Andolana originals

ಕಾವೇರಿ ನೀರಾವರಿ ನಿಗಮದಲ್ಲಿ ಸಂಬಳದ ಸಂಕಷ್ಟ

ಶ್ರೀಧರ್ ಆರ್ ಭಟ್

೧,೫೦೦ ಕ್ಕೂ ಹೆಚ್ಚು ಸಿಬ್ಬಂದಿಗೆ ೩ ತಿಂಗಳಿಂದ ವೇತನವಿಲ್ಲ 

ಸಂಸಾರ ನಿರ್ವಹಣೆಯ ದಾರಿ ತೋರದೆ ಕಂಗಾಲು

ರಾಜ್ಯ ಸರ್ಕಾರದತ್ತ ಚಾತಕ ಪಕ್ಷಿಯಂತೆ ನೋಡುತ್ತಿರುವ ಸಿಬ್ಬಂದಿ

ಮೈಸೂರು: ಸಂಬಳಕ್ಕಾಗಿ ಕಾಯುತ್ತಿರುವ ಕಾವೇರಿ ನೀರಾವರಿ ನಿಗಮದ ೧,೫೦೦ಕ್ಕೂ ಹೆಚ್ಚು ಸಿಬ್ಬಂದಿ… ಕಟ್ಟಡ ದುರಸ್ತಿಗೆ ಸುಣ್ಣ ಬಣ್ಣಕ್ಕೆ ಹಣವಿದೆ, ಆದರೆ ಸಿಬ್ಬಂದಿ ಸಂಬಳಕ್ಕೆ ಮಾತ್ರ ದುಡ್ಡಿಲ್ಲ! ರೈತರ ಜಮೀನುಗಳಿಗೆ ನೀರು ಹರಿಸುವ ಇವರಿಗೆ ವೇತನ ಇಲ್ಲದೆ ಗುಟುಕು ನೀರು ಕುಡಿಯಬೇಕಾದ ದುಸ್ಥಿತಿ ಎದುರಾಗಿದೆ.

ರಾಜ್ಯದ ಅತ್ಯಂತ ಪ್ರಮುಖ ನೀರಾವರಿ ನಿಗಮಗಳಲ್ಲಿ ಒಂದಾಗಿರುವ ಹತ್ತು ಜಿಲ್ಲೆಗಳ ವ್ಯಾಪ್ತಿಯ ಕಾವೇರಿ ನೀರಾವರಿ ನಿಗಮದ ಶೋಚನೀಯ ಸ್ಥಿತಿ ಇದು.

ಹಳೇ ಮೈಸೂರು ಭಾಗದ ಹತ್ತು ಜಿಲ್ಲೆಗಳನ್ನೊಳಗೊಂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿ ಗಳು, ಸಾವಿರಾರು ಸಿಬ್ಬಂದಿ ತಿಂಗಳ ಸಂಬಳ ಇಂದು ಬರುತ್ತದೆ… ನಾಳೆ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ.

ಮಾರ್ಚ್ ತಿಂಗಳಲ್ಲಿ ದಿನ ಕಳೆದುಹೋದರೂ ಅವರ ಸಂಬಳ ಇನ್ನೂ ಬಂದೇ ಇಲ್ಲ. ಭತ್ತ ಬೆಳೆಯಲು ಅನ್ನದಾತನ ಭೂಮಿಗೆ ನಾಲೆಗಳಿಂದ ನೀರು ಹರಿಸುವ ಜವಾಬ್ದಾರಿಯುತ ಕಾರ್ಯದಲ್ಲಿ ತೊಡಗಿಕೊಂಡಿರುವ ನಿಗಮದ ಪ್ರಧಾನ ನಿರ್ದೇಶಕರಿಂದ ಹಿಡಿದು ಸ್ವಚ್ಛತಾ ಸಿಬ್ಬಂದಿಗಳವರೆಗೂ ಕಳೆದ ಮೂರು ತಿಂಗಳುಗಳಿಂದಲೂ ಸಂಬಳ ಬಂದಿಲ್ಲ. ಸರ್ಕಾರಿ ಕೆಲಸ ಆಗಿರುವುದರಿಂದ ತಿಂಗಳಾಯಿತು ಎಂದರೆ ಸಂಬಳವಂತೂ ಗ್ಯಾರಂಟಿ ಎಂದು ಆರಾಮವಾಗಿದ್ದ ನಿಗಮದ ಅಧಿಕಾರಿಗಳು ಸಂಬಳ ಬಾರದೆ ಕಂಗಾಲಾಗಿದ್ದಾರೆ. ದವಸ ಧಾನ್ಯ ಖರೀದಿಸಿರುವ ಅಂಗಡಿಯವರು, ಹಾಲಿನವರು, ಮನೆ ಕೆಲಸದವರು, ತರಕಾರಿಯವರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಬಾಕಿ ಅಥವಾ ವೇತನ ಪಾವತಿ ಮಾಡುತ್ತಿದ್ದವರು, ಈಗ ಅವರೆಲ್ಲರಿಗೂ ಹಣ ಕೊಡಲು ಆಗದೆ ಪರದಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಸಂಬಳ ತಡವಾಗಿದೆ. ಮುಂದಿನ ತಿಂಗಳು ಪಾವತಿ ಗ್ಯಾರಂಟಿ ಎಂದು ಜನವರಿ, ಫೆಬ್ರವರಿಯಲ್ಲಿ ಪ್ರಯಾಸಪಟ್ಟು ಸಮಜಾಯಿಷಿ ನೀಡಿದ ಅವರನ್ನು ಒಪ್ಪಿಸಿ ನಿಟ್ಟುಸಿರುಬಿಟ್ಟಿದ್ದರಂತೆ. ಆದರೆ, ಈ ತಿಂಗಳು ಕೂಡ ಪಗಾರ ಬಾರದೆ ಕಂಗಾಲಾಗಿದ್ದಾರೆ.

ನಮ್ಮ ಮೇಲಾಧಿಕಾರಿಗಳು ಹೇಗೋ ಜೀವನ ನಡೆಸುತ್ತಾರೆ. ಆದರೆ ಸಂಸಾರ ನಿರ್ವಹಣೆಯನ್ನು ಸರಿದೂಗಿಸಲು ತಿಂಗಳ ಸಂಬಳವನ್ನೇ ನಂಬಿಕೊಂಡಿರುವ ನಮ್ಮ ಪಾಡೇನು? ಎಂಬುದಾಗಿ ಸಿಬ್ಬಂದಿ ಅಲವತ್ತುಕೊಳ್ಳುತ್ತಾರೆ.

ನಿಗಮದಲ್ಲಿ ಇದೇ ಮೊದಲ ಬಾರಿಗೆ ಸಂಬಳ ಇಷ್ಟು ತಡವಾಗುತ್ತಿದೆ. ಆದರೆ, ನಮ್ಮ ಗೋಳು ಕೇಳುವವರಾರು ಎಂದು ಸಿಬ್ಬಂದಿ ಪರಿತಪಿಸುತ್ತಿದ್ದಾರೆ. ನಮ್ಮ ನೋವಿನ ಸುದ್ದಿಯನ್ನು ಪ್ರಕಟಿಸಿ, ಅದನ್ನು ನೋಡಿಯಾದರೂ ರಾಜ್ಯ ಸರ್ಕಾರ ನಮಗೆ ಸಂಬಳವನ್ನು ನೀಡಲಿ ಎಂದು ಆಶಿಸುವ ಸಿಬ್ಬಂದಿ, ಆದರೆ ನಮ್ಮ ಹೆಸರನ್ನು ಮಾತ್ರ ಪ್ರಕಟಿಸಬೇಡಿ ಎನ್ನುತ್ತಾರೆ.

ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಮಂಡ್ಯ, ರಾಮನಗರ, ಕನಕಪುರ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಗಮದ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ನೀರಾವರಿ ನಿಗಮದಲ್ಲಿ ಹಾಲಿ ಇರುವ ೧,೫೪೨ ಜನರಿಗೆ ಮಾಸಿಕ ಸಂಬಳದ ಮೊತ್ತ ಅಂದಾಜು ೧೫ ಕೋಟಿ ರೂ.ಗೂ ಹೆಚ್ಚು ಬಿಡುಗಡೆಯಾಗಬೇಕಿದೆ.

ಆಂದೋಲನ ಡೆಸ್ಕ್

Recent Posts

ಮುಂದಿನ ಆಗಸ್ಟ್‌ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…

33 mins ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ

ಮೈಸೂರು: ಮೂವರು ಬೇಟೆಗಾರರ ಎನ್‌ಕೌಂಟರ್‌ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…

1 hour ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…

2 hours ago

ಕಾಡಿನಲ್ಲಿ ಗುಂಡಿನ ಮೊರೆತ: ಮೂವರು ಸ್ಥಳದಲ್ಲೇ ಸಾವು- ಉದ್ರಿಕ್ತರಿಂದ ಕಚೇರಿ ಪೀಠೋಪಕರಣ ಧ್ವಂಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…

2 hours ago

ಕಾವೇರಿ ಅಭಯಾರಣ್ಯದಲ್ಲಿ ಎನ್‌ಕೌಂಟರ್: ಅಕ್ರಮ ಬೇಟೆ ವೇಳೆ ಗುಂಡಿನ ದಾಳಿ, 3 ಮಂದಿ ಮೃತ್ಯು

ಮಹಾದೇಶ್‌ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…

3 hours ago

ವಿಕಸಿತ ಭಾರತಕ್ಕೆ ಕೈಜೋಡಿಸಿ : ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ

ಹೊಸದಿಲ್ಲಿ : ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿದ ಪ್ರಧಾನಿ…

5 hours ago