Andolana originals

ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ ದಿಢೀರ್‌ ಮುಂದೂಡಿಕೆ

ಕೆ.ಬಿ.ರಮೇಶನಾಯಕ

ಮೈಸೂರು: ಶತಮಾನವನ್ನು ಪೂರೈಸಿರುವ ನಗರದ ದಿ ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಯನ್ನು ದಿಢೀರನೆ ಮುಂದೂಡಲಾಗಿದೆ.

ನಾಮಪತ್ರ ಸಲ್ಲಿಕೆ ಆರಂಭದ ಮುನ್ನಾ ದಿನವೇ ನ.೨ರಂದು ನಡೆಯಬೇಕಾಗಿದ್ದ ಚುನಾವಣಾ ಅಧಿಸೂಚನೆಯನ್ನು ವಾಪಸ್ ಪಡೆದು ಆದೇಶ ಹೊರಡಿಸಲಾಗಿದ್ದು, ಇದರಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಮಾನಸಿಕವಾಗಿ ಸಜ್ಜಾಗಿದ್ದ ಆಕಾಂಕ್ಷಿಗಳಲ್ಲಿ ತೀವ್ರ ನಿರಾಶೆ ಮೂಡಿದೆ.

ಚುನಾವಣಾ ಮುಂದೂಡಿಕೆ ವಿಚಾರ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರಲ್ಲಿ ಪರ-ವಿರೋಧಕ್ಕೂ ಕಾರಣವಾಗಿದ್ದು, ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಹರ್ಷ ರಸ್ತೆಯಲ್ಲಿರುವ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂರು ವರ್ಷಗಳನ್ನು ಪೂರೈಸಿದ್ದು, ವರ್ಷದಿಂದ ವರ್ಷಕ್ಕೆ ಖಾತೆದಾರರು, ಷೇರುದಾರರು, ಮತದಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಡಳಿತ ಮಂಡಳಿ ಚುನಾವಣೆಯಲ್ಲಿ ತೀವ್ರ ಪೈಪೋಟಿಯೂ ಉಂಟಾಗಿದೆ.

ಹಾಲಿ ಆಡಳಿತ ಮಂಡಳಿ ಅಧಿಕಾರಾವಧಿಯು ನ.೧೫ಕ್ಕೆ ಮುಕ್ತಾಯವಾಗುತ್ತಿರುವುದರಿಂದ ನೂತನ ಆಡಳಿತ ಮಂಡಳಿಯ ೧೩ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕ ಸಿ.ಪ್ರಸಾದ್ ರೆಡ್ಡಿ ಅವರು ಆ.೨೯ರಂದು ಅಧಿಸೂಚನೆ ಹೊರಡಿಸಿದ್ದರು.

ಚುನಾವಣಾ ಅಧಿಸೂಚನೆಯ ಪ್ರಕಾರ ಅ.೨೫ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ, ಅ.೨೬ರಂದು ನಾಮಪತ್ರಗಳ ಪರಿಶೀಲನೆ, ೨೭ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ, ಅ.೨ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ, ಅ.೧೯ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಬೇಕಾಗಿತ್ತಾದರೂ ಮತದಾರರ ಪಟ್ಟಿ ಅನುಮೋದನೆಗೊಂಡಿಲ್ಲ ಎನ್ನುವ ಕಾರಣ ಕೊಟ್ಟು ಅಧಿಸೂಚನೆ ವಾಪಸ್ ಪಡೆದು ಮುಂದೂಡಲಾಗಿದೆ. ಇದರಿಂದಾಗಿ ದೀಪಾವಳಿ ಹಬ್ಬದ ಸಂಭ್ರಮಕ್ಕಿಂತಲೂ ಚುನಾವಣೆಯ ಗುಂಗಿನಲ್ಲಿದ್ದ ಆಕಾಂಕ್ಷಿಗಳು ನಿರಾಶೆಗೊಂಡಿದ್ದಾರೆ.

ಮುಂದೂಡಿಕೆಗೆ ಕಾರಣವೇನು?: ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯನ್ನು ತಯಾರಿಸಿ ಅನುಮೋದನೆ ನೀಡಬೇಕಾಗಿತ್ತು. ಬ್ಯಾಂಕಿನ ಹಾಲಿ ಆಡಳಿತ ಮಂಡಳಿಯು ಮತದಾರರ ಪಟ್ಟಿ ಪರಿಶೀಲನಾಧಿಕಾರಿಗಳಿಗೆ ೧೭ ಸಾವಿರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಿತ್ತು. ಆದರೆ, ಪರಿಶೀಲನಾಧಿಕಾರಿಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಿ ೬,೮೦೦ ಮಂದಿ ಅರ್ಹ ಮತದಾರರಿದ್ದರೆ ೧೦,೨೦೦ ಮಂದಿ ಅನರ್ಹ ಮತದಾರರು ಇದ್ದಾರೆ ಎಂ ದು ಗುರುತಿಸಿದ್ದರು.

ಈ ಮತದಾರರ ಪಟ್ಟಿಗೆ ಪರಿಶೀಲನಾಧಿಕಾರಿಗಳು ಅನುಮೋದನೆ ನೀಡಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕಿತ್ತು. ಈ ಬೆಳವಣಿಗೆ ಹೊತ್ತಲ್ಲಿ ನಿರ್ದೇಶಕ ಎಂ.ಕೆ.ಅಶೋಕ್ ಅವರು ಮತದಾರರ ಪಟ್ಟಿಯಲ್ಲಿ ಕೆಲವರನ್ನು ಕೈಬಿಟ್ಟಿರುವ ಜತೆಗೆ, ಅನರ್ಹರನ್ನು ಸೇರಿಸಲಾಗಿದ್ದು, ಮತದಾರರ ಪಟ್ಟಿಯನ್ನು ಪುನರ್ ಪರಿಶೀಲನೆ ನಡೆಸುವಂತೆ ಕೋರಿ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ದೂರು ನೀಡಿದ್ದರು. ಮತದಾರರ ಪಟ್ಟಿ ಲೋಪ ಸರಿಪಡಿಸದೆ ಚುನಾವಣೆ ನಡೆಸಬಾರದು. ಬ್ಯಾಂಕಿನ ಎಲ್ಲ ಸದಸ್ಯರಿಗೂ ಚುನಾವಣಾ ನೋಟಿಸ್ ಪತ್ರ ಕೂಡ ಕಳುಹಿಸಿಲ್ಲದ ಕಾರಣ ಪುನರ್ ಪರಿಶೀಲಿಸುವ ತನಕ ಚುನಾವಣೆ ಮುಂದೂಡಬೇಕು ಎಂದು ಕೋರಿದ್ದರು. ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಬ್ಯಾಂಕಿನಲ್ಲಿ ನಡೆಯುತ್ತಿರುವ ಹಲವಾರು ವಿದ್ಯಮಾನಗಳ ನಡುವೆ ಕೆಲವು ಸದಸ್ಯರು ನ್ಯಾಯಾಲಯದ ಮೊರೆ ಹೋಗಲು ತಯಾರಾಗಿದ್ದಾರೆಂದು ಗೊತ್ತಾಗಿದೆ.

ಬ್ಯಾಂಕಿನಲ್ಲಿ ೨೦ ಸಾವಿರ ಸದಸ್ಯರಿದ್ದು, ಅದರಲ್ಲಿ ಸತತ ಮೂರು ಬಾರಿ ಸರ್ವ ಸದಸ್ಯರ ಸಭೆಗೆ ಗೈರಾಗಿರುವುದು, ಸುಸ್ಥಿದಾರರಾಗಿರುವ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಕೈ ಬಿಡಲಾಗಿದೆ. ಆದರೆ, ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರೆ ಕನಿಷ್ಠ ಆರು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಬಯಸದ ನಿರ್ದೇಶಕರೊಬ್ಬರು ಹೇಳಿದರು. ಮತದಾರರ ಪಟ್ಟಿ ಪ್ರಕಟಿಸುವ ಮುನ್ನವೇ ಸರಿಯಾಗಿಲ್ಲವೆಂದು ದೂರು ನೀಡಿರುವುದು ಸರಿಯಲ್ಲ. ನಾಮಪತ್ರ ಸಲ್ಲಿಕೆ ಆರಂಭದ ಮುನ್ನಾ ದಿನದಂದು ಅಧಿಸೂಚನೆ ವಾಪಸ್ ಪಡೆಯಲಾಗಿದೆ.

” ಬ್ಯಾಂಕಿನಿಂದ ಅರ್ಹ ಮತದಾರರ ಪಟ್ಟಿಯನ್ನು ಸಲ್ಲಿಸಿದ್ದಾಗ ಅದರಲ್ಲಿ ೬,೮೦೦ ಮತದಾರರನ್ನು ಆಯ್ಕೆ ಮಾಡಲಾಗಿದೆ. ಚುನಾವಣೆ ನಡೆಸುವ ಬದಲಿಗೆ ಏಕಾಏಕಿ ಮುಂದೂಡಿರುವುದು ಸರಿಯಲ್ಲ. ಚುನಾವಣಾಧಿಕಾರಿಗಳು ನಿರ್ದಿಷ್ಟವಾದ ಕಾರಣ ನೀಡಿಲ್ಲ.”

-ಎಂ.ಎನ್.ಸ್ವರೂಪ್, ಅಧ್ಯಕ್ಷರು, ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್

” ಮತದಾರರ ಪಟ್ಟಿ ವಿಚಾರದಲ್ಲಿ ಸದಸ್ಯರಿಂದ ದೂರು ಬಂದಿರುವ ಕಾರಣ ಪರಿಶೀಲನೆ ನಡೆಸಲು ತಿಳಿಸಿ ಚುನಾವಣೆಯನ್ನು ಮುಂದೂಡಲಾಗಿದೆ. ಯಾವ ಅಂಶಗಳನ್ನು ಮುಂದಿಟ್ಟುಕೊಂಡುಮುಂದೂಡಲಾಗಿದೆ ಎಂಬುದರ ಬಗ್ಗೆ ಕಚೇರಿಯಿಂದ ಮಾಹಿತಿ ಪಡೆಯಬಹುದು.”

-ಸಿ.ಪ್ರಸಾದ್ ರೆಡ್ಡಿ, ಸಹಕಾರ ಸಂಘಗಳ ಜಂಟಿ ನಿಬಂಧಕರು

ಆಂದೋಲನ ಡೆಸ್ಕ್

Recent Posts

ಪ್ರಮಾಣ ವಚನ ಸಮಾರಂಭಕ್ಕೆ ವಿಜಯ್‌ ಪತ್ನಿ, ಮಕ್ಕಳು ಗೈರು

ಚೆನ್ನೈ : ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು.…

8 hours ago

ಮಡಿಕೇರಿ | ನೀರಿನಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ : ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.…

9 hours ago

ಗಡಿ ಜಿಲ್ಲೆಯಲ್ಲೂ ತಮಿಳು ಸಿಎಂ ವಿಜಯ್‌ ಹವಾ!

ಹನೂರು : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಪಟ್ಟಣದಲ್ಲಿ…

9 hours ago

ಪ್ರಧಾನಿ ಸಂಚಾರ ಮಾರ್ಗದಲ್ಲಿ ಜಿಲಿಟೆನ್ ಕಡ್ಡಿ ಪತ್ತೆ ; ಕೆಲಕಾಲ ಆತಂಕ ; ಓರ್ವ ವಶಕ್ಕೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ವೇಳೆ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ…

9 hours ago

ತಮಿಳುನಾಡು | ತಿರುಚಿರಾಪಳ್ಳಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ

ಚೆನ್ನೈ : ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾನುವಾರ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ…

10 hours ago

ಹುಣಸೂರು | ಭಾರೀ ಗಾಳಿ-ಮಳೆಗೆ ಹಾರಿಹೋದ ಚಾವಣಿ

ಹುಣಸೂರು : ಬಿರುಗಾಳಿ ಮಳೆಗೆ ತಾಲ್ಲೂಕಿನ ಹನಗೋಡು ಹೋಬಳಿಯ ವದ್ಲಿ ಮನುಗನಹಳ್ಳಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿಹೋಗಿದ್ದು,…

11 hours ago