Andolana originals

ಯರಿಯೂರು ಸೀಮೆಯ ಹಾಡುಗಾತಿ ಮಾಳಗರಸಮ್ಮ

• ಅಕ್ಷತಾ ಯಳಂದೂರು

ಮಾಳಗರಸಮ್ಮ ಅವರಿಗೆ ಹಾಡೆಂದರೆ ‘ಶಿವನ ಸ್ವರ’. ಇವರು ಚಾಮರಾಜನಗರ ಜಿಲ್ಲೆಯ ಯಳಂದೂರಿನ ಯರಿಯೂರು ಸೀಮೆಯ ಜಾನಪದ ಹಾಡುಗಾರ್ತಿ. ಮಂಟೇಸ್ವಾಮಿ, ಮಲೆಮಹದೇಶರ, ಬಿಳಿಗಿರಿರಂಗ ಸೇರಿದಂತೆ ಬಹುತೇಕ ಜಾನಪದ ಕಥನ ಗೀತೆಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ತನ್ನ ಆಶು ಕವಿತ್ವದ ಮೂಲಕ ಅನೇಕ ಜಾನಪದ ಹಾಡುಗಳು ಮತ್ತು ತತ್ವಪದಗಳನ್ನು ತತ್‌ಕ್ಷಣಕ್ಕೆ ಕಟ್ಟಿ, ರಾಗ ತುಂಬಿ ಹಾಡುತ್ತಾರೆ. ಅಪ್ಪಟ ಹಳ್ಳಿ ಸೊಗಡಿನ ಮಾತು, ಬದುಕಿನ ಕಥೆಗಳನ್ನು ಬೆರಗುಹುಟ್ಟಿಸುವಂತೆ ಹೇಳುತ್ತಾರೆ.

ಮಾಳಗರಸಮ್ಮ ಅವರ ತಂದೆ ದಾಸಯ್ಯ ಮತ್ತವರ ತಂದೆ ರಂಗಯ್ಯ ಅವರೂ ಕೂಡ ಬಿಳಿಗಿರಿರಂಗನ ದಾಸ ಒಕ್ಕಲಾಗಿ, ಊರೂರು ಭಿಕ್ಷೆ ಬೇಡುತ್ತಾ, ಬದುಕು ಕಟ್ಟಿಕೊಂಡವರು. ಯಳಂದೂರಿನಲ್ಲಿದ್ದ ಕರೆಂಟು ಮನೆಯಲ್ಲಿ ಅನೇಕ ವರ್ಷಗಳ ಕಾಲ ಜೀತಕ್ಕಿದ್ದವರು. ಮಾಳಗರಸಮ್ಮ ಎಂಬುದು ಕುಲ ದೇವತೆ ಹೆಸರು. ದಾಸ ಒಕ್ಕಲರಿಗೆ ಆರಾಧ್ಯ ದೇವತೆ, ಮಾಳಿಗೆಯ ಮೇಲಿರುವ ಮಾಳಗರಸಮ್ಮ. ಕುಟುಂಬಕ್ಕೆ ಮೊದಲಿಗಳಾಗಿ ಹುಟ್ಟಿದ ಇವರಿಗೆ ಮಾಳಗರಸಮ್ಮ ಎಂದು ಹೆಸರಿಟ್ಟರು.

ತಂದೆ ದಾಸಯ್ಯ ಅವರು ತೀರಿಹೋದಾಗ ಇವರಿಗೆ ಕೇವಲ ಹದಿನೈದು ವರ್ಷ. ಹಿರಿಯಕ್ಕಳಾದ ಮಾಳಗರಸಮ್ಮ ಅವರ ಹೆಗಲಿಗೆ ಇಡೀ ಕುಟುಂಬದ ಜವಾಬ್ದಾರಿಬಿತ್ತು. ಊಟಕ್ಕಾಗಿ ಪಟ್ಟ ಪರದಾಟವನ್ನು ಹೇಳುವಾಗ ಮಾಳಗರಸಮ್ಮ ಅವರ ಕಣ್ಣು ತುಂಬಿತ್ತು. ಜೀವನ ಕಷ್ಟವಾಗಿತ್ತಾದರೂ, ಸಾಗಿಸುವುದು ಅನಿವಾರ್ಯವಾಗಿತ್ತು. ಇಂತಹ ಹಸಿವಿನ ಪರಿಸರ, ಸಾಂಸಾರಿಕ ಒತ್ತಡದಲ್ಲಿದ್ದರೂ ಮಾಳಗರಸಮ್ಮ ಅವರು ಹಾಡುಗಾರ್ತಿಯಾಗಿದ್ದು ಅಚ್ಚರಿಯೇ ಸರಿ.

