ಬಿ.ಟಿ.ಮೋಹನ್ ಕುಮಾರ್
ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಭರವಸೆ
ಮಂಡ್ಯ: ಒಕ್ಕಲಿಗ ಸಮುದಾಯದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಕಳೆದ ೨೦೨೨ರ ಏ.೧೧ರಂದು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮವನ್ನು ಸರ್ಕಾರ ಸ್ಥಾಪನೆ ಮಾಡಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮುದಾಯದ ರೈತರು, ಯುವಜನತೆಗೆ ಆರ್ಥಿಕ ನೆರವು ನೀಡಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ನಿಗಮದ ಅಧ್ಯಕ್ಷರೂ ಆದ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ತಿಳಿಸಿದರು.
‘ಆಂದೋಲನ’ ದಿನ ಪತ್ರಿಕೆ ನಡೆಸಿದ ಸಂದರ್ಶ ನದಲ್ಲಿ ನಿಗಮದ ರೂಪರೇಷೆಗಳು ಮತ್ತು ಯೋಜನೆಗಳ ಬಗ್ಗೆ ಅವರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಆಂದೋಲನ: ಅಧ್ಯಕ್ಷ ಸ್ಥಾನ ಸಿಕ್ಕಿರುವುದು ತೃಪ್ತಿ ಇದೆಯೇ?
ಆತ್ಮಾನಂದ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ನನ್ನ ಸೇವೆಯನ್ನು ಪರಿಗಣಿಸಿ ನಿಗಮದ ಅಧ್ಯಕ್ಷನ ನ್ನಾಗಿ ನೇಮಕ ಮಾಡುವ ಮೂಲಕ ಒಳ್ಳೆಯ ಅವ ಕಾಶ ಕೊಟ್ಟಿದ್ದು, ತೃಪ್ತಿ ಮತ್ತು ಬಹಳ ಸಂತಸ ವನ್ನು ತಂದಿದೆ. ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ – ೩ಎ ನಲ್ಲಿ ನಮೂದಾಗಿರುವ ಒಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ / ಗೌಡ ಹಳ್ಳಿಕಾರ್, ಕುಂಚಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡರ್, ನಾಮಧಾರಿಗೌಡ, ಉಪ್ಪಿನ ಕೊಳಗ / ಉತ್ತಮ ಕೊಳಗ ಒಕ್ಕಲಿಗ ಸಮುದಾಯದ ಜನರ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ.
ಆಂದೋಲನ: ಸಚಿವರಾಗಿ ಅನುಭವ ಹೊಂದಿರುವ ನೀವು ಈ ಅನುಭವವನ್ನು ನಿಗಮದ ಅಧ್ಯಕ್ಷರಾಗಿ ಸಮುದಾಯದ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳುತ್ತೀರಿ?
ಆತ್ಮಾನಂದ: ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿದ್ದೇನೆ. ೪ ದಶಕಗಳಿಂದ ಜನರ ಒಡನಾಟದಲ್ಲಿದ್ದೇನೆ. ಪಕ್ಷದ ವತಿಯಿಂದ ಶಾಸಕನಾಗಿ, ಸಚಿವ ಸ್ಥಾನಗಳನ್ನು ಪಡೆದು ಕೆಲಸ ಮಾಡಿದ್ದೇನೆ. ಸುಮಾರು ೬ ರಿಂದ ೭ ಮುಖ್ಯಮಂತ್ರಿಗಳ ಜತೆಯಲ್ಲಿ ಕೆಲಸ ಮಾಡುವ ಸದವಕಾಶ ಸಿಕ್ಕಿತ್ತು. ಪ್ರಸ್ತುತ ದೊರಕಿರುವ ಹುದ್ದೆಯಲ್ಲಿ ಸಮುದಾಯದ ಪ್ರಗತಿಗಾಗಿ ನಾನು ಪಡೆದಿರುವ ಅನುಭವಗಳನ್ನು ಧಾರೆ ಎರೆಯುವ ಮೂಲಕ ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತೇನೆ.
ಆಂದೋಲನ: ಸಮುದಾಯದ ಜನರ ಸಬಲೀಕರಣಕ್ಕೆ ಹೊಸ ಯೋಜನೆಗಳನ್ನು ಜಾರಿಗೆ ತರುವ ಚಿಂತನೆ ಇದೆಯೆ?
ಆತ್ಮಾನಂದ: ಕೆಲ ದಿನಗಳ ಹಿಂದಷ್ಟೇ ನಿಗಮದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ನಮ್ಮ ಆಡಳಿತ ಮಂಡಳಿ, ಸರ್ಕಾರದ ಜತೆ ಚರ್ಚಿಸಿ ಹೊಸ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ.
ಆಂದೋಲನ: ಉದಯೋನ್ಮುಖ ