Andolana originals

ಕೊಳಚೆ ನೀರಿನ ತಾಣವಾದ ಶ್ರೀರಾಂಪುರ ತಗ್ಗು ಪ್ರದೇಶ

ದುರ್ನಾತ ಸಹಿಸಲಾಗದೆ ನಿವಾಸಿಗಳ ಪರಿತಾಪ; ಸಮಸ್ಯೆ ಬಗೆಹರಿಸಲು ಆಗ್ರಹ

ಕೆ. ಬಿ. ರಮೇಶನಾಯಕ

ಮೈಸೂರು: ಕಾವೇರಿ ನದಿಗೆ, ಮಳೆ ನೀರು ಚರಂಡಿಗೆ ಯುಜಿಡಿ ನೀರು ಸೇರಿದಂತೆ ತಡೆಯಲು ಒಂದು ಕಡೆ ಯೋಜನೆ ರೂಪಿಸುತ್ತಿದ್ದರೆ, ಮತ್ತೊಂದೆಡೆ ಶ್ರೀರಾಂಪುರ ರಿಂಗ್ ರಸ್ತೆಯ ತಗ್ಗು ಪ್ರದೇಶವು ಯುಜಿಡಿಯ ಕೆರೆಯಂತೆಯೇ ಆಗಿಬಿಟ್ಟಿದೆ.

ನಗರಪಾಲಿಕೆ ಹಾಗೂ ಶ್ರೀರಾಂಪುರಕ್ಕೆ ಹೊಂದಿಕೊಂಡಂತೆ ಇರುವ ರಿಂಗ್ ರಸ್ತೆಯ ಶಂಕರಲಿಂಗೇಗೌಡ ಬಡಾವಣೆಯ ನಿವಾಸಿಗಳು ಸಮೀಪದಲ್ಲೇ ಹೊರ ಬರುತ್ತಿರುವ ಕೊಳಚೆ ನೀರಿನ ದುರ್ವಾಸನೆಯನ್ನು ತಾಳಲಾಗದೆ ಪರಿತಪಿಸುತ್ತಿದ್ದಾರೆ. ನಗರದ ಹೊರವಲಯದ ರಮಾಬಾಯಿನಗರ, ಶಂಕರಲಿಂಗೇಗೌಡ ಬಡಾವಣೆಯಲ್ಲಿ ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ಈ ಜನರಿಗೆ ಎರಡು ದಶಕಗಳ ಹಿಂದೆ ವಾಸಿಸಲು ಮನೆ ಒದಗಿಸಿದ್ದನ್ನು ಬಿಟ್ಟರೆ, ಬೇರೇನೂ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ.

ಮೈಸೂರಿನ ಜೆ. ಪಿ. ನಗರ, ಶ್ರೀರಾಂಪುರ, ಅರವಿಂದನಗರ ಇನ್ನಿತರೆ ಬಡಾವಣೆಗಳಿಂದ ಹರಿದು ಬರುತ್ತಿರುವ ಮಲಿನ ನೀರು ಈ ಬಡಾವಣೆಯ ಮೂಲಕವೇ ಪೈಪ್‌ಲೈನ್‌ನಲ್ಲಿ ಹಾದು ಹೋಗುತ್ತಿದೆ. ರಿಂಗ್ ರಸ್ತೆಯಿಂದ ಸಂಪರ್ಕ ಪಡೆದಿರುವ ಪೈಪ್‌ಲೈನ್‌ನಲ್ಲಿ ಹರಿದು ಹೋಗುವ ನೀರು ನೇರವಾಗಿ ರಾಯನಕೆರೆ ಮಲಿನ ನೀರು ಸಂಸ್ಕರಣಾ ಘಟಕಕ್ಕೆ ಸೇರ್ಪಡೆಯಾಗುತ್ತಿದೆ. ಆದರೆ, ಈ ಬಡಾವಣೆಯಲ್ಲಿ ಹರಿಯುವ ನೀರನ್ನು ಮುಖ್ಯ ಕೊಳವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ಪೈಪ್‌ಲೈನ್ ಅಳವಡಿಸದಿರುವ ಕಾರಣ ಬಹಿರಂಗವಾಗಿ ಹರಿಯುವುದಕ್ಕೆ ಕಾರಣವಾಗಿದೆ.

