ಚಿತ್ರ ಮಂಜರಿ

ವಂಶಿಕಾ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ: ಯಶಸ್ವಿನಿ, ಆನಂದ್‌ ಹೇಳಿದ್ದೇನು?

ಕನ್ನಡ ನಟ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಪುತ್ರಿ ವಂಶಿಕಾ. ‘ನನ್ನಮ್ಮ ಸೂಪರ್ ಸ್ಟಾರ್’ ಹಾಗೂ ‘ಗಿಚ್ಚಿ ಗಿಲಿಗಿಲಿ’ ವಿನ್ನರ್ ಆಗಿರುವ ವಂಶಿಕಾ ಹೆಸರಿನಲ್ಲಿ ನಿಶಾ ನರಸಪ್ಪ ಎಂಬುವರು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

‘ಎನ್‌ಎನ್‌ ಪ್ರೊಡಕ್ಷನ್ಸ್’ ಸಂಸ್ಥೆ ಮುಖಾಂತರ ಬೇಬಿ ಕಾಂಟೆಸ್ಟ್, ಕಿಡ್ಸ್ ಮಾಡೆಲಿಂಗ್, ಕಿರುತೆರೆ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಕೆಲ ಪೋಷಕರಿಂದ ನಿಶಾ ನರಸಪ್ಪ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ವಂಶಿಕಾ ಹೆಸರನ್ನ ಬಳಸಿಕೊಂಡು ವಂಚನೆ ಮಾಡಿರುವ ನಿಶಾ ನರಸಪ್ಪ ವಿರುದ್ಧ ಯಶಸ್ವಿನಿ ಆನಂದ್ ಹಾಗೂ ಮೋಸ ಹೋದ ಕೆಲ ಪೋಷಕರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ಏನಿದು ಪ್ರಕರಣ?

‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ವಂಶಿಕಾ ಹಾಗೂ ತಾಯಿ ಯಶಸ್ವಿನಿ ವಿಜೇತರಾದ ಬಳಿಕ ಅವರಿಗೆ ನಿಶಾ ನರಸಪ್ಪ ಎಂಬುವರು ಇನ್ಸ್ಟಾಗ್ರಾಮ್ ಮುಖಾಂತರ ಪರಿಚಯಗೊಂಡಿದ್ದಾರೆ. ಎನ್‌ಎನ್‌ ಪೊಡಕ್ಷನ್ಸ್ ಅಡಿಯಲ್ಲಿ ಜರುಗಿದ ಬೇಬಿ ಕಾಂಟೆಸ್ಟ್‌ಗೆ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಂಶಿಕಾ, ಯಶಸ್ವಿನಿ, ವಿಂಧ್ಯಾ, ಜಾಹ್ನವಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಕ್ಕಳ ಟ್ಯಾಲೆಂಟ್‌ ಪ್ರೋತ್ಸಾಹಿಸುತ್ತಾರೆ ಎಂದು ಎನ್‌ಎನ್‌ ಪ್ರೊಡಕ್ಷನ್ಸ್ ಸಂಸ್ಥೆಯನ್ನ ಯಶಸ್ವಿನಿ ಮಾಸ್ಟರ್‌ ಆನಂದ್‌ ಮುಂತಾದವರು ಪ್ರೊಮೋಟ್ ಮಾಡಿದ್ದರು.

‘ವಂಶಿಕಾ ಜೊತೆಗೆ ಆಡ್ ಶೂಟ್, ರಿಯಾಲಿಟಿ ಶೋ ಚಿತ್ರೀಕರಣ, ಆಲ್ಬಂ ಶೂಟಿಂಗ್ ಮಾಡ್ತೀವಿ’ ಎಂದು ಸುಳ್ಳು ಹೇಳಿ ಕೆಲ ಪೋಷಕರಿಂದ ನಿಶಾ ನರಸಪ್ಪ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರಂತೆ. ಹಣ ಪಡೆದ ಬಳಿಕ ಪೋಷಕರ ಫೋನ್ ಹಾಗೂ ಮೆಸೇಜ್‌ಗಳಿಗೆ ನಿಶಾ ನರಸಪ್ಪ ರೆಸ್ಪಾಂಡ್ ಮಾಡುತ್ತಿರಲಿಲ್ಲವಂತೆ. ಹಣ ಪಡೆದ ಪೋಷಕರನ್ನ ಸೋಷಿಯಲ್ ಮೀಡಿಯಾದಲ್ಲಿ ನಿಶಾ ನರಸಪ್ಪ ಬ್ಲಾಕ್ ಮಾಡುತ್ತಿದ್ದರಂತೆ. ಈ ಬಗ್ಗೆ ಯಶಸ್ವಿನಿ ಅವರಿಗೆ ಕೆಲ ಪೋಷಕರು ಮಾಹಿತಿ ನೀಡಿದ್ದರು. ಇದಾದ್ಮೇಲೆ ಯಶಸ್ವಿನಿ ಮಾಸ್ಟರ್ ಆನಂದ್‌ ಹಾಗೂ ವಂಶಿಕಾ ‘ಎನ್‌ಎನ್‌ ಪ್ರೊಡಕ್ಷನ್ಸ್‌’ಗೆ ಯಾವುದೇ ರೀತಿಯ ಪ್ರಚಾರ ನೀಡಲಿಲ್ಲ.
ಇತ್ತೀಚೆಗೆ ಮತ್ತೆ ವಂಶಿಕಾ ಹೆಸರನ್ನ ದುರ್ಬಳಕೆ ಮಾಡಿಕೊಂಡು ನಿಶಾ ನರಸಪ್ಪ ಕೆಲ ಪೋಷಕರಿಂದ ಹಣ ಪೀಕಿದ್ದಾರಂತೆ. ನಿಶಾ ನರಸಪ್ಪ ಅವರನ್ನ ಹಿಡಿದು ಕೆಲ ಪೋಷಕರು ಸದಾಶಿವನಗರದ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ನಿಶಾ ನರಸಪ್ಪ ವಿರುದ್ಧ ಯಶಸ್ವಿನಿ ಮಾಸ್ಟರ್ ಆನಂದ್ ಮತ್ತು ಪೋಷಕರು ದೂರು ದಾಖಲಿಸಿದ್ದಾರೆ.

ಯಶಸ್ವಿನಿ ಮಾಸ್ಟರ್ ಆನಂದ್ ಹೇಳುವುದೇನು?

‘’ಎನ್‌ಎನ್‌ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನ ನಿಶಾ ನರಸಪ್ಪ ನಡೆಸುತ್ತಿದ್ದರು. ನಾವೂ ಕೂಡ 4 ತಿಂಗಳು ಪ್ರೊಮೋಷನ್ ಮಾಡಿದ್ವಿ. ಆಮೇಲೆ ನಮಗೆ ಇನ್ಸ್ಟಾಗ್ರಾಮ್‌ನಿಂದ ಮೆಸೇಜ್ ಬರೋಕೆ ಶುರುವಾಯಿತು. ‘’ನೀವು ಪ್ರಮೋಟ್ ಮಾಡಿದ್ರಿ. ನಾವೆಲ್ಲಾ ಅವರಿಗೆ ಹಣ ನೀಡಿದ್ದೇವೆ’’ ಎಂಬ ಮೆಸೇಜ್ ಬರಲಾರಂಭಿಸಿತು. ಜನರ ದುಡ್ಡಿನಲ್ಲಿ ಮೋಸ ಆಗುತ್ತಿದೆ ಅನ್ನೋದು ನಮಗೆ ಗೊತ್ತಾಯಿತು. ಹಣ ಪಡೆದ ಮೇಲೆ ಆಕೆ ರಿಪ್ಲೈ ಮಾಡದೇ ಇರುವುದು, ನಂಬರ್ ಬ್ಲಾಕ್ ಮಾಡ್ತಿರೋದು ನಮಗೆ ತಿಳಿಯಿತು. ಅದು ನನಗೆ ಗೊತ್ತಾದಾಗ.. ನಿಶಾ ನರಸಪ್ಪ ಅವರ ಬಳಿ ನಾವು ಮಾತನಾಡಿದ್ವಿ. ‘’ಸಮಸ್ಯೆ ಪರಿಹಾರ ಮಾಡಿಕೊಳ್ಳಿ. ಅಲ್ಲಿಯವರೆಗೂ ನಾವು ಪ್ರಮೋಷನ್ ಮಾಡಲ್ಲ’’ ಅಂತ ನಾವು ಹೇಳಿದ್ವಿ. ಇದಾಗಿ 6 ತಿಂಗಳ ಮೇಲಾಯಿತು’’

‘’ಇತ್ತೀಚೆಗಷ್ಟೇ ವಂಶಿಕಾ ಹೆಸರನ್ನ ಹೇಳಿಕೊಂಡು ಆಲ್ಬಂ ಶೂಟ್, ಆಡ್ ಶೂಟ್, ಸಾಂಗ್ ಶೂಟ್, ಸಿನಿಮಾ ಶೂಟಿಂಗ್ ಇದೆ ಅಂತ ಬೇರೆ ಬೇರೆ ಪೇರೆಂಟ್ಸ್ ಬಳಿ ನಿಶಾ ಹಣ ಪಡೆದಿದ್ದಾಳೆ. ಹಣ ಕೊಟ್ಟ ಪೇರೆಂಟ್ಸ್ ನಮಗೆ ಮೆಸೇಜ್ ಮಾಡಿದ್ದಾರೆ. ಆಗ ಇದು ದೊಡ್ಡ ವಿಷಯ ಆಗಿದೆ ಅಂತ ಗೊತ್ತಾಯಿತು. ಈಗ ಪೇರೆಂಟ್ಸ್ ಒಬ್ಬರು ನಿಶಾರನ್ನ ಕರೆದು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ನಾನೂ ಸಹ ಪೊಲೀಸ್ ಸ್ಟೇಷನ್‌ಗೆ ಬಂದು ದೂರು ಕೊಟ್ಟಿದ್ದೇನೆ’’

‘’ನಿಶಾ ನರಸಪ್ಪ ನನಗೆ ಪರಿಚಯವಾಗಿದ್ದೇ ಇನ್ಸ್ಟಾಗ್ರಾಮ್‌ನಿಂದ. ನಮಗೆ ಅವಳ ಬ್ಯಾಕ್‌ಗ್ರೌಂಡ್ ಗೊತ್ತಿಲ್ಲ. ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮ ಮುಗಿದ್ಮೇಲೆ ಅವಳು ಅಪ್ರೋಚ್ ಮಾಡಿದಳು. ಮಕ್ಕಳ ಟ್ಯಾಲೆಂಟ್ ವಿಷಯ ಎಂಬ ಕಾರಣಕ್ಕೆ ನಾನೂ ಅವಳಿಗೆ ಸಪೋರ್ಟ್ ಮಾಡಿದ್ದೆ. ಅದು ಇಲ್ಲಿಯವರೆಗೂ ಬರುತ್ತೆ ಅಂತ ನಮಗೂ ಗೊತ್ತಿರಲಿಲ್ಲ. ನಮಗೂ ತುಂಬಾ ಬೇಜಾರಾಗಿದೆ. ಅವಳು ನಮಗೂ ಪೇಮೆಂಟ್ ಬ್ಯಾಲೆನ್ಸ್ ಇಟ್ಟಿದ್ದಾಳೆ. ನಮಗೆ ಆ ಪೇಮೆಂಟ್ ಬೇಡ. ಕಣ್ಣೀರಿನ ದುಡ್ಡು ನಮಗೆ ಬೇಡ. ಕೆಲವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಕೊಟ್ಟ ಪೇರೆಂಟ್ಸ್‌ನ ಬ್ಲಾಕ್ ಮಾಡುತ್ತಿದ್ದಳು. ವಂಶಿಕಾ ಹೆಸರನ್ನ ದುರ್ಬಳಕೆ ಮಾಡ್ತಿರೋದ್ರಿಂದ ನಾನು ದೂರು ಕೊಟ್ಟಿದ್ದೇನೆ’’ ಎಂದಿದ್ದಾರೆ ವಂಶಿಕಾ ತಾಯಿ ಯಶಸ್ವಿನಿ ಮಾಸ್ಟರ್ ಆನಂದ್.

ಮಾಸ್ಟರ್ ಆನಂದ್ ಹೇಳುವುದೇನು?

‘’ನಿಶಾ ನರಸಪ್ಪ ಯಾರು ಅಂತ ನಮಗೆ ಗೊತ್ತಿರಲಿಲ್ಲ. 8 ತಿಂಗಳ ಹಿಂದೆ ನನಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಬರೋಕೆ ಶುರುವಾಯಿತು. ನನ್ನ ಪತ್ನಿಗೂ ಮೆಸೇಜ್‌ಗಳು ಬಂದವು. ವಂಶಿಕಾ ಹೆಸರನ್ನ ನಿಶಾ ನರಸಪ್ಪ ಬಳಸಿಕೊಳ್ಳುತ್ತಿದ್ದರು. ನಾವು ಫಂಕ್ಷನ್‌ನಲ್ಲಿ ತೆಗೆದ ಫೋಟೋ, ವಿಡಿಯೋಗಳನ್ನೂ ಅವರು ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆ ಕೆಲವು ಪೇರೆಂಟ್ಸ್ ನಮ್ಮ ಗಮನಕ್ಕೆ ತಂದರು. ನಿಶಾ ನರಸಪ್ಪ ರೆಡ್ ಹ್ಯಾಂಡ್ ಆಗಿ ಇಂದು ಸಿಕ್ಕಿಹಾಕಿಕೊಂಡಿದ್ದಾರೆ’’

