Andolana originals

‘ನವ ಮೃಗಾಲಯಗಳಲ್ಲೂ ನವಚೈತನ್ಯ ಮೂಡಿಸುವ ಗುರಿ’

ಆಂದೋಲನ’ ವಿಶೇಷ ಸಂದರ್ಶನದಲ್ಲಿ ಕರ್ನಾಟಕ ಮೃಗಾಲಯ ಪ್ರಾಽಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಖಚಿತ ನುಡಿ

ಎಸ್.ಎಸ್.ಭಟ್

ನಂಜನಗೂಡು: ರಾಜ್ಯದ ಮೃಗಾಲಯಗಳನ್ನು ಮತ್ತಷ್ಟು ಆಕರ್ಷಣೀಯವಾಗಿಸುವ ಹಂಬಲ ಇದೆ. ಈ ನಿಟ್ಟಿನಲ್ಲಿ ಮೈಸೂರಿನ ಮೃಗಾಲಯದಲ್ಲಿ ಮತ್ಸ್ಯಾಗಾರ ಹಾಗೂ ಪೆಂಗ್ವಿನ್ ಹೌಸ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಹೇಳಿದರು.

ಮೃಗಾಲಯಗಳಲ್ಲಿ ಪ್ರಾಣಿಗಳ ಸಂರಕ್ಷಣೆಗೆ ಆದ್ಯತೆ ನೀಡುವುದಲ್ಲದೆ, ಹೊಸ ಯೋಜನೆಗಳನ್ನು ರೂಪಿಸಲು ಕ್ರಮವಹಿಸಲಾಗುವುದು ಎಂದು ಹೇಳುವ ಮೂಲಕ ‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.

ಆಂದೋಲನ: ರಾಜ್ಯ ಮೃಗಾಲಯದ ಅಧ್ಯಕ್ಷರಾಗಿ ನೇಮಕಗೊಂಡ ಆದೇಶ ಹೊರಬಿದ್ದ ಸಂದರ್ಭದಲ್ಲಿ ನಿಮ್ಮ ಮನದಾಳದಲ್ಲಿ ಏನನಿಸಿತು?

ಹಾಡ್ಯ ರಂಗಸ್ವಾಮಿ: ಮೃಗಾಲಯದ ಅಧ್ಯಕ್ಷ ಸ್ಥಾನ ನನಗೆ ಅನಿರೀಕ್ಷಿತವಾಗಿ ಒಲಿದು ಬಂದಿದೆ. ನಾನು ಇದಕ್ಕಾಗಿ ಯಾವುದೇ ಲಾಬಿಯನ್ನು ನಡೆಸಿರಲಿಲ್ಲ. ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ರಂಗಸ್ವಾಮಿ ಅವರು ಈವರೆಗೆ ಏನನ್ನೂ ಕೇಳಿಲ್ಲ. ಹಾಗಾಗಿ ಈ ಬಾರಿ ಅವರಿಗೆ ಯಾವುದಾದರೂ ಸ್ಥಾನ ನೀಡಿ ಎಂದು ಮನವಿ ಸಲ್ಲಿಸಿದ್ದರ ಹೊರತಾಗಿ, ವೈಯಕ್ತಿಕವಾಗಿ ಯಾವುದೇ ಲಾಬಿ ಮಾಡಿಲ್ಲ. ಅಂತಹ ಜಾಯಮಾನ ನನ್ನದಲ್ಲ. ೧೯೮೩ರಲ್ಲಿ ಸಚಿವರೂ, ಸಂತೇಮರಹಳ್ಳಿಯ ಶಾಸಕರೂ ಆಗಿದ್ದ ಬಿ.ರಾಚಯ್ಯನವರ ನಾಯಕತ್ವದಲ್ಲಿ ನಾನು ರಾಜಕಾರಣ ಪ್ರವೇಶಿಸಿದೆ. ನಂತರ ರಾಚಯ್ಯ ಅವರ ಪುತ್ರ, ಪ್ರಸ್ತುತ ಶಾಸಕರಾಗಿರುವ ಎ.ಆರ್. ಕೃಷ್ಣಮೂರ್ತಿಯವರ ಗರಡಿಯಲ್ಲಿ ಪಳಗಿ, ಸಿದ್ದರಾಮಯ್ಯನವರ ಜೊತೆ ಕಾಂಗ್ರೆಸ್‌ಗೆ ಸೇರ್ಪಡೆಯಾದೆ. ಕಾರ್ಯ ಗ್ರಾಮ ಪಂಚಾಯಿತಿಗೆ ಒಂದು ಅವಽಗೆ ಉಪಾಧ್ಯಕ್ಷನಾಗಿ, ಮತ್ತೊಂದು ಅವಧಿಗೆ ಅಧ್ಯಕ್ಷನಾದಾಗ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ಸಿದ್ದರಾಮಯ್ಯನವರು, ನನ್ನನ್ನು ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ನೇಮಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಂಡು, ರಾಜ್ಯದ ಮೃಗಾಲಯಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇನೆ.

ಆಂದೋಲನ: ಮೃಗಾಲಯಗಳ ಅಭಿವೃದ್ಧಿಗಾಗಿ ನಿಮ್ಮಲ್ಲಿರುವ ಯೋಜನೆಗಳೇನು?

ಹಾಡ್ಯ ರಂಗಸ್ವಾಮಿ: ರಾಜ್ಯದ ಮೃಗಾಲಯಗಳನ್ನು ಇನ್ನಷ್ಟು ಬಲಪಡಿಸಬೇಕು. ಬನ್ನೇರುಘಟ್ಟ ಹಾಗೂ ಮೈಸೂರಿನ ಮೃಗಾಲಯಗಳು ಮಾತ್ರ ಲಾಭದಲ್ಲಿವೆ. ಉಳಿದ ಏಳು ಮೃಗಾಲಯಗಳು ನಷ್ಟದಲ್ಲಿವೆ. ಅವುಗಳನ್ನೂ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತೇನೆ. ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ನಿಮಗೆ ಯಾವ ಬ್ರಾಂಡ್‌ನ ನೂತನ ಕಾರು ಬೇಕು ಎಂದು ಅಧಿಕಾರಿಗಳು ಕೇಳಿದರು. ರಾಜ್ಯದ ಮೃಗಾಲಯಗಳ ನಷ್ಟದ ಕಾಲ ಮುಗಿಯುವವರೆಗೂ ನನಗೆ ಹೊಸ ಕಾರು ಬೇಡ. ಹಳೆಯದೇ ಇರಲಿ ಎಂದು ಹೇಳಿದ್ದೇನೆ.

ಆಂದೋಲನ: ಮೈಸೂರಿನ ಕಾರಂಜಿ ಕೆರೆ ಮತ್ತು ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ನಡುವೆ ಇರುವ ಖಾಲಿ ಜಾಗಕ್ಕೆ ಕಾಯಕಲ್ಪ ನೀಡುವ ಚಿಂತನೆ ಇದೆಯೇ?

ಹಾಡ್ಯ ರಂಗಸ್ವಾಮಿ: ಕಾರಂಜಿ ಕೆರೆ ಮತ್ತು ಜಯಚಾಮರಾಜೇಂದ್ರ ಮೃಗಾಲಯದ ನಡುವಿನ ಖಾಲಿ ಜಾಗದಲ್ಲಿ ಮತ್ಸ್ಯಾಗಾರ ಹಾಗೂ ಪೆಂಗ್ವಿನ್ ಹೌಸ್ ಗಳನ್ನು ನಿರ್ಮಿಸುವ ಉದ್ದೇಶ ನನೆಗುದಿಗೆ ಬಿದ್ದಿದೆ. ಅದನ್ನು ನನ್ನ ಅವಧಿಯಲ್ಲಿ ಕಾರ್ಯಗತಗೊಳಿಸುವ ಹಂಬಲ ಇದೆ. ಮೃಗಾಲಯದ ಆವರಣದಲ್ಲಿ ಅನೇಕ ಕಟ್ಟಡಗಳ ನಿರ್ಮಾಣ ಅರೆಬರೆಯಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು.

ಆಂದೋಲನ: ಶಾಲಾ ಮಕ್ಕಳಿಗೆ ಪ್ರವೇಶ ಶುಲ್ಕದ ರಿಯಾಯಿತಿ ಪ್ರಮಾಣವನ್ನು ಹೆಚ್ಚಿಸುವಿರಾ?