ಕೆರೆಯಂತಾದ ಪ್ರದೇಶ: ಶ್ರೀರಾಂಪುರ ರಿಂಗ್ ರಸ್ತೆಯ ನ್ಯಾಯಾಽಶರ ವಸತಿ ಬಡಾವಣೆಗೆ ಹತ್ತಿರವಿರುವ ತಗ್ಗು ಪ್ರದೇಶಗಳು ಕೆರೆಯಂತಾಗಿದೆ. ರಮಾಬಾಯಿನಗರ ಸೇರಿದಂತೆ ಅಕ್ಕಪಕ್ಕದ ಬಡಾವಣೆಗಳಿಂದ ಮೋರಿಯ ಮೂಲಕ ಹರಿದು ಬಂದು ಇಲ್ಲಿ ನಿಲ್ಲುತ್ತಿದೆ. ಈ ಜಾಗದಲ್ಲಿ ಈಗ ಕಲುಷಿತ ನೀರು ನಿಲ್ಲುತ್ತಿರುವ ಕಾರಣ ಮಲಿನ ಕೆರೆಯ ವಾತಾವರಣ ಕಾಣಿಸಿಕೊಂಡಿದೆ. ಇದಕ್ಕೆ ಹೊಂದಿಕೊಂಡಂತೆ ೨೦೦ ಮೀಟರ್ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ವಾಸನೆ ತಾಳಲಾರದೆ ಪರದಾಡುತ್ತಿದ್ದಾರೆ.

ಬೆಳಿಗ್ಗೆ ಎದ್ದು ಕೂಲಿ ಕೆಲಸಕ್ಕೆ ಹೋಗಿ ಬೆವರು ಸುರಿಸುವ ಈ ಜನರು, ಸಂಜೆ ಮನೆಗೆ ಬಂದು ನೆಮ್ಮದಿಯಾಗಿ ಕಾಲ ಕಳೆಯದಂತಾಗಿದೆ. ಈ ಕೆಟ್ಟ ವಾಸನೆಯ ಪರಿಣಾಮವಾಗಿ ಅನೇಕರು ಮಧುಮೇಹ, ನೆಗಡಿ, ಶೀತ, ಜ್ವರ ಮೊದಲಾದ ಸಮಸ್ಯೆಗಳಿಗೆ ಸಿಲುಕಿ ನರಳುತ್ತಿದ್ದಾರೆ ಎಂದು ಹೇಳಲಾಗಿದೆ.

ಬಾತುಕೋಳಿಗಳ ವಿಹಾರ: ಕುಕ್ಕರಹಳ್ಳಿ, ದಳವಾಯಿ ಕೆರೆಗಳಲ್ಲಿ ನೆಲೆಸಿರುವಂತೆ ಈ ಜಾಗದಲ್ಲೂ ನೂರಾರು ಬಾತುಕೋಳಿಗಳು ವಾಸವಾಗಿದ್ದು, ಕಲುಷಿತ ನೀರು ಸೇವನೆಯಿಂದ ಈ ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು.

ಶೀಘ್ರದಲ್ಲೇ ಎಸ್‌ಟಿಪಿ ಘಟಕ: ರಿಂಗ್ ರಸ್ತೆಯ ಕೆಲವು ಪ್ರದೇಶಗಳಲ್ಲಿ ಯುಜಿಡಿ ನೀರು ಚರಂಡಿ ಮೂಲಕ ಹಾದು ಹೋಗದಂತೆ ತಡೆಯಲು ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಒಂದೊಂದು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಪರಿಹಾರ ಕಲ್ಪಿಸುವುದಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ.

ರಮಾಬಾಯಿನಗರ, ಶಂಕರಲಿಂಗೇಗೌಡ ಬಡಾವಣೆ, ಗೌತಮನಗರ ಸೇರಿದಂತೆ ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಸರ್ಕಾರದಿಂದಲೂ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡು ಮುಖ್ಯ ಪೈಪ್‌ಲೈನ್‌ಗೆ ಸೇರುವಂತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್. ಎಂ. ಸುರೇಶ್ ತಿಳಿಸಿದರು.

 

ಆಂದೋಲನ ಡೆಸ್ಕ್

Recent Posts

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

35 mins ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

1 hour ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

2 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

2 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

2 hours ago

ದ್ವೇಷ ಭಾಷಣಕ್ಕೆ ಕಡಿವಾಣ | ಗರಿಷ್ಟ 10 ವರ್ಷ ಶಿಕ್ಷೆ, ವಿಧಾನಸಭೆಯಲ್ಲಿ ಮಸೂದೆ ಮಂಡನೆ, BJP ವಿರೋಧ

ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ…

2 hours ago