Andolana originals

ಕಪಿಲೆಯ ಸೆರಗಿನಲ್ಲಿ ಕಣ್ಣೀರ ಕಥೆಗಳು

ನಂಜನಗೂಡು ತಾಲ್ಲೂಕಿನ ಪ್ರವಾಹ ಪೀಡಿತ ಹಳ್ಳಿಗಳ ಗಾಥೆ

• ಶಿವಪ್ರಸಾದ್ ಮುಳ್ಳೂರು
• ಶ್ರೀಧರ್ ಆರ್. ಭಟ್
ಮೈಸೂರು/ ನಂಜನಗೂಡು: ಜಿಲ್ಲೆಯ ಕಬಿನಿ ಅಣೆಕಟ್ಟೆಯಿಂದ ಭೋರ್ಗರೆದು ಹೊರಬರುತ್ತಿರುವ ಕಪಿಲಾ ನದಿಯ ರುದ್ರರಮಣೀಯತೆ ನೋಡುಗರ ಮನಸ್ಸುಗಳಿಗೆ ಉಲ್ಲಾಸ ತುಂಬಿದರೆ, ಮತ್ತೊಂದೆಡೆ ಈ ನದಿಯ ಒಡಲಿನಲ್ಲಿ ಉಕ್ಕಿ ಹರಿಯುವ ಜಲರಾಶಿಯು ಹಲವು ಅಮಾಯಕರ ಬದುಕಿಗೆ ಬರೆ ಎಳೆದಿದೆ. ಇದು ನದಿಯಲ್ಲಿ ಪ್ರವಾಹ ಬಂದಾಗಲೆಲ್ಲ ಸಹಜ ಎಂಬಂತಾಗಿದೆ. ಇನ್ನು ಕೆಲವು ಹಳ್ಳಿಗಳಲ್ಲಿ ಊರನ್ನೇ ಶಾಶ್ವತವಾಗಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಿಕೊಟ್ಟರೆ ಸಾಕು ಎಂಬಂತಹ ದುಸ್ಥಿತಿಯ ಚಿತ್ರಣಗಳು ತೆರೆದುಕೊಳ್ಳುತ್ತವೆ.

ಕೆಲ ದಿನಗಳ ಹಿಂದೆ ನೆರೆ ಬಂದಿದ್ದರಿಂದ ಮನೆ ಖಾಲಿ ಮಾಡಿ ಬೇರೆಡೆ ವಾಸ ಇದ್ದೇವೆ ಎಂದ ಹೆಣ್ಣುಮಗಳ ಕಂಗಳಲ್ಲಿ ಕಂಬನಿ ಪಸೆಯಾಡಿತ್ತು… ಮನೆಯಾಗಲಿ, ನಿವೇಶನವನ್ನಾಗಲಿ ಸುರಕ್ಷಿತ ಪ್ರದೇಶದಲ್ಲಿ ಒದಗಿಸಿದರೆ, ಊರು ಖಾಲಿ ಮಾಡುವುದು ದಿಟ ಎಂಬುದು ಕಪಿಲಾ ನದಿ ಮುನಿಸಿಕೊಂಡಾಗಲೆಲ್ಲಾ ಪ್ರವಾಹ ಸಂಕಟದಿಂದ ನರಳುವ ಗ್ರಾಮದ ಮುಖಂಡರೊಬ್ಬರ ಖಚಿತ ನುಡಿ… ಇವರ ಮನದ ನೋವುಗಳಿಗೆ ಮುಲಾಮು ಹಚ್ಚ ಬಲ್ಲವರ ಕಿವಿಗಳಿಗೆ ಇದು ತಾಕಬೇಕಿದೆ.

ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ಸಾಗಿ ಶ್ರೀಕಂಠೇಶ್ವರ ದೇವಾಲಯದ ಬಳಿ ಎಡಕ್ಕೆ ತಿರುಗಿದರೆ ಹಳೆಯ ಸೇತುವೆಯೊಂದು ಎದುರಾಗುತ್ತದೆ. ಇದು ಚಾಮರಾಜನಗರ ಗುಂಡ್ಲುಪೇಟೆಯಿಂದ ಹರಿದು ಬರುವ ಗುಂಡ್ಲು ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿದೆ. ಸುಮಾರು 3 ದಶಕಗಳ ಹಿಂದೆ ನಂಜನಗೂಡು ಮಾರ್ಗವಾಗಿ ಚಾಮರಾಜನಗರ, ತಿ.ನರಸೀಪುರಕ್ಕೆ ಇದೇ ಸೇತುವೆ ಮೇಲೆ ಬಸ್ ಗಳಿಂದ ಹಿಡಿದು ಎಲ್ಲ ಬಗೆಯ ವಾಹನಗಳೂ ಸಂಚರಿಸುತ್ತಿದ್ದವು. ವಾಪಸ್ಸಾಗುವವರು ಇದೇ ಮಾರ್ಗದಲ್ಲಿ ಬರಬೇಕಿತ್ತು. ಈಗ ಬೈಪಾಸ್ ರಸ್ತೆ ನಿರ್ಮಾಣವಾಗಿರುವುದರಿಂದ ಸೇತುವೆಯ ಮೇಲೆ ವಾಹನಗಳ ಸಂಚಾರದ ಒತ್ತಡ ಕಡಿಮೆಯಾಗಿದೆ. ಈ ಸೇತುವೆಯ ಕೆಳಭಾಗದಲ್ಲಿ ಅಂದರೆ ಗುಂಡ್ಲು ನದಿ ಹರಿವಿಗೆ ಸ್ವಲ್ಪ ಎತ್ತರದ ಪ್ರದೇಶದಲ್ಲಿ ನಾಲ್ಕು ಮನೆಗಳಿವೆ. ಇವು ನಂಜನಗೂಡಿನ ಹಳ್ಳದಕೇರಿ ಬಡಾವಣೆ ವ್ಯಾಪ್ತಿಗೆ ಸೇರುತ್ತವೆ. ಕಪಿಲಾ ನದಿಯಲ್ಲಿ ನೀರಿನ ಹರಿವು ಅಬ್ಬರಿಸಿದರೆ, ಈ ಮನೆಗಳ ಕುಟುಂಬಗಳ ಎದೆಯೊಳಗೆ ಢವ ಢವ ಶುರುವಾಗುತ್ತದೆ. ಸಂತೈಸುವಿಕೆಗೆ ಮಾನವೀಯ ಮನಸ್ಸುಗಳಿಗಾಗಿ ಹಾತೊರೆಯುವಂತಹ ಸ್ಥಿತಿ ಉದ್ಭವಿಸುತ್ತದೆ.

ಕೆಲವೇ ದಿನಗಳ ಹಿಂದೆ ಕಬಿನಿ ಅಣೆಕಟ್ಟೆಯಿಂದ ನೀರಿನ ಹೊರಹರಿವು ನಿರೀಕ್ಷೆ ಮೀರಿ ಹೆಚ್ಚಳವಾಗಿತ್ತು. ಕಪಿಲಾ ನದಿಯ ನೀರು ಹಿಂದಕ್ಕೆ ಒದ್ದುಕೊಂಡು ಬಂದಿದ್ದರಿಂದ ಗುಂಡ್ಲು ನದಿ ಸೇತುವೆ ಕೆಳಭಾಗದ ನಾಲ್ಕೂ ಮನೆಗಳು ಜಲಾವೃತವಾಗಿದ್ದವು. ತಕ್ಷಣ ಸ್ಥಳೀಯ ಅಧಿಕಾರಿಗಳು ಬಂದರು, ಕಾಳಜಿ ಕೇಂದ್ರ ತೆರೆದಿದ್ದೇವೆ ಬನ್ನಿ ಎಂದರು. ಅಲ್ಲಿಗೆ ಹೋದರೆ ಯಾರೂ ಇರಲಿಲ್ಲ. ಇನ್ನು ಪರಿಹಾರ ಅಂತ ಏನೂ ಸಿಕ್ಕಿಲ್ಲ ಎಂದವರು ನೆರೆ ಸಂತ್ರಸ್ತರಾದ ಮಹದೇವಮ್ಮ ನಾಗೇಶ್ ಅವರು.

