Andolana originals

ತುಳುನಾಡಿನ ಯುಗಾದಿ ‘ಬಿಸು’ವಿಗಾಗಿ ಇನ್ನೂ ಇಪ್ಪತ್ತೆಂಟು ದಿನ

ಅಕ್ಷತಾರಾಜ್ ಪೆರ್ಲ, ಕನ್ನಡ, ತುಳು ಉಭಯ ಭಾಷಾ ಲೇಖಕಿ 

ಯುಗಾದಿ ಹಬ್ಬದ ಆಚರಣೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇದ್ದು, ಕರ್ನಾಟಕದ ಕರಾವಳಿ ಎನ್ನಿಸಿಕೊಂಡ ತುಳುನಾಡಿನಲ್ಲಿ ಯುಗಾದಿ ಆಚರಣೆ, ನಂಬಿಕೆ, ಸಂಪ್ರದಾಯ ಎಲ್ಲವೂ ತುಸು ಭಿನ್ನ. ಬೇಸಾಯವನ್ನು ಅವಲಂಬಿಸಿರುವ ತುಳುವನಾಡಿನಲ್ಲಿ ಆಚರಿಸಲ್ಪಡುವ ಬಹುತೇಕ ಹಬ್ಬಗಳಲ್ಲಿ ಪ್ರಕೃತಿ ಆರಾಧನೆ ಕಂಡುಬರುತ್ತದೆ. ‘ಕೆಡ್ಡಸ’ ಸಂಪ್ರದಾಯದಲ್ಲಿ ಭೂಮಿತಾಯಿ ರಜಸ್ವಲೆಯಾಗಿ ಫಲವತ್ತತೆಗೆ ಸಮರ್ಥಳಾಗುತ್ತಾಳೆ ಎಂಬ ನಂಬಿಕೆಯಿದ್ದು ಭೂಮಿಯನ್ನು ಆರಾಽಸುವ ರೀತಿ ಕಂಡುಬಂದರೆ ಯುಗಾದಿಯಲ್ಲಿ ಸೂರ್ಯನಿಗೆ ಎಂದರೆ ‘ಬಾನದೇವ’ನಿಗೆ ವಿಶೇಷ ಮಹತ್ವ. ಇದೇ ಕಾರಣಕ್ಕೆ ಚಾಂದ್ರಮಾನ ಯುಗಾದಿಗಿಂತ ಸೌರಮಾನ ಯುಗಾದಿ ‘ಬಿಸು ಪರ್ಬ’ವಾಗಿ ತುಳುವರಿಗೆ ದೊಡ್ಡ ಹಬ್ಬ.

ಚಾಂದ್ರಮಾನ ಯುಗಾದಿಗೆ ವಿಶೇಷ ಪ್ರಾಧಾನ್ಯತೆ ತುಳುನಾಡಿನಲ್ಲಿ ಕಂಡುಬರುವುದಿಲ್ಲ. ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವ ಸೌರಮಾನ ಯುಗಾದಿಯನ್ನು ‘ಬಿಸು ಪರ್ಬ’ ಅಥವಾ ವಿಷುಹಬ್ಬವಾಗಿ ಆಚರಿಸುತ್ತಾರೆ. ಕೇರಳದ ‘ವಿಷು ಯುಗಾದಿ’ಯೊಡನೆ ತುಳುನಾಡಿನ ಬಿಸುವಿಗೆ ಸಾಮ್ಯತೆ ಇದ್ದು ಆಚರಣೆಗಳಲ್ಲಿ ತುಸು ವ್ಯತ್ಯಾಸವಿದೆ. ಕೇರಳೀಯರಿಗೆ ‘ಕೊನ್ನೆ ಹೂವು’ ಸೌರಮಾನ ಯುಗಾದಿಗೆ ವಿಶೇಷವಾಗಿದ್ದರೆ, ತುಳುವರಿಗೆ ಸೌರಮಾನ ಯುಗಾದಿಯಂದು ಇಡುವ ‘ಬಿಸು ಕಣಿ’ಯೇ ವಿಶೇಷ.

