• ಶಭಾನ ಮೈಸೂರು
ಹೆಣ್ಣಿನ ದೇಹದಲ್ಲಿ ಅತ್ಯಂತ ಸಹಜವಾಗಿ ನಡೆಯುವ ಮುಟ್ಟಿನ ಕ್ರಿಯೆಯನ್ನು ಕೀಳುಗೊಳಿಸಿ, ಆಕೆಯನ್ನು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬಂಧಿಸಿಡುವ ಪ್ರಯತ್ನ ಶತಮಾನಗಳಿಂದಲೂ ನಡೆದುಬಂದಿದೆ. ಮುಟ್ಟಿನ ಕಾರಣಕ್ಕೆ ಆಕೆಯನ್ನು ಮನೆ ಊರಿನಿಂದ ದೂರವಿರಿಸುವ ಅಮಾನವೀಯ ಪದ್ಧತಿ ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಜೀವಂತವಿರುವುದು ಆತಂಕ ಸೃಷ್ಟಿಸುತ್ತದೆ.
ಆಧುನೀಕರಣಗೊಂಡ ಇಂದಿನ ಜಗತ್ತು ಇಂತಹ ಆಚರಣೆಗಳಿಂದೇನೂ ಹೊರತಲ್ಲ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಮುಟ್ಟಾದ ಹೆಣ್ಣನ್ನು ಅಸ್ಪೃಶ್ಯರಂತೆ ಕಾಣುವ, ಧಾರ್ಮಿಕ ವಿಧಿವಿಧಾನಗಳಿಂದ ಅವಳನ್ನು ದೂರವಿರಿಸುವ ಸರ್ವ ಪ್ರಯತ್ನಗಳೂ ನಡೆದಿವೆ. ಅಷ್ಟೆಯಲ್ಲ ತಿಂಗಳ ಋತುಚಕ್ರದ ನೆಪವೊಡ್ಡಿ, ಹೆಣ್ಣಿಗೆ ಸಿಗಬೇಕಾದ ಅಧಿಕಾರವನ್ನು ಕಸಿಯುವ ಗಂಡಿನ ಹುನ್ನಾರವೂ ಇಲ್ಲಿ ಅಡಗಿದೆ. ಇದನ್ನು ಲಿಂಗರಾಜಕಾರಣದ ಭಾಗವಾಗಿ ಅರ್ಥೈಸಿಕೊಳ್ಳಬಹುದು.
ಎಮಿಲಿ ಡರ್ಕೀ೦ ‘ಮನುಷ್ಯರಲ್ಲಿ ಧರ್ಮ ಹುಟ್ಟಿದ್ದೇ ಮುಟ್ಟಿನ ದಿಸೆಯಿಂದ ಎನ್ನುತ್ತಾನೆ. ಆದರಿಂದು ಅದೇ ಮುಟ್ಟಿನ ಕಾರಣಕ್ಕೆ ಹೆಣ್ಣು ಪ್ರತಿಯೊಂದು ಹಂತದಲ್ಲೂ ನಿಯಂತ್ರಣಕ್ಕೊಳಪಡುತ್ತಿದ್ದಾಳೆ. ಇದನ್ನು ವಚನಕಾರರಾದಿಯಾಗಿ ಅನೇಕ ತತ್ವ ಪದಕಾರರು ವಿರೋಧಿಸಿದರು. ಮುಟ್ಟು ಹೆಣ್ಣಿನ ಶಕ್ತಿಕೇಂದ್ರವೆಂದು ಪ್ರತಿಪಾದಿಸಿದರು. ಮುಟ್ಟು ದೈಹಿಕ ಕ್ರಿಯೆಗಳಲ್ಲೊಂದು ಎಂದು ಹೆಣ್ಣೆ ಸ್ವತಃ ಅರಿತ ಪಯಣಕ್ಕೆ ಶತಮಾನಗಳವರೆಗಿನ ಹೆಜ್ಜೆ ಗುರುತಿದೆ. ತನ್ನ ಸುತ್ತಲಿನವರಿಗೂ ‘ಆ’ ಅರಿವನ್ನು ದಾಟಿಸುವುದಕ್ಕೆ ಇಂದು ಅನೇಕ ದಾರಿಗಳನ್ನು ಆಕೆ ಕಂಡುಕೊಳ್ಳುತ್ತಿದ್ದಾಳೆ. ಕೇಳು ಕಿಶೋರಿ’ ಶಿಬಿರಗಳಂತಹ ಸಾಮಾಜಿಕ ಮಾದರಿ ಒಂದು ಕಡೆಯಾದರೆ, ಕಾವ್ಯ, ಕಥೆಯಂತಹ ಸಾಹಿತ್ಯಕ ಮಾದರಿ ಇನ್ನೊಂದು ಬಗೆಯದ್ದು. ತಿಂಗಳ ಯಾತನೆಯನ್ನು ಹೇಳಿಕೊಳ್ಳುವುದಕ್ಕೆ ಮುಜುಗರಪಡುತ್ತಿದ್ದ ಕಾಲ ಸರಿದು, ಜಗತ್ತಿಗೆ ಕೂಗಿ ಹೇಳುವಷ್ಟರ ಮಟ್ಟಿಗೆ ಬದಲಾಗಿದೆ. ಈ ಭಾವ ಅಭಿವ್ಯಕ್ತಗೊಳಿಸುವುದಕ್ಕೆ ಹೆಣ್ಣು ಮಾತ್ರವಲ್ಲದೆ ಮುಟ್ಟಿನ ನೋವನ್ನು ಕಂಡು, ಬರೆದ ಹೆಣ್ಣನದ ಮನಸ್ಸುಗಳೂ ಜೊತೆಯಾಗಿವೆ.
‘ನಾನು ಮುಟ್ಟಾದ ದಿನ’ ಕವಿತೆಯಲ್ಲಿ ತೊಡೆಯ ಸಂಧಿಯಲಿಷ್ಟು ಬಟ್ಟೆ ತುರುಕಿ ಶಾಲೆಗೆ ಓಡಿದವಳ ಕುಂಟುನಡಿಗೆ’ಯ ಅನುಭವವನ್ನು ಕಟ್ಟಿಕೊಡುವ ಸುಧಾ ಆಡುಕಳ ಅವರು ‘ಮುಟ್ಟಾಗುವವರ ಮುಟ್ಟೆನೆಂದ ದೇವರ ಮೇಲೆ ಸಿಟ್ಟುಗೊಳ್ಳುತ್ತಾರೆ. ಅದೇ ಮುಟ್ಟಿನ ಬಿಲಕ್ಕೆ ದುರ್ಬೀನು ಇಡುವ ಕ್ರೌರ್ಯವನ್ನು ಸಹಿಸದ ಕವಯಿತ್ರಿ, ಮುಟ್ಟಿಲ್ಲದೇ ಹುಟ್ಟಿಲ್ಲವೆಂದರಿಯದ ಮುಗ್ದಾಳರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಸಮಕಾಲೀನ ಕವಯಿತ್ರಿ ಸಾಕಮ್ಮ ಕರಿಗದ್ದೆ, ಋತುಸ್ರಾವದಲ್ಲಿ ಬಳಲಿ, ನೊಂದಾಗ ಮುಟ್ಟು ಮುಟ್ಟೆಂದು ಹೀಯಾಳಿಸುವವರನ್ನು ‘ಗಂಡಿಗೆ ಸೋರುವ ವೀರ್ಯ ಏಕೆ ಮುಟ್ಟಾಗಲಿಲ್ಲ..?’ ಎಂದು ತೀಕ್ಷವಾಗಿ ಪ್ರಶ್ನಿಸುತ್ತಾರೆ. ತಮ್ಮ ನೆತ್ತರ ಕಥೆಯನ್ನು ಆಪ್ತವಾಗಿ ಬಿಚ್ಚಿಡುವ ಜಾಹಿಧಾ ಕೊಡಗು ಅವರಿಗೆ ಮುಟ್ಟು.. ಗರ್ಭದ ಬೆವರು..’ ಎಂಜಲು ನಾಲಿಗೆಯ ಬೆವರಿದ್ದ ಹಾಗೆ, ಮಳೆ ಇಳೆಗೆ ತಂಪು ಬೆವರಿದ್ದಂತೆ.
