ಚಾಮರಾಜನಗರ: ಹೊಸ ವರ್ಷ-೨೦೨೬ರ ಸ್ವಾಗತಕ್ಕೆ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ನಾನಾ ಕಡೆಯಿಂದ ಧಾವಿಸುವ ಪ್ರವಾಸಿಗರು ಅದಾಗಲೇ ವಸತಿ ಗೃಹಗಳನ್ನು ಕಾಯ್ದಿರಿಸಿದ್ದು ಡಿ.೩೧ ಮತ್ತು ಜನವರಿ ೧ರ ವಾಸ್ತವ್ಯಕ್ಕಾಗಿ ಬುಕಿಂಗ್ ಮಾಡಿದ್ದಾರೆ.
ಮಲೆ ಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ಬಂಡೀಪುರ, ಕೆ.ಗುಡಿ ವಸತಿಗೃಹಗಳಿಗೆ ಹೊಸ ವರ್ಷದ ಕಾರಣಕ್ಕೆ ಸಹಜವಾಗಿಯೇ ಬೇಡಿಕೆ ಉಂಟಾಗಿದೆ. ಜನತೆ, ನೂತನ ಸಂವತ್ಸರವನ್ನು ಅವರದ್ದೇ ಆದ ರೀತಿಯಲ್ಲಿ ಬರಮಾಡಿಕೊಳ್ಳುತ್ತಾರೆ. ಧಾರ್ಮಿಕ ಸ್ಥಳಗಳಿಗೆ ತೆರಳಿ ಪೂಜೆ ಪುನಸ್ಕಾರ ನೆರವೇರಿಸಿ ವರ್ಷವಿಡೀ ಒಳ್ಳೆಯದಾಗಲೆಂದು ಪ್ರಾರ್ಥನೆ ಮಾಡುವವರಿದ್ದಾರೆ. ಪಬ್, ಪಾರ್ಟಿ ಹೀಗೆ ಆಯ್ದ ಸ್ಥಳಗಳಿಗೆ ಹೋಗಿ ಮೋಜು ಮಾಡಿ ವರ್ಷದ ಮೊದಲ ದಿನವನ್ನು ಬರಮಾಡಿಕೊಳ್ಳುವವರೂ ಇದ್ದಾರೆ. ಏನೆಲ್ಲಾ ನಿರ್ಬಂಧ, ಎಚ್ಚರಿಕೆ ನಡುವೆಯೂ ೨೦೨೬ಕ್ಕೆ ಕಾಲಿಡುವ ಕ್ಷಣದಲ್ಲಿ ಪಟಾಕಿ, ಬಾಣ ಬಿರುಸುಗಳು ಅಲ್ಲಲ್ಲಿ ಸದ್ದು ಮಾಡುತ್ತವೆ.
ತಾವು ಇರುವೆಡೆಯೇ ಕೇಕ್ ಕತ್ತರಿಸಿ ಮನೆ ಮಂದಿಯೆಲ್ಲಾ ಪರಸ್ಪರ ಸಿಹಿ ಮೆಲ್ಲುತ್ತಾ ಸಂತೋಷದಿಂದ ಹೊಸ ದಿನ ಬರಮಾಡಿಕೊಳ್ಳುವ ದೊಡ್ಡ ವರ್ಗವೂ ಇದೆ. ಹಾಗೆಯೇ, ವರ್ಷದ ಮೊದಲ ದಿನ ಹೊಸ ಬಟ್ಟೆ ಧರಿಸಿ ಇಡೀ ವರ್ಷ ಹರ್ಷದಿಂದ ಇರಲೆಂದು ಆಶಿಸಿ ಮಲೆಮಹದೇಶ್ವರ ಬೆಟ್ಟ ಅಥವಾ ಇತರ ಧಾರ್ಮಿಕ ಕೇಂದ್ರಗಳಿಗೆ ಹೊಸ ವರ್ಷದ ಮುನ್ನಾ ದಿನವೇ ಹೋಗಿ ಉಳಿದು ದೇವರ ದರ್ಶನ ಪಡೆಯುವವರೂ ಇದ್ದು ಇಂತಹವರು ಕುಟುಂಬ ಸಮೇತರಾಗಿ ಧಾರ್ಮಿಕ ಸ್ಥಳಗಳಿಗೆ ಧಾವಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಮಾತ್ರವಲ್ಲದೇ ರಾಜ್ಯ ಹಾಗೂ ನೆರೆ-ಹೊರೆರಾಜ್ಯಗಳಿಂದಲೂ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟವನ್ನು ಆಯ್ಕೆ ಮಾಡಿಕೊಂಡು ವಸತಿ ಗೃಹಗಳನ್ನು ಕಾಯ್ದಿರಿಸಿದ್ದಾರೆ. ಇನ್ನು, ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಕಣ್ತುಂಬಿಕೊಳ್ಳುವುದೇ ಆನಂದ. ಚಳಿಯ ನಡುವೆ ಮಂಜು ಕವಿದ ವಾತಾವರಣದಲ್ಲಿ ಹೊಸ ವರ್ಷವನ್ನು ಎದುರು ನೋಡುವುದೇ ಉಲ್ಲಾಸ. ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಳಿಗ್ಗೆ ೬ರಿಂದ ಸಂಜೆ ೪.೩೦ರೊಳಗೆ ಮಾತ್ರ ಪ್ರವೇಶಾವಕಾಶ ಇರುವುದರಿಂದ ಅಲ್ಲಿಗೆ ದೊಡ್ಡ ಸಂಖ್ಯೆಯ ಭಕ್ತರು ಹೊಸ ಸಂವತ್ಸರದಂದು ಬರುವ ನಿರೀಕ್ಷೆ ಸಹಜವಾದದ್ದಾಗಿದೆ.
” ಬಂಡೀಪುರದಲ್ಲಿನ ಖಾಸಗಿ ರೆಸಾರ್ಟ್, ಹೋಂಸ್ಟೇಗಳಲ್ಲಿ ರಾತ್ರಿ ೧೦ ಗಂಟೆ ನಂತರ ಫೈರ್ ಕ್ಯಾಂಪ್, ಲೈಟಿಂಗ್ಸ್ ಹಾಗೂ ಅಧಿಕ ಶಬ್ದ ಹೊರಸೂಸುವ ಡಿಜೆ ಬಳಸುವಂತಿಲ್ಲ. ಇದನ್ನು ಉಲ್ಲಂಘಿಸಿ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ಅಡ್ಡಿ ಉಂಟು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.”
ಪ್ರಭಾಕರನ್, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ
” ಹೊಸ ವರ್ಷದ ಹಿನ್ನೆಲೆಯಲ್ಲಿ ೧೫ ದಿನಗಳಿಂದಲೇ ಭಕ್ತಾದಿಗಳು, ಪ್ರವಾಸಿಗರು ಆನ್ಲೈನ್ನಲ್ಲಿ ೨೫೦ ವಸತಿಗೃಹಗಳನ್ನು ಕಾಯ್ದಿರಿಸಿದ್ದಾರೆ. ಆಫ್ಲೈನ್ ನಲ್ಲಿಯೂ ಕೊಠಡಿಗಳಿಗೆ ಬೇಡಿಕೆ ಹೆಚ್ಚಾಗಿದೆ.”
ಎ.ಇ.ರಘು, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹೊಸ ವರ್ಷ ಆಚರಣೆಗೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು, ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರಮುಖವಾಗಿ…
ಕೇರಳ(ತಿರುವನಂತಪುರ): ವೈವಿದ್ಯತೆಯ ನಡುವೆ ಮನುಷ್ಯರು ಒಗ್ಗಟ್ಟಾಗಿ ಬಾಳುವ ಸಹೃದಯಿ ಭಾರತ ನಿರ್ಮಾಣ ನಾರಾಯಣಗುರುಗಳ ಗುರಿಯಾಗಿತ್ತು. ನೈತಿಕತೆ ಇಲ್ಲದ ಅಹಂಕಾರದ ಭಾಷೆಯಲ್ಲಿ…
ಮೈಸೂರು: ದೇಶದೊಳಗೆ ಅಕ್ರಮವಾಗಿ ನುಸುಳುವವರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ಬಾಂಗ್ಲಾದೇಶದ ಪ್ರಜೆಗಳು ಉದ್ಧಟತನ ತೋರುತ್ತಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ…
ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ…
ಮೈಸೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು…