Andolana originals

ಖಾಸಗಿ ಮೀಸಲು ಕಾಯ್ದೆ: ಕಾಯ್ದೆ: ಹೋರಾಟದ ಹಾದಿ

ರಾನಂ ಚಂದ್ರಶೇಖರ್, ಕನ್ನಡ ಪರ ಹೋರಾಟಗಾರರು

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾಯ್ದೆ ಸಂಬಂಧ ರಾಜ್ಯ ಸರ್ಕಾರ ಪ್ರಸಕ್ತ ಅಧಿವೇಶನದಲ್ಲಿ ಮಸೂದೆ ಮಂಡಿಸುವ ನಿಲುವಿನಿಂದ ಹಿಂದೆ ಸರಿದಿರುವ ಬೆನ್ನಲ್ಲಿ ಕನ್ನಡ ಪರ ಹೋರಾಟಗಾರರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅತ್ತ ಉದ್ಯಮಿಗಳು ಕೂಡ ಸರ್ಕಾರದ ಇಂಗಿತವನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ‘ಆಂದೋಲನ’ ದಿನಪತ್ರಿಕೆ ಮೂರು ದಿನಗಳು ನೋಟ- ಪ್ರತಿನೋಟ ಅಂಕಣದಲ್ಲಿ ಉದ್ಯೋಗ ಮೀಸಲಾತಿ ಕಾಯ್ದೆ ಪರವಾಗಿರುವವರು ಹಾಗೂ ಅದನ್ನು ವಿರೋಧಿಸುವವರ ಅಭಿಪ್ರಾಯ ಗಳನ್ನು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ವರದಿಯ ಹಿನ್ನೆಲೆ, ಅದಕ್ಕೆ ಪ್ರತಿರೋಧ, ದಶಮಾನಗಳಿಂದ ನಡೆದು ಬಂದ ಹೋರಾಟಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಖಾಸಗಿ ವಲಯದಲ್ಲಿ ‘ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂಬ ಹೋರಾಟಕ್ಕೆ ಒಂದು ಶತಮಾನದ ಇತಿಹಾಸವಿದೆ.

1960 ಹೊತ್ತಿಗೆ ರಾಜ್ಯದಲ್ಲಿ ಅಂದರೆ ಬೆಂಗಳೂರಿನಲ್ಲಿ ಸಾಲು-ಸಾಲು ಕೈಗಾರಿಕೆಗಳು ಬಂದು ರಾಷ್ಟ್ರದ ಮಂಚೂಣಿ ಕೈಗಾರಿಕಾ ನಗರ ಎನಿಸಿತು. ಆದರೆ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಪ್ರವೇಶ ಅಸಾಧ್ಯ ಅನ್ನುವ ಸ್ಥಿತಿಯಿತ್ತು. ಕೆಲವು ಕೇಂದ್ರೋದ್ಯಮಗಳಲ್ಲಿ ಕನ್ನಡಿಗರ ಸಂಖ್ಯೆ ಶೇ.10-15ರಷ್ಟಿತ್ತು. ಒಟ್ಟಾರೆಯಾಗಿ 25%ಕ್ಕಿಂತ ಕಡಿಮೆಯಿತ್ತು. ಪರಪ್ರಾಂತದಿಂದ ಬಂದ ಜನ ತಮ್ಮ ಭಾಷೆ, ಸಂಸ್ಕೃತಿಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಭಾಷೆ-ಸಂಸ್ಕೃತಿಗಳನ್ನು ನಗಣ್ಯವಾಗಿಸತೊಡಗಿದರು. ಇದನ್ನು ವಿರೋಧಿಸಿ ಸಣ್ಣ ಪ್ರಮಾಣದಲ್ಲಿ ಅಲ್ಲಲ್ಲಿ ಆರಂಭವಾದ ಪ್ರತಿಭಟನೆ ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಗಳ ರಕ್ಷಣೆಯ ಹೋರಾಟಕ್ಕೆ ಪ್ರೇರಣೆ ಆಯಿತು. ನಂತರ 1981ರಲ್ಲಿ ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ‘ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಲು ಅಭ್ಯರ್ಥಿ 15 ವರ್ಷಗಳ ಕಾಲ ರಾಜ್ಯದಲ್ಲಿ ವಾಸವಾಗಿರುವುದಕ್ಕೆ ದಾಖಲೆ ಒದಗಿಸಬೇಕು’ ಎಂಬ ಆದೇಶ ಹೊರಡಿಸಲಾಯಿತು.

ಮತ್ತೆ 1982 ನವೆಂಬರ್ 5ರಂದು ‘ರಾಜ್ಯಗಳ ಸಾರ್ವಜನಿಕ ವಲಯದಲ್ಲಿ ನೇಮಕಾತಿ ನಡೆಯುವಾಗ ಗರಿಷ್ಟ ಪ್ರಮಾಣದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂಬುದು ರಾಜ್ಯ ಸರ್ಕಾರದ ಆಶಯ’ ಎಂದು ರಾಜ್ಯದ ಎಲ್ಲಾ ಉದ್ಯಮಗಳ ಮುಖ್ಯಸ್ಥರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗಳು ಪತ್ರ ಬರೆದರು.