ಊರಿನವರೆಲ್ಲ ಹಾಡೆಂದು ಎಷ್ಟು ಹೇಳಿದರೂ ದೇವರ ಹಾಡುಗಳನ್ನು ಹೇಗೆ ಹಾಡಬೇಕೆಂದು ತಿಳಿಯದೆ, ಧೈರ್ಯ ಸಾಲದೇ ಸುಮ್ಮನಿದ್ದರು. ಒಮ್ಮೆ ಹೀಗೆ ಮಲಗಿರುವಾಗ, ಬಿಳಿಗಿರಿರಂಗ ಕನಸಿನಲ್ಲಿ ಕಂಡು, ‘ಹಾಡು ನನ್ ಕಂದ. ನಿನ್ ಹೃದಯದಲ್ಲಿ ನಾನಿರ್ತೀನಿ. ಹೆದ್ರಕಬೇಡ, ನಾನಿದ್ದೆ’ ಎಂದದ್ದು ಹಾಡಿಗೆ ಪ್ರೇರಣೆ ಆಯಿತು. ದೂರದಲ್ಲಿ ಹೆಂಗಸೊಬ್ಬಳು ಹಾಡುತ್ತಿದ್ದ ಜಾನಪದ ಹಾಡುಗಳು ಕಿವಿಗೆ ಬೀಳುತ್ತಿತ್ತು. ಅದನ್ನು ಕೇಳುತ್ತಿದ್ದಂತೆ ತಾನೂ ಹಾಡಬೇಕೆಂಬ ಒತ್ತಾಸೆ ಮೂಡಿತು. ಎಷ್ಟರಮಟ್ಟಿಗೆಂದರೆ ಮನೆ ಕೆಲಸ ಮಾಡುತ್ತಿರುವಾಗೆಲ್ಲ ತಾನೇಕೆ ಹಾಡಬಾರದೆಂದು ಮತ್ತೆ ಮತ್ತೆ ಅನಿಸುತ್ತಿತ್ತು.

ಪದ ಕಲಿಯಲೆಂದು ಹೊರಟರೆ ಮಾಳಗರಸಮ್ಮ ಅವರಿಗೆ ಹೇಳಿಕೊಡುವವರು ಯಾರು? ಇವರು ಎದುರು ಬಂದ ತಕ್ಷಣವೇ ಪದ ಹಾಡುತ್ತಿದ್ದವರೆಲ್ಲ ಸುಮ್ಮನಾಗುತ್ತಿದ್ದರು. ತಮ್ಮ ಕಿವಿ ಮೇಲೆ ಬಿದ್ದ ಪದಗಳನ್ನು ಗುನುಗುತ್ತಾ ಹಾಡುವುದೇ
ನಿತ್ಯದ ಅಭ್ಯಾಸವಾಯಿತು. ಹಸು ಮೇಯಿಸುವುದಕ್ಕೆಂದು ಹೋದಾಗೆಲ್ಲ ತಮಗೆ ತೋಚಿದಂತೆ ಹಾಡುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ಸೋದರಮಾವ ಇವರ ಬಳಿ ಬಂದು ‘ನನ್ನ ಮಗಳ ಮದುವೆಯಲ್ಲಿ ನೀನೆ ಸೋಬಾನೆ ಪದ ಹಾಡಬೇಕು’ ಎಂದರು. ಹದಿನೈದು ವರ್ಷದ ಹುಡುಗಿಯಾದ ಮಾಳಗರಸಮ್ಮ ಅವರಿಗೆ ತೀರದ ಸಂಭ್ರಮ.

ಇದಾದ ಮೇಲೆ ನಾಟಿಗೆಂದು ಹೋಗುತ್ತಿರುವಾಗ ದಾರಿಯಲ್ಲಿ ಊರಿನ ಕೆಲವರು ಸಿಕ್ಕಿ, ‘ದನಿ ಚಂದಾಗದೆ, ರಾಗ ಬತ್ತದೆ. ದೇವ ಹಾಡುಗಳನ್ ಹಾಡಮ್ಮಾ’ ಎಂದರು. ಪ್ರಯತ್ನಿಸೋಣ ಎಂದು ತನ್ನಿಷ್ಟದ ಬಿಳಿಗಿರಿ ರಂಗಸ್ವಾಮಿಯ ಕುರಿತು ಪದ ಕಟ್ಟಿ ಹಾಡೇಬಿಟ್ಟರು! ಇವತ್ತಿಗೂ ಯಾರೇ ಕರೆಯಲಿ, ಸಂತೋಷದಲ್ಲಿ ಹೋಗಿ ಪದ ಹಾಡಿಬರುತ್ತಾರೆ. ಸೋಬಾನೆ ಪದ, ಸೀಮಂತ ಪದ, ಜೋಗುಳ ಪದ ಸೇರಿದಂತೆ ಇವರ ಕಂಠದಲ್ಲಿ ಅನೇಕ ಹಾಡುಗಳು ಜೀವಂತವಾಗಿವೆ.

ಮಾಳಗರಸಮ್ಮ ಅವರು ಮನೆಮಕ್ಕಳಲ್ಲಿ ಹಿರಿಯರು. ಒಡಹುಟ್ಟಿದ ಮೂವರು ತಂಗಿಯರಿಗೆ ಇವರು ಅಮ್ಮನಂತೆ. ಹುಟ್ಟಿದ ದಿನದ ಬಗ್ಗೆ ತಿಳಿದಿಲ್ಲ ಆದರೆ, ತಮ್ಮ ವಯಸ್ಸು 75 ಆಗಿದೆ ಎನ್ನುತ್ತಾರೆ. ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡ ಕುಟುಂಬ, ಮದುವೆಯ ವಯಸ್ಸು ಸಮೀಪಿಸುತ್ತಿದ್ದಂತೆ ಮನೆಮಂದಿಯೆಲ್ಲ ಮದುವೆಯಾಗು ಎಂದು ಒತ್ತಾಯಿಸಿದರು. ಏನು ಹೇಳಿದರೂ ತಾನು ಮಾತ್ರ ಮದುವೆಯಾಗಲು ಒಲ್ಲೆ ಎಂದ ದಿಟ್ಟೆ.

ತನ್ನ ಎರಡನೇ ತಂಗಿಯ ಮಗನನ್ನು ತನ್ನ ಸ್ವಂತ ಮಗನಾಗಿ ಬೆಳೆಸಿದ್ದರು. ಅನಿರೀಕ್ಷಿತವಾಗಿ ಆತನನ್ನು ಕಳೆದುಕೊಂಡ ಮೇಲೆ ಬದುಕು ಶೂನ್ಯವೆನಿಸಿತು. ಅಕ್ಷರ ತಿಳಿಯದ ಮಾಳಗರಸಮ್ಮ ಅವರು ಪದ ಹಾಡುತ್ತಿದ್ದರೆ ಈ ಮಗ ಅದನ್ನು ಬರೆಯುತ್ತಿದ್ದ. ತಾವೆಲ್ಲಿಗೇ ಹೋಗಬೇಕಾಗಿದ್ದರೂ ಆತ ಜೊತೆಯಾಗುತ್ತಿದ್ದ. ಜೀವವೇ ಆಗಿದ್ದ ಮಗ ತಮ್ಮನ್ನು ಅಗಲಿದ ದುಃಖವನ್ನು ಮನಸ್ಸು ಅರಗಿಸಿಕೊಂಡು ಸಮಸ್ಥಿತರಾಗಲು ಬಹಳಷ್ಟು ಸಮಯ ತೆಗೆದುಕೊಂಡರು. ತನ್ನೊಳಗಿನ ಪದಗಳನ್ನು ಹಾಡಾಗಿಸಬೇಕು ಎಂಬ ಛಲತೊಟ್ಟು, ಈಗ ಅದೇ ಕಾಯಕದಲ್ಲಿದ್ದಾರೆ. ಜೊತೆಗೆ, ಆಕಾಶವಾಣಿಯ ಧ್ವನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಾನಪದ ಕಲಾವಿದರಾಗಿದ್ದಾರೆ.

