತ್ರಿಕೆಯೊಂದು ಸಿದ್ಧಾಂತ ಎಂದು ತಲೆಬರಹದಲ್ಲಿ ಹೇಳಿದ್ದೇನೆ. ಈ ಹಂತದಲ್ಲೆ ಅದಕ್ಕೆ ವಿವರಣೆ ಕೊಟ್ಟುಬಿಡುತ್ತೇನೆ. ಇದೊಂದು ಎಡಪಂಥೀಯ ಪತ್ರಿಕೆ. ಅಂದರೆ ಕಮ್ಯುನಿಸ್ಟ್ ಸಿದ್ಧಾಂತ ಎಂದಲ್ಲ. ಗಾಂಧಿ, ಲೋಹಿಯಾ, ಅಂಬೇಡ್ಕರ್ ಸಿದ್ಧಾಂತಗಳಿಂದ ಪ್ರೇರಿತವಾದ ಧೋರಣೆ. ಇವರೆಲ್ಲರ ಸಿದ್ಧಾಂತಗಳನ್ನೊಳಗೊಂಡ ಸಮಾಜವಾದ. ಗಾಂಧೀಜಿ ಒಂದು ಕಡೆ ತಮ್ಮ ಸಮಾಜವಾದದ ವಿವರಣೆ ಕೊಡುತ್ತಾರೆ. ಹೇಗೆಂದರೆ ” ಸಮಾಜವಾದಿ ಹಾಗೂ ಸಮತಾವಾದಗಳಷ್ಟೇ ಬಂಡವಾಳಶಾಹಿಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಬಹುಮಟ್ಟಿಗೆ ಕೊನೆಗೊಳಿಸುವುದು ನನ್ನ ಉತ್ಕಟೇಚ್ಛೆ. ಆದರೆ ನಮ್ಮ ದಾರಿ ಬೇರೆ, ಭಾಷೆ ಬೇರೆ. ಭಾರತದಲ್ಲಿ ನಾನು ಕಂಡ ಸಮಾಜವಾದಿಗಳಿಗಿಂತ, ಸಮತಾವಾದಿಗಳಿಗಿಂತ- ಅದರ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಲೇ- ನಾನೊಬ್ಬ ಸಮಾಜವಾದಿʼʼ. ಇದು “ಆಂದೋಲನʼದ ಸಿದ್ಧಾಂತ.
ಕೋಟಿ ಜಾತಿ ವಿರೋಧಿ. ಪತ್ರಿಕೆಯಲ್ಲಿ ಜಾತಿ ವಿರೋಧಿ ಸುದ್ದಿಗಳಿಗೆ ಪ್ರಥಮ ಸ್ಥಾನ. ಬೆಂಗಳೂರು, ಮೈಸೂರಿನಲ್ಲಿ ನಡೆದ ವೀರಶೈವ ಜಗದ್ಗುರುಗಳ ಸಮ್ಮೇಳನ, ಮೈಸೂರಿನಲ್ಲಿ ನಡೆದ ಬ್ರಾಹ್ಮಣ, ಗೌಡರ ಸಮ್ಮೇಳನಗಳನ್ನು ಖಂಡತುಂಡವಾಗಿ ವಿರೋಧಿಸಿದರು. ಇನ್ನು ಭಾಷೆ, ಕನ್ನಡದ ಕಟ್ಟಾಳು, ಕನ್ನಡ ಅಂದರೆ ಅತ್ಯಂತ ಅಭಿಮಾನ, ಪ್ರೀತಿ, ಮಮತೆ. ಕನ್ನಡಕ್ಕೆ ಕಟಿಬದ್ಧವಾಗಿ “ಅಂದೋಲನʼ ತನ್ನುದ್ದಕ್ಕೂ ದುಡಿದುಕೊಂಡು ಬಂದಿದೆ. ಈಗಲೂ ದುಡಿಯುತ್ತಿದೆ. ಇತ್ತೀಚಿನ ಎನ್ಟಿಎಂಎಸ್ ಶಾಲೆ ಹೋರಾಟದ ಉದಾಹರಣೆ ಸಾಕಲ್ಲವೆ? ಆ ಶಾಲೆಯ ಉಳಿವಿಗಾಗಿ ಹೋರಾಟದ ಜೊತೆಗೆ ತಿಂಗಳಿಗೆ ಸುಮಾರು- 6,070 ರೂ.ಗಳನ್ನು ಈಗಲೂ ಆಂದೋಲನ ಭರಿಸುತ್ತಿದೆ. ಅವರ ಕನ್ನಡ ನಿಷ್ಠೆ ಎಷ್ಟಿತ್ತು ಎಂದರೆ ಪತ್ರಿಕೆ ನಡೆಸುವ ಕಾರಣಕ್ಕೆ ಭಾಗವಹಿಸುತ್ತಿರಲ್ಲಿವೆಂದರೂ ನಮ್ಮ ಎಲ್ಲ ಚಳವಳಿಗಳಲ್ಲಿ ಸಕ್ರಿಯವಾಗಿದ್ದರು. ಗೋಕಾಕ್ ಚಳವಳಿಯಲ್ಲಿ ಜೀವದ ಹಂಗು ತೊರೆದು ಕಣಕ್ಕಿಳಿದ- ಕೋಟಿಯ ಪಾತ್ರ ಚಿರಸ್ಮರಣೀಯ.
ಕೋಟಿ, ಸದಾ ದಲಿತರ ಬೆಂಗಾವಲಿಗೆ ನಿಲ್ಲುತ್ತಿದ್ದವರು. ಇದಕ್ಕೆ ಉದಾಹರಣೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ನಡೆದ ಕೋಮುಗಲಭೆ. ಈ ಪ್ರಕರಣ ಸಂಬಂಧ ಅವರ ಬೆನ್ನುಹತ್ತಿದ್ದ ಲಿಂಗಾಯತ ಯುವಕರಿಂದ ಕೋಟಿಯನ್ನು ಬಚಾವ್ ಮಾಡಿದ ನನ್ನ ಮತ್ತು ರಾಮದಾಸರ ಸಾಹಸ ಇನ್ನೂ ನೆನಪಿನಲ್ಲಿದೆ.
ದೀನ- ದಲಿತರು, ರೈತರು, ಅಲ್ಪಸಂಖ್ಯಾತರ ಸುದ್ದಿಗಳಿಗೆ ಆಂದೋಲನ ಮುಖಪುಟದಲ್ಲಿ ಈಗಲೂ ಪ್ರಥಮ ಸ್ಥಾನ-. ಪತ್ರಿಕೋದ್ಯಮವನ್ನು ದೇಶದ ನಾಲ್ಕನೇ ಆಯಾಮ ಎಂದು ಕರೆದು ಬಹುದೊಡ್ಡ ಜವಾಬ್ದಾರಿಯನ್ನು ಹೊರಿಸಿದೆ ಸಮಾಜ. ಇದರಲ್ಲಿ ಸತ್ಯ,- ಪ್ರಾಮಾಣಿಕತೆ- ಸಮಾಜದ ಆಗುಹೋಗುಗಳಿಗೆ, ಏರುಪೇರುಗಳಿಗೆ- ಅತ್ಯಂತ ಪರಿಷ್ಕರಣೆಗೊಂಡ ಸುದ್ದಿಮೂಲಗಳು- ಪ್ರಕಟಣೆಯ ಹೊಣೆ, ನಿಖರತೆಯನ್ನು ಕೇಳುತ್ತವೆ. ಡಾ.ರಾಮಮನೋಹರ ಲೋಹಿಯ ಸತ್ಯದ ಬಗ್ಗೆ ಮುಂದಿನಂತೆ ಉದ್ಗಾರ ಎತ್ತಿದ್ದಾರೆ. “” ಸತ್ಯ ಗೊತ್ತಾಗುವುದು ಒಂದು ಮಗ್ಗುಲಿನಿಂದ ಅಥವಾ ಒಂದು ಕೋನದಿಂದ. ಹಾಗೆಂದ ಮಾತ್ರಕ್ಕೆ ಸತ್ಯ ಆಂಶಿಕವಾದುದೆಂದು ತಿಳಿಯಲಾಗದು… ಸತ್ಯವು ಪೂರ್ಣವಾಗಿರುತ್ತದೆ. ಇಲ್ಲದಿದ್ದರೆ ಇಲ್ಲʼʼ. ಈ ನಡಾವಳಿ ಲೋಹಿಯಾ ಸಂಪಾದಕತ್ವದಲ್ಲಿ ಪ್ರತಿಪಾದಿತವಾಗಿದೆ. ಆಂದೋಲನ ಈ ನಿಟ್ಟಿನಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ನನ್ನ ಗಮನಕ್ಕೆ ಬಂದಿದೆ. ಆಂದೋಲನ ವಾರಪತ್ರಿಕೆಯಲ್ಲಿ ಈ ಪ್ರಯತ್ನ ಸಫಲತೆ ಕಂಡಿತು. ಆದರೆ, ದಿನಪತ್ರಿಕೆಯಾಗಿ ಈ ದಾರಿ ತುಳಿಯುವುದು ಸುಲಭವಲ್ಲ ಅನಿಸುತ್ತದೆ. ಆದರೂ ಕೋಟಿಯ ಪ್ರಯತ್ನ ಮಾತ್ರ ಸದಾ ಎಚ್ಚರದಲ್ಲೇ ಹೆಜ್ಜೆ ಹಾಕಿದ್ದು ಶ್ಲಾಘನೀಯ.
