Andolana originals

ಸರ್ಕಾರಕ್ಕೆ ಚಾಟಿ ಬೀಸುವ ನೈತಿಕತೆ ಕಳೆದುಕೊಳ್ಳುತ್ತಿರುವ ವಿಪಕ್ಷಗಳು

ಆರ್.ಟಿ.ವಿಠಲಮೂರ್ತಿ

ಆಡಳಿತ ಪಕ್ಷದ ಲೋಪವನ್ನು ಎತ್ತಿ ತೋರಿಸುವ ವಿಷಯದಲ್ಲಿ ಪ್ರತಿಪಕ್ಷಗಳು ಸೋಲುತ್ತಿವೆ ಎಂದರೆ ಒಟ್ಟಾರೆ ವ್ಯವಸ್ಥೆ ಜಂಗಲ್ ರಾಜ್‌ಗೆ ಹತ್ತಿರವಾಗುತ್ತಿದೆ ಎಂದೇ ಅರ್ಥ.

ಕಳೆದ ವಾರ ಆರಂಭವಾದ ವಿಧಾನಮಂಡಲ ಅಧಿವೇಶನವನ್ನು ನೋಡಿದರೆ ಇದರ ಕುರುಹುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅಲ್ಲಿ ನಡೆದಿದ್ದೇನು? ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹಗರಣಗಳನ್ನು ಎತ್ತಿ ತೋರಿಸಲು ಪ್ರತಿಪಕ್ಷಗಳು ರಣೋತ್ಸಾಹ ತೋರಿಸಿದವು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿಗಳ ಅಕ್ರಮ ವರ್ಗಾವಣೆ ವಿಷಯ ಮತ್ತು ಮೈಸೂರಿನ ಮುಡಾದಲ್ಲಿ ನಡೆದಿದೆ ಎನ್ನಲಾದ ಆಕ್ರಮಗಳ ಕುರಿತು ಪ್ರತಿಪಕ್ಷಗಳು ಪ್ರಸ್ತಾಪಿಸಲು ಮುಂದಾದಾಗ ಸರ್ಕಾರ ಅಂಜಬೇಕಿತ್ತು. ಕಾರಣ ಇವತ್ತಿನ ಪುರಾವೆಗಳ ಪ್ರಕಾರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಣ ವರ್ಗಾವಣೆಯ ಪ್ರಕರಣದಲ್ಲಿ ನಿಶ್ಚಿತವಾಗಿಯೂ ಲೋಪಗಳಾಗಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಇನ್ನು ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಹಲವು ಆಯಾಮಗಳಿವೆ ಮತ್ತು ಈಗಾಗಲೇ ಇದನ್ನು ತನಿಖೆಗೆ ವಹಿಸಿ ಸರ್ಕಾರ ಆದೇಶ ನೀಡಿದೆ. ಆದರೆ ಇಂತಹ ಗಂಭೀರ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ, ಪ್ರತಿಪಕ್ಷಗಳು ಗದ್ದಲವೆಬ್ಬಿಸಿದರೆ ಆಳುವ ಸರ್ಕಾರ ಅಂಜುವುದಿರಲಿ, ಬದಲಿಗೆ ಪ್ರತಿಪಕ್ಷಗಳ ಬುಡಕ್ಕೇ ಬಿಸಿ ನೀರು ಕಾಯಿಸಲು ಸಜ್ಜಾಯಿತು. ಅರ್ಥಾತ್, ಈ ಹಿಂದೆ ಅಸ್ತಿತ್ವದಲ್ಲಿದ್ದ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕಡತಗಳನ್ನು ಸರ್ಕಾರ ಅಲುಗಾಡಿಸಿತು.

ಬೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ, ದೇವರಾಜ ಅರಸು ಟ್ರಕ್ ಟರ್ಮಿನಲ್ ಸಂಸ್ಥೆಯಲ್ಲಾದ ಅವ್ಯವಹಾರ ಸೇರಿದಂತೆ ಬಿಜೆಪಿ ಮತ್ತು ಜಾ.ದಳ ಸರ್ಕಾರಗಳ ಅವಧಿಯಲ್ಲಾದ ಹಗರಣಗಳನ್ನು ಕೆದಕಲು ಸರ್ಕಾರ ಸಜ್ಜಾಯಿತು. ಇದೇ ಕಾಲಕ್ಕೆ ಸದನದಲ್ಲಿ ನಡೆದ ಒಂದು ಘಟನೆ ನಮ್ಮ ರಾಜಕೀಯ ವ್ಯವಸ್ಥೆ ಎಷ್ಟು ಸಂಕಷ್ಟದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಯಿತು. ಅಂದ ಹಾಗೆ ಘಟನೆಯಲ್ಲಿ ಭಾಗಿಯಾದ ಇಬ್ಬರಲ್ಲಿ ಒಬ್ಬರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮತ್ತೊಬ್ಬರು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಡಾ. ಅಶ್ವತ್ಥ ನಾರಾಯಣ

ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭವಾದಾಗ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಇಂತಹ ಮಹತ್ವದ ಚರ್ಚೆ ನಡೆಯುವಾಗ ಮಂತ್ರಿಗಳು, ಅಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿದೆ ಎಂದರು. ಆಗ ತಕ್ಷಣವೇ ಮಧ್ಯೆ ಪ್ರವೇಶಿಸಿದ ಅಶ್ವತ್ಥನಾರಾಯಣ ಅವರು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪವಿದೆ. ಹೀಗಾಗಿ ಈ ಚರ್ಚೆಯ ಸಂದರ್ಭದಲ್ಲಿ ಅವರು ಹಾಜರಿರಬೇಕಿತ್ತು ಎಂದು ಹೇಳುತ್ತಾರೆ. ಆಗ ತಕ್ಷಣವೇ ಮೇಲೆದ್ದು ನಿಲ್ಲುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಶ್ವತ್ಥನಾರಾಯಣ ಅವರನ್ನು ಉದ್ದೇಶಿಸಿ, “ನೀನೇ ಲೂಟಿಕೋರರ ಪಿತಾಮಹ. ನೀವು ಮಾಡಬಾರದ್ದನ್ನು ಮಾಡಿದ್ದರಿಂದಲೇ ನಾವಿಲ್ಲಿ ಬಂದು ಕುಳಿತಿರುವುದು’ ಎನ್ನುತ್ತಾರೆ. ಈ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ? ನಮ್ಮ ರಾಜಕೀಯ ನಾಯಕರು ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಯಾಗಿ, ನಮಗಿಂತ ನೀವು ಭ್ರಷ್ಟರು ಎಂದು ಎತ್ತಿ ತೋರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಒಂದರ್ಥದಲ್ಲಿ ಇದು ಸ್ವಸಮರ್ಥನೆಯಾಗಿ ಕಂಡರೂ, ಮತ್ತೊಂದು ಕಡೆ, ಭ್ರಷ್ಟಾಚಾರದ ವಿಷಯದಲ್ಲಿ ಒಟ್ಟಾರೆ ರಾಜಕೀಯ ವ್ಯವಸ್ಥೆಯ ಚರ್ಮ ಎಷ್ಟು ಜಡ್ಡುಗಟ್ಟಿದೆ ಎಂಬುದರ ಸಂಕೇತವಾಗಿ ಕಾಣುತ್ತದೆ. ಹೀಗೆ ಬೆಂಗಳೂರು ಡೈರಿ ಭ್ರಷ್ಟಾಚಾರದ ವಿಷಯಗಳನ್ನು ಪರಸ್ಪರ ದೋಷಾರೋಪಣೆಯ ಮೂಲಕ ರಾಜಕಾರಣಿಗಳು ದಕ್ಕಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ ಎಂಬುದರ ಅರ್ಥ ಬೇರೇನೂ ಅಲ್ಲ, ಇಡೀ ವ್ಯವಸ್ಥೆ ಜಂಗಲ್ ರಾಜ್‌ನತ್ತ ಶರವೇಗದಲ್ಲಿ ಧಾವಿಸುತ್ತಿದೆ ಎಂದೇ ಅರ್ಥ.

ಮನುಷ್ಯ ಸಮಾಜ ಜಂಗಲ್ ರಾಜ್‌ನ ರೂಪ ಪಡೆದರೆ ಆಗುವುದೇನು ಎಂಬುದನ್ನು ಅರಿಯಲು ವಿಶೇಷ ಕೌಶಲವೇನೂ ಬೇಕಾಗಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಬದುಕಲು ಪ್ರತಿಯೊಬ್ಬ ವ್ಯಕ್ತಿಯೂ ಬೇಟೆಯಾಡಲೇಬೇಕು ಎಂಬುದು ಇದರ ಅರ್ಥ, ಜಂಗಲ್ ರಾಜ್ ವ್ಯವಸ್ಥೆ ಇರುವುದೇ ಹಾಗೆ, ಅಲ್ಲಿ ಬಲಿಷ್ಠ ಪ್ರಾಣಿಗಳು ತಮಗಿಂತ ದುರ್ಬಲ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತವೆ. ಇಲ್ಲ, ಇಲ್ಲ ನಾವು ದುರ್ಬಲರು, ನಮ್ಮನ್ನು ಶೋಷಿಸುವುದು ನ್ಯಾಯವಲ್ಲ ಎಂದು ಯಾವ ಪ್ರಾಣಿಯೂ ಹೇಳಲು ಸಾಧ್ಯವಿಲ್ಲ. ಹೇಳಲು ಬಂದಿದ್ದರೂ ಅದನ್ನು ಕೇಳುವ ವ್ಯವಧಾನ ಬಲಿಷ್ಠ ಪ್ರಾಣಿಗಳಿಗೆ ಇರುತ್ತಿರಲಿಲ್ಲ.

ಇವತ್ತು ನಮ್ಮ ಆಳುವ ವ್ಯವಸ್ಥೆ ನಡೆಯುತ್ತಿರುವ ದಾರಿ ಕೂಡ ಹೀಗೇ ಇದೆ. ಅರ್ಥಾತ್, ಇಡೀ ರಾಜಕೀಯ ವ್ಯವಸ್ಥೆಯೇ ದುಡಿಯಲು ಸಜ್ಜಾದರೆ ಸಮಾಜದಲ್ಲಿರುವ ದುರ್ಬಲರ ಗತಿಯೇನು? ಒಟ್ಟಾರೆ ವ್ಯವಸ್ಥೆಯಲ್ಲಿ ಬಲಿಷ್ಠರು, ದುರ್ಬಲರು ಇದ್ದಾಗ ಇದನ್ನು ಸರಿದೂಗಿಸಿ ದುರ್ಬಲರಿಗೆ ಬದುಕುವ ಶಕ್ತಿ ಕೊಡುವುದು ರಾಜಕೀಯ ವ್ಯವಸ್ಥೆಯ ಮೂಲ ಧೈಯ.

ಈ ವಿಷಯದಲ್ಲಿ ಆಳುವ ಸರ್ಕಾರ ವಿಫಲವಾದರೆ ಪ್ರತಿಪಕ್ಷ ಅದನ್ನು ಎತ್ತಿ ತೋರಿಸಿ ಅದು ಸರಿ ದಾರಿಯಲ್ಲಿ ನಡೆಯುವಂತೆ ಮಾಡಬೇಕು. ಆದರೆ ಆಳುವವರ ಲೋಪವನ್ನು ಎತ್ತಿ ತೋರಿಸಲು ಮುಂದಾದವರೇ ಕಳಂಕಿತರಾದಾಗ ಸಹಜವಾಗಿ ಅವರ ನೈತಿಕತೆ ಕುಸಿದಿರುತ್ತದೆ. ಹೀಗೆ ನೈತಿಕತೆ ಕುಸಿದಾಗ ಆಳುವ ಸರ್ಕಾರಕ್ಕೆ ಅದು ಮೂಗುದಾರ ಹಾಕುವುದಿರಲಿ, ತನಗೇ ಸರಿಯಾದ ಮೂಗುದಾರವಿಲ್ಲ ಎಂದು ಅದು ಅಳುಕುವ ಸ್ಥಿತಿಯಲ್ಲಿರುತ್ತದೆ.

ಇವತ್ತು ನಮ್ಮ ಒಟ್ಟಾರೆ ರಾಜಕೀಯ ವ್ಯವಸ್ಥೆ ಈ ದಾರಿಯಲ್ಲಿರುವಾಗ ಸಾಮಾಜಿಕ ನ್ಯಾಯದ ಮಾತು ಅಪಹಾಸ್ಯದಂತೆ ಕೇಳಿಸುತ್ತದೆ. ಹಾಗಂತ ನಮ್ಮ ವ್ಯವಸ್ಥೆ ಈ ಸ್ಥಿತಿಗೆ ಬರಲು ಏನು ಕಾರಣ ಅಂತ ಗೊಣಗಾಡುವುದರ ಅಗತ್ಯವೇನೂ ಇಲ್ಲ.

