ಸರಗೂರು: ಪಟ್ಟಣದಲ್ಲಿ ಗ್ರಾಮದೇವತೆ ಶ್ರೀ ಸಂತೆ ಮಾಸ್ತಮ್ಮನವರ ೩೧ನೇ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ನೇತೃತ್ವವನ್ನು ಶ್ರೀ ಮಾಸ್ತಮ್ಮನವರ ಪೂಜಾ ಸೇವಾ ಸಮಿತಿ ವಹಿಸಿಕೊಂಡಿತ್ತು. ನೂರಾರು ಭಕ್ತರ ಸಮ್ಮುಖ ದಲ್ಲಿ ಧಾರ್ಮಿಕ ಆಚರಣೆಗಳು ಸಂಭ್ರಮದಿಂದ ಜರುಗಿದವು.
ಇಲ್ಲಿನ ಶ್ರೀ ಸಂತೆಮಾಸ್ತಮ್ಮನವರ ದೇವಾಲಯವು ಶತಮಾನಗಳ ಇತಿಹಾಸ ಹೊಂದಿದ್ದು, ಹಿಂದಿನಿಂದಲೂ ಗ್ರಾಮದ ಕುಲ ದೇವತೆ ಹಾಗೂ ಗ್ರಾಮದೇವತೆಯಾಗಿ ಪೂಜಿಸಲ್ಪಡುತ್ತಿದೆ.
ಭೀಮನಕೊಲ್ಲಿ ಶ್ರೀ ಮಹದೇಶ್ವರ ಜಾತ್ರೆ ಮುಗಿದ ಮಾರನೆಯ ದಿನ ನಡೆಯುವ ಈ ಜಾತ್ರೆಗೆ ವಿಶೇಷ ಮಹತ್ವವಿದ್ದು, ಹಿಂದೆ ಇದನ್ನು ‘ತಂಗಳು ಜಾತ್ರೆ’ ಎಂದು ಕರೆಯಲಾಗುತ್ತಿತ್ತು ಎಂದು ವಯೋವೃದ್ಧ ಭಕ್ತರು ನೆನಪಿಸಿಕೊಂಡರು.
ಇಂದಿಗೂ ಈ ಜಾತ್ರೆಯನ್ನು ಗ್ರಾಮಸ್ಥರು ಅಪಾರ ಭಕ್ತಿ ಭಾವದಿಂದ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಗುರುವಾರ ರಾತ್ರಿಯಿಂದಲೇ ಮಾಸ್ತಮ್ಮನವರ ದೇವಾಲಯವನ್ನು ತಳಿರು-ತೋರಣ, ಬಣ್ಣಬಣ್ಣದ ರಂಗೋಲಿ ಹಾಗೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾ ಗಿತ್ತು. ಶುಕ್ರವಾರ ಮುಂಜಾನೆ ವಿನಯ್ ಶಾಸ್ತ್ರಿ ಹಾಗೂ ವಿರೂಪಾಕ್ಷ ಅವರಿಂದ ಹೋಮ- ಹವನಗಳು ನಡೆದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಮಧ್ಯಾಹ್ನ ಪೂರ್ಣಕುಂಭ ಕಳಸದೊಂದಿಗೆ ಉತ್ಸವಮೂರ್ತಿಯನ್ನು ಕಪಿಲಾ ನದಿಗೆ ಕೊಂಡೊಯ್ದು ಗಂಗೆ ಪೂಜೆ ಸಲ್ಲಿಸಲಾಯಿತು. ಶಿವ-ಪಾರ್ವತಿ ಉತ್ಸವ ಮೂರ್ತಿಗಳನ್ನು ವಿವಿಧ ಹೂಗಳಿಂದ ಭವ್ಯವಾಗಿ ಅಲಂಕರಿಸಿ, ಮಂಗಳವಾದ್ಯ, ವೀರಗಾಸೆ, ಸತ್ತಿಗೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಉತ್ಸವ ನಡೆಸಲಾಯಿತು. ಕೊಂಡ ಹಾಯುವ ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಾ ದೇವಸ್ಥಾನಕ್ಕೆ ಆಗಮಿಸಿದರು.
ದೇವಾಲಯದ ಬಳಿ ಮೂರು ಸುತ್ತು ಪ್ರದಕ್ಷಿಣೆ ನೆರವೇರಿಸಿದ ಬಳಿಕ, ಮೊದಲು ದೇವ ಸ್ಥಾನದ ಅರ್ಚಕರು ಕೊಂಡವನ್ನು ಹಾಯ್ದು, ನಂತರ ಹರಕೆ ಹೊತ್ತುವವರು ಹಾಗೂ ಸತ್ತಿಗೆ ಹೊತ್ತವರು ಕೊಂಡ ಹಾಯ್ದರು. ಈ ಸಂದರ್ಭದಲ್ಲಿ ಮಹಾ ಮಂಗಳಾರತಿ ಬೆಳಗಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ನೂರಾರು ಭಕ್ತರು ಕೆಂಡದ ಮೇಲೆ ನಡೆದು ತಮ್ಮ ಹರಕೆಗಳನ್ನು ತೀರಿಸಿದರು. ಜಾತ್ರಾ ಕೊಂಡೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರಗೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ಗೋಪಾಲ್, ಎಎಸ್ಐ ಶ್ರೀಕಂಠಸ್ವಾಮಿ, ಸಿಬ್ಬಂದಿಗಳಾದ ಇಮ್ರಾನ್, ಆನಂದ್, ಜಗದೀಶ್, ಕೃಷ್ಣಯ್ಯ, ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಾಸ್ತಮ್ಮನವರ ಪೂಜಾ ಸೇವಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸರಗೂರಿನ ನಾಗರಿಕರು, ಎಲ್ಲಾ ಜನಾಂಗಗಳ ಯಜಮಾನರು, ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.
ಮೈಸೂರು ನಗರದಲ್ಲಿ ಮಳೆನೀರು ಕೊಯ್ಲು ಥೀಮ್ ಪಾರ್ಕ್ ಸ್ಥಾಪಿಸುವ ಹಿಂದಿನ ಹಾಗೂ ಈಗಿನ ಸರ್ಕಾರಗಳ ಭರವಸೆ ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ…
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಪುಸ್ತಕ ಪ್ರೇಮಿ ೭೮ ವರ್ಷದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕನ್ನಡ…
ಮೈಸೂರಿನ ರಾಮಕೃಷ್ಣನಗರ ಮಾರ್ಗಕ್ಕೆ ಪ್ರತಿದಿನ ನಗರ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್ಸುಗಳ ಸಂಖ್ಯೆ ಮಾತ್ರ…
ರೆಸಾರ್ಟ್ಗಳು, ಹೋಂಸ್ಟೇಗಳಿಗೆ ಅಕ್ರಮ ರೆಸಾರ್ಟ್ಗಳ ತನಿಖಾ ಸಮಿತಿಯವರ ದಿಢೀರ್ ಭೇಟಿ ಹೆಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನ ನಾಗರಹೊಳೆ ಮತ್ತು ಬಂಡೀಪುರ…
ಕೆ.ಬಿ.ಶಂಶುದ್ಧೀನ್ ಗ್ರಾಮಕ್ಕೆ ಹುಲಿ, ಚಿರತೆಗಳು ಲಗ್ಗೆಯಿಡುವ ಆತಂಕ; ಹೋರಾಟದ ಎಚ್ಚರಿಕೆ ನೀಡಿದ ಹಕ್ಕೆ ಗ್ರಾಮಸ್ಥರು ಕುಶಾಲನಗರ: ಬೀದಿ ನಾಯಿಗಳ ಹಾವಳಿ…