ಈ ಆಜ್ಞೆ ಹೊರಡಿಸಿದ ಸಂದರ್ಭದಲ್ಲಿ ಆರ್. ಗುಂಡೂರಾವ್ ಅವರು ‘ಮಣ್ಣಿನ ಮಕ್ಕಳಿಗೇ ಉದ್ಯೋಗ’ ಅನ್ನುವ ಮಾತನ್ನು ಸಾರ್ವಜನಿಕ ಸಭೆಯಲ್ಲಿ ಆಡಿ, ಕಾರ್ಮಿಕರ ನೇಮಕಾತಿಯಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ನೇಮಕ ಮಾಡುವಂತೆ ಕೈಗಾರಿಕೆಗಳಿಗೆ ಆದೇಶಿಸುತ್ತೇನೆ’ ಎಂದರು. ಈ ಅಭಿಪ್ರಾಯವನ್ನು ಕೇರಳ, ತಮಿಳುನಾಡು ಮುಖ್ಯಮಂತ್ರಿಗಳು ವಿರೋಧಿಸಿದರು. ‘ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಸ್ಥರು ಅವರನ್ನು ಬೆಂಬಲಿಸದ ಪರಿಣಾಮ ಗುಂಡೂರಾವ್ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದರು.

ಖಾಸಗಿ ವಲಯದಲ್ಲಿ ಮೀಸಲಾತಿ ಕಾಯ್ದೆ ಜಾರಿ ಸಂಬಂಧ 1983 ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ, ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಒಂದಾದ ಬಿಎಚ್‌ ಇಎಲ್‌ನಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ರಾಜ್ಯದ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ (ಐಟಿಐ) ಹೋಗಿ ಪರೀಕ್ಷೆ ನಡೆಸುತ್ತಿದ್ದರು. ಇದನ್ನು ಮಾದರಿಯಾಗಿಟ್ಟುಕೊಂಡು ರಾಜ್ಯದಲ್ಲಿರುವ ಎಲ್ಲ ಕೇಂದ್ರ ಸಾರ್ವಜನಿಕ ಉದ್ದಿಮೆಗಳು ರಾಜ್ಯದ ವಿವಿಧ ಮೂಲೆಗಳಲ್ಲಿರುವ ಕೈಗಾರಿಕಾ ತರಬೇತಿ ಕೇಂದ್ರಗಳಿಗೂ ಹೋಗಿ ಕುಶಲ ಕಾರ್ಮಿಕರನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿತು.

1962 ರಲ್ಲಿ ‘ಕನ್ನಡ ಚಳವಳಿಯಾಗಿ, ಅನಕೃ ಮತ್ತು ಮ. ರಾಮಮೂರ್ತಿ ಅವರ ಮುಂದಾಳತ್ವದಲ್ಲಿ ನಾಡು-ನುಡಿಯ ರಕ್ಷಣೆ ಉತ್ಕರ್ಷಕ್ಕೆ ಹೋರಾಟವಾಗಿ ರೂಪು ತಳೆಯಿತು. ಮುಂದೆ ಇಂತಹ ಪ್ರತಿಭಟನೆಗಳು ವಾಟಾಳ್ ನಾಗರಾಜರ ನೇತೃತ್ವದಲ್ಲಿ ನಡೆದವು.

• 1960ರಲ್ಲೇ ಹೋರಾಟಕ್ಕೆ ಮುನ್ನುಡಿ
• 1962 ರಲ್ಲಿ ಅನಕೃ, ಮ.ರಾಮಮೂರ್ತಿ ಅವರ ನೇತೃತ್ವದಲ್ಲಿ ಪ್ರತಿರೋಧ
• 1982ರಲ್ಲಿ ಸ್ಥಳೀಯರಿಗೆ ಗರಿಷ್ಟ ಅವಕಾಶಕ್ಕೆ ಸೂಚಿಸಿದ್ದ ಗುಂಡೂರಾವ್
• 1983ರಲ್ಲಿ ಸಾಹಿತಿಗಳ-ಕಲಾವಿದರ ಬಳಗದಿಂದ ಹೋರಾಟ ಆರಂಭ
• 1984ರಲ್ಲಿ ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಮಿತಿ ರಚನೆ
• 1984ಲ್ಲಿ ವರದಿ ಮಂಡಿಸಿದ ಸರೋಜಿನಿ ಮಹಿಷಿ

ಕನ್ನಡಿಗರಲ್ಲಿ ನವ ಜಾಗೃತಿ ಮೂಡಿಸಿದ ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಡಾ.ಎಂ.ಚಿದಾನಂದಮೂರ್ತಿ ನೇತೃತ್ವದ ಸಾಹಿತಿಗಳ-ಕಲಾವಿದರ ಬಳಗವು 1983ರಲ್ಲಿ 7 ಹಕ್ಕೊತ್ತಾಯಗಳನ್ನಿಟ್ಟುಕೊಂಡು ಹೋರಾಟ ಆರಂಭಿಸಿತು. ಅದರಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಯೂ ಸೇರಿತ್ತು. ಅದಕ್ಕೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು 04-08-1983ರಂದು ಸಂಸದರಾದ ಮಾರ್ಗರೇಟ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಪ್ರಯತ್ನಿಸಿದರು. ಅವರು ಒಪ್ಪದಿದ್ದಾಗ ಇನ್ನೊಬ್ಬ ಸಂಸದರಾದ ಡಾ.ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ 25-01-1984ರಂದು ಸಮಿತಿಯನ್ನು ರಚಿಸಲಾಯಿತು. ಮಹಿಷಿ ನೇತೃತ್ವದ ಸಮಿತಿಯು ಸುಮಾರು 3 ವರ್ಷಗಳ ಕಾಲ ವ್ಯಾಪಕ ಅಧ್ಯಯನ ನಡೆಸಿ 30-12-1986ರಂದು ಅಂತಿಮ ವರದಿ ನೀಡಿತು.

ಮಹಿಷಿ ವರದಿಯ ಪರಿಷ್ಕರಣೆ: ಮೂರು ದಶಕಗಳ ಹಿಂದೆ ಡಾ.ಸರೋಜಿನಿ ಮಹಿಷಿ ಸಮಿತಿಯು ವರದಿ ನೀಡಿದಾಗ ಇದ್ದ ಸನ್ನಿವೇಶಕ್ಕೂ ಇಂದಿಗೂ ಸಾಕಷ್ಟು ಬದಲಾವಣೆ ಆಗಿದೆ. ಈ ಬದಲಾದ ಸನ್ನಿವೇಶಕ್ಕೆ ಮಹಿಷಿ ವರದಿಯನ್ನು ಪ್ರಸ್ತುತಗೊಳಿಸಲು ‘ಮಹಿಷಿ ವರದಿ ಪರಿಷ್ಕರಣ ಅನಿವಾರ್ಯ ಎಂದು ಕನ್ನಡಪರ ಚಿಂತಕರು ಹೇಳುತ್ತಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಇದನ್ನು ಮನಗಂಡು, ಡಾ. ಸರೋಜಿನಿ ಮಹಿಷಿ ವರದಿಯನ್ನು ಪುನರ್ ಪರಿಶೀಲಿಸಲು ಸಮಿತಿಯನ್ನು ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಸರ್ಕಾರ ಸಮಿತಿಯನ್ನು ರಚಿಸಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ‘ಪುನರ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿಯೂ ಡಾ.ಗೊ.ರು. ಚನ್ನಬಸಪ್ಪ, ಡಾ.ಬಿ.ಎಲ್.ಶಂಕರ್, ಹೇಮಲತಾ ಮಹಿಷಿ ಮತ್ತು ನಾನು (ರಾ.ನಂ.ಚಂದ್ರಶೇಖರಯ್ಯ) ಸದಸ್ಯರಾಗಿ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳೀಧರ ಸದಸ್ಯ ಕಾರ್ಯದರ್ಶಿಯಾಗಿಯೂ ಇದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ನೇತೃತ್ವದ ಈ ಸಮಿತಿಯು ಹಲವು ಮೂಲಗಳಿಂದ ವಿವಿಧ ರಾಜ್ಯಗಳು, ರಾಷ್ಟ್ರಗಳಲ್ಲಿ ಸ್ಥಳೀಯರ ಉದ್ಯೋಗ ವಿಚಾರದಲ್ಲಿ ಅನುಸರಿಸುತ್ತಿರುವ ನೀತಿ, ಉದ್ಯಮಗಳು, ಬ್ಯಾಂಕ್‌ ಗಳಲ್ಲಿ ಆಯ್ಕೆ ಸಮಿತಿಗಳು ಅನುಸರಿಸುತ್ತಿರುವ ಮಾರ್ಗಗಳು, ನಿಬಂಧನೆಗಳು ಹಾಗೂ ಕೇಂದ್ರ ಸರ್ಕಾರದ ನೀತಿ, ಅದೇಶ, ಮಾರ್ಗಸೂಚಿಗಳನ್ನು ಸಂಗ್ರಹಿಸಿ ಆಳವಾಗಿ ಅವಲೋಕಿಸಿ ಅಂತಿಮವಾಗಿ ಮಹಿಷಿ ವರದಿಯನ್ನು ಇಂದಿನ ಕಾಲಮಾನಕ್ಕೆ ಪ್ರಸ್ತುತವಾಗುವಂತೆ ಪರಿಷ್ಕತಗೊಳಿಸಿ ಮುಖ್ಯಮಂತ್ರಿಗಳಿಗೆ ವರದಿಯನ್ನು 1.2.2017ರಂದು ಸಲ್ಲಿಸಿತು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

3 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

3 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

3 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

3 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

3 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

3 hours ago