ದೇವರನಾಡಿನಲ್ಲಿ ಪ್ರಳಯ; ಸ್ಮಶಾನವಾಯ್ತು ಊರು!
ಸಾಕ್ಷಾತ್ ವರದಿ: ಕೆ.ಪಿ. ನಾಗರಾಜ್, ಪಬ್ಲಿಕ್ ಟಿವಿ
ವಯನಾಡು: ದೇವರ ನಾಡು ಕೇರಳದಲ್ಲಿ ಜಲಪ್ರಳಯ ಉಂಟಾಗಿದೆ. ಇದು ಅಂತಿಂಥ ಪ್ರಳಯ ಅಲ್ಲ. ಇಡೀ ಊರಿಗೆ ಊರೇ ಸ್ಮಶಾನ ಮಾಡಿದ ಪ್ರಳಯ! ಮನೆ, ಮಠ, ಜೀವ ಎಲ್ಲವನ್ನೂ ಕ್ಷಣಾರ್ಧದಲ್ಲಿ ಈ ಪ್ರಳಯ ತನ್ನ ಒಡಲಲ್ಲಿ ಸೇರಿಸಿಕೊಂಡು ಬಹು ದೂರಕ್ಕೆ ಹರಿದು ಹೋಗಿದೆ. ಇಲ್ಲೊಂದು ಊರು ಇತ್ತಾ, ಇಲ್ಲಿ ನೂರಾರು ಜನರು ಬದುಕಿದ್ರಾ ಎಂಬ ಯಾವ ಕುರುಹೂ ಸಿಗದಂತೆ ಈ ಪ್ರಳಯ ಕ್ಷಣಾರ್ಧದಲ್ಲಿ ಮಾಡಿಟ್ಟಿದೆ. ರಾತ್ರೋರಾತ್ರಿ ಊರಿನ ಶೇಕಡಾ ೫೦ ರಷ್ಟು ಜನ ಜಲ ಸಮಾಽಯಾಗಿದ್ದಾರೆ. ಮನೆ, ತೋಟ, ಶಾಲೆ, ದೇವಸ್ಥಾನ, ಮಸೀದಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ – ಇದು ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ ಪಟ್ಟಣದಿಂದ ೮ ಕಿ.ಮೀ. ದೂರದಲ್ಲಿ ಮುಂಡಕ್ಕೈ ಎಂಬ ಬೆಟ್ಟದ ತಪ್ಪಲಿನಲ್ಲಿನ ಚೂರಲ್ ಮಲೈ ಗ್ರಾಮದ ಸ್ಥಿತಿ ( ಮಲಯಾಳಂ ನಲ್ಲಿ ಚೂರಲ್ ಅಂದರೆ ಬಿದಿರು ಎಂದರ್ಥ) ಈ ಗ್ರಾಮದಲ್ಲಿ ೫೦೦ ಮನೆಗಳಿದ್ವು, ಗ್ರಾಮಕ್ಕೆ ಹೊಂದಿಕೊಂಡಂತೆ ಚೂರಲ್ ಮಲೈ ಎಂಬ ನದಿ ನಿಧಾನವಾಗಿ ಹರಿಯುತ್ತಿತ್ತು. ಮುಂಡಕ್ಕೈ ಎಂಬ ಬೆಟ್ಟದಿಂದ ಹರಿಯುವ ನೀರಿನಿಂದ ಚೂರಲ್ ಮಲೈ ನದಿ ಸೃಷ್ಟಿಯಾಗಿ ಹರಿಯುತ್ತದೆ. ಇದರ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಈಗ ಅದೇ ನದಿ ಇಡೀ ಊರನ್ನೇ ಅಹುತಿ ಪಡೆದಿದೆ.
ಹೆಚ್ಚು ಕಡಿಮೆ ೩೦೦ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ೧೫೦ ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಈವರೆಗೆ ೧೦೬ ಜನರ ಮೃತದೇಹಗಳು ಪತ್ತೆಯಾಗಿವೆ. ಉಳಿದವರು ಬದುಕಿದ್ದಾರಾ, ಜಲ ಸಮಾಽಯಾಗಿದ್ದಾರಾ ಗೊತ್ತಿಲ್ಲ . ಅಷ್ಟರಮಟ್ಟಿಗೆ ಈ ನದಿ ಊರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಯಮಕೇಕೆ ಹಾಕಿದೆ.
