ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು: ನಗರದ ದೇವರಾಜ ಮೊಹಲ್ಲಾದಲ್ಲಿರುವ ಶತಮಾನ ತುಂಬಿರುವ ದೇವರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕನಿಷ್ಠ ಮೂಲ ಸೌಕರ್ಯಗಳ ಕೊರತೆಯಿಂದ ತುರ್ತು ನಿಗಾಘಟಕ (ಐಸಿಯು)ದಲ್ಲಿ ಇದೆ.
೧೮೯೦ರಲ್ಲಿ ಸ್ಥಾಪಿತವಾಗಿರುವ ಈ ಶಾಲೆಯು ೧೩೬ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಸ್ತುತ ಶಾಲೆಯಲ್ಲಿ ೧ರಿಂದ ೭ನೇ ತರಗತಿಯವರೆಗೆ ೩೬ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳ ಸಂಖ್ಯೆ ೪೦೦ಕ್ಕಿಂತ ಹೆಚ್ಚಿದ್ದ ಕಾಲವೂ ಇತ್ತು ಎಂಬುದಾಗಿ ಈ ಶಾಲೆಯ ದಾಖಲೆಗಳು ಹೇಳುತ್ತವೆ. ಪ್ರಸ್ತುತ ಈ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದು, ಒಬ್ಬರಿಗೆ ಪ್ರಭಾರ ಮುಖ್ಯೋಪಾಧ್ಯಾಯರ ಜವಾಬ್ದಾರಿ ವಹಿಸಿಕೊಡಲಾಗಿದೆ.
ಒಂದೇ ಕೊಠಡಿಯಲ್ಲಿ ೩೬ ಮಕ್ಕಳಿಗೂ ಪಾಠ ಹೇಳುತ್ತಿರುವುದು ಶಾಲೆಯ ಶೋಚನೀಯ ಸ್ಥಿತಿಗೆ ಸಾಕ್ಷ್ಯ ಒದಗಿಸುತ್ತದೆ. ಒಂದೇ ಕೊಠಡಿಯಲ್ಲಿ ಆ ಕಡೆ ಒಬ್ಬರು ಶಿಕ್ಷಕರು, ಈ ಕಡೆ ಒಬ್ಬರು ಶಿಕ್ಷಕರು ಪಾಠ ಹೇಳಬೇಕಾಗಿದೆ. ಇದು ಮಕ್ಕಳ ಕಲಿಕೆ ಹಾಗೂ ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ ಉಂಟು ಮಾಡಿದೆ.
ಈ ಕೊಠಡಿಯ ಪಕ್ಕದಲ್ಲಿ ಕಗ್ಗತ್ತಲು ತುಂಬಿರುವ ಚಿಕ್ಕ ಕೋಣೆಯಲ್ಲಿ ನಾನಾ ತರಹದ ವಸ್ತುಗಳನ್ನು ದಾಸ್ತಾನಿಡಲಾಗಿದೆ. ಇದು ಒಂದು ರೀತಿಯಲ್ಲಿ ಕಸದ ರಾಶಿಯಂತೆ ಕಾಣುತ್ತಿದೆ. ಅವಶ್ಯಕ ಬಿದ್ದರೆ ಇನ್ನೊಬ್ಬ ಸಹ ಶಿಕ್ಷಕರು, ಕೆಲ ಮಕ್ಕಳನ್ನು ಈ ಕೊಠಡಿಗೆ ಕರೆದು ಪಾಠ ಹೇಳುತ್ತಾರೆ ಎನ್ನಲಾಗಿದೆ. ಇಲ್ಲಿನ ಮಕ್ಕಳಿಗೆ ಇಸ್ಕಾನ್ ಅಕ್ಷಯ ಪಾತ್ರೆಯಡಿ ಬಿಸಿಯೂಟ ಸರಬರಾಜು ಆಗುತ್ತದೆ ಎನ್ನಲಾಗಿದೆ.
ಶಾಲೆಯಲ್ಲಿ ಮಕ್ಕಳಿಗೆ ಕೂರಲು ಸಾಕಷ್ಟು ಬೆಂಚ್ಗಳೂ ಇಲ್ಲ. ಜಮಖಾನದ ಮೇಲೆ ಕೂರಬೇಕಾದ ಪರಿಸ್ಥಿತಿಯಿದೆ. ಕಂಪ್ಯೂಟರ್ಗಳ ಸೌಲಭ್ಯ ಆಗಲಿ, ಸ್ಮಾರ್ಟ್ಕ್ಲಾಸ್ ವ್ಯವಸ್ಥೆಯನ್ನಾಗಲಿ ಕಲ್ಪಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿ ಶಾಲೆ ವಾತಾವರಣ ಉಸಿರುಗಟ್ಟಿದಂತಿದೆ. ಇದಲ್ಲದೆ, ಮಕ್ಕಳ ಆಟೋಟಕ್ಕೆ ಮೈದಾನವೂ ಇಲ್ಲವಾಗಿದೆ.
ಈ ಶಾಲೆಗೆ ಸಮೀಪದಲ್ಲೇ ಇರುವ ಅವಿಲ ಕಾನ್ವೆಂಟ್, ಮರಿಮಲ್ಲಪ್ಪ, ಸದ್ವಿದ್ಯಾ ಶಾಲೆಗಳು ಸವಾಲಾಗಿವೆ. ಬಹುತೇಕ ಪೋಷಕರು ಅತ್ತ ಕಡೆಗೆ ಆಕರ್ಷಿತವಾಗಿವೆ. ಬೇರೆ ರಾಜ್ಯದಿಂದ ಹೊಟ್ಟೆಪಾಡು, ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿರುವ ವಲಸಿಗರ ಬಹಳಷ್ಟು ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಓದಿ ಉನ್ನತ ಸ್ಥಾನಕ್ಕೆ ಹೋಗಿರುವ ಅನೇಕರಿದ್ದು, ಅವರಲ್ಲಿ ಮುಖ್ಯವಾಗಿ ಯೋಗನರಸಿಂಹ ಎಂಬವರು ಈಗ ವೈದ್ಯರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಮತ್ತೊಬ್ಬ ಹಳೆಯ ವಿದ್ಯಾರ್ಥಿ ಡಿ.ನಾಗಭೂಷಣ್ ಮೈಸೂರು ನಗರಪಾಲಿಕೆ ಸದಸ್ಯರಾಗಿದ್ದರು. ಇವರ ತಮ್ಮ, ಶಾಲೆಯಲ್ಲಿ ಓದಿರುವ ಡಿ.ಧ್ರುವಕುಮಾರ್ ಅವರು ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾಗಿದ್ದರು. ಲಕ್ಷ್ಮೀನಾರಾಯಣ್ ಎಂಬವರು ಈ ಶಾಲೆಯಲ್ಲಿ ಓದಿ ಸ್ಟೇಟ್ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ ಎಂಬುದಾಗಿ ಮುಖ್ಯ ಶಿಕ್ಷಕಿ ಸವಿತಾ ಮಾಹಿತಿ ನೀಡಿದರು. ಕುರುಬಾರಹಳ್ಳಿ ಕ್ಲಸ್ಟರ್ಗೆ ಸೇರಿರುವ ಈ ಕನ್ನಡ ಶಾಲೆಯಲ್ಲಿ ಕರ್ನಾಟಕದ ಮಕ್ಕಳಿಗಿಂತ ಹೊರ ರಾಜ್ಯದವರ ಮಕ್ಕಳೇ ಹೆಚ್ಚಾಗಿದ್ದಾರೆ. ರಾಜಸ್ಥಾನದಿಂದ ಬಂದು ವ್ಯಾಪಾರ ವೃತ್ತಿಗಾಗಿ ಮೈಸೂರು ನಗರದಲ್ಲಿ ನೆಲೆಸಿರುವ ಪೋಷಕರ ೩೩ ಮಕ್ಕಳಿದ್ದು, ೩ ಮಕ್ಕಳು ಮಾತ್ರ ಸ್ಥಳೀಯರಾಗಿದ್ದಾರೆ. ಇದರಲ್ಲಿ ಒಬ್ಬ ವಿದ್ಯಾರ್ಥಿ ಪರಿಶಿಷ್ಟ ಜಾತಿ, ಇಬ್ಬರು ವಿದ್ಯಾರ್ಥಿ ಪರಿಶಿಷ್ಟ ಪಂಗಡಗಳು, ೩೪ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವುದಾಗಿ ಸಹಶಿಕ್ಷಕರಾದ ಪಾರ್ವತಿ ವಿವರಿಸಿದರು.
” ಶಾಲೆಯಲ್ಲಿ ಈಗ ಮೂವರು ಶಿಕ್ಷಕರಿದ್ದೇವೆ. ಮಕ್ಕಳ ಅನು ಕೂಲಕ್ಕಾಗಿ ಇನ್ನೊಬ್ಬ ಶಿಕ್ಷಕರು ಬೇಕಾಗಿದ್ದಾರೆ. ಆಡಳಿತ ವರ್ಗ ಈ ಕಡೆ ಗಮನ ಹರಿಸಿದರೆ ಅನುಕೂಲ ಆಗಲಿದೆ.”
-ಟಿ.ಸಿ.ಸವಿತಾ, ಪ್ರಭಾರ ಮುಖ್ಯೋಪಾಧ್ಯಾಯರು
” ಈ ಶತಮಾನದ ಶಾಲೆಯನ್ನು ‘ದೇವರಾಜ ಸ್ಕೂಲ್’ ಅಂತಲೇ ಈಗಲೂ ಕರೆಯುವುದು ರೂಢಿಯಲ್ಲಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಶಿವರಾಮ ಪೇಟೆಯ ರಾಜ್ ಕಮಲ್ ಚಿತ್ರಮಂದಿರ ಸಮೀಪದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಈ ಶಾಲೆಗೆ ವಿಲೀನ ಗೊಳಿಸಲಾಯಿತು. ನಂತರ ಈ ಶಾಲೆಯನ್ನು ‘ಶಿವರಾಮಪೇಟೆ ಶಾಲೆ’ ಅಂತ ಗುರುತಿಸಲಾಗುತ್ತಿದೆ.”
-ಮೋಹನ್ ಕುಮಾರ್, ಸ್ಥಳೀಯರು, ದೇವರಾಜ ಮೊಹಲ್ಲಾ, ಮೈಸೂರು
” ನಮ್ಮನ್ನು ಆಳುವ ಅನೇಕ ರಾಜಕಾರಣಿಗಳೇ ಖಾಸಗಿ ಶಾಲೆಗಳನ್ನು ಸ್ಥಾಪಿಸಿದ್ದಾರೆ. ಅವರನ್ನು ಸರ್ಕಾರಿ ಶಾಲೆಗಳನ್ನು ಉದ್ಧಾರ ಮಾಡಿ ಅಂತ ಕೇಳಿದರೆ ಒಪ್ಪುತ್ತಾರೆಯೇ? ನೇರವಾಗಿ ಹೇಳುವುದಾದರೆ ಸರ್ಕಾರಿ ಶಾಲೆಯ ದುಸ್ಥಿತಿಗೆ ಸರ್ಕಾರವೇ ನೇರ ಕಾರಣ. ನಾವು ಯಾರನ್ನೂ ದೂರುವಂತಿಲ್ಲ.”
-ಎಚ್.ರಾಜಗೋಪಾಲ್, ಹಳೆ ವಿದ್ಯಾರ್ಥಿ
” ದೇವರಾಜ ಬಾಲಕಿಯರ ಸರ್ಕಾರಿ (ಸ್ವತಂತ್ರ) ಪದವಿಪೂರ್ವ ಕಾಲೇಜಿನ ಆವರಣದಲ್ಲಿ ದೇವರಾಜ ಶಾಲೆ ಇದೆ. ಈ ಶಾಲೆ ಆವರಣದಲ್ಲಿ ಪದವಿಪೂರ್ವ ಕಾಲೇಜು ಕಟ್ಟಡದ ಕಾಮಗಾರಿ ನಡೆದಿದೆ. ಹಾಗಾಗಿ ದೇವರಾಜ ಶಾಲೆಗೆ ಸ್ಥಳದ ಅಭಾವ ಇದೆ. ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ, ಅದರಲ್ಲಿ ನಿರ್ಮಿಸುವ ಮೂರು ದೊಡ್ಡ ಕೊಠಡಿಗಳನ್ನು ದೇವರಾಜ ಶಾಲೆಗೆ ಹಸ್ತಾಂತರಿಸಲಾಗುವುದು.”
-ಕೃಷ್ಣ, ಬಿಇಒ, ದಕ್ಷಿಣ ವಲಯ, ಮೈಸೂರು
” ಅನ್ಯರಾಜ್ಯದ ಮಕ್ಕಳಿಗೂ ಕನ್ನಡವನ್ನು ಕಲಿಸುತ್ತಿದ್ದೇವೆ. ಸರ್ಕಾರ ಮನಸು ಮಾಡಿದರೆ ಆಂಗ್ಲ ಮಾಧ್ಯ ಮವನ್ನು ನಮ್ಮ ಶಾಲೆಯಲ್ಲೂ ಅಳವಡಿಸಿಕೊಳ್ಳುತ್ತೇವೆ. ಜೊತೆಗೆ ನಮ್ಮ ಶಾಲೆಯ ಪ್ರವೇಶಾತಿಯನ್ನೂ ಹೆಚ್ಚಿಸುವ ಸಂಬಂಧವಾಗಿ ಆಡಳಿತ ವರ್ಗದ ಜೊತೆ ಶ್ರಮವಹಿಸಲಾಗುತ್ತಿದೆ.”
-ಪಾರ್ವತಿ, ಸಹ ಶಿಕ್ಷಕರು
ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ನೆನಪಿನಾರ್ಥವಾಗಿ ಆಚರಿಸುವ ಸರ್ವೋದಯ ದಿನದಂತೆ ರಾಜ್ಯ ಸರ್ಕಾರ ಖಾದಿ ಗ್ರಾಮೋದ್ಯೋಗ ಕೇಂದ್ರಗಳಿಗೆ ಚೈತನ್ಯ ತುಂಬುವ…
ಮಂಡ್ಯದಲ್ಲಿ ಮೂರು ಬಾರಿ ಶಾಸಕರಾಗಿ ಗೆದ್ದು ದಾಖಲೆ ಡಾ.ಎಸ್.ಶಿವರಾಮು ಇತಿಹಾಸದಲ್ಲಿ ವ್ಯಕ್ತಿಚರಿತ್ರೆಗೆ ಮಹತ್ವವಾದ ಸ್ಥಾನವಿದೆ.ಇದನ್ನು ಮನಗಂಡೇ ಬ್ರಿಟಿಷ್ ಚರಿತ್ರೆಕಾರರಲ್ಲಿ ಪ್ರಮುಖರಾಗಿದ್ದ…
ಎಡಗೈಯಲ್ಲಿದ್ದ ಸಿಗರೇಟ್ ಅನ್ನು ಬಾಯಲ್ಲಿಟ್ಟು ಹೊಗೆ ಎಳೆದುಕೊಂಡವನು ಅದನ್ನು ಹೊರಬಿಟ್ಟಾಗ ಸುರುಳಿ ಸುರುಳಿಯಾಗಿ ಹೊಗೆ ಮೇಲೇರತೊಡಗಿತು. ಹೀಗೆ ಬಾಯೊಳಗೆ ಎಳೆದುಕೊಂಡ…
ತಿ.ನರಸೀಪುರ: ಪಟ್ಟಣದ ಕಪಿಲಾ ನದಿ ದಂಡೆಯ ಶ್ರೀ ಬಳ್ಳೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ಪಾರ್ಕ್ ಹೋಟೆಲ್ ಉದ್ಯಮಿಯೊಬ್ಬರ ಪರಿಶ್ರಮದಿಂದ ಕಾಯಕಲ್ಪ…
ರಾಜಾರಾಂ ತಲ್ಲೂರು ಆರ್ಥಿಕ ಶಿಸ್ತಿನ ಚೌಕಟ್ಟಿನ ಒಂದೊಂದೇ ಅಂಶಗಳನ್ನು ಮುಂದಿಟ್ಟುಕೊಂಡು - ‘ನೋಡಿ, ನಾವು ಆರ್ಥಿಕವಾಗಿ ಸ್ಥಿರವಾಗಿದ್ದು, ವಿಕಸಿತ ಭಾರತದತ್ತ…