ತುಳವರಿಗೆ ಬಿಸು ಅಥವಾ ಸೌರಮಾನ ಯುಗಾದಿ ಕೊನೆಯ ಹಬ್ಬವಾಗಿದ್ದು ಅಷ್ಟಮಿಯನ್ನು ಮೊದಲ ಹಬ್ಬವಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ‘ಬಿಸು ಭೀಮೆ ಕೊಂಡು ಕಂತ್ಯೆಂಡ, ಅಟ್ಟೆಮಿಗ್ ಕಿಸ್ನೆ ಉದಿತ್ ಬರ್ಪೆರ್’ ಎಂದರೆ ‘ವಿಷುವನ್ನು ಭೀಮ ಕೊಟ್ಟು ಹೋದರೆ, ಅಷ್ಟಮಿಗೆ ಕೃಷ್ಣ ಹುಟ್ಟಿ ಬರುತ್ತಾನೆ’ ಎಂಬ ಮಾತು ಚಾಲ್ತಿಯಲ್ಲಿದೆ. ಆದ್ದರಿಂದ ವಾರ್ಷಿಕಾವರ್ತನದ ಕೊನೆಯ ಹಬ್ಬವಾಗಿ ಸೌರಮಾನ ಯುಗಾದಿ ಪರಿಗಣಿಸಲ್ಪಡುತ್ತದೆ. ಬೇಸಾಯಗಾರರ ಕೊಯ್ಲು ಮುಗಿದು ಫಸಲು ಮನೆಯಂಗಳದಲ್ಲಿ ಹೊನ್ನಾದ ಕಾಲ.

‘ಬುಳೆ ಕಾಣಿಕೆ’ ಅಥವಾ ಬೆಳೆ ಕಾಣಿಕೆ ತುಳುನಾಡು ಜಮೀನ್ದಾರಿ ಪದ್ಧತಿಯನ್ನು ಹೊಂದಿದ್ದಂತಹ ಪ್ರದೇಶ. ಗೇಣಿ ಒಕ್ಕಲು ಇಲ್ಲಿ ರೂಢಿಯಲ್ಲಿದ್ದುದರಿಂದ ಗೇಣಿದಾರರು ವರ್ಷಕ್ಕೊಮ್ಮೆ ಜಮೀನ್ದಾರನಿಗೆ ತನ್ನ ಜಮೀನಿನಲ್ಲಿ ಬೆಳೆದ ಬೆಳೆಯ ಒಂದಂಶವನ್ನು ಕೊಡುವುದು ಪದ್ಧತಿಯಾಗಿತ್ತು. ಹೀಗೆ ಲಾಭದ ಒಂದಂಶವಾದ ಬೆಳೆಯನ್ನು ಸೌರಮಾನ ಯುಗಾದಿಯ ದಿನ ತನ್ನ ದೇವನಾದ ಭೂಮಿಯ ಒಡೆಯನಿಗೆ ಕೊಡುವ ಕ್ರಮವಿತ್ತು. ಇದನ್ನು ’ಬುಳೆ ಕಾಣಿಕೆ’ (ಬೆಳೆ ಕಾಣಿಕೆ) ಎಂದು ಕರೆಯಲಾಗುತ್ತಿತ್ತು. ಜಮೀನ್ದಾರಿ ಪದ್ಧತಿ ಮರೆಯಾದ ಕಾಲಘಟ್ಟದಲ್ಲಿ ‘ಬುಳೆ ಕಾಣಿಕೆ’ ಸಂಪ್ರದಾಯ ಇರದಿದ್ದರೂ ‘ಬಿಸು ಕಣಿ’ ಚಾಲ್ತಿಯಲ್ಲಿದೆ. ತಂತಮ್ಮ ಮನೆಗಳಲ್ಲಿ ತಾವು ಬೆಳೆದ ಹಣ್ಣು, ತರಕಾರಿಗಳನ್ನಿಟ್ಟು ಆರಾಧಿಸುವುದು ಸಂಪ್ರದಾಯ.

ಯುಗಾದಿ ದಿನ ‘ಬಿಸು ಕಣಿ’ ದರ್ಶನ ಕೃಷಿಕ ತಾನು ಬೆಳೆದ ಹೊಸ ಬೆಳೆಯನ್ನು ಕೊಯ್ದು ಸೌರಮಾನ ಯುಗಾದಿಯ ಮುನ್ನಾದಿನ ಸಾಯಂಕಾಲ ದೇವರ ಮನೆಯಲ್ಲಿ ಜೋಡಿಸಿಡುವುದು ವಿಶೇಷ. ಹೀಗೆ ಜೋಡಿಸುವುದಕ್ಕೂ ಅದರದ್ದೇ ಆದ ನಿಯಮವಿದ್ದು ಮನೆಯ ಯಜಮಾನನ ಸೂಚನೆಯನ್ನು ಪಾಲಿಸಲಾಗುತ್ತದೆ. ಮಣೆಯ ಮೇಲೆ ತುದಿ ಬಾಳೆ ಎಲೆಯಲ್ಲಿ ತಾನು ಬೆಳೆದ ಹಣ್ಣು, ತರಕಾರಿಗಳ ಜೊತೆಗೆ ಸೇರು ಅಕ್ಕಿ, ಹಿಂಗಾರ,  ವೀಳ್ಯದೆಲೆ, ಅಡಕೆ, ತೆಂಗಿನಕಾಯಿ, ಧೋತಿ, ಹಣ ಇತ್ಯಾದಿಗಳನ್ನು ಜೋಡಿಸಿಟ್ಟು ಮಧ್ಯ ಭಾಗದಲ್ಲಿ ಕನ್ನಡಿ ಇಡುತ್ತಾರೆ. ಹೀಗೆ ಇಡುವ ಕಣಿಯಲ್ಲಿ ಗೇರುಹಣ್ಣು, ಹಲಸಿನ ಹಣ್ಣಿನ ಪಾರುಪತ್ಯ ಬಲು ಜೋರು. ಇದನ್ನೇ ಬಿಸು ಕಣಿ ಎನ್ನುವುದು. ಸೌರಮಾನ ಯುಗಾದಿ ದಿನ ಬೆಳಿಗ್ಗೆ ಮನೆಯ ಯಜಮಾನ ಮಿಂದು ಹೊಸ ಬಟ್ಟೆ ಧರಿಸಿ ಕಣಿ ಮುಂದೆ ದೀಪ ಬೆಳಗಿ ಕಣಿಯಲ್ಲಿಟ್ಟ ಕನ್ನಡಿಯಲ್ಲಿ ಮುಖ ನೋಡುತ್ತಾನೆ. ನಂತರ ಮನೆಮಕ್ಕಳೆಲ್ಲ ಕಣಿ ಕನ್ನಡಿ ನೋಡಿ ಕಣಿಗೆ ನಮಸ್ಕರಿಸಿ, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುವುದನ್ನು ‘ಕಣಿ ನೋಡುವುದು’ ಎನ್ನುತ್ತಾರೆ. ಈ ಕಣಿ ಮೂಲಕ ರೈತ ದೇವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾನೆ. ಕಣಿಗೆ ಇಟ್ಟ ತರಕಾರಿ, ಹಣ್ಣು ಇತ್ಯಾದಿಗಳ ಸ್ವಲ್ಪ ಭಾಗವನ್ನು ತೆಗೆದು ಅಡುಗೆಗೆ ಉಪಯೋಗಿಸಿ ಪ್ರಸಾದವೆಂದು ಸ್ವೀಕರಿಸಲಾಗುತ್ತದೆ. ಎಳೆಯ ಗೋಡಂಬಿ ಹಾಕಿದ ಪಾಯಸ ಇರದ ತುಳುನಾಡಿನ ಮನೆ ಯುಗಾದಿ ದಿನ ಇರಲಿಕ್ಕಿಲ್ಲ! ತುಳುವರ ಪ್ರಕಾರ ಬಿಸು ಕಳೆಯಿತೆಂದರೆ ಮಳೆಗಾಲ ಆರಂಭವಾಯಿತು ಎಂದರ್ಥ. ನಂತರದ್ದೆಲ್ಲ ಮಳೆಗಾಲದ ಸಿದ್ಧತೆಗಳೇ. ಬಿಸುವಿನ ದಿನ ’ಕೈ ಬಿತ್ತು ಹಾಕುವುದು’ ಎಂಬ ಸಂಪ್ರದಾಯವಿದ್ದು ಕೃಷಿ ಬೆಳೆಗಳ ಬೀಜ ಬಿತ್ತನೆಗೆ ಆ ದಿನ ಸಕಾಲವೆಂದು ನಂಬಿಕೆ. ಶುಭಕಾರ್ಯಗಳಿಗೆ ಬಿಸುವಿನ ದಿನ ಶುಭದಿನ. ಮುಹೂರ್ತ ನೋಡುವ ಕ್ರಮವೂ ಇಲ್ಲ. ಒಂದಾದರೂ ತರಕಾರಿ ಗಿಡವನ್ನು ಬಿಸುವಿನಂದು ನೆಡಲೇಬೇಕು ಎಂಬುದು ವಾಡಿಕೆ. ಹೀಗೆ ತುಳುವರಿಗೆ ಸೌರಮಾನ ಯುಗಾದಿ ‘ಬಿಸು ಪರ್ಬ’ವಾಗಿ ಆಚರಿಸಲ್ಪಡುವ ದೊಡ್ಡ ಹಬ್ಬ.

ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಮನುಷ್ಯನೂ ಬದಲಾಗಿದ್ದಾನೆ. ಕೃಷಿಭೂಮಿಗಳು ಸೈಟು, ಅಪಾರ್ಟುಮೆಂಟುಗಳಾಗಿ ಬದಲಾಗಿರುವಾಗ ತಮ್ಮ ಭೂಮಿಯ ಫಸಲಿನ ಕಣಿ ಎಲ್ಲಿರಲು ಸಾಧ್ಯ? ಇದೇ ಕಾರಣಕ್ಕೆ ಇಂದು ಹೆಚ್ಚಿನ ಮನೆಗಳಲ್ಲಿ ‘ಕಣಿ ಸಂಸ್ಕ ತಿ’ ಮರೆಯಾದರೂ ತುಳುನಾಡಿನ ದೇವಸ್ಥಾನಗಳಲ್ಲಿ ಬಿಸುವಿನ ದಿನ ಕಣಿಯ ಸೊಬಗು ನೋಡಲು ಸಿಗುತ್ತದೆ. ಚಾಂದ್ರಮಾನ ಅಥವಾ ಸೌರಮಾನ, ಯುಗಾದಿ ಯಾವುದೇ ಆಗಿರಲಿ, ಹೊಸತನ್ನು ಸ್ವಾಗತಿಸುವುದು ಎಲ್ಲ ದೇಶ, ಕಾಲದ ಮೂಲ ಆಶಯ. ನಿನ್ನೆಯ ಹಳತಿನ ತಳಪಾಯದಲ್ಲಿ ನಾಳಿನ ಹೊಸತಿನ ನಿರೀಕ್ಷೆ ಒಟ್ಟಂದದಲ್ಲಿ ಯುಗಾದಿ ಎಂಬ ಹಬ್ಬದ ಸೊಗಡು.

ಆಂದೋಲನ ಡೆಸ್ಕ್

Recent Posts

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…

3 hours ago

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…

3 hours ago

ರಾಮಚಂದ್ರರಾವ್‌ ರಾಸಲೀಲೆ ಪ್ರಕರಣ: ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್‌ ಅನುಚಿತ ವರ್ತನೆ ಕುರಿತ ವೈರಲ್‌ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…

3 hours ago

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನ: ಮ್ಯಾಕ್ರನ್‌ ಜೊತೆ ಮೋದಿ ಮಾತುಕತೆ

ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ…

3 hours ago

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ನಿಧನ

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…

6 hours ago

ರಾಜ್ಯದಲ್ಲಿ ಮತ್ತೆರಡು ದಿನ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್‌, ಕಲಬುರ್ಗಿ,…

6 hours ago