ಕಾಫಿ ತೋಟಗಳಲ್ಲಿ ಓಡಾಟ; ಸಾರ್ವಜನಿಕರಲ್ಲಿ ಭೀತಿ; ಸೆರೆ ಹಿಡಿಯಲು ಒತ್ತಾಯ
ಸಿದ್ದಾಪುರ: ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಾಫಿ ತೋಟಗಳಲ್ಲಿ ಹುಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕೂಡಲೇ ಹುಲಿಯನ್ನು ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾಡಂಚಿನ ಗ್ರಾಮಗಳಾದ ಮೈಲಾಪುರ, ಬಾಡಗ ಬಾಣಂಗಾಲ, ಮಾರ್ಗೋಲ್ಲಿ, ತೂಪಾನ ಕೊಲ್ಲಿ, ಎಲ್.ಕಿಲ್.ಬೆಟ್ಟ, ಮಠ, ಹುಂಡಿ, ಪಟ್ಟಮ್ಮಡ ಎಸ್ಟೇಟ್ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಎರಡು ವರ್ಷಗಳಿಂದ ಹುಲಿ ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದೆ. ಸಿದ್ದಾಪುರ -ಮೈಸೂರು ಮುಖ್ಯ ರಸ್ತೆ , ಹುಂಡಿ-ಗೋಣಿಕೊಪ್ಪ ಮುಖ್ಯ ರಸ್ತೆಗಳಲ್ಲಿ ಹಗಲು ರಾತ್ರಿಯಲ್ಲೂ ವಾಹನ ಚಾಲಕರಿಗೆ ಹುಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಇದನ್ನು ಸ್ಥಳೀಯರು ವಿಡಿಯೋ ಚಿತ್ರೀಕರಣ ಕೂಡ ಮಾಡಿದ್ದಾರೆ.
ಹುಲಿಯ ಓಡಾಟದಿಂದ ಸ್ಥಳೀಯ ರೈತರು, ಕಾರ್ಮಿಕರು ಮತ್ತು ನಿವಾಸಿಗಳು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಮಾಡುತ್ತಿದ್ದ ಕಾರ್ಮಿಕರು ಹುಲಿ ದಾಳಿಯಿಂದ ಪಾರಾಗಲು ಯತ್ನಿಸಿ ಬಿದ್ದು ಗಾಯಗೊಂಡ ಘಟನೆಗಳೂ ಇತ್ತೀಚೆಗೆ ನಡೆದಿವೆ. ಹೀಗಾಗಿ ಆದಷ್ಟು ಬೇಗ ಹುಲಿಗಳನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.
ಮನೆಯ ಸಮೀಪವೇ ಮೇಯಲು ಬಿಟ್ಟ ಹಸುಗಳ ಮೇಲೆ ಹಾಡುಹಗಲೇ ಹುಲಿ ದಾಳಿ ಮಾಡಿ ಬಲಿ ಪಡೆದುಕೊಳ್ಳುತ್ತಿದೆ. ಮಠ ಗ್ರಾಮದಲ್ಲಿ ಹೆಚ್ಚು ಹಸುಗಳನ್ನು ಕೊಂದು ಹಾಕಿದೆ. ಟಾಟಾ ಕಾಫಿ ಸಂಸ್ಥೆಗೆ ಸೇರಿದ ಬಾಣಂಗಾಲದ ಎಲ್.ಕಿಲ್.ಕಾಫಿ ತೋಟದ ಲೈನ್ ಮನೆಗಳ ಸುತ್ತ ಬೀಡಾಡಿ ಹಸುಗಳು ಇರುವುದರಿಂದ ಹುಲಿ ತೋಟದಲ್ಲಿ ಬೀಡು ಬಿಟ್ಟಿದೆ ಎನ್ನಲಾಗುತ್ತಿದೆ.
ಇದನ್ನು ಓದಿ: ಈಡೇರಿದ ಸಾಲಿಗ್ರಾಮ ಜನತೆಯ ದಶಕಗಳ ಬೇಡಿಕೆ
ಎರಡು ವರ್ಷಗಳಲ್ಲಿ ಈ ಭಾಗದಲ್ಲಿ ೪೦ಕ್ಕೂ ಹೆಚ್ಚು ಹಸುಗಳನ್ನು ಬಲಿ ಪಡೆದಿದೆ. ಮಠ ಗ್ರಾಮದ ಚಂದ್ರ, ಜೋನ್, ಬಾಬು ರಾಜನ್, ಸರ್ಲಿ, ಹೇಮಚಂದ್ರನವರ ಹಸುಗಳನ್ನು ಬಲಿ ಪಡೆದಿದೆ. ಅರಣ್ಯ ಇಲಾಖೆ ಪ್ರತಿ ಹುಲಿ ದಾಳಿ ನಂತರ ಹುಲಿಯ ಚಲನವನ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ಹಾಗೂ ಸ್ಥಳದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ಹುಲಿಯ ಚಲನವನಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಆದರೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
” ಕಾಡು ಪ್ರಾಣಿ-ಮಾನವ ಸಂಘರ್ಷ ಹೆಚ್ಚಾಗಿದೆ. ಕಾಡು ಪ್ರಾಣಿಗಳು ಆಹಾರ ಅರಸಿ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕೆಲವು ಕಾಡು ಪ್ರಾಣಿಗಳು ನಾಡಿಗೆ ಬಂದು ತಮ್ಮ ಪ್ರಾಣಕ್ಕೆ ಸಂಚಕಾರ ತಂದು ಕೊಳ್ಳುತ್ತಿವೆ. ಕಾಡಿನಿಂದ ನಾಡಿಗೆ ಬರುವುದನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.”
-ಹೇಮಂತ್, ಸ್ಥಳೀಯರು, ಮಠ ಗ್ರಾಮ ಮಾಲ್ದಾರೆ ಸುತ್ತಮುತ್ತ
” ಗ್ರಾಮದ ಕಾಫಿ ತೋಟದಲ್ಲಿ ಪದೇ ಪದೇ ಹುಲಿ ಪ್ರತ್ಯಕ್ಷವಾಗುತ್ತಿದ್ದು, ಹುಲಿಗಳ ದಾಳಿಯಿಂದ ಸಾಕು ಪ್ರಾಣಿಗಳು ಸಾವನ್ನಪ್ಪುತ್ತಿದೆ. ಮುಂದಿನ ದಿನಗಳಲ್ಲಿ ಮನುಷ್ಯರ ಮೇಲೂ ದಾಳಿ ಮಾಡುವಸಾಧ್ಯತೆ ಇದೆ. ಹುಲಿಯನ್ನು ಸೆರೆ ಹಿಡಿದುಸ್ಥಳಾಂತರ ಮಾಡದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು.”
– ಮಹಮ್ಮದ್ ಅಲಿ, ಮಾಲ್ದಾರೆ ಗ್ರಾಪಂ ಸದಸ್ಯ
” ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ಮತ್ತು ಬೆಳೆಗಾರರು ಕಂಗಾಲಾಗಿದ್ದು, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಗ್ರಾಮಗಳಲ್ಲಿ ಕೆಲ ದಿನಗಳಿಂದ ಹಾಡಹಗಲೇ ಹುಲಿ ಓಡಾಡುತ್ತಿದೆ. ಕೂಡಲೇ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು.”
-ಹೇಮಾವತಿ, ಗ್ರಾಮಸ್ಥರು, ಮಠ ಗ್ರಾಮ
” ಮೆಟ್ಟಿಕುಪ್ಪೆಯಿಂದ ನಾಗರಹೊಳೆ ಅರಣ್ಯದ ಮುಖಾಂತರ ಮಾಲ್ದಾರೆ ಭಾಗಕ್ಕೆ ಹುಲಿ ಬಂದಿದ್ದು, ಈ ಹುಲಿಯನ್ನು ಸೆರೆ ಹಿಡಿಯಲು ಅನುಮತಿಗಾಗಿ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಇದೀಗ ಅನುಮತಿ ದೊರೆತಿದ್ದು, ಹುಲಿಯ ಚಲನವಲನಗಳ ಮೇಲೆ ನಿಗಾವಹಿಸಲಾಗಿದೆ. ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.”
-ಗಂಗಾಧರ್, ತಿತಿಮತಿ ವಲಯ ಅರಣ್ಯಾಧಿಕಾರಿ
–ಕೃಷ್ಣ ಸಿದ್ದಾಪುರ
ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ…
ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ…
ಮಂಡ್ಯ : ಹೊಸದಾಗಿ ಬಾರ್ ಆರಂಭಿಸಲು ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಡಿ ಮಂಡ್ಯ ಅಬಕಾರಿ ಉಪ…
ಮೈಸೂರು : ಮೈಸೂರಲ್ಲಿ ಪದೇ ಪದೇ ಡ್ರಗ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ. ಈ ಸಂಬಂಧ ಹೈಕೋರ್ಟ್ ಸಹ ಕಳವಳ…
ಮಂಡ್ಯ : ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ…
ಗಾಜಿಯಾಬಾದ್ : ಆನ್ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ…