Andolana originals

ಆಲದ ಮರ ಹುಡುಕುತ್ತಾ ಮೊಮ್ಮಗಳೊಂದಿಗೆ

• ಎಚ್.ಜೆ.ಸರಸ್ವತಿ, ನಿವೃತ್ತ ಪ್ರಾಧ್ಯಾಪಕಿ

ಆವತ್ತು ಮೊಮ್ಮಗಳು ಸಿರಿಯೊಂದಿಗೆ ಮಾನಸ ಗಂಗೋತ್ರಿಯ ಆಲದ ಮರದ ಬುಡದಲ್ಲಿದ್ದೆ. ಅಜ್ಜಿ ಇಲ್ಲಿ ಆಲದ ಮರವನ್ನು ಯಾರು ಬೆಳೆಸಿದರು?’ ಎಂದು ಸಿರಿ ಪ್ರಶ್ನಿಸಿದಳು.

ನೂರಾರು ವರ್ಷಗಳ ಹಿಂದೆ ಹಕ್ಕಿ ಪಕ್ಷಿಗಳು ಆಲದ ಹಣ್ಣನ್ನು ತಂದು ಇಲ್ಲೆಲ್ಲೋ ಯಾವುದೋ ಮರದ ಮೇಲೆ ಬೀಳಿಸಿರಬೇಕು. ಆ ಬೀಜ ಮೊಳೆತು ಚಿಗುರಿ ಬೆಳೆದು ಬಿಳಿಲುಗಳನ್ನು ಕೆಳಗೆ ಬಿಟ್ಟು ಮೂಲ ಮರವನ್ನೇ ನಾಶಮಾಡಿವೆ. ಆಲದ ಮರ ನೂರಾರು ವರ್ಷ ಹೀಗೆ ಬಿಳಿಲುಗಳನ್ನು ಭೂಮಿಯ ಕಡೆಗೆ ಇಳಿಸಿಕೊಳ್ಳುತ್ತಾ ಬೆಳೆಯುತ್ತಲೇ ಇರುತ್ತದೆ. ಸಾವಿರಾರು ಪಕ್ಷಿಗಳು ಇಂಥ ಮರಗಳ ಮೇಲೆ ಗೂಡು ಕಟ್ಟಿಕೊಂಡು ವಾಸಮಾಡುತ್ತವೆ. ಆನೆಯಂಥ ದೊಡ್ಡ ಪ್ರಾಣಿಗಳೂ ಆಲದೆಲೆಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ ಎಂದೆ.

‘ಹಾಗಾದರೆ ಆಲದ ಮರವನ್ನು ಯಾರು ಬೆಳೆಸಕಾಗಲ್ವಾ?’ ಸಿರಿಯ ಮರು ಪ್ರಶ್ನೆ. ತಿಮ್ಮಕ್ಕನ ಕತೆ ಹೇಳಿದೆ. ಈ ತಿಮ್ಮಕ್ಕ ಮಹಾವೃಕ್ಷಗಳ ತಾಯಿ. ಅಲ್ಲಿ ಗೂಡು ಕಟ್ಟಿ ಬದುಕುವ ಲಕ್ಷಾಂತರ ಹಕ್ಕಿಗಳಿಗೆ ಅಜ್ಜಿ ಎಂದೆ. ‘ಬೇರೆ ಎಲ್ಲಿ ಇಂಥ ಆಲದ ಮರ ಇದೆ?” ಸಿರಿಯ ಮನಸ್ಸೆಲ್ಲ ಆಲದ ಸುತ್ತ ಗಿರಿಕಿ ಹೊಡೆಯತೊಡಗಿತು. ಕೊಲ್ಕತ್ತಾ ಜಗದೀಶ್ ಚಂದ್ರಬೋಸ್ ನ್ಯಾಷನಲ್ ಪಾರ್ಕಿನಲ್ಲಿರುವ ಕಿ.ಮೀ. ಗಳಷ್ಟು ವಿಸ್ತಾರವಾಗಿರುವ ಆಲದ ಮರದ ಕತೆ ಹೇಳುತ್ತಾ, ಬೆಂಗಳೂರಿನ ಸಮೀಪವಿರುವ ದೊಡ್ಡ ಆಲದಮರವನ್ನೂ ಪರಿಚಯಿಸಿದೆ. ಗಂಗೋತ್ರಿಯಿಂದ ಹೊರಟು ಕುಕ್ಕರಹಳ್ಳಿಯ ಕೆರೆಯ ಏರಿಯ ತುದಿಯಲ್ಲಿರುವ ಆಲದ ಮರವನ್ನು ನೋಡಿ, ಮೈಸೂರು ವಿಶ್ವವಿದ್ಯಾನಿಲಯದ ಕಚೇರಿ ಪಕ್ಕದಲ್ಲಿರುವ ಆಲದ ಮರದ ಕೆಳಗೂ ಹತ್ತು ನಿಮಿಷ ನಿಂತು ಬಂದೆವು. ವಾಪಸು ಬರುವಾಗ ಈಜುಕೊಳದ ಬಳಿ ಮತ್ತೊಂದು ಆಲದ ಮರ, ಮರದ ಕೆಳಗೆ ಕಾರನ್ನು ನಿಲ್ಲಿಸಿ ಸಿರಿಯನ್ನು ಬಿಳಿಲುಗಳನ್ನು ಹಿಡಿದು ಉಯ್ಯಾಲೆಯಾಡಿಸಿದೆ. ಸಂಕೋಚ ಬಿಟ್ಟು ನಾನೂ ಉಯ್ಯಾಲೆಯಾಡಿದೆ.

ಮೇ ತಿಂಗಳ ಕೊನೆಯ ದಿನ, ರಜೆ ಮುಗಿದು ಸಿರಿ ಬೆಂಗಳೂರಿಗೆ ಹೋಗಲೇಬೇಕು. ಮೈಸೂರು ಹೊರವಲಯವನ್ನು ದಾಟುವ ತನಕ ನನ್ನ ತೊಡೆಯ ಮೇಲೆ ಮಲಗಿದ್ದ ಸಿರಿ ದಿಗ್ಗನೆದ್ದು ಕುಳಿತು ‘ಅಜ್ಜಿ ಇಲ್ಲಿಂದ ಬೆಂಗಳೂರು ತಲುಪುವ ತನಕ ಎಷ್ಟು ಆಲದ ಮರ ಸಿಗುತ್ತವೆಂದು ಲೆಕ್ಕ ಹಾಕೋಣ’ ಎಂದು ಕಿಟಕಿಗೆ ಕಣ್ಣಾದಳು. ಕೆಂಗೇರಿಯವರೆಗೆ ನಮ್ಮ ಲೆಕ್ಕಕ್ಕೆ ಸಿಕ್ಕಿದ್ದು ಕೇವಲ ಎಂಟು ಮರ, ಸಿರಿಯ ಪುಟ್ಟ ತಲೆ ಆತಂಕಕ್ಕೆ ಒಳಗಾಯಿತು. ಮೈಸೂರಿನಲ್ಲಿ ಅಷ್ಟೊಂದು ಮರ ನೋಡಿದ್ವಿ. ಇದ್ಯಾಕೆ ಹೀಗೆ? ಸಿರಿ ಗಾಬರಿಯಾದಳು. ಹೊಲ, ಗದ್ದೆ, ತೋಟಗಳಿ ಗಾಗಿ, ಮನೆಕಟ್ಟಲು ರಸ್ತೆ ಮಾಡಲು, ಶಾಲೆ, ಕಾಲೇಜು, ಕಚೇರಿ, ಆಸ್ಪತ್ರೆ ಕಟ್ಟಲು ಜಾಗಬೇಕಲ್ಲಾ ಅದಕ್ಕೆ ಮರ ಕತ್ತರಿಸಿದ್ದಾರೆ ಎಂದೆ.

ಸಿರಿ ಒಂದು ಕ್ಷಣ ಮೌನವಾದಳು. ಅಜ್ಜಿ ಒಂದು ಐಡಿಯಾ’ ಎಂದಳು (ಕಾರ್ಟೂನ್ ನೋಡುವ ಮಕ್ಕಳ ಮಾತು ಪ್ರಾರಂಭವಾಗುವುದೇ ‘ಒಂದು ಐಡಿಯಾ’ದಿಂದ) ಒಂದು ಆಲದ ಮರ ಬೆಂಗಳೂರಿನ ಮಧ್ಯದಲ್ಲಿ ಹುಟ್ಟಬೇಕು. ಅದು ಒಂದೇ ವರ್ಷದಲ್ಲಿ ಇಲ್ಲಿರುವ ಎಲ್ಲ ಕಟ್ಟಡಗಳನ್ನು ಬೀಳಿಸಿ ಇಡೀ ಬೆಂಗಳೂರು ಒಂದು ಆಲದ ಮರವಾಗಬೇಕು’ ಎಂದು ಕಣ್ಣರಳಿಸುತ್ತ ಕಾರಿನ ಸೀಟಿನಿಂದ ಕೆಳಗೆ ನೆಗೆದು ಕಲ್ಪನಾ ಲೋಕದಲ್ಲಿ ವಿಹರಿಸಿದಳು.

