Bike racing: Police department ready for tough action
ಎಚ್.ಎಸ್.ದಿನೇಶ್ಕುಮಾರ್
ಯುವಕರ ಹುಚ್ಚಾಟಕ್ಕೆ ಕಡಿವಾಣ ಹಾಕಲು ಐವರು ಪೊಲೀಸರ ತಂಡ
ಆಯಾ ಠಾಣಾ ವ್ಯಾಪ್ತಿಯಲ್ಲಿ ಎಎಸ್ಐ ನೇತೃತ್ವದ ತಂಡದಿಂದ ಕಣ್ಗಾವಲು
ಮೈಸೂರು: ಬೈಕ್ ರೇಸಿಂಗ್ ಪ್ರಕರಣದಲ್ಲಿ ತನ್ನದಲ್ಲದ ತಪ್ಪಿಗೆ ಬಲಿಯಾದ ಕಾರ್ತಿಕ್ ಎಂಬ ಯುವಕನ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತರು ನಗರದ ವರ್ತುಲ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ವ್ಹೀಲಿಂಗ್, ರೇಸಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ನಗರದ ಎನ್.ಆರ್.ಸಂಚಾರ, ಸಿದ್ದಾರ್ಥ ಸಂಚಾರ, ಕೃಷ್ಣರಾಜ ಹಾಗೂ ವಿವಿ ಮೊಹಲ್ಲಾ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಪೊಲೀಸರು ಪ್ರಮುಖ ರಸ್ತೆಗಳು ಹಾಗೂ ವರ್ತುಲ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವವರು, ರೇಸಿಂಗ್ ಮಾಡುವವರ ಹೆಡೆಮುರಿ ಕಟ್ಟಲಿದ್ದಾರೆ.
ಸೋಮವಾರ ಅಧಿಕಾರಿಗಳ ಸಭೆ ನಡೆಸಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್, ಭಾನುವಾರ ಮುಂಜಾನೆ ನಡೆದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೆಚ್ಚಾಗಿ ರಾತ್ರಿ ವೇಳೆ ಯುವಕರು ಬೈಕ್ ವ್ಹೀಲಿಂಗ್ ಹಾಗೂ ರೇಸಿಂಗ್ ನಡೆಸುತ್ತಾರೆ.
ಕೆಲವೊಮ್ಮೆ ಹಗಲಿನಲ್ಲಿ ಕೂಡ ಪ್ರಮುಖ ರಸ್ತೆಗಳಲ್ಲಿ ಯುವಕರು ವ್ಹೀಲಿಂಗ್ ನಡೆಸಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದುಂಟು.
ಹೀಗಾಗಿ ಆಯುಕ್ತರು ಇಂತಹವರನ್ನು ಹದ್ದುಬಸ್ತಿ ನಲ್ಲಿಡಲು ಪೊಲೀಸರ ತಂಡ ರಚನೆ ಮಾಡಿದ್ದಾರೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಓರ್ವ ಎಎಸ್ಐ ನೇತೃತ್ವದಲ್ಲಿ ಐವರು ಪೊಲೀಸರ ತಂಡವನ್ನು ರಚನೆ ಮಾಡಿದ್ದಾರೆ. ನಿತ್ಯ ಎರಡು ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಒಂದು ತಂಡ ಹಾಗೂ ರಾತ್ರಿ ವೇಳೆ ಒಂದು ತಂಡ ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ನಿಗಾ ವಹಿಸಲಿದೆ. ತಪ್ಪು ಮಾಡಿದವರನ್ನು ಯಾವುದೇ ಮುಲಾಜಿಲ್ಲದೆ ಬಂಧಿಸಲಿದೆ.
ಕರ್ಕಶ ಶಬ್ದ: ಇದೇ ವೇಳೆ ನಗರದಾದ್ಯಂತ ಕಳೆದ ಆರು ತಿಂಗಳ ಅವಧಿಯಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿಕೊಂಡಿದ್ದ ೩೨೪ ಬೈಕ್ಗಳನ್ನು ವಶಕ್ಕೆ ಪಡೆದು ಸೈಲೆನ್ಸರ್ಗಳನ್ನು ನಾಶಪಡಿಸಲಾಗಿದೆ. ಈ ಕಾರ್ಯಾಚರಣೆ ಸೋಮವಾರದಿಂದ ಪುನಾರಂಭವಾಗಲಿದೆ.
೨೦ ಪ್ರಕರಣಗಳು: ನಗರದ ಎನ್.ಆರ್., ಸಿದ್ದಾರ್ಥ, ಕೆ.ಆರ್. ಹಾಗೂ ವಿವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದ ಆರು ತಿಂಗಳುಗಳ ಅವಧಿಯಲ್ಲಿ ವ್ಹೀಲಿಂಗ್ ಹಾಗೂ ರೇಸಿಂಗ್ನಲ್ಲಿ ತೊಡಗಿದ್ದ ೨೦ ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ಕೂಡ ಸೋಮವಾರದಿಂದ ವೇಗ ಪಡೆದುಕೊಳ್ಳಲಿದೆ.
ಜಾಗೃತಿ ಕಾರ್ಯಕ್ರಮ: ಇದೇ ವೇಳೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಮಕ್ಕಳಿಗೆ ಬೈಕ್ ಕೊಡಿಸುವ ಮುನ್ನ ಜಾಗೃತರಾಗಿರುವಂತೆ ಜನರಿಗೆ ತಿಳಿಹೇಳುವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಆಯುಕ್ತರು ಠಾಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
” ಭಾನುವಾರ ನಡೆದ ಅಪಘಾತ ಪ್ರಕರಣದಿಂದ ನೋವಾಗಿದೆ. ಯುವಕನೊಬ್ಬ ತನ್ನದಲ್ಲದ ತಪ್ಪಿಗೆ ಪ್ರಾಣ ತೆತ್ತಿದ್ದಾನೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸಲು ಇಲಾಖೆ ಮುಂದಾಗಿದೆ. ಇದಕ್ಕಾಗಿ ಪೊಲೀಸರ ತಂಡವನ್ನು ರಚನೆ ಮಾಡಲಾಗಿದ್ದು, ಸೋಮವಾರದಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ. ಈ ಸಂಬಂಧ ಪೋಷಕರು ಕೂಡ ಎಚ್ಚರಿಕೆ ವಹಿಸಬೇಕು. ಚಿಕ್ಕ ವಯಸ್ಸಿನ ಮಕ್ಕಳಿಗೆ ದುಬಾರಿ ಬೈಕ್ ಕೊಡಿಸುವ ಮುನ್ನ ಅದರ ಬಳಕೆ ಬಗ್ಗೆ ಅವರಿಗೆ ತಿಳಿ ಹೇಳಬೇಕು. ಹೀಗಾದಾಗ ಮಕ್ಕಳು ಕೂಡ ಎಚ್ಚರಿಕೆಯಿಂದ ಇರುತ್ತಾರೆ.”
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…