ಸಾಹಿತ್ಯದ ಯಾವ ತತ್ವಪದಕಾರರನ್ನೂ ಇವರು ಓದಿಕೊಂಡಿಲ್ಲ, ಹೆಸರುಗಳನ್ನೂ ತಿಳಿದುಕೊಂಡಿಲ್ಲ. ಆದರೆ, ಮಾಳಗರಸಮ್ಮ ಅವರು ತಮಗೆ ತಿಳಿದಂತೆ ತತ್ವಪದಗಳನ್ನು ಕಟ್ಟುತ್ತಾರೆ; ಹಾಡಾಗಿಸುತ್ತಾರೆ. ನೆನಪಿನ ಶಕ್ತಿಯ ಹಿಂದಿರುವ ಗುಟ್ಟೇನು ಎಂದು ಕೇಳಿದರೆ, ಪದಗಳೆಲ್ಲ ಬಾಯಿಯಲ್ಲಿದ್ದರೆ ಮರೆತುಹೋಗುತ್ತಿತ್ತು. ಆದರೆ ಶಿವ ಅದನ್ನೆಲ್ಲ ಮನಸ್ಸಿನಲ್ಲಿರಿಸಿದ್ದಾನೆ ಎನ್ನುತ್ತಾ ತೃಪ್ತರಾಗುತ್ತಾರೆ.

ಆಂದೋಲನ ಡೆಸ್ಕ್

Recent Posts

ರೈತರ ನಿದ್ದೆಗೆಡಿಸಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಕಿಕ್ಕೇರಿ: ಹೋಬಳಿಯ ಗೊಲ್ಲರಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ರೈತರಿಗೆ ಆತಂಕ ಸೃಷ್ಟಿಸಿ ಜಾನುವಾರುಗಳು ಹಾಗೂ ಸಾಕು…

3 hours ago

ಶಿವಶಂಕರಪ್ಪ ಸಾಹುಕಾರ್‌ಗೆ ಹೊಸ ಕಾನೂನು ಸಂಕಷ್ಟ

ಬೆಂಗಳೂರು: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಈ ಹೊಸ ಕಾನೂನು ಸಂಕಷ್ಟ ಎದುರಾಗಿದೆ.…

6 hours ago

ಗೋಪಾಲಸ್ವಾಮಿ ಬೆಟ್ಟ: ಕೊನೆಗೂ ಭಕ್ತರಿಗೆ ಸಿಕ್ಕಿತು ನೆರಳು!

ಬೆಟ್ಟದಲ್ಲಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದ ಶಾಸಕ; ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದ ‘ಆಂದೋಲನ’ ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ…

9 hours ago

ಓದುಗರ ಪತ್ರ: ಅಧ್ಯಾತ್ಮ ದುರಂತ!

ಅಧ್ಯಾತ್ಮ ದುರಂತ! ಲೌಕಿಕ ಬದುಕಿನ ಆಶೆ ಆಮಿಷಗಳ ಸೆರೆಮನೆಯಿಂದ ಬಿಡಿಸಿಕೊಳುವ ಸನ್ಮಾರ್ಗವನು ಅಧ್ಯಾತ್ಮವೆನ್ನುವರು ಪ್ರಾಜ್ಞರು! ಆದರೀಗ ಲೌಕಿಕದ ಆಶೆ ಆಮಿಷಗಳ…

13 hours ago

ಓದುಗರ ಪತ್ರ: ರಸ್ತೆ, ಉದ್ಯಾನಕ್ಕೆ ಎಸ್. ಜಾನಕಿ ಅವರ ಹೆಸರಿಡಿ

ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್.ಜಾನಕಿ ಅವರ ಸಾಧನೆ ಎಂದೆಂದಿಗೂ ಅಜರಾಮರ. ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ಚಿರಸ್ಥಾಯಿಯಾಗಿಸಲು…

13 hours ago

ಓದುಗರ ಪತ್ರ: ಚಾಮರಾಜಪುರಂನಲ್ಲಿ ರೈಲುಗಳ ನಿಲುಗಡೆಯಾಗಲಿ

ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ - ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪…

13 hours ago