ಕೆ.ಬಿ.ರಮೇಶನಾಯಕ
ಮೈಸೂರು: ದೇಶದಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಸೇವೆ ವ್ಯತ್ಯಯಗೊಂಡಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೂ ಅದರ ಬಿಸಿ ತಟ್ಟಿದೆ. ಈ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ಸಂಸ್ಥೆಯ ಎರಡೂ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ತಮಿಳುನಾಡು, ಕೇರಳ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿ ರುವ ಮೈಸೂರು ವಿಮಾನ ನಿಲ್ದಾಣದಿಂದ ಪ್ರಮುಖ ನಗರಗಳಿಗೆ ನೇರ ಸೇವೆಯನ್ನು ವಿಸ್ತರಿಸುವ ಪ್ರಯತ್ನ ನಡೆಯುತ್ತಿರುವಾಗಲೇ ಇಂಡಿಗೋ ವಿಮಾನ ಸಂಸ್ಥೆಯು ಎರಡು ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸಿರುವುದರಿಂದ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ನಾನಾ ಕಾರಣಗಳಿಂದಾಗಿ ಸಂಸ್ಥೆಯು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮೈಸೂರಿನಿಂದ ಹಾರಾಟ ಮುಂದುವರಿಸುವುದೋ ಅಥವಾ ನಿಲ್ಲಿಸುವುದೋ ಎಂಬ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.
ಈ ನಿಲ್ದಾಣದಿಂದ ಚೆನ್ನೈ, ಗೋವಾ, ಕೊಚ್ಚಿನ್, ಹೈದರಾಬಾದ್ ನಗರಗಳಿಗೆ ವಿಮಾನಯಾನ ಸೇವೆಯನ್ನು ಒದಗಿಸಲಾಗಿತ್ತು. ನಂತರದ ದಿನಗಳಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಕೊಚ್ಚಿನ್ ಹಾಗೂ ಗೋವಾ ನಗರಗಳಿಗೆ ವಿಮಾನಗಳ ಸೇವೆ ಸ್ಥಗಿತಗೊಂಡರೆ, ಮೈಸೂರು-ಚೆನ್ನೈ ಹಾಗೂ ಮೈಸೂರು-ಹೈದರಾಬಾದ್ ನಡುವೆ ಸಂಚಾರ ಮುಂದುವರಿದಿತ್ತು. ಮುಂದಿನ ದಿನಗಳಲ್ಲಿ ರನ್ವೇ ವಿಸ್ತರಣೆ ಮಾಡಿ ೩೬೦ ಆಸನಗಳ ದೊಡ್ಡ ವಿಮಾನಗಳ ಸೇವೆಯನ್ನು ಆರಂಭಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗವಾಗಿ ಇತರೆ ರಾಜ್ಯ ಹಾಗೂ ದೇಶಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಹೊಂದಲಾಗಿತ್ತು.
ಅದಕ್ಕಾಗಿಯೇ, ರಾಜ್ಯ ಸರ್ಕಾರ ೨೪೦ ಎಕರೆ ಭೂಮಿಯನ್ನು ಸ್ವಾಧಿನಪಡಿಸಿಕೊಂಡು ೨೦೦ ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಿತ್ತು. ನಿಲ್ದಾಣದ ಸಮೀಪದಲ್ಲೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರು ಕಿ.ಮೀ. ಉದ್ದದ ಬೈಪಾಸ್ ಮಾಡಿ, ಅದರಲ್ಲಿ ಮೂರು ಕಿ.ಮೀ. ಅಂಡರ್ಪಾಸ್ ನಿರ್ಮಿಸುವ ಪರಿಷ್ಕೃತ ಯೋಜನೆಯನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮುಂದೆ ವಿವಿಧ ಸಂಸ್ಥೆಗಳ ವಿಮಾನ ಹಾರಾಟಕ್ಕೆ ಪ್ರಯತ್ನಗಳು ನಡೆಯುತ್ತಿರುವಾಗಲೇ ಇಂಡಿಗೋ ಸಂಸ್ಥೆ ಮೈಸೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ತನ್ನ ಎರಡು ವಿಮಾನಗಳ ಸೇವೆಯನ್ನೂ ರದ್ದುಪಡಿಸಿರುವುದು ಭಾರೀ ನಿರಾಸೆ ಮೂಡಿಸಿದೆ.
ಮೈಸೂರು-ಬೆಂಗಳೂರು ನಡುವೆ ದಶಪಥ ರಸ್ತೆ ನಿರ್ಮಾಣವಾದ ಮೇಲೆ ಮೈಸೂರು-ಚೆನ್ನೈ ಹಾಗೂ ಮೈಸೂರು-ಹೈದರಾಬಾದ್ ನಡುವೆ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕುಸಿಯಬಹುದೆಂಬ ಆತಂಕವನ್ನು ಪ್ರಯಾಣಿಕರು ದೂರ ಮಾಡಿದ್ದರು. ಭಾರತ ಸೇರಿದಂತೆ ಇಡೀ ಜಗತ್ತಿನಾದ್ಯಂತ ಸೇವೆಯನ್ನು ಒದಗಿಸುತ್ತಿರುವ ಇಂಡಿಗೋ ಸಂಸ್ಥೆಯು ಮೈಸೂರಿನಿಂದ ನಿರಂತರವಾಗಿ ಎರಡು ನಗರಗಳಿಗೆ ಹಾರಾಟ ಕಲ್ಪಿಸಿ ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಮೈಸೂರಿನಿಂದ ಹೋಗುವ ಮತ್ತು ಬರುವ ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರಲಿಲ್ಲ. ಎರಡೂ ವಿಮಾನಗಳು ದಿನಕ್ಕೆ ನಾಲ್ಕು ಬಾರಿ ಪ್ರಯಾಣಿಸುತ್ತಿದ್ದವು. ಏತನ್ಮಧ್ಯೆ, ಇಂಡಿಗೋ ಸಂಸ್ಥೆಯು ಮೈಸೂರಿನಿಂದ ತನ್ನ ಹಾರಾಟ ಸೇವೆಯನ್ನು ಮುಂದುವರಿಸಿದ್ದರಿಂದ ಬೇರೆ ನಗರಗಳಿಗೂ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು
ಸೇವೆ ವಿಸ್ತರಣೆ ಕೋರಿದ್ದ ಸಂಸದ ಯದುವೀರ್: ಮೂರು ತಿಂಗಳ ಹಿಂದೆಯಷ್ಟೇ ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂಡಿಗೋ ವಿಮಾನ ಸಂಸ್ಥೆಗೆ ಪತ್ರ ಬರೆದು, ಮೈಸೂರಿನಿಂದ ಗೋವಾ, ಮುಂಬೈ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಕೋರಿದ್ದರು. ಇದಕ್ಕೆ ಕಂಪೆನಿ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು. ಆದರೆ, ಈಗ ಸಂಸ್ಥೆಯು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಇಡೀ ದೇಶಾದ್ಯಂತ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.
ಕಲ್ಕತ್ತಾ : ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ನ್ಯಾಯ, ಸ್ವಾತಂತ್ರ್ಯ,…
ಉಡುಪಿ : ಐಲ್ಯಾಂಡ್ಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ…
ಸೋಮವಾರಪೇಟೆ : ಸಮೀಪದ ಕಾಜೂರು ಗ್ರಾಮದ ಪುಷ್ಪ ಎಂಬುವವರ ಮನೆಗೆ ನೆನ್ನೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಮನೆ ಸಂಪೂರ್ಣ…
ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ…
ಬೆಂಗಳೂರು : ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ನಗರದ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ…
ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ.…