ಈಗ ಕೆಂಪು ಶಾಯಿಯಲ್ಲಿ ಪ್ರಕಟವಾಗುವ “ಆಂದೋಲನʼ ನನ್ನ ಮುದ್ರಣ ಸಂಸ್ಥೆಯಲ್ಲಿ ಮುದ್ರಣವಾಗುವಾಗಲೂ ಇದೇ ರೀತಿ ಅಚ್ಚಾಗುತ್ತಿತ್ತು. ಶ್ರೀ ಜಯಪ್ರಕಾಶ್ ನಾರಾಯಣ್ ತಮ್ಮ ಆಂದೋಲನಕ್ಕೆ ಮುಂಚೆ ಬೆಂಗಳೂರಿಗೆ ಬಂದಾಗ ಕೋಟಿ ಆಂದೋಲನ ವಾರಪತ್ರಿಕೆಯ ವಿಶೇಷ ಸಂಚಿಕೆ ತಂದರು. ನಾವೆಲ್ಲರೂ ಅದನ್ನು ಬೆಂಗಳೂರಿನ ಸಭೆಯಲ್ಲಿ ಮಾರಿದೆವು. ಒಟ್ಟು ಹಣ ಸಂಗ್ರಹವಾದದ್ದು 5,321 ರೂ.ಗಳು. ಕೋಟಿ ಅಷ್ಟು ಹಣವನ್ನು ಅವರ ಬೊಗಸೆ ಕೈನಲ್ಲಿ ನನ್ನ ಬೊಗಸೆಗೆ ಹಾಕಿದ್ದು ಇನ್ನೂ ನೆನಪಿದೆ. ಮುಂದುವರಿದು “” ಸಾರ್, ನಾನು ನಿಮ್ಮ ಶ್ರಮಕ್ಕೆ ತಕ್ಕದಾಗಿ ಪ್ರತಿಕ್ರಿಯಿಸಲಿಲ್ಲ. ನಿಮಗೆ ತುಂಬಾ ತೊಂದರೆ ಕೊಟ್ಟೆ.ಇನ್ನು ನಾನು ಪತ್ರಿಕೆಗೆ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದಿದ್ದೇನೆ.- ಅದಕ್ಕೆ ನಿಮ್ಮ ಸಹಾಯ ಬೇಕುʼʼ ಎಂದರು.
ಅಗ ವಕೀಲರಾಗಿದ್ದ ವಿ.ಎಚ್.ಗೌಡರು, ನನ್ನ ಮುದ್ರಣ ಸಂಸ್ಥೆಯಲ್ಲಿ ಅವರ ಮಾಸಿಕ “ಸಮನ್ವಯʼ ಅಚ್ಚು ಹಾಕಿಸುತ್ತಿದ್ದರು. ಅಷ್ಟರಲ್ಲಿ ನನ್ನ ಮುದ್ರಣಾಲಯ ಜೆ.ಪಿ.ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಇವೆಲ್ಲವನ್ನು ತೂಗಿಸಿಕೊಂಡು ಹೋಗುವ ಸ್ಥಿತಿಯಲ್ಲಿರಲಿಲ್ಲ. ಕೋಟಿ ಮತ್ತು ವಿ.ಎಚ್.ಗೌಡರಲ್ಲಿ ಒಪ್ಪಂದವಾಗಿ ಗೌಡರು ಪ್ರೆಸ್ ಹಾಕುವುದು ಕೋಟಿ ಅವರ “ಸಮನ್ವಯʼ ಪ್ರಿಂಟ್ ಮಾಡಿಕೊಡುವುದು, ಹಾಗೆಯೇ ಕೋಟಿ ತಮ್ಮ ಪತ್ರಿಕೆಯನ್ನೂ ನಡೆಸುವುದು. ಆರ್ಥಿಕವಾಗಿ ಕೊಡುಕೊಳ್ಳುವುದು ಏನೊಂದೂ ಇರುವುದಿಲ್ಲ ಎಂದಾಯಿತು. ಆ ಕಾಲದಲ್ಲಿ ಆಂದೋಲನಕ್ಕೆ ಬಹಳ ಕಾಲ ಬೆನ್ನೆಲುಬಾಗಿ ನಿಂತದ್ದು ಶ್ರೀ ಹರೀಶ.