ಚೂರಲ್ ಮಲೈನಲ್ಲಿ ಇದ್ದವರೆಲ್ಲಾ ಬಹುತೇಕ ಕೂಲಿ ಕಾರ್ಮಿಕ ವರ್ಗದ ಜನ. ಸುತ್ತಮುತ್ತಲಿನ ಎಸ್ಟೇಟ್ ನೋಡಿಕೊಳ್ಳುತ್ತಾ ಬದುಕು ಕಟ್ಟಿಕೊಂಡಿದ್ದರು. ಇದರಲ್ಲಿ ಒಂದು ಶೇ.೨೦ರಷ್ಟು ಕುಟುಂಬಗಳ ಯುವಕರು ದುಬೈಗೆ ಕೆಲಸಕ್ಕೆ ಹೋಗಿದ್ದಾರೆ. ಇಲ್ಲಿ ಇದ್ದಿದ್ದು ಇಳಿ ವಯಸ್ಸಿನ ತಂದೆ, ತಾಯಿಗಳು ಮಾತ್ರ! ಕೆಲವರು ಪತ್ನಿ – ಮಕ್ಕಳನ್ನು ಇಲ್ಲೆ ಬಿಟ್ಟು ದುಬೈನಲ್ಲಿ ದುಡಿದು ಇವರನ್ನು ಸಾಕುತ್ತಿದ್ದರು. ಒಂದರ್ಥದಲ್ಲಿ ಈ ಊರು ಸ್ವರ್ಗದಂತಿತ್ತು. ಸುತ್ತ ಬೆಟ್ಟ, ಊರಿನ ಮಧ್ಯೆ ತಣ್ಣಗೆ ಹರಿಯುವ ನದಿ. ಮನೆಯ ಮುಂಭಾಗವೆ ಕೆಲಸ. ಬಡತನ ನಿವಾರಣೆಗೆ ಮಗ, ಗಂಡ ದುಬೈನಿಂದ ಕಳಿಸುತ್ತಿದ್ದ ಹಣ… ಇವರ ಬದುಕಿಗೆ ಇಷ್ಟು ಸಾಕಾಗಿತ್ತು. ಊರಿನಿಂದ ೮ ಕಿ.ಮೀ. ದೂರ ಇರುವ ಮೇಪ್ಪಾಡಿ ಎಂಬ ಪಟ್ಟಣದ ಸಹವಾಸವೂ ಬೇಡ ಎಂಬಂತೆ ಇಲ್ಲಿನ ಕುಟುಂಬಗಳು ಬದುಕುತ್ತಿದ್ದವು.
ಕಳೆದ ೧೫ ದಿನಗಳಿಂದ ಕೇರಳದಲ್ಲಿ ಕುಂಭದ್ರೋಣ ಮಳೆ ಆಗ್ತಿದೆ. ಹೀಗಾಗಿ ಚಿಕ್ಕ ನದಿಗಳು ಕೂಡ ಭೋರ್ಗರೆದು ಹರಿಯುತ್ತಿದ್ದವು. ಆದರೂ ಚೂರಲ್ ಮಲೈ ನದಿ ಅಪಾಯದ ಮಟ್ಟ ಮೀರಿರಲಿಲ್ಲ. ಯಾವಾಗಲೂ ಈ ನದಿಗೆ ಸೌಮ್ಯವೇ ಭೂಷಣವಾಗಿತ್ತು. ಹೀಗಾಗಿಯೇ ಈ ಗ್ರಾಮದ ಜನರು ಯಾವ ಆತಂಕವೂ ಇಲ್ಲದೆ ನಿದ್ದೆಗೆ ಜಾರಿದ್ದರು. ದುಬೈನಲ್ಲಿರುವ ಈ ಕುಟುಂಬಗಳ ಆಧಾರ ಸ್ಥಂಭಗಳಿಗೂ ಮಳೆ ಹೆಚ್ಚಾಯ್ತು ಈಗ ಹೇಗಪ್ಪಾ ಎಂಬ ಕಿಂಚಿತ್ತೂ ಆತಂಕ ಕೂಡ ಇರಲಿಲ್ಲ. ಆದರೆ ಮಧ್ಯರಾತ್ರಿ ೧ ಗಂಟೆಗೆ ನದಿಯ ವರಸೆಯೆ ಬದಲಾಯ್ತು. ದೈವ ಕಳೆಯಲ್ಲಿದ್ದ ನದಿ ಯಮಸ್ವರೂಪಿ ಆಗಿ ಬದಲಾಯ್ತು. ಹೀಗೆ ನದಿ ಯಮಸ್ವರೂಪಿ ಆಗಿ ಬದಲಾಗಲು ಕಾರಣ ಮುಂಡಕ್ಕೈ ಬೆಟ್ಟದಲ್ಲಿ ಉಂಟಾದ ಭಾರೀ ಜಲಸೋಟ. ಈ ಸೋಟದ ಪರಿಣಾಮ ಚೂರಲ್ ಮಲೈ ನದಿಯ ಒಡಲಿಗೆ ಏಕಾಏಕಿ ಭಾರೀ ಪ್ರಮಾಣದ ನೀರು ಸೇರಿತು. ನೀರಿನ ಜೊತೆಗೆ ಬೆಟ್ಟದಲ್ಲಿನ ಭಾರೀ ಬಂಡೆಗಳು ಹೂವಿನ ರೀತಿ ನದಿಯಲ್ಲಿ ಹರಿದು ಬಂದವು. ನದಿಯ ಭೋರ್ಗರೆತದ ಸದ್ದು ಜೋರಾಯ್ತು. ಈ ಸದ್ದೇ ನೂರಾರು ಕನಸುಗಳ ಹೊದ್ದು ಮಲಗಿದ್ದ ಜನರ ಬದುಕಿಗೆ ಚರಮ ಗೀತೆಯಾಯ್ತು.
