Andolana originals

ಕಪಿಲೆಯ ಸೆರಗಿನಲ್ಲಿ ಕಣ್ಣೀರ ಕಥೆಗಳು

ನಂಜನಗೂಡು ತಾಲ್ಲೂಕಿನ ಪ್ರವಾಹ ಪೀಡಿತ ಹಳ್ಳಿಗಳ ಗಾಥೆ

• ಶಿವಪ್ರಸಾದ್ ಮುಳ್ಳೂರು
• ಶ್ರೀಧರ್ ಆರ್. ಭಟ್
ಮೈಸೂರು/ ನಂಜನಗೂಡು: ಜಿಲ್ಲೆಯ ಕಬಿನಿ ಅಣೆಕಟ್ಟೆಯಿಂದ ಭೋರ್ಗರೆದು ಹೊರಬರುತ್ತಿರುವ ಕಪಿಲಾ ನದಿಯ ರುದ್ರರಮಣೀಯತೆ ನೋಡುಗರ ಮನಸ್ಸುಗಳಿಗೆ ಉಲ್ಲಾಸ ತುಂಬಿದರೆ, ಮತ್ತೊಂದೆಡೆ ಈ ನದಿಯ ಒಡಲಿನಲ್ಲಿ ಉಕ್ಕಿ ಹರಿಯುವ ಜಲರಾಶಿಯು ಹಲವು ಅಮಾಯಕರ ಬದುಕಿಗೆ ಬರೆ ಎಳೆದಿದೆ. ಇದು ನದಿಯಲ್ಲಿ ಪ್ರವಾಹ ಬಂದಾಗಲೆಲ್ಲ ಸಹಜ ಎಂಬಂತಾಗಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಊರನ್ನೇ ಶಾಶ್ವತವಾಗಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿಕೊಟ್ಟರೆ ಸಾಕು ಎಂಬಂತಹ ದುಸ್ಥಿತಿಯ ಚಿತ್ರಣಗಳು ತೆರೆದುಕೊಳ್ಳುತ್ತವೆ.

ಕೆಲ ದಿನಗಳ ಹಿಂದೆ ನೆರೆ ಬಂದಿದ್ದರಿಂದ ಮನೆ ಖಾಲಿ ಮಾಡಿ ಬೇರೆಡೆ ವಾಸ ಇದ್ದೇವೆ ಎಂದ ಹೆಣ್ಣುಮಗಳ ಕಂಗಳಲ್ಲಿ ಕಂಬನಿ ಪಸೆಯಾಡಿತ್ತು… ಮನೆಯಾಗಲಿ, ನಿವೇಶನವನ್ನಾಗಲಿ ಸುರಕ್ಷಿತ ಪ್ರದೇಶದಲ್ಲಿ ಒದಗಿಸಿದರೆ, ಊರು ಖಾಲಿ ಮಾಡುವುದು ದಿಟ ಎಂಬುದು ಕಪಿಲಾ ನದಿ ಮುನಿಸಿಕೊಂಡಾಗಲೆಲ್ಲಾ ಪ್ರವಾಹ ಸಂಕಟದಿಂದ ನರಳುವ ಗ್ರಾಮದ ಮುಖಂಡರೊಬ್ಬರ ಖಚಿತ ನುಡಿ… ಇವರ ಮನದ ನೋವುಗಳಿಗೆ ಮುಲಾಮು ಹಚ್ಚ ಬಲ್ಲವರ ಕಿವಿಗಳಿಗೆ ಇದು ತಾಕಬೇಕಿದೆ.

ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ಸಾಗಿ ಶ್ರೀಕಂಠೇಶ್ವರ ದೇವಾಲಯದ ಬಳಿ ಎಡಕ್ಕೆ ತಿರುಗಿದರೆ ಹಳೆಯ ಸೇತುವೆಯೊಂದು ಎದುರಾಗುತ್ತದೆ. ಇದು ಚಾಮರಾಜನಗರ ಗುಂಡ್ಲುಪೇಟೆಯಿಂದ ಹರಿದು ಬರುವ ಗುಂಡ್ಲು ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿದೆ. ಸುಮಾರು 3 ದಶಕಗಳ ಹಿಂದೆ ನಂಜನಗೂಡು ಮಾರ್ಗವಾಗಿ ಚಾಮರಾಜನಗರ, ತಿ.ನರಸೀಪುರಕ್ಕೆ ಇದೇ ಸೇತುವೆ ಮೇಲೆ ಬಸ್ ಗಳಿಂದ ಹಿಡಿದು ಎಲ್ಲ ಬಗೆಯ ವಾಹನಗಳೂ ಸಂಚರಿಸುತ್ತಿದ್ದವು. ವಾಪಸ್ಸಾಗುವವರು ಇದೇ ಮಾರ್ಗದಲ್ಲಿ ಬರಬೇಕಿತ್ತು. ಈಗ ಬೈಪಾಸ್ ರಸ್ತೆ ನಿರ್ಮಾಣವಾಗಿರುವುದರಿಂದ ಸೇತುವೆಯ ಮೇಲೆ ವಾಹನಗಳ ಸಂಚಾರದ ಒತ್ತಡ ಕಡಿಮೆಯಾಗಿದೆ. ಈ ಸೇತುವೆಯ ಕೆಳಭಾಗದಲ್ಲಿ ಅಂದರೆ ಗುಂಡ್ಲು ನದಿ ಹರಿವಿಗೆ ಸ್ವಲ್ಪ ಎತ್ತರದ ಪ್ರದೇಶದಲ್ಲಿ ನಾಲ್ಕು ಮನೆಗಳಿವೆ. ಇವು ನಂಜನಗೂಡಿನ ಹಳ್ಳದಕೇರಿ ಬಡಾವಣೆ ವ್ಯಾಪ್ತಿಗೆ ಸೇರುತ್ತವೆ. ಕಪಿಲಾ ನದಿಯಲ್ಲಿ ನೀರಿನ ಹರಿವು ಅಬ್ಬರಿಸಿದರೆ, ಈ ಮನೆಗಳ ಕುಟುಂಬಗಳ ಎದೆಯೊಳಗೆ ಢವ ಢವ ಶುರುವಾಗುತ್ತದೆ. ಸಂತೈಸುವಿಕೆಗೆ ಮಾನವೀಯ ಮನಸ್ಸುಗಳಿಗಾಗಿ ಹಾತೊರೆಯುವಂತಹ ಸ್ಥಿತಿ ಉದ್ಭವಿಸುತ್ತದೆ.

ಕೆಲವೇ ದಿನಗಳ ಹಿಂದೆ ಕಬಿನಿ ಅಣೆಕಟ್ಟೆಯಿಂದ ನೀರಿನ ಹೊರಹರಿವು ನಿರೀಕ್ಷೆ ಮೀರಿ ಹೆಚ್ಚಳವಾಗಿತ್ತು. ಕಪಿಲಾ ನದಿಯ ನೀರು ಹಿಂದಕ್ಕೆ ಒದ್ದುಕೊಂಡು ಬಂದಿದ್ದರಿಂದ ಗುಂಡ್ಲು ನದಿ ಸೇತುವೆ ಕೆಳಭಾಗದ ನಾಲ್ಕೂ ಮನೆಗಳು ಜಲಾವೃತವಾಗಿದ್ದವು. ತಕ್ಷಣ ಸ್ಥಳೀಯ ಅಧಿಕಾರಿಗಳು ಬಂದರು, ಕಾಳಜಿ ಕೇಂದ್ರ ತೆರೆದಿದ್ದೇವೆ ಬನ್ನಿ ಎಂದರು. ಅಲ್ಲಿಗೆ ಹೋದರೆ ಯಾರೂ ಇರಲಿಲ್ಲ. ಇನ್ನು ಪರಿಹಾರ ಅಂತ ಏನೂ ಸಿಕ್ಕಿಲ್ಲ ಎಂದವರು ನೆರೆ ಸಂತ್ರಸ್ತರಾದ ಮಹದೇವಮ್ಮ ನಾಗೇಶ್ ಅವರು.

ನಾವು ವಾಸ ಇರುವುದು ನನ್ನ ಪತಿ ನಾಗೇಶ್ ಅವರ ತಂದೆ ಮನೆ ನಮ್ಮ ಮದುವೆ ನಂತರ ನನ್ನ ತವರು ಮನೆಯಲ್ಲೇ ಇದ್ದೆವು. ಕಳೆದ 10 ವರ್ಷಗಳಿಂದ ಇಲ್ಲಿದ್ದೇವೆ. ನಮ್ಮ ಮೂವರೂ ಮಕ್ಕಳು ಕಾಲೇಜಿಗೆ ಹೋಗುತ್ತಿದ್ದಾರೆ. ಆದರೆ, ಮನೆಯೇ ಸರಿಯಾಗಿಲ್ಲ. ಸದ್ಯಕ್ಕೆ ಹೃದಯವಂತರೊಬ್ಬರು, ಅವರ ಮನೆಯಲ್ಲಿ ಇರುವುದಕ್ಕೆ ಅವಕಾಶ ನೀಡಿದ್ದಾರೆ ಎಂದು ಅವರು ಕಣ್ಣೀರಾದರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಪಿಲಾ ನದಿಯಲ್ಲಿ ಉಂಟಾಗುವ ಪ್ರವಾಹ ಉಕ್ಕಿ ಹರಿದು, ಆ ಕುಟುಂಬಗಳನ್ನು ಸದಾ ಆತಂಕದ ತೂಗುಯ್ಯಾಲೆಯಲ್ಲಿಯೇ ಇರಿಸಿದೆ.

ಬೊಕ್ಕಹಳ್ಳಿ ಸ್ಥಳಾಂತರಕ್ಕೆ ಈಗಾಗಲೇ 4 ಎಕರೆ ಜಾಗವನ್ನು ಗುರುತಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೇ ಕಾರ್ಯ ನಡೆದಿದೆ. ಅಲ್ಲಿ ಎಷ್ಟು ನಿವೇಶನಗಳನ್ನು ರಚಿಸಬಹುದು ಎಂಬುದು ಸರ್ವೇ ಬಳಿಕವಷ್ಟೇ ನಿರ್ಧರಿಸಬೇಕಾಗಿದೆ.
-ಶಿವಕುಮಾರ್‌, ತಹಸಿಲ್ದಾರ್, ನಂಜನಗೂಡು.

‘ಹಕ್ಕುಪತ್ರ ಇಲ್ಲದೆ ಹೋಗುವುದಾದರೂ ಎಲ್ಲಿಗೆ?’
ಸ್ಥಳೀಯ ಅಧಿಕಾರಿಗಳು, ಬೇರೆ ಕಡೆ ನಿವೇಶನ ಸಿದ್ಧವಾಗಿವೆ. ಅಲ್ಲಿಗೆ ಹೋಗಿ ಎನ್ನುತ್ತಾರೆ. ಆದರೆ, ಹಕ್ಕುಪತ್ರ ಇಲ್ಲದೆ, ನಾವು ಹೋಗುವುದಾದರೂ ಎಲ್ಲಿಗೆ? ನನ್ನ ಪತಿ ಬಾಳೆ ಸಾಗಿಸುವ ವಾಹನದ ಚಾಲಕರಾಗಿ ಕೆಲಸ ಮಾಡುತ್ತಾರೆ. ಅವರ ದುಡಿಮೆಯೇ ನಮ್ಮ ಕುಟುಂಬ ನಿರ್ವಹಣೆಗೆ ಆಧಾರ. ಇದರ ನಡುವೆ ಆಗಾಗ ಈ ಪ್ರವಾಹದ ಭಯ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.

-ಮಹದೇವಮ್ಮ ನಾಗೇಶ್‌, ಹಳ್ಳದಕೇರಿ, ನಂಜನಗೂಡು

ಆಂದೋಲನ ಡೆಸ್ಕ್

Recent Posts

ಬಿಜೆಪಿ-ಜಾ.ದಳ ಮನಸ್ತಾಪ; ಸಿಎಂ ಡಿಕೆಶಿ ‘ಭವಿಷ್ಯ’ಕ್ಕೆ  ವರ?

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ಸಾಹದ ಕುದುರೆಯ ಮೇಲಿದ್ದಾರೆ. ಈ ಕುದುರೆಯನ್ನು ಸಮರ್ಥವಾಗಿ ಓಡಿಸುವ ವಿಶ್ವಾಸ ಇರುವುದರಿಂದ…

4 hours ago

ಎಚ್.ಡಿ.ಕೋಟೆ ಗಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಎನ್‌ಒಸಿ!

ಮಂಜು ಕೋಟೆ ಎಚ್.ಡಿ.ಕೋಟೆ: ರಾಜ್ಯದ ಗಡಿಭಾಗ ಕಬಿನಿ ಹಿನ್ನೀರಿನ ಪ್ರದೇಶವಾದ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ, ಡಿ.ಬಿ.ಕುಪ್ಪೆಯಿಂದ…

4 hours ago

ಭಾರತೀನಗರ: ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ!

ಅಣ್ಣೂರು ಸತೀಶ್ ೩೦ ಹಾಸಿಗೆಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ; ತುರ್ತು ಚಿಕಿತ್ಸೆಯೂ ಲಭ್ಯವಿಲ್ಲ  ಭಾರತೀನಗರ: ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ…

4 hours ago

ದಕ್ಷ ಮತ್ತೆ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ತಲ್ಲಣ

ಕೃಷ್ಣ ಸಿದ್ದಾಪುರ ಸ್ಥಳಾಂತರಿಸಿದ್ದ ಪುಂಡಾನೆ ಪುನಃ ಕೊಡಗಿನಲ್ಲಿ ಸಂಚಾರ: ನರಹಂತಕ ಆನೆಯನ್ನು ಸೆರೆ ಹಿಡಿದು ಪಳಗಿಸುವಂತೆ ಗ್ರಾಮಸ್ಥರ ಆಗ್ರ ಸಿದ್ದಾಪುರ:…

4 hours ago

ಇದು ಉದ್ಯಾನವಲ್ಲ: ಅನೈತಿಕ ಚಟುವಟಿಕೆಗಳ ತಾಣ

ಕೆ.ಎಸ್.ಚಂದ್ರಶೇಖರಮೂರ್ತಿ ರಾಮಕೃಷ್ಣ ನಗರದ ನಂದನವನ ಈಗ ಕುಡುಕರ ತಾಣ, ಬಯಲು ಶೌಚಾಲಯ ! ಮೈಸೂರು: ಸಾರ್ವಜನಿಕರಿಗೆ ವಿಶ್ರಾಂತಿಯ ತಾಣವಾಗಬೇಕಿದ್ದ ಉದ್ಯಾನವನ…

5 hours ago