BREAKING NEWS

ಜಿ-20 ರಾಷ್ಟ್ರಗಳ ಗುಂಪಿಗೆ ಆಫ್ರಿಕನ್ ಯೂನಿಯನ್ ಸೇರ್ಪಡೆಗೆ ಸದಸ್ಯ ರಾಷ್ಟ್ರಗಳ ಬೆಂಬಲ: ಅಮಿತಾಬ್ ಕಾಂತ್

ವಿಜಯನಗರ: ಭಾರತ ಜಿ-20 ಶೃಂಗ ಸಭೆಯ ಅಧ್ಯಕ್ಷತೆ ವಹಿಸಿಕೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಿ-20 ಸದಸ್ಯ ರಾಷ್ಟ್ರಗಳ ಸಾಲಿಗೆ ಆಫ್ರಿಕನ್ ಯೂನಿಯನ್ ಸಹ ಸೇರ್ಪಡೆಗೊಳಿಸಲು ಮಂಡಿಸಿದ ಪ್ರಸ್ತಾವನೆಗೆ 3ನೇ ಶೆರ್ಪಾ ಸಭೆಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಂದ ಸಹಮತದೊಂದಿಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದು ಜಿ-20 ಭಾರತೀಯ ಶೆರ್ಪಾ ಅಮಿತಾಬ್ ಕಾಂತ್ ತಿಳಿಸಿದರು.

ಹಂಪಿ ಎವಾಲ್ವೋ ಬ್ಯಾಕ್ ಖಾಸಗಿ ರೆಸಾರ್ಟ್ನಲ್ಲಿ ಶನಿವಾರ ಮೂರನೇ ದಿನದ ಸಭೆಯ ನಂತರ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ‌ ಅವರು, ಈಗಾಗಲೇ ಯೂರೋಪ್ ಯೂನಿಯನ್ ರಾಷ್ಟ್ರಗಳು ಜಿ-20 ಸದಸ್ಯ ರಾಷ್ಟ್ರಗಳಾಗಿವೆ. ಆಫ್ರಿಕನ್ ರಾಷ್ಟ್ರಗಳ ಸೇರ್ಪಡೆಯಾಗುವುದರಿಂದ ಜಿ-20ಗೆ ಪ್ರಪಂಚದಲ್ಲಿ ಹೆಚ್ಚಿನ ರಾಷ್ಟ್ರಗಳು ಸೇರ್ಪಡೆಯಾದಂತಾಗಿ ಇದು ಪ್ರಪಂಚದ ದೊಡ್ಡ ಆರ್ಥಿಕ ವೇದಿಕೆಯಾಗಲಿದೆ ಎಂದರು.

ಸೆಪ್ಟೆಂಬರ್ 9 ಹಾಗೂ 10 ರಂದು ದೆಹಲಿಯಲ್ಲಿ ನಡೆಯಲಿರುವ ಜಿ-20 ರಾಷ್ಟ್ರಗಳ ನಾಯಕರ ಅಂತಿಮ ಸಭೆಯಲ್ಲಿ ಕೈಗೊಳ್ಳಲಿರುವ ಒಪ್ಪಂದದ ಪೂರ್ಣ ಪ್ರಮಾಣದ ಕರಡು ಪ್ರತಿ ರೂಪಿಸುವಲ್ಲಿ ಹಂಪಿಯಲ್ಲಿ ನಡೆಯುತ್ತಿರುವ ಶೆರ್ಪಾ ಸಭೆ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾರತ ಹಲವಾರು ಪ್ರಸ್ತಾವನೆಗಳನ್ನು ಜಿ-20 ಸದಸ್ಯ ರಾಷ್ಟ್ರಗಳ ಮುಂದಿರಿಸಿದೆ. ಈ ಪ್ರಸ್ತಾವನೆಗಳು ಜಾಗತಿಕವಾಗಿ ಕಾರ್ಯಸೂಚಿಗಳನ್ನು ರೂಪಿಸುವಲ್ಲಿ ಹಾಗೂ ಪ್ರಸ್ತುತ ಜಾಗತಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ವದ್ದಾಗಿವೆ.

ಜಿ-20 ರಾಷ್ಟ್ರಗಳ ಸದಸ್ಯರು ಭಾರತ ರೂಪಿಸಿದ ಕರಡು ಪ್ರತಿಗೆ ರಚನಾತ್ಮಕ ಸಲಹೆ, ಸೂಚನೆ ನೀಡುವುದರೊಂದಿಗೆ ತಾತ್ವಿಕ ಒಪ್ಪಿಗೆ ಸೂಚಿಸಿವೆ. ಭಾರತದ ಕ್ರಿಯಾತ್ಮಕ ಯೋಜನೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ ಎಂದು ತಿಳಿಸಿದರು.

ಹಿಂದೆ ನಡೆದ ಜಿ-20 ರಾಷ್ಟ್ರಗಳಲ್ಲಿ ಮೂಡಿಬಂದ ಒಪ್ಪಂದಗಳ ಘೋಷಣೆಗಳಿಗಿಂತಲೂ ಭಾರತದ ಘೋಷಣೆ ಮಹತ್ವಾಕಾಂಕ್ಷಿಯಾಗಿದೆ. ಈ ಘೋಷಣೆಗಳು ಅಭಿವೃದ್ಧಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಬದಲಾವಣೆಗೆ ಸಹಕಾರಿಯಾಗಲಿದೆ. ಇದು ಜಿ-20 ಶೃಂಗ ಸಭೆಯ ಮುಖ್ಯ ಆಶಯವು ಆಗಿದೆ ಎಂದು ಹೇಳಿದರು.

ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್ಥಿಕತೆಯ ಅಂತರ ಕಡಿಮೆ ಮಾಡುವುದು, ಅಂತರಾಷ್ಟ್ರೀಯ ಸಾಲ ಮರುಪಾವತಿ, ವಿವಿಧ ರಾಷ್ಟ್ರಗಳ ನಡುವಿನ ಹಣಕಾಸು ಸಂಸ್ಥೆಗಳ ಸ್ಥಾಪನೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆೆ ನೀಡಲಾಗುತ್ತಿದೆ. ಮಾನವ ಕಲ್ಯಾಣ, ಅಂತರಾಷ್ಟ್ರೀಯ ವ್ಯವಹಾರ, ಸಾರ್ವಜನಿಕ ಮೂಲಭೂತ ಸೌಕರ್ಯದ ಡಿಜಟಲೀಕರಣದ ಜೊತೆಗೆ ಆರ್ಥಿಕ ವ್ಯವಹಾರಗಳ ಡಿಜಟಲೀಕರಣಗೊಳಿಸಿ ಆರ್ಥಿಕತೆಯ ಲಾಭ ಎಲ್ಲಾ ಜನರಿಗೂ ತಲುಪುವಂತೆ ಮಾಡಲು ಶ್ರಮಿಸಲಾಗುತ್ತಿದೆ.

ಇದರೊಂದಿಗೆ ಅಂತರಾಷ್ಟ್ರೀಯ ಶಾಂತಿ, ಭಯೋತ್ಪಾದನೆ ನಿಗ್ರಹ, ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ತಡೆ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಲಾಗಿದೆ ಎಂದು ಹೇಳಿದರು. ಹಸಿವು ಹಾಗೂ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾರ್ವತ್ರಿಕ ಸ್ವಾಸ್ಥ್ಯ ರಕ್ಷಣೆ, ಕೋವಿಡ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ, ಗುಣಮಟ್ಟದ ಶಿಕ್ಷಣ ನೀಡುವ ಕುರಿತಾದ ಪ್ರಮುಖ ವಿಷಯಗಳು, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕ್ರಮಗಳ ಕುರಿತು ಶೆರ್ಪಾ ಸಭೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಮುಕ್ತ ಜಾಗತಿಕ ವಹಿವಾಟು, ಸುಸ್ಥಿರ ಅಭಿವೃದ್ಧಿ, ಮುಂದಿನ ಜನಾಂಗದ ದೃಷ್ಟಿಯಿಂದ ಆಧುನಿಕ ನಗರಗಳ ನಿರ್ಮಾಣ, ಜಾಗತಿಕ ಆರ್ಥಿಕ ಸಹಕಾರ, ಜಾಗತಿಕ ವಹಿವಾಟು ಹಾಗೂ ಕೊಡುಕೊಳ್ಳುವಿಕೆ ಕುರಿತು ಅಂತರಾಷ್ಟ್ರೀಯ ಕಾನೂನು, ಭ್ರಷ್ಟಾಚಾರ ಹೋಗಲಾಡಿಸಲು ಕ್ರಮಗಳ ಕುರಿತು ಯೋಜನೆ ರೂಪಿಸಲಾಗಿದೆ.

ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಕ್ರಿಪ್ಟೋ ಕರೆನ್ಸಿ ಕುರಿತು ರೂಪು ರೇಶೆ, ಟ್ಯಾಕ್ಸ್ ಸೇರಿದಂತೆ ಹಲವಾರು ವಿಷಯಗಳನ್ನು ಶೆರ್ಪಾ ಸಭೆಯಲ್ಲಿ ಸರಳೀಕರಣಗೊಳಿಸಲು ಚರ್ಚಿಸಲಾಗಿದೆ. ಸುಸ್ಥಿರ ಅಭಿವೃದ್ಧಿಗಾಗಿ ಹಸಿರು ಒಪ್ಪಂದ, ಹವಾಮಾನ ಆರ್ಥಿಕತೆ, ನೀಲಿಸಾಗರ ಆರ್ಥಿಕತೆ, ಪರಿಸರ ಮೇಲೆ ಪ್ಲಾಸ್ಟಿಕ್‌ನಿಂದಾಗುವ ಮಾಲಿನ್ಯ ನಿಯಂತ್ರಣ, ಹವಾಮಾನ ವೈಪರೀತ್ಯ, ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಯೋಜನೆಗಳನ್ನು ರೂಪಿಸಲಾಗುವುದು.

ತಂತ್ರಜ್ಞಾನದ ವಿನಿಮಯ: ಸಾರ್ವಜನಿಕ ಮೂಲಭೂತ ಸೌಕರ್ಯಗಳ ಡಿಜಿಟಲೀಕರಣ ಮಾಡುವ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡಲಾಗುತ್ತದೆ. ಕೃತಕ ಬುದ್ದಿಮತ್ತೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಯು ಚರ್ಚಿಸಲಾಗಿದೆ. ಲಿಂಗ ಸಮಾನತೆ, ಭಯೋತ್ಪಾದನೆಯ ವಿರುದ್ದ ಹೋರಾಟ, ಅಂತರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಶೆರ್ಪಾ ಮಹತ್ವ ನೀಡಿದೆ ಎಂದು ಹೇಳಿದರು.

andolanait

Recent Posts

ತ್ರಿನೇಶ್ವರ ದೇವಾಲಯಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಭೇಟಿ

ಮೈಸೂರು: ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸಂಪ್ರದಾಯದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ತ್ರಿನೇಶ್ವರ ದೇವಾಲಯಕ್ಕೆ ಭೇಟಿ ನೀಡಿ…

3 mins ago

ಮಹಾಶಿವರಾತ್ರಿ ಪ್ರಯುಕ್ತ ಅರಮನೆ ತ್ರಿನೇಶ್ವರ ದೇವಾಲಯಕ್ಕೆ ಭಕ್ತರ ದಂಡು

ಮೈಸೂರು: ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ಭಕ್ತರ ದಂಡೇ ಹರಿದು…

9 mins ago

ಓದುಗರ ಪತ್ರ | ಹಟ್ಟಿ ಮಾರಮ್ಮ ದೇವಾಲಯಕ್ಕೆ ಸುತ್ತುಗೋಡೆ ನಿರ್ಮಿಸಿ

ನಂಜನಗೂಡು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಹಟ್ಟಿ ಮಾರಮ್ಮ ದೇವಾಲಯದಲ್ಲಿ ಪ್ರತಿ ವರ್ಷ ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಕೊಂಡೋತ್ಸವ, ಜಾತ್ರೆ ನಡೆಯುತ್ತದೆ.…

1 hour ago

ಓದುಗರ ಪತ್ರ | ಮಾದರಿ ಗ್ರಾಮ ಸೌಂದಾಳ

ಮಹಾರಾಷ್ಟ್ರ ರಾಜ್ಯದ ಸೌಂದಾಳ ಗ್ರಾಮವು ದೇಶದಲ್ಲೇ ಮೊದಲ ಜಾತಿ ಮುಕ್ತ ಮನಸ್ಸುಳ್ಳ ಗ್ರಾಮ ಎಂಬ ಕೀರ್ತಿಯನ್ನು ಗಳಿಸಿ ನಮ್ಮ ಸಮಾಜಕ್ಕೆ…

1 hour ago

ಓದುಗರ ಪತ್ರ | ಪಿಯುಸಿ ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ

ಈ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸರ್ಕಾರಿ ಕಾಲೇಜುಗಳಿಂದ ಒಟ್ಟು 1.38 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ, ಇವರಲ್ಲಿ 63,514 ವಿದ್ಯಾರ್ಥಿಗಳು…

1 hour ago

ಓದುಗರ ಪತ್ರ | ಹೆಚ್ಚುವರಿ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಿ

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಕಷ್ಟು ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೆ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ತೊಂದರೆಯಾಗಿದೆ.…

1 hour ago