ಟೆಲ್ ಅವಿವ್: ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಸಂದರ್ಭದಿಂದ ಈವರೆಗೂ ಒಟ್ಟು 34 ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ ಎಂದು ‘ಮಿಡ್ಲ್ ಈಸ್ಟ್ ಮಾನಿಟರ್’ ವರದಿ ಮಾಡಿದೆ. ಇಸ್ರೇಲ್ ಮೇಲಿನ ಹಮಾಸ್ ಬಂಡುಕೋರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಗಳಲ್ಲಿ ಮೃತಪಟ್ಟ ಪತ್ರಕರ್ತರ ಪಟ್ಟಿಯನ್ನು ಗಾಜಾದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.
ಮೂವರು ಮಹಿಳೆಯರು ಸೇರಿದಂತೆ 34 ಪತ್ರಕರ್ತರು ದಾಳಿಗಳಲ್ಲಿ ಬಲಿಯಾಗಿದ್ದಾರೆ. ಇನ್ನೂ ಅನೇಕ ಪತ್ರಕರ್ತರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಅಕ್ಟೋಬರ್ 25ರಂದು ನುಸೀರಾತ್ ನಿರಾಶ್ರಿತರ ಶಿಬಿರದಲ್ಲಿನ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲ್ ಜಜೀರಾ ಪತ್ರಕರ್ತ ವಾಯೆಲ್ ಅಲ್ ದಾಹದುಹ್ ಅವರು ಹೆಂಡತಿ, ಮಗ ಹಾಗೂ ಮಗಳು ಸೇರಿದಂತೆ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದರು.
ನಿರಾಶ್ರಿತರ ಶಿಬಿರದ ಮೇಲೆ ದಾಳಿ
ಸೋಮವಾರ ಇಸ್ರೇಲ್ ಪಡೆಗಳು ಪ್ಯಾಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಬ್ರಾಡ್ಕಾಸ್ಟ್ ಎಂಜಿನಿಯರ್ ಮುಹಮ್ಮದ್ ಅಬು ಅಲ್ ಕುಸ್ಮಾನ್ ಅವರು ತಮ್ಮ ಕುಟುಂಬದ 19 ಸದಸ್ಯರನ್ನು ಕಳೆದುಕೊಂಡಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ.
ಇಸ್ರೇಲ್- ಲೆಬನಾನ್ ಗಡಿ ಭಾಗದಲ್ಲಿ ನಡೆದ ಸಂಘರ್ಷದಲ್ಲಿ ಇಸ್ರೇಲ್ನ ಗುಂಡೇಟಿಗೆ ಲೆಬನಾನ್ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆ. ಹಮಾಸ್ ನಡೆಸಿದ ದಾಳಿಗಳಲ್ಲಿ ಇಸ್ರೇಲ್ ತನ್ನ ನಾಲ್ವರು ಪತ್ರಕರ್ತರನ್ನು ಕಳೆದುಕೊಂಡಿದೆ. ಈವರೆಗೂ ಎಂಟು ಮಂದಿ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ), ಅಕ್ಟೋಬರ್ 7ರಿಂದ ಸುಮಾರು 9 ಮಂದಿ ಪತ್ರಕರ್ತರು ನಾಪತ್ತೆಯಾಗಿದ್ದಾರೆ ಅಥವಾ ಬಂಧಿತರಾಗಿದ್ದಾರೆ ಎಂದು ತಿಳಿಸಿದೆ.
ಖಾತರಿ ನೀಡಲು ಸಾಧ್ಯವಿಲ್ಲ ಎಂದ ಐಡಿಎಫ್
ಇಸ್ರೇಲಿ ದಾಳಿಗಳಲ್ಲಿ ತನ್ನ ಪತ್ರಕರ್ತರನ್ನು ಗುರಿ ಮಾಡುವುದಿಲ್ಲ ಎಂಬ ಭರವಸೆ ನೀಡುವಂತೆ ಏಜೆನ್ಸ್ ಫ್ರಾನ್ಸ್ ಪ್ರೆಸ್ ಮತ್ತು ರಾಯಿಟರ್ಸ್ ಮನವಿ ಮಾಡಿದ್ದವು. ಆದರೆ ಗಾಜಾ ಪಟ್ಟಿ ಮೇಲಿನ ತಮ್ಮ ಕಾರ್ಯಾಚರಣೆಯಲ್ಲಿ ಪತ್ರಕರ್ತರ ಸುರಕ್ಷತೆ ಬಗ್ಗೆ ಖಾತರಿ ನೀಡಲು ಸಾಧ್ಯವಿಲ್ಲ ಎಂದು ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಹೇಳಿದೆ.
“ಗಾಜಾದ ಎಲ್ಲೆಡೆಯೂ ಹಮಾಸ್ ಮಿಲಿಟರಿ ಚಟುವಟಿಕೆಗಳ ಮೇಲೆ ಐಡಿಎಫ್ ದಾಳಿ ನಡೆಸುತ್ತಿದೆ. ಹಮಾಸ್ ಉದ್ದೇಶಪೂರ್ವಕವಾಗಿಯೇ ತನ್ನ ಸೇನಾ ಕಾರ್ಯಾಚರಣೆಗಳನ್ನು ಪತ್ರಕರ್ತರು ಹಾಗೂ ನಾಗರಿಕರು ಇರುವ ಪ್ರದೇಶಗಳಲ್ಲಿ ನಡೆಸುತ್ತಿದೆ. ನಿಮ್ಮ ಉದ್ಯೋಗಿಗಳ ಸುರಕ್ಷತೆಗೆ ನಾವು ಖಾತರಿ ನೀಡಲು ಸಾಧ್ಯವಿಲ್ಲ ಹಾಗೂ ಅವರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿಮಗೆ ಮನವಿ ಮಾಡುತ್ತೇವೆ” ಎಂದು ಐಡಿಎಫ್ ತಿಳಿಸಿದೆ.
ಇತರೆ ಪತ್ರಕರ್ತರನ್ನು ಹತ್ಯೆ ಮಾಡುವ, ನಾಪತ್ತೆಯಾದ, ಬಂಧಿಸಿದ, ಗಾಯಗೊಳಿಸಿದ ಅಥವಾ ಬೆದರಿಸುವ ಮತ್ತು ಮಾಧ್ಯಮ ಕಚೇರಿಗಳು ಹಾಗೂ ಪತ್ರಕರ್ತರ ಮನೆಗಳಿಗೆ ಹಾನಿ ಮಾಡುವ ಘಟನೆಗಳ ಖಚಿತವಲ್ಲದ ಅನೇಕ ವರದಿಗಳನ್ನು ಪರಿಶೀಲಿಸುತ್ತಿರುವುದಾಗಿ ಸಿಪಿಜೆ ಹೇಳಿದೆ.
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…
ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…
ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…