ಈ ಗ್ರಾಮದ ಎತ್ತರದ ಪ್ರದೇಶದಲ್ಲಿದ್ದ ಜನಕ್ಕೆ ಏನಾಗ್ತಿದೆ ಗ್ರಾಮದ ಒಳಗೆ ಅನ್ನೋದು ಗೊತ್ತಾಗುವ ಮುನ್ನವೇ ಅರ್ಧ ಊರು ನೀರು ಪಾಲಾಗಿತ್ತು. ಸಂಬಂಽಕರು, ಸ್ನೇಹಿತರು ಎಲ್ಲರೂ ಜಲಸಮಾಽ ಆಗಿಬಿಟ್ಟಿದ್ದಾರೆ. ಮಂಗಳವಾರದ ಸೂರ್ಯೋದಯದ ಹೊತ್ತಿಗೆ ಇಡೀ ದೇಶಕ್ಕೆ ಈ ಸುದ್ದಿ ಹಬ್ಬಿತು.
ಎನ್ಡಿಆರ್ಎಫ್ ತಂಡದ ನೂರಾರು ಜನ ರಕ್ಷಣಾ ಕಾರ್ಯ ಮತ್ತು ಶವಗಳ ಹುಡುಕುವ ಕೆಲಸಕ್ಕೆ ಮುಂದಾಗುತ್ತಿದ್ದಂತೆ ನೂರಾರು ಸಂಘ ಸಂಸ್ಥೆಗಳ ಕಾರ್ಯಕರ್ತರು ಕೂಡ ಫೀಲ್ಡ್ ಗೆ ಇಳಿದರು. ಕೊಡಗಿನ ಭಾಗದಿಂದ ಕೂಡ ಯುವಕರ ಟೀಂ ಈ ಕಾರ್ಯಕ್ಕಾಗಿ ಇಲ್ಲಿಗೆ ಬಂದಿತ್ತು. ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳ ಅಂಬ್ಯುಲೆನ್ಸ್ ಗಳು ಚೂರಲ್ ಮಲೈ ಗ್ರಾಮದಲ್ಲಿದ್ದವು. ಸರ್ಕಾರ ಸಾರ್ವಜನಿಕರ ನೆರವು ಕೇಳುವ ಮುನ್ನವೇ ದುರಂತ ನಡೆದ ಸ್ಥಳಕ್ಕೆ ಔಷಽ, ಆಹಾರ ಸಮೇತ ಜನ ತಲುಪಿದ್ದು ಮಾನವೀಯ ಮೌಲ್ಯಗಳಿಗೆ ಇನ್ನೂ ಜೀವವಿದೆ ಎಂಬುದನ್ನು ಸಾಬೀತು ಮಾಡುವಂತಿತ್ತು.
ತುಂಬಿ ತುಳುಕಿದ ಶವಾಗಾರ
ಮೇಪ್ಪಾಡಿಯ ಸರ್ಕಾರಿ ಆಸ್ಪತ್ರಯ ಮುಂಭಾಗ ಮಂಗಳವಾರ ಬೆಳ್ಳಂಬೆಳಿಗ್ಗೆಯೆ ಜನ ಸೇರಲು ಆರಂಭಿಸಿದರು. ಸಾಲು ಸಾಲು ಹೆಣಗಳನ್ನು ಶವಾಗಾರದಲ್ಲಿ ಮಲಗಿಸಲಾಗಿತ್ತು. ನೀರಿನ ರಭಸದ ಏಟಿಗೆ ಕೆಲವು ಮೃತ ದೇಹಗಳ ಗುರುತುಗಳೆ ನಾಪತ್ತೆ ಆಗಿವೆ. ಶವ ಸಿಕ್ಕ ಸಂಬಂಽಕರ ಆಕ್ರಂದನ ಮುಗಿಲು ಮುಟ್ಟುತ್ತಿದ್ದರೆ, ಈ ಕಡೆ ಶವಗಳೂ ಇಲ್ಲ ಆ ಕಡೆ ವ್ಯಕ್ತಿಗಶೂ ಪತ್ತೆ ಆಗ್ತಿಲ್ಲ ಅನ್ನೋ ಅತಂತ್ರ ಮನಃಸ್ಥಿತಿಯಲ್ಲಿ ನೂರಾರು ಜನ ಅಲೆದಾಡುತ್ತಿದ್ದರು. ಯಾವುದಾದರೂ ಶವ ಅಂಬ್ಯೂಲೆನ್ಸ್ ನಲ್ಲಿ ಬಂದ ಕೂಡಲೇ ಅದು ತಮ್ಮವರಾದ ಅಂತ ಜನ ಮುಗಿಬಿದ್ದು ನೋಡುವ ದೃಶ್ಯವಂತೂ ಜಲಪ್ರಳಯ ಸೃಷ್ಟಿಸಿದ ಸೂತಕಕ್ಕೆ ಕನ್ನಡಿ ಹಿಡಿದಿತ್ತು.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…