ಸಿರಿಗೆ ತನ್ನ ಮನೆಯೆದುರು ಆಲದ ಮರವಿರುವುದಕ್ಕೆ ಸಂತಸವಾಗಿತ್ತು. ‘ಅಜ್ಜಿ’ ಎನ್ನುತ್ತಾ ನನ್ನ ಕೊರಳಿಗೆ ಎರಡೂ ಕೈಗಳನ್ನು ಬಳಸುತ್ತ ಕೆನ್ನೆಗೆ ಕೆನ್ನೆಯೊತ್ತಿ ನೀವು ಪ್ರಾಮಿಸ್ ಮಾಡಬೇಕು ಏನೆಂದರೆ ಕೊಲ್ಕತ್ತಾಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ಅಲ್ಲಿರುವ ಆಲದ ಮರ ತೋರಿಸಬೇಕು. ನನಗೆ ಒಂದು ಆಲದ ಮರ ಬೆಳೆಸಕ್ಕೆ ಜಾಗ ಕೊಡಿಸಬೇಕು. ಆಮೇಲೆ, ಆಮೇಲೆ ನಾವು ಮೈಸೂರಿನಲ್ಲಿ ನೋಡಿದ್ದೀವಲ್ಲಾ ‘ಆಲದ ಮರಗಳು’ ಅವುಗಳನ್ನು
ಕತ್ತರಿಸದಂತೆ ನೋಡಿಕೋಬೇಕು ಪ್ರಾಮಿಸ್ ಮಾಡ್ತೀರಲ್ಲಾ ಎಂದು ಕೈಮೇಲೆ ಕೈ ಹಾಕಿ ಕೇಳಿದಳು. ಮೊದಲೆರಡನ್ನು ಹೇಗೋ ನೆರವೇರಿಸಬಹುದು, ಮೂರನೆಯದು!

ಕಡೆಯದಾಗಿ ಒಂದು ಮಾತು. ಈ ಸಹಸ್ರಮಾನದ ಮಿಲೇನಿಯಲ್ಸ್ ನಮಗಿಂತ ಮುಂದೆ ಹೋಗಿದ್ದಾರೆ ಎಂಬುದು ಒಂದು ಭ್ರಮೆ. ಅವರು ಮುಂದಿರುವಂತೆ ಕಾಣಿಸುತ್ತಿರುವುದು ಅವರಿಗೆ ಎಟುಕುತ್ತಿರುವ ತಂತ್ರಜ್ಞಾನ ಮತ್ತು ಕೌಶಲಗಳಿಂದ ಮಾತ್ರ. ಕೌಶಲಗಳಿದ್ದರೂ ಚಿಂತೆಯಿಲ್ಲ, ತಾಂತ್ರಿಕತೆಗೆ ಕೊಂಚ ಕಡಿವಾಣ ಬೇಕೆನಿಸುತ್ತದೆ. ನನಗೆ… ಶ್ರಮವಿಲ್ಲದೆ ಪಡೆಯುವ ಏನೇ ಆದರೂ ಅಪಾಯಕಾರಿ.

ಆಂದೋಲನ ಡೆಸ್ಕ್

Recent Posts

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ, ಟ್ರೋಫಿ

ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನೀಡಲು ಸಲಹೆ; ಸ್ಮರಣಿಕೆ, ಟ್ರೋಫಿ ಬದಲು ಸಸಿ, ಪುಸ್ತಕ ವಿತರಿಸಲು ಸುತ್ತೋಲೆ ಮೈಸೂರು: ರಾಜ್ಯ ಸರ್ಕಾರ…

27 mins ago

ಡಿ.26ರಿಂದ ಕೊಡವ ಹಾಕಿ ಚಾಂಪಿಯನ್ ಟ್ರೋಫಿ

ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…

3 hours ago

ಡಿ.21ರಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಪ್ರತಿದಿನ ರಾತ್ರಿ ಅರಮನೆಗೆ ದೀಪಾಲಂಕಾರ ಹೂವಿನಿಂದ ಶೃಂಗೇರಿ ದೇವಸ್ಥಾನದ ಮಾದರಿ ನಿರ್ಮಾಣ ಪುಷ್ಪ ಪ್ರಿಯರ ಕಣ್ಮನ ಸೆಳೆಯಲಿರುವ ವಿವಿಧ ಮಾದರಿಗಳು…

3 hours ago

ಪುಕ್ಕಟೆ ಪಾರ್ಕಿಂಗ್ ಮಾಡಬೇಕೆ? ಇಲ್ಲಿಗೆ ಬನ್ನಿ!

ಎಸ್.ಎಸ್.ಭಟ್ ಹಾಗಂತ ಇಲ್ಲಿ ಫಲಕ ಹಾಕಿಲ್ಲ, ವಾಹನ ನಿಲ್ಲುವುದು ತಪ್ಪುತ್ತಿಲ್ಲ; ಇದು ನಂಜನಗೂಡಿನ ತಾಯಿ-ಮಕ್ಕಳ ಆಸ್ಪತ್ರೆ ಆವರಣದ ಸ್ಥಿತಿ ನಂಜನಗೂಡು:…

3 hours ago

ಮನ್ರೆಗಾ ಓಕೆ… ವಿಬಿ ಜೀ ರಾಮ್ ಜೀ ಯಾಕೆ?

ಮೈಸೂರು: ಕೇಂದ್ರದ ಯುಪಿಎ ಸರ್ಕಾರ ೨೦೦೫ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಲ್ಲಿ ಜೀವನೋಪಾಯಕ್ಕೆ ಭದ್ರತೆ…

3 hours ago