ಏಕೆಂದರೆ ನೋಡ ನೋಡುತ್ತಿದ್ದಂತೆಯೇ ನಮ್ಮ ಚುನಾವಣಾ ವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಎಂದರೆ, ಇವತ್ತು ನಾನು ಪ್ರಾಮಾಣಿಕ, ಜನಸೇವೆಗೆ ಬದುಕನ್ನು ಮುಡಿಪಾಗಿಡುತ್ತೇನೆ ಎಂದು ಧೈರ್ಯವಾಗಿ ಹೇಳಬಲ್ಲ ಒಬ್ಬ ವ್ಯಕ್ತಿ ಶಾಸಕನೋ, ಸಂಸದನೋ ಅಥವಾ ವಿವಿಧ ಹಂತಗಳಲ್ಲಿನ ಜನಪ್ರತಿನಿಧಿಯೋ ಆಗಲು ಸಾಧ್ಯವೇ ಇಲ್ಲ. ಈವತ್ತು ಸಂಸದರಾಗಿ ಆಯ್ಕೆಯಾಗಲು ಐವತ್ತರಿಂದ ನೂರು ಕೋಟಿ ರೂಪಾಯಿ, ಶಾಸಕರಾಗಲು ಇಪ್ಪತ್ತೈದರಿಂದ ಐವತ್ತು ಕೋಟಿ ರೂಪಾಯಿ ಸುರಿಯುವುದು ಅನಿವಾರ್ಯವಾಗಿರುವಾಗ ಆಯ್ಕೆಯಾಗಿರುವವರು ತಮ್ಮ ಹಿತ ಕಾಪಾಡಲು ಬಂದಿರುತ್ತಾರೆ ಎಂದು ನಂಬುವುದು ಮುಗ್ಧತನವಲ್ಲದೆ ಬೇರೇನೂ ಅಲ್ಲ.

ಏಕೆಂದರೆ ಈ ಪ್ರಮಾಣದ ಬಂಡವಾಳ ಸುರಿದವರು ಅದನ್ನು ಮರಳಿ ಪಡೆಯಲು ಯಾವ ಮಾರ್ಗ ಹಿಡಿಯುತ್ತಾರೆ ಎಂಬುದು ರಹಸ್ಯವೇನಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ಒಂದು ರಾಜ್ಯದ ವಿಧಾನಸಭಾ ಚುನಾವಣೆಗೆ ದೇಶದ ವಿವಿಧ ಮೂಲೆಗಳಿಂದ ಬಂಡವಾಳ ಹರಿದು ಬರುತ್ತದೆ. ಸಂಸತ್ ಚುನಾವಣೆಯಲ್ಲಿ ಇಂತಹವರು ಗೆಲ್ಲಲೇಬೇಕು ಎಂದು ನಮ್ಮ ದೇಶದ ಬಂಡವಾಳಶಾಹಿಗಳು ಮಾತ್ರವಲ್ಲ, ವಿವಿಧ ದೇಶಗಳಿಂದಲೂ ಬಂಡವಾಳ ಹರಿದು ಬರುತ್ತದೆ. ಹೀಗೆ ಬಂಡವಾಳ ಹೂಡಿದವರು ಈ ನೆಲದಲ್ಲಿ ತಮ್ಮ ಹಿತ ರಕ್ಷಣೆಯಾಗಬೇಕು ಎಂದು ಬಯಸುತ್ತಾರೆ. ಹೀಗಾಗಿ ನಮ್ಮ ಬಹುತೇಕ ಜನಪ್ರತಿನಿಧಿಗಳದುಡಿಯುವಸಮಯ ಇಂತಹವರಿಗಾಗಿ ಮೀಸಲಾಗಿರುತ್ತದೆ. ತದನಂತರವೇ ಜನರ ಕಡೆ ನೋಡುವ ಅನಿವಾರ್ಯತೆ ಇರುತ್ತದೆ.

ಇದು ಅರ್ಥವಾದರೆ ನಾವು ಜಂಗಲ್ ರಾಜ್‌ನು ಎಷ್ಟು ಬೇಗ ಸರಿದು ಬರುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ.

ಆಂದೋಲನ ಡೆಸ್ಕ್

Recent Posts

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

7 mins ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

8 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

10 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

10 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

11 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago