Categories: Andolana originals

ಪ್ರತಿಪಕ್ಷದ ನಾಯಕನ ಸ್ಥಾನ ಹೂವಿನ ಹಾಸಿಗೆ ಅಲ್ಲ’

“ಆಂದೋಲನ’ದೊಂದಿಗೆ ಆರ್.ಅಶೋಕ್ ಅಂತರಂಗದ ಮಾತು

ಬಿಜೆಪಿ ನಾಯಕ ಆರ್.ಅಶೋಕ್‌ ಅವರು ವಿಧಾನಸಭೆ ವಿಪಕ್ಷ ನಾಯಕರಾಗಿ ನೇಮಕಗೊಂಡು ಸೋಮವಾರ (ನ.18)ಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅವರ ಸಂದರ್ಶನ ಪ್ರಕಟಿಸಲಾಗಿದೆ.

ಆಂದೋಲನ: ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಒಂದು ವರ್ಷ, ಸರ್ಕಾರದ ದುರಾಡಳಿತದ ಸಾಕಷ್ಟು ವಿಷಯಗಳನ್ನು ಪ್ರತಿಪಕಕ್ಕಿಂತ ಬೇರೆಯವರು ಹೊರತಂದರು. ಹಗರಣಗಳನ್ನು ಬಿಜೆಪಿ ಕೈಗೆತ್ತಿಕೊಂಡರೂ ಪರಿಣಾಮಕಾರಿಯಾಗಿ ನಿರ್ವಹಿಸುವುದು ಸಾಧ್ಯವಾಗಿಲ್ಲ ಎಂಬ ಭಾವನೆ ಇದೆ?

ಅಶೋಕ್ : ನಮ್ ಹೋರಾಟದ ಫಲದಿಂದಲೇ ಸಂಪುಟದ ಮೊದಲ ವಿಕೆಟ್ ಬಿತ್ತು. ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಹಗರಣದ ದಾಖಲೆಗಳನ್ನು ಮುಂದಿಟ್ಟು ಸರ್ಕಾರ ಕಟ್ಟಿಹಾಕಿದ್ದು ಯಾರು? ದಾಖಲೆ ಸಮೇತ ಸದನದೊಳಗೆ ಸಾಬೀತು ಮಾಡಿದ್ದರಿಂದಲೇ ನಾಗೇಂದ್ರ ರಾಜೀನಾಮೆ ಕೊಡ ಬೇಕಾ ಯಿತು. ಮುಡಾ ಸೈಟು ಹಗರಣದ ವಿರುದ್ಧ ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿದ್ದೇವೆ. ಮೈಸೂರು ಪಾದಯಾತ್ರೆ ಮತ್ತು ನಮ್ಮ ಹೋರಾಟದ ತೀಕತೆಯಿಂದಲೇ ಸದನದೊಳಗೆ ಉತ್ತರ ನೀಡಲು ಆಗದೆಸಿದ್ದರಾಮಯ್ಯ ಪಲಾಯನಮಾಡಿದರು. 14 ಸೈಟುಗಳನ್ನು ಹಿಂದಿರುಗಿಸಿದರು. ಸಿಎಂ ರಾಜೀನಾಮೆ ಜತೆಗೆ ಅದು ತಾತ್ವಿಕ ಅಂತ್ಯ ಕಾಣುತ್ತದೆ. ಹೌದು, ಕೆಲ ಸಾಮಾಜಿಕ ಹೋರಾಟಗಾರರ ಪ್ರಯತ್ನ ಕೂಡ ಇದೆ. ವಕ್ಸ್ ಮಂಡಳಿ ರೈತರು ಮತ್ತು ದಲಿತರ ಭೂಮಿ ಕಬಳಿಕೆ ವಿರುದ್ಧ ಹೋರಾಟ ನಡೆಯುತ್ತಿದೆ. ಅಬಕಾರಿ ಸಚಿವರ ಲಂಚ ಪ್ರಕರಣ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ದೌರ್ಜನ್ಯದಿಂದ ಸರ್ಕಾರಿ ನೌಕರ ಮೃತಪಟ್ಟ ಘಟನೆ… ಹೀಗೆ ನಿರಂತರವಾಗಿ ನಮ್ಮ ಹೋರಾಟ ನಡೆಯುತ್ತಿದೆ.

ಆಂದೋಲನ : ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸುತ್ತಿದ್ದರೂ, ಚರ್ಚೆಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಸರ್ಕಾರವನ್ನು ಕಟ್ಟಿ ಹಾಕಲು, ಆಡಳಿತ ಪಕ್ಷದ ತಂತ್ರಗಾರಿಕೆ ಎದುರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪವಿದೆ?

ಅಶೋಕ್: ವಾಲ್ಮೀಕಿ ನಿಗಮದ ವಾಲ್ಮೀಕಿ ನಿಗಮದ ಹಗರಣದ ನಿದರ್ಶನವನ್ನೇ ತೆಗೆದುಕೊಳ್ಳಿ ವಿಧಾನಸಭೆ ಒಳಗೆ ಸಿಎಂ ಮತ್ತು ಡಿಸಿಎಂ ಇಬ್ಬರೂ ಮೊದಲು ಅಕ್ರಮ ನಡೆದೇ ಇಲ್ಲ ಎಂದು ವಾದಿಸಿದರು. ನಾನು ಒಂದೊಂದೇ ದಾಖಲೆಗಳನ್ನು ಮಂಡಿಸಿ ವಾದಿಸಿದ ಮೇಲೆ, ಅದರಲ್ಲೂ “ನಾನ್ ಟ್ರಜರಿ ಟ್ರಾನ್ಸಾಕ್ಷನ್ ಅಕೌಂಟ್’ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಿದ್ದಂತೆ ಅಕ್ರಮ ಆಗಿರುವುದು 189 ಕೋಟಿ ರೂ. ಅಲ್ಲ, 87 ಕೋಟಿ ರೂ. ಎಂದು ಸಿಎಂ ಒಪ್ಪಿದರು. ಮೊನ್ನೆ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲು ವಿಷಯದಲ್ಲೂ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಅಂದರು, ನಾವು ದಾಖಲೆ ಬಿಡುಗಡೆ ಮಾಡುತ್ತಿದ್ದಂತೆ ತೆಪ್ಪಗಾದರು. ನಮ್ಮ ತಂತ್ರಗಾರಿಕೆ, ಹೋರಾಟದಿಂದಲೇ ಸರ್ಕಾರದ ಮತ್ತು ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಮುಖವಾಡ ಕಳಚಿ ಬಿದ್ದಿದೆ.

ಆಂದೋಲನ: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಎದುರಿಸಲು ನಿಮ್ಮ ಬತ್ತಳಿಕೆಯಲ್ಲಿರುವ ಬಾಣಗಳೇನು ?
ಅಶೋಕ್ : ಮೊದಲಿಗೆ ವಕ್ಸ್ ವಿಷಯಕ್ಕೆ ಆದ್ಯತೆ ನೀಡುತ್ತೇವೆ. ಇದಲ್ಲದೆ ಅಬಕಾರಿ ಹಗರಣ, ಮುಡಾ ಹಗರಣ, ಸರ್ಕಾರಿ ಅಧಿಕಾರಿಗಳ ಸಾವಿನ ಪ್ರಕರಣ ಸಹಿತ ಅನೇಕ ವಿಷಯಗಳಿವೆ. ಸರ್ಕಾರವೇ ಪ್ರತಿದಿನ ಒಂದೊಂದು ಅಸ್ತ್ರಗಳನ್ನು ಬತ್ತಳಿಕೆಗೆ ನಮ್ಮ ನೀಡುತ್ತಿದೆ.

ಆಂದೋಲನ : ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ರಾಜಕಾರಣದಿಂದ ಪಕ್ಷದ ಇಮೇಜಿಗೆ ಧಕ್ಕೆ ಆಗಿಲ್ಲವೇ? ಪ್ರತಿಪಕ್ಷ ನಾಯಕರಾಗಿ ನಿಮ್ಮ ಕಾರ್ಯನಿರ್ವಹಣೆಗೆ ಅಡ್ಡಿ ಆಗಿಲ್ಲವೇ?
ಅಶೋಕ್ : ರಾಜಕೀಯ ಪಕ್ಷಗಳು ಎಂದ ಮೇಲೆ ಅಭಿಪ್ರಾಯ ಭೇದ ಸಹಜ. ಅದನ್ನು ಹೈಕಮಾಂಡ್ ಸರಿಪಡಿಸುತ್ತದೆ. ಇಬ್ಬರೂ ನಾಯಕರು ಜನಹಿತ ಉದ್ದೇಶದಿಂದಲೇ ಕೆಲಸ ಮಾಡುತ್ತಿದ್ದಾರೆ. ನನ್ನ ಕಾರ್ಯ ನಿರ್ವಹಣೆಗೆ ಅಡ್ಡಿ ಆಗುತ್ತಿಲ್ಲ. ಇಬ್ಬರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ.

ಆಂದೋಲನ: ರಾಜಧಾನಿ ಬೆಂಗಳೂರಿನ ರಾಜಕೀಯ ನಾಯಕರಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವುದು ಕಷ್ಟ ಎಂಬ ಆರೋಪವಿದೆ, ಏನು ಹೇಳುತ್ತೀರಿ?

ಅಶೋಕ್: ಈ ಅಭಿಪ್ರಾಯ ಸರಿಯಲ್ಲ. ನನ್ನನ್ನೇ ತೆಗೆದುಕೊಳ್ಳಿ, ಪ್ರತಿಪಕ್ಷ ನಾಯಕನಾಗಿ ಒಂದು ವರ್ಷದಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗಿಂತ ಹೆಚ್ಚು ಪ್ರವಾಸ ಮಾಡಿದ್ದೇನೆ.

ಆಂದೋಲನ : ಜಾ.ದಳದ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡ ಬಳಿಕ ನಿಮ್ಮ ಪಕ್ಷದ ಒಕ್ಕಲಿಗ ನಾಯಕತ್ವಕ್ಕೆ ಸಂಚಕಾರ ಬಂದಿದೆ, ಹಳೇ ಮೈಸೂರು ಭಾಗದಲ್ಲಿ ಸಂಘಟನೆಗೆ ತೊಡಕಾಗಿದೆ ಎಂಬ ಮಾತಿದೆ?
ಅಶೋಕ್ : ಇದು ಅಕ್ಷರಶಃ ಸುಳ್ಳು. ಹಳೇ ಮೈಸೂರು ಭಾಗದಲ್ಲಿ ಜಾ.ದಳ ಉತ್ತಮ ನೆಲೆ ಹೊಂದಿದೆ. ಮೈತ್ರಿಯಿಂದ ಎರಡೂ ಪಕ್ಷಗಳ ಸಂಘಟನೆಗೆ ನೆರವಾಗಿದೆ. ನಾವು ಯಾರೊಬ್ಬರೂ ಒಂದೇ ಜಾತಿಗೆ ಸೀಮಿತವಲ್ಲ. ಎಲ್ಲ ಜಾತಿ, ಧರ್ಮಗಳ ಜನರ ಬೆಂಬಲದಿಂದಲೇ ಸಾರ್ವಜನಿಕ ಜೀವನದಲ್ಲಿ ಇರಲು ಸಾಧ್ಯ. ಒಕ್ಕಲಿಗ ಸಮುದಾಯಕ್ಕೆ ಸೇರಿದವನಾಗಿ ನನಗೂ ಈ ಜನಾಂಗದಲ್ಲಿ ಒಂದು ಸ್ಥಾನವಿದೆ.

ಆಂದೋಲನ : ಪ್ರತಿಪಕ್ಷ ನಾಯಕರಾಗಿ ನಿಮ್ಮ ಸಾಧನೆ ತೃಪ್ತಿ ತಂದಿದೆಯೇ? ನಿಮ್ಮ ಯಶಸ್ವಿ ಹೋರಾಟ ಯಾವುದು ?
ಅಶೋಕ್ : ಪ್ರತಿಪಕ್ಷದ ನಾಯಕನ ಸ್ಥಾನ ಹೂವಿನ ಹಾಸಿಗೆಯಲ್ಲ. ಪ್ರತಿದಿನ ಹೋರಾಟ ಇದ್ದೇ ಇರುತ್ತದೆ. ಇಂತಹ ಕೆಟ್ಟ ಸರ್ಕಾರವನ್ನು ಜನತೆ ಕಂಡಿರಲೇ ಇಲ್ಲ. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಬೊಕ್ಕಸ ಬರಿದಾಗಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಇಂತಹದ್ದೇ ಹೋರಾಟ ಎನ್ನುವ ಬದಲು ಸರ್ಕಾರವನ್ನು ಕಟ್ಟಿ ಹಾಕುವ ಕೆಲಸವನ್ನು ದಿಟ್ಟವಾಗಿ ಮಾಡುತ್ತಿದ್ದೇವೆ, ಮುಂದೆಯೂ ಮಾಡುತ್ತೇವೆ.

ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂದರೆ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಸೇಡಿನ ರಾಜಕಾರಣ ಮಾಡುತ್ತಿದೆ. ಪ್ರತಿಪಕ್ಷದ ನಾಯಕ ಎಂಬ ಶಿಷ್ಟಾಚಾರ ಪಾಲನೆಯೂ ಇಲ್ಲದೆ, ಪ್ರತಿಭಟಿಸಿ ದ್ದಕ್ಕಾಗಿ ನನ್ನ ಮೇಲೂ ಕೇಸುಗಳನ್ನು ಹಾಕಿದೆ. ಮುಡಾ ವಿಷಯದಲ್ಲಿ ಕಚೇರಿ ಮುಂದೆ ಪ್ರತಿಭಟಿಸಲು ಅವಕಾಶ ನೀಡದೆ ಬಿಜೆಪಿ ಕಾರ್ಯಕರ್ತರನ್ನು, ಮುಖಂಡರನ್ನು ದಾರಿಯಲ್ಲೇ ಬಂಧಿಸಿದರು. ನಾನು ತರಕಾರಿ ವ್ಯಾನಿನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಬಂದು ಪ್ರತಿಭಟಿಸಿ ಬಂಧನಕ್ಕೆ ಒಳಗಾದೆ. ಜನರ ಹಿತಕ್ಕಾಗಿ ಎಂತಹ ಹೋರಾಟಕ್ಕೂ ನಾನು ಸಿದ್ಧ.

ಸಿದ್ದರಾಮಯ್ಯ ಅವರು ರಾಜಕೀಯ ಜೀವನದ ಕೊನೆಗಾಲದಲ್ಲಿ ಕೆಟ್ಟ ಆಡಳಿತ ನೀಡಿದ, ಹಗರಣಗಳ ಸರ್ಕಾರದ ನೇತೃತ್ವ ವಹಿಸಿದ ಆರೋಪಕ್ಕೆ ಗುರಿಯಾಗಿದ್ದು ದುರದೃಷ್ಟಕರ. ಸಿಎಂ ಸ್ಥಾನದಿಂದ ಕೆಳಗಿಳಿಸಲು ಅವರ ಪಕ್ಷದವರೇ ಯತ್ನ ನಡೆಸಿದ್ದಾರೆ.

ನೆರೆ -ಬರ ಪರಿಸ್ಥಿತಿಯಿಂದ ರಾಜ್ಯದ ರೈತಾಪಿ ವರ್ಗ ಕಡು ಕಷ್ಟದ ದಿನಗಳನ್ನು ಎಣಿಸುತ್ತಿದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಚುನಾವಣೆಗಳಲ್ಲಿ ಮೋಜು-ಮಜಾ ಮಾಡುತ್ತಾ ಕಾಲಹರಣ ಮಾಡುತ್ತಿದೆ.

ಆಂದೋಲನ ಡೆಸ್ಕ್

Recent Posts

ಪರಿಷತ್‌ ಚುನಾವಣೆಯಲ್ಲಿ ಕ್ರಾಸ್‌ ವೋಟ್‌ ಮಾಡಿದ ಶಾಸಕರು ಗೊತ್ತಿದೆ ; ಎಚ್‌.ಡಿ.ಕುಮಾರಸ್ವಾಮಿ

ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…

8 hours ago

ಮಂಡ್ಯ | ಐವರು ಅಂತರ್‌ ಜಿಲ್ಲಾ ಕಳ್ಳರ ಬಂಧನ

ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ…

8 hours ago

ಜೂನ್‌ 21ರಂದು ನೀಟ್‌ ಮರುಪರೀಕ್ಷೆ ; ಮೈಸೂರು ಜಿಲ್ಲೆಯಲ್ಲಿ 7886 ಪರೀಕ್ಷಾರ್ಥಿಗಳ ನೋಂದಣಿ

ಮೈಸೂರು : ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ…

9 hours ago

ನೀಟ್‌ಗಾಗಿ ಟೆಲಿಗ್ರಾಂ ನಿಷೇಧ ; ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಕೋರ್ಟ್‌

ಹೊಸದಿಲ್ಲಿ : ನೀಟ್‌-ಯುಜಿ 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.…

10 hours ago

ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ ; ಡಾ.ಎಚ್.ಸಿ.ಮಹದೇವಪ್ಪ

ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ.…

10 hours ago

ಮೈಸೂರು | ಠಾಣಾ ಮಟ್ಟದಲ್ಲಿ ರೌಡಿ ಪ್ರತಿಬಂಧಕ ದಳ ಸ್ಥಾಪನೆ

ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…

18 hours ago