ಹೀಗೆ ಸಂಕಷ್ಟದಲ್ಲಿ ದಿನಪತ್ರಿಕೆಯಾಗಿ ಪರಿವರ್ತನೆಗೊಂಡ ಆಂದೋಲನ ಎಸ್.ಆರ್.ಬೊಮ್ಮಾಯಿಯವರು ಮುಖ್ಯಮಂತ್ರಿಯಾದಾಗ ಅಲ್ಪಸ್ವಲ್ಪ ಆರ್ಥಿಕ ಸ್ವಾಸ್ಥ್ಯ ಕಂಡಿತು. ಹೀಗೇ ಮುಂದುವರಿದು ಇವತ್ತು ಜನಮಾನಸದಲ್ಲಿ ಪತ್ರಿಕೆ ತನ್ನ ಪ್ರೀತಿಯ ಸ್ಥಾನವನ್ನು ಕಂಡುಕೊಂಡಿದೆ.
“ಆಂದೋಲನʼ ಪಟ್ಟ ಪಾಡು ಅಷ್ಟಿಷ್ಟಲ್ಲ. ಹೊತ್ತು ಹೊತ್ತಿಗೆ ಊಟ ಇರುತ್ತಿರಲಿಲ್ಲ. ಪತ್ರಿಕೆಯನ್ನು ಬರೆದು ತುಂಬಿಸುವ ಕೆಲಸ, ಅಚ್ಚಾದ ಮೇಲೆ ಅದನ್ನು ಜಿಲ್ಲೆಯ ಎಲ್ಲ ಕಡೆಯೂ ರವಾನಿಸುವ ಹೊಣೆ. ರಾತ್ರಿಯೆಲ್ಲ ಪತ್ರಿಕೆ ಕಚೇರಿಯಲ್ಲಿಯೇ ಕೆಲಸ ಮಾಡಿ ಅಲ್ಲಿಯೇ ಬೆಳಗಿನ ಜಾವದಲ್ಲಿ ಮಲಗುತ್ತಿದ್ದುದು ಎಲ್ಲರಿಗೂ ಗೊತ್ತು.
ನನಗೆ ದ.ರಾ.ಬೇಂದ್ರೆಯವರ ಪದ್ಯ ನೆನಪಾಗುತ್ತದೆ.
ನಿನ್ಹಾಂಗ ಆಡಾಕ , ನಿನ್ಹಾಂಗ ಹಾಡಾಕ
ಪಡೆದು ಬಂದವ ಬೇಕೋ ಗುರುದೇವಾ
ಮಕ್ಕಳಾಗ್ಯಾಡೀದಿ , ಹಕ್ಕ್ಯಾಗಿ ಹಾಡೀದಿ
ಚಿಕ್ಕ್ಯಾಗಿ ನೋಡಿದಿ ಗುರುದೇವಾ
ಬಳ್ಳ್ಯಾಗ ಕುಣಿದೀದಿ , ಬೆಳಕಿನ್ಯಾಗ ತಣಿದೀದಿ
ಹೂವಾಗಿ ಅರಳೀದಿ ಗುರುದೇವಾ…
ಈಗ ಆಂದೋಲನ ರಾಜ್ಯ ಮಟ್ಟದ ಪತ್ರಿಕೆಗಳ ಜೊತೆಗೆ ಸಡ್ಡು ಹೊಡೆದು ಬೆಳೆದು ನಿಂತಿದೆ.- ಸಂತೋಷವಾಗುತ್ತದೆ.
ಧಾರವಾಡದಿಂದ ಬರಿಗೈಯಲ್ಲಿ ಬಂದ ಆಂದೋಲನ ಇತ್ತೀಚಿನ ವರ್ಷಗಳಲ್ಲಿ ಕೊಡುಗೈ ದೊರೆಯಾಗಿ ಬೆಳೆಯಿತು. “ಆಂದೋಲನʼದ ಅನ್ವರ್ಥನಾಮ “ಕೋಟಿʼ ಆದದ್ದು ಅದರ ದುಡಿಮೆಯ ಫಲ. ಜನತೆ ಆಂದೋಲನವನ್ನು ಒಪ್ಪಿಕೊಂಡು ಈಗಲೂ ಅಪ್ಪಿಕೊಂಡಿದ್ದಾರೆ. ಜಿಲ್ಲೆಯ ಬಹಳಷ್ಟು ಸಂಘ- ಸಂಸ್ಥೆಗಳು, ಸಂಘಟನೆಗಳು, ವ್ಯಕ್ತಿಗಳು, ಸ್ನೇಹಿತರು, ಇನ್ನೊಬ್ಬರ, ಮತ್ತೊಬ್ಬರ ಕಷ್ಟಗಳಿಗೆ ಆತುಕೊಳ್ಳುವ ಮನೋಧರ್ಮ ಕೋಟಿಯನ್ನು ಜನಾನುರಾಗಿಯನ್ನಾಗಿ ಮಾಡಿದ್ದು ಚರಿತ್ರೆ.