Andolana originals

ನಂಜನಗೂಡು: ಸೋರುತಿಹುದು ಕಲಾ ಮಂಟಪ

• ಶ್ರೀಧರ್ ಆರ್.ಭಟ್

ನಂಜನಗೂಡು: ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟನೆಗಾಗಿ ಕಾದಿರುವ ಸರ್ಕಾರಿ ಶಾಲೆಯ ಕಲಾಮಂಟಪದ ಕಾಮಗಾರಿಯ ಬಣ್ಣವನ್ನು ಆಷಾಢದ ಸೋನೆ ಮಳೆ ಬಟ್ಟಬಯಲಾಗಿಸಿದೆ.

ಒಂದು ಶತಮಾನದ ಇತಿಹಾಸ ಹೊಂದಿರುವ ನಂಜನಗೂಡು ನಗರದ ಮಹಾತ್ಮ ಗಾಂಧಿ ರಸ್ತೆಯ ರಥ ಬೀದಿಯಲ್ಲಿರುವ ದಳವಾಯಿ ಶಾಲಾ ಆವರಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕಾಗಿ ನಿರ್ಮಿಸಿರುವ ಕಲಾ ಮಂಟಪ ಉದ್ಘಾಟನೆಗೂ ಮುನ್ನವೇ ಸೋರಲಾರಂಭಿಸಿದೆ.

ನಗರದ ದಿಗ್ಗಜರು ವ್ಯಾಸಂಗ ಮಾಡಿದ ಈ ಶಾಲಾ ಆವರಣದಲ್ಲಿ ಕಲಾ ಮಂಟಪ ಎನ್ನುವ ಬಹುದಿನಗಳ ಬೇಡಿಕೆಯನ್ನು ನಗರಸಭೆಯ 14ನೇ ಹಣಕಾಸು ನಿಧಿಯಲ್ಲಿ ಪೂರೈಸಬೇಕು ಎಂಬ ಅಭಿಲಾಷೆಯೊಂದಿಗೆ ಕಳೆದ ವರ್ಷ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಹಠಕ್ಕೆ ಬಿದ್ದ ಮಹಾನುಭಾವರೊಬ್ಬರು ಬರೋಬ್ಬರಿ 3.50 ಲಕ್ಷ ರೂ. ರಿಯಾಯಿತಿ ಘೋಷಿಸಿ ಗುತ್ತಿಗೆಗೆ ಪಡೆದುಕೊಂಡಿದ್ದರು. ಈ ಕಾಮಗಾರಿ ಪಡೆದ ಗುತ್ತಿಗೆದಾರರು 6 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಿದ್ದ ಕಾಮಗಾರಿಗೆ ಒಂದು ವರ್ಷ ಸಮಯ ತೆಗೆದುಕೊಂಡು ಸುಂದರವಾದ ಕಲಾ ಮಂಟಪವನ್ನು ನಿರ್ಮಿಸಿ ಅದಕ್ಕೆ ಸುಣ್ಣ-ಬಣ್ಣ ಬಳಿದು ಇನ್ನೇನು ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಿದ್ದರು.

ಆ ವೇಳೆಗೆ ಚುನಾವಣೆ ಘೋಷಣೆಯಾಯಿತು. ಉದ್ಘಾಟನೆಯ ದಿನಾಂಕ ನನೆಗುದಿಗೆ ಬಿದ್ದು ಮುಂದಕ್ಕೆ ಹೋಯಿತು. ಲೋಕಾರ್ಪಣೆಯಾಗುವ ಮೊದಲೇ ಆಷಾಢದ ಸೋನೆ ಮಳೆ ಆರಂಭವಾಗಿ, ಮಳೆಗೆ ಸಿಲುಕಿದ ಕಟ್ಟಡದಿಂದ ಮಳೆ ನೀರು ಸೋರಲಾರಂಭಿಸಿ 3.50 ಲಕ್ಷ ರೂ. ಬಿಟ್ಟು ಗುತ್ತಿಗೆ ಪಡೆದ ಕಾಮಗಾರಿಯ ನಿಜ ಬಣ್ಣ ಬಯಲು ಮಾಡಿತು.

ನೂತನ ಕಲಾಮಂಟಪ ಸೋರುತ್ತಿರುವುದನ್ನು ಕಂಡ ಶಿಕ್ಷಕರು ಹಾಗೂ ಮಕ್ಕಳು ವಿಚಲಿತರಾಗಿ ನಗರಸಭೆಯತ್ತ ದೌಡಾಯಿಸಿ ಮಂಟಪದ ಸ್ಥಿತಿಯನ್ನು ಅಲ್ಲಿನ ಅಧಿಕಾರಿಗಳಿಗೆ ವಿವರಿಸಿದರು.

