Andolana originals

ಕಪಿಲೆಯ ಸೆರಗಿನಲ್ಲಿ ಕಣ್ಣೀರ ಕಥೆಗಳು

ನಂಜನಗೂಡು ತಾಲ್ಲೂಕಿನ ಪ್ರವಾಹ ಪೀಡಿತ ಹಳ್ಳಿಗಳ ಗಾಥೆ

• ಶಿವಪ್ರಸಾದ್ ಮುಳ್ಳೂರು
• ಶ್ರೀಧರ್ ಆರ್. ಭಟ್
ಮೈಸೂರು/ ನಂಜನಗೂಡು: ಜಿಲ್ಲೆಯ ಕಬಿನಿ ಅಣೆಕಟ್ಟೆಯಿಂದ ಭೋರ್ಗರೆದು ಹೊರಬರುತ್ತಿರುವ ಕಪಿಲಾ ನದಿಯ ರುದ್ರರಮಣೀಯತೆ ನೋಡುಗರ ಮನಸ್ಸುಗಳಿಗೆ ಉಲ್ಲಾಸ ತುಂಬಿದರೆ, ಮತ್ತೊಂದೆಡೆ ಈ ನದಿಯ ಒಡಲಿನಲ್ಲಿ ಉಕ್ಕಿ ಹರಿಯುವ ಜಲರಾಶಿಯು ಹಲವು ಅಮಾಯಕರ ಬದುಕಿಗೆ ಬರೆ ಎಳೆದಿದೆ. ಇದು ನದಿಯಲ್ಲಿ ಪ್ರವಾಹ ಬಂದಾಗಲೆಲ್ಲ ಸಹಜ ಎಂಬಂತಾಗಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಊರನ್ನೇ ಶಾಶ್ವತವಾಗಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿಕೊಟ್ಟರೆ ಸಾಕು ಎಂಬಂತಹ ದುಸ್ಥಿತಿಯ ಚಿತ್ರಣಗಳು ತೆರೆದುಕೊಳ್ಳುತ್ತವೆ.

ಕೆಲ ದಿನಗಳ ಹಿಂದೆ ನೆರೆ ಬಂದಿದ್ದರಿಂದ ಮನೆ ಖಾಲಿ ಮಾಡಿ ಬೇರೆಡೆ ವಾಸ ಇದ್ದೇವೆ ಎಂದ ಹೆಣ್ಣುಮಗಳ ಕಂಗಳಲ್ಲಿ ಕಂಬನಿ ಪಸೆಯಾಡಿತ್ತು… ಮನೆಯಾಗಲಿ, ನಿವೇಶನವನ್ನಾಗಲಿ ಸುರಕ್ಷಿತ ಪ್ರದೇಶದಲ್ಲಿ ಒದಗಿಸಿದರೆ, ಊರು ಖಾಲಿ ಮಾಡುವುದು ದಿಟ ಎಂಬುದು ಕಪಿಲಾ ನದಿ ಮುನಿಸಿಕೊಂಡಾಗಲೆಲ್ಲಾ ಪ್ರವಾಹ ಸಂಕಟದಿಂದ ನರಳುವ ಗ್ರಾಮದ ಮುಖಂಡರೊಬ್ಬರ ಖಚಿತ ನುಡಿ… ಇವರ ಮನದ ನೋವುಗಳಿಗೆ ಮುಲಾಮು ಹಚ್ಚ ಬಲ್ಲವರ ಕಿವಿಗಳಿಗೆ ಇದು ತಾಕಬೇಕಿದೆ.

ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ಸಾಗಿ ಶ್ರೀಕಂಠೇಶ್ವರ ದೇವಾಲಯದ ಬಳಿ ಎಡಕ್ಕೆ ತಿರುಗಿದರೆ ಹಳೆಯ ಸೇತುವೆಯೊಂದು ಎದುರಾಗುತ್ತದೆ. ಇದು ಚಾಮರಾಜನಗರ ಗುಂಡ್ಲುಪೇಟೆಯಿಂದ ಹರಿದು ಬರುವ ಗುಂಡ್ಲು ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿದೆ. ಸುಮಾರು 3 ದಶಕಗಳ ಹಿಂದೆ ನಂಜನಗೂಡು ಮಾರ್ಗವಾಗಿ ಚಾಮರಾಜನಗರ, ತಿ.ನರಸೀಪುರಕ್ಕೆ ಇದೇ ಸೇತುವೆ ಮೇಲೆ ಬಸ್ ಗಳಿಂದ ಹಿಡಿದು ಎಲ್ಲ ಬಗೆಯ ವಾಹನಗಳೂ ಸಂಚರಿಸುತ್ತಿದ್ದವು. ವಾಪಸ್ಸಾಗುವವರು ಇದೇ ಮಾರ್ಗದಲ್ಲಿ ಬರಬೇಕಿತ್ತು. ಈಗ ಬೈಪಾಸ್ ರಸ್ತೆ ನಿರ್ಮಾಣವಾಗಿರುವುದರಿಂದ ಸೇತುವೆಯ ಮೇಲೆ ವಾಹನಗಳ ಸಂಚಾರದ ಒತ್ತಡ ಕಡಿಮೆಯಾಗಿದೆ. ಈ ಸೇತುವೆಯ ಕೆಳಭಾಗದಲ್ಲಿ ಅಂದರೆ ಗುಂಡ್ಲು ನದಿ ಹರಿವಿಗೆ ಸ್ವಲ್ಪ ಎತ್ತರದ ಪ್ರದೇಶದಲ್ಲಿ ನಾಲ್ಕು ಮನೆಗಳಿವೆ. ಇವು ನಂಜನಗೂಡಿನ ಹಳ್ಳದಕೇರಿ ಬಡಾವಣೆ ವ್ಯಾಪ್ತಿಗೆ ಸೇರುತ್ತವೆ. ಕಪಿಲಾ ನದಿಯಲ್ಲಿ ನೀರಿನ ಹರಿವು ಅಬ್ಬರಿಸಿದರೆ, ಈ ಮನೆಗಳ ಕುಟುಂಬಗಳ ಎದೆಯೊಳಗೆ ಢವ ಢವ ಶುರುವಾಗುತ್ತದೆ. ಸಂತೈಸುವಿಕೆಗೆ ಮಾನವೀಯ ಮನಸ್ಸುಗಳಿಗಾಗಿ ಹಾತೊರೆಯುವಂತಹ ಸ್ಥಿತಿ ಉದ್ಭವಿಸುತ್ತದೆ.

ಕೆಲವೇ ದಿನಗಳ ಹಿಂದೆ ಕಬಿನಿ ಅಣೆಕಟ್ಟೆಯಿಂದ ನೀರಿನ ಹೊರಹರಿವು ನಿರೀಕ್ಷೆ ಮೀರಿ ಹೆಚ್ಚಳವಾಗಿತ್ತು. ಕಪಿಲಾ ನದಿಯ ನೀರು ಹಿಂದಕ್ಕೆ ಒದ್ದುಕೊಂಡು ಬಂದಿದ್ದರಿಂದ ಗುಂಡ್ಲು ನದಿ ಸೇತುವೆ ಕೆಳಭಾಗದ ನಾಲ್ಕೂ ಮನೆಗಳು ಜಲಾವೃತವಾಗಿದ್ದವು. ತಕ್ಷಣ ಸ್ಥಳೀಯ ಅಧಿಕಾರಿಗಳು ಬಂದರು, ಕಾಳಜಿ ಕೇಂದ್ರ ತೆರೆದಿದ್ದೇವೆ ಬನ್ನಿ ಎಂದರು. ಅಲ್ಲಿಗೆ ಹೋದರೆ ಯಾರೂ ಇರಲಿಲ್ಲ. ಇನ್ನು ಪರಿಹಾರ ಅಂತ ಏನೂ ಸಿಕ್ಕಿಲ್ಲ ಎಂದವರು ನೆರೆ ಸಂತ್ರಸ್ತರಾದ ಮಹದೇವಮ್ಮ ನಾಗೇಶ್ ಅವರು.

ನಾವು ವಾಸ ಇರುವುದು ನನ್ನ ಪತಿ ನಾಗೇಶ್ ಅವರ ತಂದೆ ಮನೆ ನಮ್ಮ ಮದುವೆ ನಂತರ ನನ್ನ ತವರು ಮನೆಯಲ್ಲೇ ಇದ್ದೆವು. ಕಳೆದ 10 ವರ್ಷಗಳಿಂದ ಇಲ್ಲಿದ್ದೇವೆ. ನಮ್ಮ ಮೂವರೂ ಮಕ್ಕಳು ಕಾಲೇಜಿಗೆ ಹೋಗುತ್ತಿದ್ದಾರೆ. ಆದರೆ, ಮನೆಯೇ ಸರಿಯಾಗಿಲ್ಲ. ಸದ್ಯಕ್ಕೆ ಹೃದಯವಂತರೊಬ್ಬರು, ಅವರ ಮನೆಯಲ್ಲಿ ಇರುವುದಕ್ಕೆ ಅವಕಾಶ ನೀಡಿದ್ದಾರೆ ಎಂದು ಅವರು ಕಣ್ಣೀರಾದರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಪಿಲಾ ನದಿಯಲ್ಲಿ ಉಂಟಾಗುವ ಪ್ರವಾಹ ಉಕ್ಕಿ ಹರಿದು, ಆ ಕುಟುಂಬಗಳನ್ನು ಸದಾ ಆತಂಕದ ತೂಗುಯ್ಯಾಲೆಯಲ್ಲಿಯೇ ಇರಿಸಿದೆ.

ಬೊಕ್ಕಹಳ್ಳಿ ಸ್ಥಳಾಂತರಕ್ಕೆ ಈಗಾಗಲೇ 4 ಎಕರೆ ಜಾಗವನ್ನು ಗುರುತಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೇ ಕಾರ್ಯ ನಡೆದಿದೆ. ಅಲ್ಲಿ ಎಷ್ಟು ನಿವೇಶನಗಳನ್ನು ರಚಿಸಬಹುದು ಎಂಬುದು ಸರ್ವೇ ಬಳಿಕವಷ್ಟೇ ನಿರ್ಧರಿಸಬೇಕಾಗಿದೆ.
-ಶಿವಕುಮಾರ್‌, ತಹಸಿಲ್ದಾರ್, ನಂಜನಗೂಡು.

‘ಹಕ್ಕುಪತ್ರ ಇಲ್ಲದೆ ಹೋಗುವುದಾದರೂ ಎಲ್ಲಿಗೆ?’
ಸ್ಥಳೀಯ ಅಧಿಕಾರಿಗಳು, ಬೇರೆ ಕಡೆ ನಿವೇಶನ ಸಿದ್ಧವಾಗಿವೆ. ಅಲ್ಲಿಗೆ ಹೋಗಿ ಎನ್ನುತ್ತಾರೆ. ಆದರೆ, ಹಕ್ಕುಪತ್ರ ಇಲ್ಲದೆ, ನಾವು ಹೋಗುವುದಾದರೂ ಎಲ್ಲಿಗೆ? ನನ್ನ ಪತಿ ಬಾಳೆ ಸಾಗಿಸುವ ವಾಹನದ ಚಾಲಕರಾಗಿ ಕೆಲಸ ಮಾಡುತ್ತಾರೆ. ಅವರ ದುಡಿಮೆಯೇ ನಮ್ಮ ಕುಟುಂಬ ನಿರ್ವಹಣೆಗೆ ಆಧಾರ. ಇದರ ನಡುವೆ ಆಗಾಗ ಈ ಪ್ರವಾಹದ ಭಯ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.

-ಮಹದೇವಮ್ಮ ನಾಗೇಶ್‌, ಹಳ್ಳದಕೇರಿ, ನಂಜನಗೂಡು

ಆಂದೋಲನ ಡೆಸ್ಕ್

Recent Posts

ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಕ್ಕೆ ಚಾಲನೆ

ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…

52 mins ago

ಮದ್ಯಪಾನಿಗಳ ತಾಣವಾದ ಶಾಲಾ ಕಟ್ಟಡ

ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…

58 mins ago

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ: ಆಕಾಂಕ್ಷಿಗಳ ಕಸರತ್ತು

ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …

1 hour ago

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

12 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

12 hours ago