‘’ವಾಹಿನಿಗಳಲ್ಲಿ, ಸೀರಿಯಲ್‌ಗಳಲ್ಲಿ ಚಾನ್ಸ್ ಕೊಡಿಸ್ತೀನಿ ಅಂತೆಲ್ಲಾ ಬೇರೆ ಬೇರೆ ಪೇರೆಂಟ್ಸ್ ಬಳಿ ಹೇಳಿದ್ದಾರಂತೆ. ಪೇರೆಂಟ್ಸ್ ಕಡೆಯಿಂದ ಹಣ ಪಡೆದಿದ್ದಾರೆ. ಹಣ ತೆಗೆದುಕೊಂಡ ಬಳಿಕ ಆಕೆ ಯಾವುದೇ ರೀತಿ ಪ್ರತಿಕ್ರಿಯೆ ಕೊಟ್ಟಿಲ್ಲ. ಮಾಧ್ಯಮ ವರ್ಗದ ಪೇರೆಂಟ್ಸ್ ಹಣ ಕಳೆದುಕೊಂಡಿದ್ದಾರೆ’’ ಎಂದಿದ್ದಾರೆ ಮಾಸ್ಟರ್ ಆನಂದ್.

andolanait

Recent Posts

ಮಂಗಳೂರು: ತುಳು ವಿದ್ವಾಂಸ, ಸಾಹಿತಿ ಡಾ.ವಾಮನ ನಂದಾವರ ನಿಧನ

ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತುಳು ಸಾರಸ್ವತ ಲೋಕದ ಹಿರಿಯ ವಿದ್ವಾಂಸ, ಸಾಹಿತಿ ಡಾ. ವಾಮನ ನಂದಾವರ…

29 mins ago

ಕಾರ್ಮಿಕ ಇಲಾಖೆಯ ನ್ಯೂಟ್ರಿಷನ್‌ ಕಿಟ್‌ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ: ಬಿಜೆಪಿ ಆರೋಪ

ಬೆಂಗಳೂರು: ಕಾರ್ಮಿಕರ ಹೆಸರಿನಲ್ಲಿ ದುಡ್ಡು ತಿಂದ ರಾಜ್ಯ ಸರ್ಕಾರ, ನ್ಯೂಟ್ರಿಷನ್‌ ಕಿಟ್‌ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದೆ…

34 mins ago

WPL final: ಚಾಂಪಿಯನ್‌ ಪಟ್ಟಕ್ಕಾಗಿ ಮುಂಬೈ v/s ಡೆಲ್ಲಿ ಹೋರಾಟ

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಟಿ20 ಕ್ರಿಕೆಟ್‌ ಟೂನಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌…

52 mins ago

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌: ಎರಡು ವರ್ಷದಲ್ಲಿ ರನ್ಯಾ ದುಬೈಗೆ ಎಷ್ಟು ಬಾರಿ ಹೋಗಿದ್ದರೂ ಗೊತ್ತಾ?

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಬಂಧಿಯಾಗಿದ್ದು ನಟಿ ರನ್ಯಾರಾವ್‌ ಅವರು 2023ರ ಜೂನ್‌ನಿಂದ ಇಲ್ಲಿಯವರೆಗೂ 52 ಬಾರಿ ದುಬೈಗೆ ಹೋಗಿ…

56 mins ago

ಪ್ರತಾಪ್‌ ಸಿಂಹನ ಮಾತು ಹಾಗೂ ನಾಲಿಗೆ ಸ್ವಲ್ಪ ಸರಿಯಿಲ್ಲ: ತನ್ವೀರ್‌ ಸೇಠ್‌ ಕಿಡಿ

ಮೈಸೂರು: ಮಾಜಿ ಸಂಸದ ಪ್ರತಾಪ್‌ ಸಿಂಹ ಸಭ್ಯತೆ ಮೀರಿ ನಡೆದುಕೊಳ್ಳಬಾರದು ಎಂದು ಶಾಸಕ ತನ್ವೀರ್‌ ಸೇಠ್‌ ಸಲಹೆ ನೀಡಿದ್ದಾರೆ. ರಾಜ್ಯ…

1 hour ago

ತುರ್ತು ಸಭೆ: ಹಾವಳಿ ನೀಡುತ್ತಿರುವ ಪುಂಡಾನೆಗಳ ಸೆರೆಗೆ ಈಶ್ವರ್‌ ಖಂಡ್ರೆ

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಮತ್ತು ಅರೇಹಳ್ಳಿ ಸುತ್ತ-ಮುತ್ತ ಜನರಿಗೆ ಹಾವಳಿ ನೀಡುತ್ತಿರುವ 3 ಪುಂಡಾನೆಗಳನ್ನು ಪತ್ತೆಹಚ್ಚಲಾಗಿದೆ.…

1 hour ago