ಕೋಟ್ಸ್‌))

ಶೇ.35ರಷ್ಟನ್ನು ಬಿಟ್ಟು ಪಡೆದ 10 ಲಕ್ಷ ರೂ. ಟೆಂಡರ್‌ನಲ್ಲಿ ಶೇ.40ರಷ್ಟು ಲಂಚದ ವ್ಯವಹಾರ ನಡೆದಿದೆ ಎಂದು ತಿಳಿದರೂ ಶೇ.25ರಷ್ಟು ಹಣದಲ್ಲಿ ಕಾಮಗಾರಿ ಮಾಡಿದರೆ ಆ ಕಾಮಗಾರಿಯ ಗುಣಮಟ್ಟ ಹೇಗಿರಲು ಸಾಧ್ಯ ಎಂಬುದಕ್ಕೆ ದಳವಾಯಿ ಶಾಲೆಯ ಕಲಾಮಂಟಪವೇ ಸಾಕ್ಷಿಯಾಗಿದೆ. ನಮ್ಮ ಆಡಳಿತದ ಭ್ರಷ್ಟಾಚಾರ ಶಾಲೆಯನ್ನೂ ಬಿಡದಿರುವುದು ವಿಷಾದನೀಯ.
-ಚಂದ್ರಶೇಖರ್, ಶಾಲೆಯ ಹಳೆಯ ವಿದ್ಯಾರ್ಥಿ, ಯುವ ಬ್ರಿಗೇಡ್ ನಾಯಕ

ಕಟ್ಟಡ ಸೋರುತ್ತಿರುವ ವಿಷಯ ಬೆಳಕಿಗೆ ಬಂದ ತಕ್ಷಣ ಅದನ್ನು ದುರಸ್ತಿಪಡಿಸಲು ಗುತ್ತಿಗೆದಾರರಿಗೆ ಈಗಾಗಲೆ ಸೂಚಿಸಲಾಗಿದೆ. ಕಟ್ಟಡ ಸೋರುವುದನ್ನು ಸರಿಪಡಿಸಿದ ನಂತರವೇ ಕಲಾ ಮಂಟಪವನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಆವರೆಗೂ ಉದ್ಘಾಟನೆಯೂ ಇಲ್ಲ ಎಂದು ಹೇಳಲಾಗಿದ್ದು, ಅವರು ವಾರದಲ್ಲಿ ದುರಸ್ತಿ ಕಾರ್ಯ ಆರಂಭಿಸಿ ಪೂರ್ಣಗೊಳಿಸಿದ ನಂತರ ಮತ್ತೆ ನೀರು ಸುರಿಯುತ್ತಿದೆಯೇ ಎಂಬುದನ್ನು ಪರೀಕ್ಷಿಸಿದ ನಂತರವೇ ಬಿಲ್ ಪಾವತಿ ಮಾಡಲಾಗುತ್ತದೆ.
-ಕುಮಾರ್‌, ಇಂಜಿನಿಯರ್‌, ನಗರಸಭೆ

ಸೋರುತ್ತಿರುವ ಕಲಾಮಂಟಪದ ಕುರಿತು ಈಗಾಗಲೇ ನಗರಸಭೆ ಆಯುಕ್ತ ನಂಜುಂಡಸ್ವಾಮಿಯವರಿಗೆ ತಿಳಿಸಿ, ಕಾಮಗಾರಿಯ ಹಣ ತಡೆಹಿಡಿಯುವಂತೆ ಲಿಖಿತವಾಗಿ ದೂರು ನೀಡಲಾಗಿದೆ.
-ಯೋಗಿ, ನಗರಸಭಾ ಸದಸ್ಯ

ಶ್ರೀಧರ್ ಆರ್ ಭಟ್

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವನಾದ ನಾನು ನಂಜನಗೂಡು ನಗರದಲ್ಲಿ ವಾಸವಾಗಿದ್ದು 1982ರ ಮಾರ್ಚ್ ತಿಂಗಳಿಂದ‌, 42 ವರ್ಷಗಳಿಂದ ಆಂದೋಲನ ದಿನ ಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಮೊಬೈಲ್‌ ಸಂಖ್ಯೆ: 9448425325

Recent Posts

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…

30 mins ago

ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್

ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…

34 mins ago

ಬೆಳಗಾವಿ ಅಧಿವೇಶನದಲ್ಲೂ ನಟ ದರ್ಶನ್‌ ಬಗ್ಗೆ ಚರ್ಚೆ : ಏನದು?

ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…

36 mins ago

ದಿ ಡೆವಿಲ್‌ ಚಿತ್ರದ ವಿಮರ್ಶೆ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ….!

ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…

44 mins ago

ಸರ್ಕಾರಿ ಶಾಲೆಗಳಿಗೆ ಗುಡ್‌ನ್ಯೂಸ್‌ : ಶಾಲಾ ಕೊಠಡಿ ದುರಸ್ಥಿಗೆ ರೂ.360 ಕೋಟಿ ಬಿಡುಗಡೆ

ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…

57 mins ago

ಹೊಸ ತಾಲ್ಲೂಕುಗಳಿಗೆ ಸದ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

1 hour ago