ಅಣ್ಣೂರು ಸತೀಶ್
ರೈತರು, ಕಾರ್ಖಾನೆ ಮಾಲೀಕರು ಕಂಗಾಲು
ರೈತರ ಸಮಸ್ಯೆ ನಿವಾರಿಸಲು ಕೃಷಿ ಇಲಾಖೆ ವಿಫಲ
ಭಾರತೀನಗರ: ಕಬ್ಬಿನ ಬೆಳೆಗೆ ಗೊಣ್ಣೆ ಹುಳುವಿನ (ಬೇರುಹುಳು) ಬಾಧೆ ಕಾಣಿಸಿಕೊಂಡಿರುವುದರಿಂದ ಇಳುವರಿ ದಿಢೀರ್ ಕುಸಿತ ಕಂಡಿರುವುದು ರೈತರಲ್ಲಿ ಮತ್ತು ಕಾರ್ಖಾನೆ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ.
ಒಂದೆಡೆ ರೈತರು ಸಾಲ ಸೋಲ ಮಾಡಿ ವರ್ಷವಿಡೀ ಶ್ರಮ ಹಾಕಿ ಕಬ್ಬು ಬೆಳೆದು ಕಾರ್ಖಾನೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಹವಾಮಾನ ವೈಪರೀತ್ಯದಿಂದ ಮತ್ತು ಗೊಣ್ಣೆ ಹುಳು ಬಾಧೆಯಿಂದ ಕಬ್ಬಿನ ಇಳುವರಿಯಲ್ಲಿ ಸುಮಾರು ಶೇ.೩೫ರಿಂದ ೪೦ ಪ್ರಮಾಣದಷ್ಟು ಕುಸಿತ ಕಂಡಿದೆ. ಒಂದು ಎಕೆರೆ ಪ್ರದೇಶದಲ್ಲಿ ೩೫ ರಿಂದ ೪೦ ಟನ್ ಕಬ್ಬು ಇಳುವರಿಗೆ ಬದಲಾಗಿ ರೈತರು ೨೦೨೫-೨೬ನೇ ಸಾಲಿನಲ್ಲಿ ಎಕರೆಗೆ ೧೮ರಿಂದ ೨೦ ಟನ್ ಇಳುವರಿ ಮಾತ್ರ ಪಡೆಯುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಎದುರಾಗಿದ್ದಾರೆ.
ಇತ್ತ ಕಾರ್ಖಾನೆ ಮಾಲೀಕರು ಕಬ್ಬು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣದಿಂದ ಕಾರ್ಖಾನೆ ನಡೆಸುವುದೇ ಕಷ್ಟಕರವಾಗಿದೆ. ವಿಸಿ ಎಫ್ ೧೧೫ ತಳಿ ಕಬ್ಬನ್ನು ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಪರಿಚಯಿಸಿದ್ದರಿಂದ ಈ ತಳಿಯ ಕಬ್ಬನ್ನು ರೈತರು ಹೆಚ್ಚಾಗಿ ಬೆಳೆದಿದ್ದಾರೆ. ಈ ರೋಗ ಲಕ್ಷಣ ದಕ್ಷಿಣ ಕರ್ನಾಟಕ ಭಾಗದಲ್ಲೂ ಕಂಡುಬಂದಿದೆ. ಇದು ಸಂಬಂಽಸಿದ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಪ್ರಸಕ್ತ ವರ್ಷ ಮಳೆಯೂ ಇಲ್ಲದೆ ಬಿಸಿಲೂ ಬಾರದೆ ಮೋಡಕವಿದ ವಾತಾವರಣ ಇರುವುದೇ ಇದಕ್ಕೆ ಕಾರಣವಾಗಿದೆಯೇ ಎಂಬುದಕ್ಕೆ ಸರಿಯಾದ ಮಾಹಿತಿ ಇಲ್ಲ.
೨೦೨೫-೨೬ನೇ ಸದರಿ ಸಾಲಿನಲ್ಲಿ ಕಬ್ಬು ಇಳುವರಿಯಲ್ಲಿ ತೀವ್ರ ಕುಸಿತ ಕಂಡು ಬಂದಿರುವುದರಿಂದ ಕಾರ್ಖಾನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಸರಬರಾಜು ಆಗದೆ ಕಾರ್ಖಾನೆಗಳಲ್ಲಿನ ಕೆಲಸ ವ್ಯತ್ಯಯವಾಗಿದ್ದು, ಕಂಪೆನಿಗಳು ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ. ಕಬ್ಬು ಇಳುವರಿ ಕುಸಿತ ಕಂಡು ರೈತರಿಗೂ ಆರ್ಥಿಕ ನಷ್ಟ ಉಂಟಾಗಿ ದಿಕ್ಕು ತೋಚದಂತಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧ ಪಟ್ಟ ಇಲಾಖೆಗಳು ಮತ್ತು ಕೃಷಿ ವಿಜ್ಞಾನಿಗಳು ಅಧ್ಯಯನ ಮಾಡಿ ರೈತರಿಗೆ ಸೂಕ್ತ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹೆ ನೀಡಿದಲ್ಲಿ ಮುಂದೆ ರೈತರು ಮತ್ತು ಕಾರ್ಖಾನೆಗೆ ಉಂಟಾಗಬಹುದಾದ ನಷ್ಟವನ್ನು ತಪ್ಪಿಸಬಹುದಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸುಮಾರು ೪೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಕೆಲವೆಡೆ ಕಬ್ಬಿನ ಬೇರುಗಳನ್ನೇ ತಿನ್ನುವ ಬೇರು ಹುಳುಗಳಿಂದ ಕಬ್ಬು ಒಣಗಿ ನಾಶವಾಗುತ್ತಿದೆ.
” ಕೃಷಿ ಪಂಪ್ಸೆಟ್ ಅವಲಂಬಿಸಿ ಬೆಳೆದ ಕಬ್ಬು ಬೆಳೆಯಲ್ಲಿ ಹೆಚ್ಚಾಗಿ ಬೇರು ಹುಳು ಬಾಧೆ ಕಂಡುಬರುತ್ತಿದೆ. ಹೆಚ್ಚಾಗಿ ಕಂಡುಬಂದ ಜಮೀನುಗಳಲ್ಲಿ ಭತ್ತದ ಬೆಳೆಗಳನ್ನು ಒಡ್ಡಿ ನಂತರ ಕಬ್ಬು ಬೆಳೆಯನ್ನು ಬೆಳೆದರೆ ಈ ಬಾಧೆಯಿಂದ ದೂರವಾಗಬಹುದು ಅಥವಾ ಕಬ್ಬಿನ ಬೆಳೆಯಲ್ಲಿ ಬೇರುಹುಳುಗಳು ಕಂಡುಬಂದ ಪ್ರಾರಂಭದಲ್ಲೇ ತಕ್ಷಣ ರೈತರು ಸ್ಥಳೀಯ ಕೃಷಿ ಇಲಾಖೆ ಅದಿಕಾರಿಗಳನ್ನು ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಸಲಹೆ, ಸೂಚನೆಗಳನ್ನು ಪಡೆಯಬಹುದು.”
ಶ್ರೀಹರ್ಷ, ಸಹಾಯಕ ಕೃಷಿ ನಿರ್ದೇಶಕರು, ಮಂಡ್ಯ
” ಎಫ್ಆರ್ಪಿ ದರವನ್ನು ಮಾತ್ರ ಪ್ರತೀ ವರ್ಷ ಏರಿಕೆ ಮಾಡುತ್ತಿದ್ದಾರೆ. ಐದಾರು ವರ್ಷಗಳಿಂದಲೂ ಸಕ್ಕರೆ ಬೆಲೆ ಮಾತ್ರ ಹೆಚ್ಚಳಗೊಂಡಿಲ್ಲ. ಇಂತಹ ಸಮಸ್ಯೆಗಳಿಂದ ಕಾರ್ಖಾನೆ ಮಾಲೀಕರಿಗೆ ನಷ್ಟವಾಗುತ್ತಿದೆ. ಸಂಸದರು ಸದನದಲ್ಲಿ ಇದರ ಬಗ್ಗೆ ಚರ್ಚಿಸಬೇಕಿದೆ. ಜೊತೆಗೆ ಕಬ್ಬು ಬೆಳೆ ಬಾಧಿಸುವ ರೋಗಗಳನ್ನು ನಿಯಂತ್ರಿಸಲು ಸರ್ಕಾರ ಮತ್ತು ಕೃಷಿ ತಜ್ಞರು ಮುಂದಾಗಬೇಕಿದೆ. ಇದರಿಂದ ಕಾರ್ಖಾನೆಗಳು,ಕಾರ್ಮಿಕರು ಮತ್ತು ರೈತರಿಗೆ ಅನುಕೂಲವಾಗುತ್ತದೆ.”
ಎಂ.ಶ್ರೀನಿವಾಸನ್,ಎಂಡಿ,ಚಾಂಷುಗರ್
ಹೊಸದಿಲ್ಲಿ : ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತೆ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಗಾಳಿ ಮಳೆಗೆ ಜಗಲಿ ಕಟ್ಟೆಯ ಬುಗರಿ ಮರ ಬಿದ್ದು ಮನೆ ಜಖಂಗೊಂಡಿರುವ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಗುಡಿ ಬೀಟ್…
ನವದೆಹಲಿ: ದೇಶದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ. ಭಾರತವು ಕಚ್ಚಾ ತೈಲಕ್ಕಾಗಿ ಸಾಕಷ್ಟು ಸಂಗ್ರಹಣಾ ಸೌಲಭ್ಯಗಳು ಮತ್ತು ವಿಶ್ವಾಸಾರ್ಹ ಪೂರೈಕೆ…
ಮೈಸೂರು: ರಸ್ತೆ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ…
ಬೆಂಗಳೂರು: ಮೈಸೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಎಂಎಲ್ಸಿ ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಈ…