ಹಾಸನ: ನಗರದ ಲಕ್ಷ್ಮಿಪುರ ಬಡಾವಣೆಯಲ್ಲಿ ಹಾಲಿ ನಗರಸಭಾ ಸದಸ್ಯನನ್ನು ಆಟೋದಲ್ಲಿ ಬಂದ ಕಿಡಿಗೇಡಿಗಳು ಬರ್ಬರ ಕೊಲೆ ಮಾಡಿದ್ದಾರೆ.
ಹಾಲಿ ನಗರಸಭಾ ಸದಸ್ಯರಾದ ಪ್ರಶಾಂತ ನಾಗರಾಜ್ (42) ಅವರೇ ಕೊಲೆಯಾದವರು. ಇವರು ಲಕ್ಷ್ಮಿಪುರ ಬಡಾವಣೆಯ ಜವೇನಹಳ್ಳಿ ಮಠದ ಬಳಿ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಆಟೋದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಾಗರಾಜ್ ರವರ ಎದೆ ಮತ್ತು ಎಡಗೈ ತುಂಡರಿಸಿದಲ್ಲದೆ ಮನಸೋ ಇಚ್ಛೆ ಕೊಚ್ಚಿ ಪರಾರಿಯಾಗಿದ್ದಾರೆ. ಪ್ರಶಾಂತ ನಾಗರಾಜ್ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಗೊಂಡು ಮೃತಪಟ್ಟಿದ್ದಾರೆ.
ಬಳಿಕ ಸ್ಥಳಕ್ಕೆ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಎಸ್ಪಿ ನಂದಿನಿ ಸೇರಿದಂತೆ ಶ್ವಾನದಳ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಪ್ರಶಾಂತ್ ಸ್ನೇಹಿತರ ಮತ್ತು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಮೇಲುನೋಟಕ್ಕೆ ಕೊಲೆಯು ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದಿರಬಹುದೆಂದು ತಿಳಿದುಬಂದಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ.
ಸದ್ಯ, ಆಂಬುಲೆನ್ಸ್ ಮೂಲಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಗೆ ಆಗಮಿಸಿದ ಮಾಜಿ ಸಚಿವ ಎಚ್ ಡಿ ರೇವಣ್ಣ ಹಾಗೂ ಎಸ್ಪಿ ಶ್ರೀನಿವಾಸಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕೆಂದು ಮಾಜಿ ಸಚಿವ ರೇವಣ್ಣ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.