ಹಾಡ್ಯ ರಂಗಸ್ವಾಮಿ: ಶಾಲಾ ಮಕ್ಕಳಿಗೆ ಈಗಾಗಲೇ ರಿಯಾಯಿತಿ ಇದ್ದು, ಅದನ್ನು ಇನ್ನಷ್ಟು ಹೆಚ್ಚಿಸಬಹುದಾ ಎಂಬುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ನಷ್ಟದಲ್ಲಿರುವ ಮೃಗಾಲಯಗಳನ್ನು ಲಾಭದಾಯಕ ಗೊಳಿಸುವ ಪ್ರಯತ್ನ ಮಾಡಲಾಗುವುದು. ಅದಾಗದಿದ್ದರೂ, ಕನಿಷ್ಠ ನಷ್ಟವಿಲ್ಲದಂತೆ ನಿರ್ವಹಿಸಲು ಮಾರ್ಗಗಳನ್ನು ಚಿಂತಿಸಲಾಗುವುದು. ಒಟ್ಟಾರೆಯಾಗಿ ಮೃಗಾಲಯಗಳನ್ನು ಮತ್ತಷ್ಟು ಆಕರ್ಷಣೀಯಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯತೀಂದ್ರರ ಬೆಂಬಲದೊಂದಿಗೆ ಇಂದಿನಿಂದಲೇ ಪಣತೊಟ್ಟು ಕೆಲಸ ಮಾಡುತ್ತೇನೆ.

ಆಂದೋಲನ: ಮೃಗಾಲಯಕ್ಕೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಹೊಸ ಯೋಜನೆಗಳನ್ನು ರೂಪಿಸುವ ಆಲೋಚನೆ ಇದೆಯಾ?

ಹಾಡ್ಯ ರಂಗಸ್ವಾಮಿ: ನಿಜ, ಈ ಕುರಿತು ಈಗಾಗಲೇ ನಾನು ಒಂದೆರಡು ಯೋಜನೆಗಳ ಬಗ್ಗೆ ಚಿಂತಿಸಿದ್ದೇನೆ. ಅದಕ್ಕಾಗಿ ಸದ್ಯದಲ್ಲೇ ಮೃಗಾಲಯದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು. ನಮ್ಮ ಮೃಗಾಲಯಗಳಲ್ಲಿ ಇಲ್ಲದ ವಿದೇಶಗಳಲ್ಲಿ ಕಾಣಬಹುದಾದ ಅಪರೂಪದ ಪ್ರಾಣಿಗಳನ್ನು ಇಲ್ಲಿಗೆ ತಂದು ಸಲಹಿ, ನಮ್ಮ ಮೃಗಾಲಯದ ವೀಕ್ಷಕರಿಗೆ ಅವುಗಳನ್ನು ಪರಿಚಯಿಸುವ ಹೆಬ್ಬಯಕೆ ಇದೆ. ಮೃಗಾಲಯದಲ್ಲಿ ಸಾಕಷ್ಟು ವರ್ಷಗಳು ಸೇವೆ ಸಲ್ಲಿಸಿ, ಒಳ್ಳೆಯ ಹೆಸರು ಗಳಿಸಿ ನಿವೃತ್ತರಾದವರ ಸಲಹೆಗಳನ್ನೂ ಪಡೆಯಲಾಗುವುದು.

ಆಂದೋಲನ ಡೆಸ್ಕ್

Recent Posts

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಮಕ್ಕಳ ಮನಸ್ಸು ಗೆದ್ದ “ಸೂರ್ಯ–ಚಂದ್ರ” ಮಕ್ಕಳ ನಾಟಕ

ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…

9 mins ago

ಜನವರಿ.16ರಂದು ದೆಹಲಿಗೆ ಹೋಗುತ್ತೇನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಜನವರಿ.16ರಂದು ನಾನು ದೆಹಲಿಗೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ…

1 hour ago

ಥೈಲ್ಯಾಂಡ್‌ನಲ್ಲಿ ರೈಲಿನ ಮೇಲೆ ಬೃಹತ್‌ ಕ್ರೇನ್‌ ಬಿದ್ದು 22 ಪ್ರಯಾಣಿಕರು ಸಾವು

ಥೈಲ್ಯಾಂಡ್‌ನ ಈಶಾನ್ಯದಲ್ಲಿ ಕ್ರೇನ್‌ ರೈಲಿನ ಮೇಲೆ ಬಿದ್ದು ಹಳಿತಪ್ಪಿದ ಪರಿಣಾಮ ಕನಿಷ್ಠ 22 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು…

2 hours ago

ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಹಾಸನ: ಅಂಗಡಿಯಲ್ಲಿ ವ್ಯಾಪಾರ ಮಾಡುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ. ಪ್ರವೀಣ್(‌45)…

3 hours ago

ಮಂಡ್ಯ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಯೋಧ ಸಾವು

ಮಂಡ್ಯ: ಮಹಾರಾಷ್ಟ್ರ ರಾಜ್ಯದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.…

3 hours ago

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ…

3 hours ago