“ಅಮ್ಮನೆಂಬ ಶಕ್ತಿ’ಯನ್ನು ನೆನೆಯುವ ಎಚ್.ಎಸ್.ಅನುಪಮಾ ಅವಳ ಮುಟ್ಟು ನಿಲ್ಲಿಸಿದ್ದೇ ಆಗಿಬಿಟ್ಟೆ ನಾನು’ ಎನ್ನುತ್ತಾ ತಾಯಿಯ ಮುಟ್ಟಿನ ಮಹತ್ವವನ್ನು ತಿಳಿಸುತ್ತಾರೆ. ‘ಮುಟ್ಟಿಲ್ಲದೇ ಹುಟ್ಟಿದವನೇ!? ಮುಟ್ಟು ನಿಂತವಳ ಬಸಿರ ಬಿಸುಪ ಮುಟ್ಟು ಎಂದು ಸವಾಲಿಡುತ್ತಾರೆ ಸಬಿತಾ ಬನ್ನಾಡಿ. ಇದೇ ಆಕ್ರೋಶ ಭರಿತ ಧ್ವನಿಯಲ್ಲಿ ಕವಿತೆ ಬರೆಯುವ ಯಮುನಾ ಗಾಂವರ್, ….ಉಚ್ಚೆ ಕಕ್ಕಸುಗಳಲ್ಲೇ ಈಜುತ್ತ! ಆ ಮುಟ್ಟು ಹೊರಹೋಗಲು ಬಿಡದೇ ಒಂಬತ್ತು ತಿಂಗಳು ಕಟ್ಟೆ ಕಟ್ಟಿದ್ದಿರಲ್ಲ, ನಂತರವೇ ತಾನೆ ಮುಟ್ಟಿನ ಮನೆಯೊಳಗೆ ಮೊದಲ ಬಾರಿಗೆ ಗೃಹಭಂಗಮಾಡಿ, ಯೋನಿದ್ವಾರವ ಹರಿದು ಹೊರಬಂದಿದ್ದು!?” ಎಂದು ತಮ್ಮ ಹುಟ್ಟಿಗೆ ಕಾರಣವಾದ ಮುಟ್ಟಿನ ಮೇಲೆ ಅರ್ಥಾತ್ ಹೆಣ್ಣಿನ ಮೇಲೆ ಕೇಕೆ ಹಾಕಿ ಕುಪ್ಪಳಿಸುತ್ತಿರುವವರ ಮುಂದೆ ಕವಯಿತ್ರಿ ಈ ಪ್ರಶ್ನೆಯನ್ನಿಡುತ್ತಾರೆ. ಮುಟ್ಟನ್ನು ಪವಿತ್ರವೆನ್ನುತ್ತಾ ಹೆಣ್ಣನಿಗೆ ಜೊತೆಯಾಗುವ ಶ್ರೀನಿವಾಸ ಕಾರ್ಕಳ ಅವರು ‘ಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು’ ಎಂಬ ಜಗ ಒಪ್ಪಲೇಬೇಕಾದ ಸತ್ಯಸಂಗತಿಯನ್ನು ಮುಂದಿಡುತ್ತಾರೆ. ಮುಟ್ಟು ಕುರಿತು ಮಾತಾಡುವ ಈ ಎಲ್ಲ ದನಿ ಗಳ ಆಶಯ ಹೆಣ್ಣನ್ನು ಜೀವಪರವಾಗಿ ಕಾಣಬೇಕೆಂಬುದೇ ಆಗಿದೆ.
shabhanamys@gmail.com
ರಾಹುಲ್ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…
ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…
ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…
ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…
ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…
ಮೈಸೂರು: ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು…