Andolana originals

ಜಂಬೂ ಸವಾರಿಗೆ ಮೆರುಗು ತಂದ ಕಲಾ ತಂಡಗಳು .

‘ದೇಶ ವಿದೇಶಗಳ ಪ್ರವಾಸಿಗರಿಗೆ ಕಲೆ, ಸಂಸ್ಕೃತಿ ಪರಿಚಯಿಸಿದ ಕಲಾವಿದರು

ಮೈಸೂರು: ಕಿವಿಗಪ್ಪಳಿಸುವ ತಮಟೆ, ನಗಾರಿ ಸದ್ದು… ಗಾಳಿಯಲ್ಲಿ ತೇಲಿಬಂದ ನಾದಸ್ವರ, ಡೊಳ್ಳು ಕುಣಿತದ ಝಲಕ್… ಏಣಿ ಮೇಲೆ ಪೂಜಾ ಕುಣಿತ,, ಬುಡಕಟ್ಟು ಮಹಿಳೆಯರ ಹಕ್ಕಿ ಪಿಕ್ಕಿ ನೃತ್ಯ… ಬೆಂಕಿಯ ಉಂಡೆಗಳನ್ನು ಉಗುಳಿದ ಸಾಹಸಿಗರು.

ಹೀಗೆ ಸಾಂಸ್ಕೃತಿಕ ನಗರಿ ಮೈಸೂರಿನ ರಾಜ ಮಾರ್ಗದಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಲೆಗಳ ವೈಭೋಗದ ಸಿರಿ ಗರಿಬಿಚ್ಚಿತು. ವಿವಿಧ ಕಲಾಸಂಸ್ಕೃತಿಯ ಸಿರಿತನದ ದಿಬ್ಬಣ ಲಕ್ಷಾಂತರ ಜನರ ಕಣ್ಣು ಕೋರೈಸಿತು. ಬರೋಬ್ಬರಿ 90ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ ಕಲಾವಿದರು ಜಂಬೂಸವಾರಿಗೆ ಕಳೆತಂದರು.

ನಂದಿಧ್ವಜಕ್ಕ ಪೂಜೆ ಸಲ್ಲಿಕೆಯಾಗುತ್ತಿದ್ದಂತೆ ಅರಮನೆ ಅಂಗಳದಲ್ಲಿ ಜಂಬೂಸವಾರಿ ಮೆರವಣಿಗೆ ಆರಂಭಗೊಂಡಿತು. ಜಂಬೂ ಸವಾರಿಗೆ ಹಿಮ್ಮೇಳದಂತೆ ಕಲಾವಿದರು ಮಳೆ ಬಿಸಿಲನ್ನೂ ಲೆಕ್ಕಿಸದೇ ಕುಣಿದು ಕುಪ್ಪಳಿಸಿದರು.

ವೀರಗಾಸೆ: ಕೈಯಲ್ಲಿ ಒಂದು ಕತ್ತಿ ಗುರಾಣಿ ಹಿಡಿದ ವೀರಗಾಸೆ ಕಲಾವಿದರು ಕುಣಿಯುತ್ತಿದ್ದರೆ ನೆರೆದಿದ್ದ ಪ್ರೇಕ್ಷಕರ ಎದೆ ಝಲ್ಲಿಂದಿತು.

ನವಿಲಿನ ನೃತ್ಯ ವೀಕ್ಷಣೆ: ಬೆಂಗಳೂರಿನ ಶ್ರೀ ಕೃಷ್ಣ ಜಾನಪದ ನವಿಲು ನೃತ್ಯ ಕಲಾತಂಡವು ನವಿಲಿನ ನೃತ್ಯವನ್ನು ಪ್ರಸ್ತುತಪಡಿಸಿ ಎಲ್ಲರ ಗಮನಸೆಳೆಯಿತು. ನವಿಲಿನ ನಡೆಯನ್ನೇ ಅನುಕರಿಸುವ ಈ ನೃತ್ಯದಲ್ಲಿ ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಹುಲಿ ವೇಷ ಕುಣಿತ, ಹುಲಿ ವೇಷಧಾರಿಗಳು ಗಗಿರಕಿ ಹೊಡೆಯುತ್ತಾ, ಕುಪ್ಪಳಿಸುತ್ತಾ, ಲಾಗ ಹಾಕುತ್ತಾ, ಪದೇ ಪದೇ ಪ್ರೇಕ್ಷಕರ ಬಳಿ ಬಂದು ರಂಜಿಸಿದರು.

ಏಣಿ ಮೇಲೆ ಪೂಜಾ ಕುಣಿತ: ಮೈಸೂರು, ಮಂಡ್ಯ ಜಿಲ್ಲೆಗಳ ವಿವಿಧ ಕಲಾ ತಂಡಗಳು ಪ್ರಸ್ತುತ ಪಡಿಸಿದ ಪೂಜಾ ಕುಣಿತವನ್ನು ಸಹಸ್ರಾರು ಜನರು ಕತ್ತುಂಬಿಕೊಂಡರು. ಏಣಿ ಮೇಲೆ ಹತ್ತಿ ಪ್ರದರ್ಶಿಸಿದ ಪೂಜಾ ಕುಣಿತ ರೋಚಕವಾಗಿತ್ತು.

ದೈವಿ ಶಕ್ತಿಯನ್ನು ಸಾರುವ ಸೋಮನ ಕುಣಿತ, ಕೇರಳದ ಕಾಸರಗೋಡಿನ ಆದಿಶಕ್ತಿ ಕಲಾಕ್ಷೇತ್ರದ ಕೋಳಿನೃತ್ಯ ಎಲ್ಲರ ಗಮನ ಸೆಳೆಯಿತು.

ಬೆಂಕಿಯೊಂದಿಗೆ ಕಲಾವಿದರ ಸರಸ: ಐದಾರು ಕಲಾವಿದರು ಬಾಯಿಯಲ್ಲಿ ಸೀಮೆ ಎಣ್ಣೆ ತುಂಬಿಕೊಂಡು ಬೆಂಕಿ ಉಗುಳುತ್ತಿದ್ದರು. ಬೆಂಕಿಯ ಜ್ವಾಲೆ ಆಕಾಶದತ್ತ ಚಿಮ್ಮುತ್ತಿದ್ದಂತೆಯೇ ಸಭಿಕರ ಸಾಲಿನಲ್ಲಿ ಕುಳಿತ ಕೆಲವರು ಆಶ್ಚರ್ಯಚಕಿತರಾದರೆ, ಇನ್ನೂ ಕೆಲವರು ಗಾಬರಿಗೊಂಡರು.

ಮೆರುಗು ತಂದ ಕಲಾ ತಂಡಗಳು:
ಚಾಮರಾಜನಗರ, ಮಂಡ್ಯ, ಶಿರಾದ ಕಲಾತಂಡಗಳ ಕೊಂಬುಕಹಳೆ, ಮೈಸೂರಿನ ವಿದ್ಯಾರಣ್ಯಪುರ, ಜೆ.ಪಿ.ನಗರ, ನಂಜನಗೂಡು ತಂಡಗಳ ಬೀಸು ಕಂಸಾಳೆ, ತಿ.ನರಸೀಪುರದ ಬೀಡನಹಳ್ಳಿ, ಪಾಂಡವಪುರದ ಸುಂಕಾತೊಣ್ಣೂರಿನ ಪಟಕುಣಿತ, ಕೋಲಾರದ ಕೀಲು ಕುದುರೆ, ಶಿರವಾಳದ ಕೋಲಾಟ, ಹಾಸನ ಜಿಲ್ಲೆಯ ಪನ್ನಸಮುದ್ರದ ಚಿಟ್‌ಮೇಳ, ರಾಯಚೂರಿನ ಅಮದಿಹಾಳದ ವೃದ್ದರು ನಡೆಸಿದ ಕಣಿ ವಾದನ ಮನ ರಂಜೆಸಿತು.

ಬಾಗಲಕೋಟೆಯ ಹೂವಿನ ನೃತ್ಯದ ಮೈಸೂರಿನ ತಮಟೆ ನಗಾರಿಯ ಅಬ್ಬರ, ಸ್ಥಳೀಯ ಕಲಾವಿದರ ಯಕ್ಷಗಾನ ಗೊಂಬೆಯ ಗಾಂಭೀರ್ಯ, ಯಾದಗಿರಿ, ವಿಜಯನಗರ, ಬೀದರ್, ಕಲಬುರ್ಗಿ ಜಿಲ್ಲೆಯ ಲಂಬಾಣಿ ಸಾಂಪ್ರದಾಯಿಕ ಲಂಬಾಣಿ ನೃತ್ಯದ ಸಿರಿ ಮೇಳೈಸಿತು.

ಕೋಲಾರ, ದಾವಣಗೆರೆ ತಂಡದ ಕಮಟೆ ವಾದನದ ಹಿನ್ನಲೆ ಸಂಗೀತ, ಕೊಪ್ಪಳ, ಸಂಡೂರಿನ ತಂಡದ ಹಗಲುವೇಷದಲ್ಲಿ ಶ್ರೀರಾಮ, ಲಕ್ಷ್ಮಣ, ಹನುಮಂತನ ದರ್ಶನವಾಯಿತು. ಗೋಕಾಕ್ ತಂಡದ ದಟ್ಟಿ ಕುಣಿತ, ಉಡುಪಿಯ ಕುಡುಬಿ ಜಾನಪದ ನೃತ್ಯ ಆಕರ್ಷಕವಾಗಿತ್ತು.

ಭಟ್ಕಳದ ಗೊಂಡರ ಢಕ್ಕೆ ಸೊಗಸು, ತಲಕಾಡಿನ ಚಿಲಿಪಿಲಿ ಗೊಂಬೆ ಪ್ರದರ್ಶನದ ಕಚಗುಳಿ, ನಂಜನಗೂಡು ತಾಲ್ಲೂಕು ತಾಯೂರಿನ ಮರಗಾಲು ಕುಣಿತ, ಮದ್ದೂರಿನ ದೊಣ್ಣೆವರಸೆ ಆಕರ್ಷಣೀಯವಾಗಿತ್ತು.

ರಾಮದುರ್ಗ, ಧಾರವಾಡದ ಜಗ್ಗಲಿಗೆ ಮೇಳ, ಯಳಂದೂರಿನ ಗೇರ್ ನೃತ್ಯ, ಅರಸೀಕರೆ, ವಿಜಯನಗರದ ನಂದಿಕೋಲು, ಚಳ್ಳಕೆರೆಯ ಉರುವ ವಾದ್ಯ ಇಲ್ಲಿ ಸಂಭ್ರಮವನ್ನು ಹಿಗ್ಗಿಸಿತು. ಸೋಮವಾರಪೇಟೆಯ ಲೆನಾಡು ಸುಗ್ಗಿ ಕುಣಿತ, ವಿರಾಜಪೇಟೆಯ ಕೊಡವರ ನೃತ್ಯ ಜನಸಮೂಹವನ್ನು ರಂಜಿಸಿತು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಹಕ್ಕಿ-ಪಿಕ್ಕಿ ಬುಡಕಟ್ಟು ಮಹಿಳೆಯರ ಹಕ್ಕಿ-ಪಿಕ್ಕಿ ನೃತ್ಯ, ಮೈಸೂರಿನ ನಾಸಿಕ್ ಡೋಲು, ಕೊಪ್ಪಳ, ಬಾಗಲಕೋಟೆ, ಗದಗ ಜಿಲ್ಲೆಗಳ ಕರಡಿ ಮಜಲು, ಬಾಗಲಕೋಟೆ, ಅಥಣಿಯ ಝಾಂಜ್ ಪಥಕ್ ನೃತ್ಯ,
ಯಾದಗಿರಿ, ರಾಯಚೂರು, ದಾವಣಗೆರೆ, ಸಾಗರ, ಶಿಕಾರಿಪುರ ತಂಡದ ಡೊಳ್ಳು ಕುಣಿತ ರೋಮಾಂಚನ ತಂದಿತು.

ಮಲೆಮಹದೇಶ್ವರರನ್ನು ಸ್ಮರಿಸುವ ಚಾಮರಾಜನಗರದ ಗೊರವರ ಕುಣಿತ, ಡೊಳ್ಳುಕುಣಿತ ಮನ ಸೆಳೆಯಿತು. ನಾಗಮಂಗಲದ ಮೂಡಲಪಾಯ ಯಕ್ಷಗಾನ ನೃತ್ಯ, ವಿಜಯಪುರದ ಸತ್ತಿಗೆ ಕುಣಿತ, ರಾಮನಗರದ ಕರಗ ನೃತ್ಯ, ಸುಳ್ಯದ ಕಂಗೀಲು ನೃತ್ಯ ಜನಾಕರ್ಷಣೆಯಾಗಿತ್ತು.

ಅನ್ಯರಾಜ್ಯಗಳ ಕಲೆಯ ದರ್ಶನ:
ಅನ್ಯ ರಾಜ್ಯಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಕಲಾ ಶ್ರೀಮಂತಿಕೆ ಕೂಡ ಅನಾವರಣಗೊಂಡಿತು. ಕೇರಳದ ಸಿಂಗಾರಿ ಮೇಳಂ, ತಮಿಳುನಾಡಿನ ಕರಗಂ, ಕಪಾಡಿ ರಾಜಸ್ಥಾನದ ಜಾಕ್ರೀ ನೃತ್ಯ, ಉತ್ತರಖಂಡದ ತಡಿಯಾದಲ್ಲಾ ನೃತ್ಯ, ಹರಿಯಾಣದ ಫೆಗ್, ಗೂಮೆರ್ ನೃತ್ಯ ಆಕರ್ಷಿಸಿದವು. ಕೋಲಾರ ಜಿಲ್ಲೆಯ ಗಾರುಡಿ ಗೊಂಬೆ ನರ್ತನ ಮನ ಸೆಳೆಯಿತು.

ಆಂದೋಲನ ಡೆಸ್ಕ್

Recent Posts

ಶ್ರೀರಂಗಪಟ್ಟಣ: ವೈಭವದಿಂದ ಜರುಗಿದ ಕರೀಘಟ್ಟ ವೆಂಕಟರಮಣಸ್ವಾಮಿ ಬ್ರಹ್ಮೋತ್ಸವ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕರೀಘಟ್ಟ ವೆಂಕಟರಮಣ ಸ್ವಾಮಿಯ ಬ್ರಹ್ಮೋತ್ಸವ ಇಂದು ವೈಭವದಿಂದ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತ ಮುತ್ತ ಇರುವ…

23 mins ago

ಕಪ್ಪಡಿ ಜಾತ್ರೆ ಸಂಭ್ರಮ: ನಾಡ ಕುಸ್ತಿ ಪಂದ್ಯಾವಳಿಗೆ ಚಾಲನೆ

ಭೇರ್ಯ ಮಹೇಶ್:‌ ಕೆ.ಆರ್.ನಗರ ತಾಲ್ಲೂಕು ವರದಿಗಾರರು ಕೆ.ಆರ್.ನಗರ: ನಾಡಿನ ಸುಪ್ರಸಿದ್ಧ ಶ್ರೀ ಕಪ್ಪಡಿ ಜಾತ್ರೆಯಲ್ಲಿ ೨ನೇ ಬಾರಿ ೨೦ ಜೊತೆ…

31 mins ago

ರಾಜ್ಯಸಭೆಗೆ ನಿತೀಶ್‌ ಕುಮಾರ್‌ ನಾಮಪತ್ರ ಸಲ್ಲಿಕೆ

ಪಾಟ್ನಾ: ಬಿಹಾರದ ಸಿಎಂ ಆಗಿ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಕೇವಲ ನಾಲ್ಕು ತಿಂಗಳಿನಲ್ಲೇ ನಿತೀಶ್‌ ಕುಮಾರ್‌ ಅವರು ಇಂದು…

1 hour ago

ನಾಳೆ 17ನೇ ಐತಿಹಾಸಿಕ ಬಜೆಟ್‌ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹತ್ತು ಹಲವಾರು ನಿರೀಕ್ಷೆಗಳೊಂದಿಗೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ 17ನೇ ಐತಿಹಾಸಿಕ ಬಜೆಟ್ ಮಂಡನೆಯ…

1 hour ago

ಕೇಂದ್ರ ಸಚಿವ ವಿ.ಸೋಮಣ್ಣ ಸಹೋದರಿ ನಿಧನ

ರಾಮನಗರ: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಸಹೋದರಿ ಮಹಾದೇವಮ್ಮ ನಿಧನರಾಗಿದ್ದಾರೆ. ಕನಕಪುರ ತಾಲ್ಲೂಕಿನ…

7 hours ago

ಹಾಸನದಲ್ಲೂ ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಹಾಸನ: ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ಬಾಗಲಕೋಟೆ,…

7 hours ago