ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಕೈಗೆ ದುಡ್ಡು ನೀಡಲು ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳನ್ನು ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪಂಚ ಗ್ಯಾರಂಟಿಗಳಿಂದ ಜನರು ಸಂತುಷ್ಟರಾಗಿದ್ದಾರೆ. 1.30 ಕೋಟಿ ಕುಟುಂಬಗಳಿಗೆ ಗ್ಯಾರಂಟಿಗಳಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಅವರು, ಸಾಮಾಜಿಕ ಸ್ವಾತಂತ್ರ್ಯಯಿಲ್ಲದಿದ್ದರೆ , ದೇಶಕ್ಕೆ ಸ್ವಾತಂತ್ರ್ಯ ಬಂದರೂ ಪ್ರಯೋಜನವಿಲ್ಲ . ರಾಜಕೀಯ ಪ್ರಜಾಪ್ರಭುತ್ವಯಿದ್ದರೆ ಸಾಲದು, ಸಾಮಾಜಿಕ ಪ್ರಜಾಪ್ರಭುತ್ವವಿರಬೇಕು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಯಿಂದ ಕಷ್ಟದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು. ಎಲ್ಲರಿಗೂ ಸಮಪಾಲು , ಸಮಬಾಳು ಎಂಬ ಧ್ಯೇಯವೇ ಸಮಾಜವಾದ. ನಮ್ಮ ಸರ್ಕಾರ ಜನರ ಜೇಬಿಗೆ ದುಡ್ಡು ಕೊಡುವ ಮೂಲಕ ಉದ್ಯೋಗ ಸೃಷ್ಟಿ , ಜಿಡಿಪಿ ಬೆಳವಣಿಗೆ, ತೆರಿಗೆ ಮೂಲಕ್ಕೂ ದಾರಿಯಾಗುತ್ತದೆ ಎಂದರು.
ನಾವು ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2018ರ ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023ಕ್ಕೆ ಇದು 5,20,000 ಕೋಟಿ ರೂ. ಸಾಲವಿದೆ. ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ ಎಂದರು.
14 ಮತ್ತು 15 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ರಾಜ್ಯಕ್ಕೆ ಬರುವ ಅನುದಾನ ಕಡಿಮೆಯಾಗಿದೆ. 5495 ಕೋಟಿ ರೂ. ಮಧ್ಯಂತರ ಪರಿಹಾರ ನೀಡಲಿಲ್ಲ. 25 ಜನ ಸಂಸದರಿದ್ದರೂ ಇದರ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನಿಸಲಿಲ್ಲ. ರಾಜ್ಯಗಳಿಗೆ ನೀಡುವ ಸಬ್ಸಿಡಿಗಳು ಕಡಿಮೆಯಾಗಿದೆ. ಯೋಜನೆಯಲ್ಲಿ ಶೇ. 80 ರಷ್ಟು ರಾಜ್ಯ ಹಾಗೂ ಶೇ.20 ರಷ್ಟು ಕೇಂದ್ರ ಸರ್ಕಾರ ಹಾಕಿ , ಕೇಂದ್ರ ಪುರಸ್ಕೃತ ಯೋಜನೆ ಎನ್ನಲಾಗುತ್ತದೆ. ಈ ವರ್ಷ ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ಹೋಗುತ್ತಿದ್ದು, ಅದರಲ್ಲಿ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೇರಿ ಕೇವಲ 50,257 ಕೋಟಿ ಬರುತ್ತದೆ ಎಂದರು.
ತೆರಿಗೆ ಸೋರಿಕೆಯನ್ನು ತಡೆದು , ತೆರಿಗೆ ಸಂಗ್ರಹಕ್ಕೆ ಪ್ರಮುಖ ಇಲಾಖೆಗಳಿಗೆ ಹೆಚ್ಚಿನ ಗುರಿಯನ್ನು ನೀಡಲಾಗಿದೆ. 13,500 ಕೋಟಿ ರೂ. ತೆರಿಗೆ ಬಾಬ್ತುಗಳಿಂದ ಸಂಗ್ರಹವಾಗುತ್ತದೆ. ನಮ್ಮ ಸರ್ಕಾರ 85,808 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯುತ್ತಿದೆ. ಯೋಜನೆಗಳ ಆದ್ಯತೀಕರಣದಿಂದ ರೂ. 34,650 ಕೋಟಿ ಕ್ರೋಢೀಕರಣ ಮಾಡಲಾಗುತ್ತದೆ. ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯೊಳಗೆ ಇದೆ. ಮುಂದೆಯೂ ಉಳಿತಾಯ ಬಜೆಟ್ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಸಂಪನ್ಮೂಲ ಕ್ರೋಢೀಕರಣ , ಪಂಚ ಯೋಜನೆಗಳಿಗೆ ಅನುದಾನ ಮೀಸಲು ಮಾಡಲಾಗಿದೆ. ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತಿಲ್ಲ. 76 ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಪ್ರತಿ ದಿನ ಸುಮಾರು 50 ಲಕ್ಷ ಜನ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 2800 ಕೋಟಿಯನ್ನು ಈ ಯೋಜನೆಗೆ ಈ ವರ್ಷ ಇಡಲಾಗಿದೆ. ಗೃಹಜ್ಯೋತಿ ಯೋಜನೆ ಜುಲೈ ತಿಂಗಳಿನಿಂದ ಜಾರಿ ಮಾಡಿ , ಫಲಾನುಭವಿಗಳು ಆಗಸ್ಟ್ ತಿಂಗಳಿನಿಂದ ಬಿಲ್ಲು ಪಾವತಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಜನರ ಗೃಹಬಳಕೆಯ ವಿದ್ಯುತ್ ಸರಾಸರಿ 53 ಯೂನಿಟ್ .12 ತಿಂಗಳ ಸರಾಸರಿಗೆ ಶೇ.10 ರಷ್ಟು ಸೇರಿಸಿ , ಉಚಿತ ವಿದ್ಯುತ್ ನೀಡಲಾಗುವುದು ಎಂದರು.
ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಗೆ 2,29,000 ಮೆ.ಟನ್ ಅಕ್ಕಿ ಬೇಕಾಗುತ್ತದೆ. ಅಕ್ಕಿ ಸರಬರಾಜಿಗೆ ಕೇಂದ್ರ ನಿರಾಕರಿಸಿದ್ದರಿಂದ 5 ಕೆಜಿ ಬದಲು 170 ರೂ. ವೆಚ್ಚವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದ್ದು , ಈ ಯೋಜನೆಗೆ ಸುಮಾರು 10 ಸಾವಿರ ಕೋಟಿ ರೂ. ಮೀಸಲಿರಿಸಲಾಲಿದೆ. ಈವರೆಗೆ 57.51 ಲಕ್ಷ ಕುಟುಂಬಗಳಿಗೆ 337.08 ಕೋಟಿ ಬ್ಯಾಂಕ್ ಖಾತೆಗೆ ತಲುಪಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ 34000 ಕೋಟಿ ರೂ. , ಈ ವರ್ಷ 18000 ಕೋಟಿ ರೂ ಮೀಸಲಿರಿಸಲಾಗಿದೆ. ಯುವನಿಧಿ ಯೋಜನೆಯಡಿ 2022-23 ರಲ್ಲಿ ಪಾಸಾದ ಪದವಿಧರರು ಹಾಗೂ ಡಿಪ್ಲೋಮಾ ಪಡೆದಿರುವವರಿಗೆ 3000 ರೂ. ಹಾಗೂ 1500 ರೂ. ಅನುಕ್ರಮವಾಗಿ 24 ತಿಂಗಳವರಗೆ ನೀಡಲಾಗುವುದು. ಪಂಚ ಗ್ಯಾರೆಂಟಿಗಳಿಂದ 1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ ಎಂದರು.
ಗ್ಯಾರಂಟಿಗಳಿಂದ ಜನ ಸಂತುಷ್ಟರಾಗಿದ್ದಾರೆ: ನಮ್ಮ ಸರ್ಕಾರ ನೀಡಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ತಪ್ಪದೆ ಜಾರಿ ಮಾಡುತ್ತಿದ್ದು, ಜನರೂ ಸಂತುಷ್ಟರಾಗಿದ್ದಾರೆ. ನಮ್ಮ ಬಜೆಟ್ ಗಾತ್ರ 3,27,747 ಕೋಟಿ ರೂ. , ಕಳೆದ ಸರ್ಕಾರದ ಬಜೆಟ್ ಗಿಂತ 62,027 ಕೋಟಿ ರೂ. ಶೇ.23 ರಷ್ಟು ಅಭಿವೃದ್ಧಿಯನ್ನು ಸೂಚಿಸುತ್ತಿದೆ. ನಾವು 5 ವರ್ಷದಲ್ಲಿ 14,54,663 ಮನೆಗಳನ್ನು ಕಟ್ಟಿಸಿದೆವು . ನಾವು ಹಿಂದಿನ ಸರ್ಕಾರಕ್ಕಿಂತ 6 ಲಕ್ಷ ಮನೆಗಳನ್ನು ಹೆಚ್ಚಾಗಿ ನಿರ್ಮಿಸಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ 14,169 ಕಿ.ಮೀ. ಹೆದ್ದಾರಿ ಅಭಿವೃದ್ಧಿಪಡಿಸಿದ್ದೆವು ಎಂದರು.
ಈ ಸರ್ಕಾರ ಸಮಾಜದ ಎಲ್ಲ ವರ್ಗದ ಜನರು, ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನಿಸಲಾಗಿದ್ದು, ಮುಂದೆಯೂ ಪ್ರಯತ್ನಿಸಲಾಗಿದೆ. ಜನಪರ , ಅಭಿವೃದ್ಧಿ ಪರ, ದೂರದೃಷ್ಟಿಯುಳ್ಳ, ರಾಜ್ಯ ಆರ್ಥಿಕತೆ ಬೆಳವಣಿಗೆಗೆ ಪೂರಕವಾದ ಬಜೆಟ್ ನ್ನು ಮಂಡಿಸಲಾಗಿದೆ. ರಾಜ್ಯದ ಜನರು ಈ ಬಜೆಟ್ ನ್ನು ಸ್ವಾಗತಿಸಿದ್ದಾರೆ. ಬಜೆಟ್ ಚರ್ಚೆಯಲ್ಲಿ ಭಾಗವಹಿಸಿ , ಬಜೆಟ್ ಸ್ವಾಗತಿಸಿದವರು ಹಾಗೂ ಟೀಕಿಸಿದವರಿಗೆ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ತಿಳಿಸಿದರು.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…