ನಾವು ವಾಸ ಇರುವುದು ನನ್ನ ಪತಿ ನಾಗೇಶ್ ಅವರ ತಂದೆ ಮನೆ ನಮ್ಮ ಮದುವೆ ನಂತರ ನನ್ನ ತವರು ಮನೆಯಲ್ಲೇ ಇದ್ದೆವು. ಕಳೆದ 10 ವರ್ಷಗಳಿಂದ ಇಲ್ಲಿದ್ದೇವೆ. ನಮ್ಮ ಮೂವರೂ ಮಕ್ಕಳು ಕಾಲೇಜಿಗೆ ಹೋಗುತ್ತಿದ್ದಾರೆ. ಆದರೆ, ಮನೆಯೇ ಸರಿಯಾಗಿಲ್ಲ. ಸದ್ಯಕ್ಕೆ ಹೃದಯವಂತರೊಬ್ಬರು, ಅವರ ಮನೆಯಲ್ಲಿ ಇರುವುದಕ್ಕೆ ಅವಕಾಶ ನೀಡಿದ್ದಾರೆ ಎಂದು ಅವರು ಕಣ್ಣೀರಾದರು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಪಿಲಾ ನದಿಯಲ್ಲಿ ಉಂಟಾಗುವ ಪ್ರವಾಹ ಉಕ್ಕಿ ಹರಿದು, ಆ ಕುಟುಂಬಗಳನ್ನು ಸದಾ ಆತಂಕದ ತೂಗುಯ್ಯಾಲೆಯಲ್ಲಿಯೇ ಇರಿಸಿದೆ.

ಬೊಕ್ಕಹಳ್ಳಿ ಸ್ಥಳಾಂತರಕ್ಕೆ ಈಗಾಗಲೇ 4 ಎಕರೆ ಜಾಗವನ್ನು ಗುರುತಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ವೇ ಕಾರ್ಯ ನಡೆದಿದೆ. ಅಲ್ಲಿ ಎಷ್ಟು ನಿವೇಶನಗಳನ್ನು ರಚಿಸಬಹುದು ಎಂಬುದು ಸರ್ವೇ ಬಳಿಕವಷ್ಟೇ ನಿರ್ಧರಿಸಬೇಕಾಗಿದೆ.
-ಶಿವಕುಮಾರ್‌, ತಹಸಿಲ್ದಾರ್, ನಂಜನಗೂಡು.

‘ಹಕ್ಕುಪತ್ರ ಇಲ್ಲದೆ ಹೋಗುವುದಾದರೂ ಎಲ್ಲಿಗೆ?’
ಸ್ಥಳೀಯ ಅಧಿಕಾರಿಗಳು, ಬೇರೆ ಕಡೆ ನಿವೇಶನ ಸಿದ್ಧವಾಗಿವೆ. ಅಲ್ಲಿಗೆ ಹೋಗಿ ಎನ್ನುತ್ತಾರೆ. ಆದರೆ, ಹಕ್ಕುಪತ್ರ ಇಲ್ಲದೆ, ನಾವು ಹೋಗುವುದಾದರೂ ಎಲ್ಲಿಗೆ? ನನ್ನ ಪತಿ ಬಾಳೆ ಸಾಗಿಸುವ ವಾಹನದ ಚಾಲಕರಾಗಿ ಕೆಲಸ ಮಾಡುತ್ತಾರೆ. ಅವರ ದುಡಿಮೆಯೇ ನಮ್ಮ ಕುಟುಂಬ ನಿರ್ವಹಣೆಗೆ ಆಧಾರ. ಇದರ ನಡುವೆ ಆಗಾಗ ಈ ಪ್ರವಾಹದ ಭಯ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.

-ಮಹದೇವಮ್ಮ ನಾಗೇಶ್‌, ಹಳ್ಳದಕೇರಿ, ನಂಜನಗೂಡು

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ…

3 hours ago

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

4 hours ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

4 hours ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

5 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

20 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

23 hours ago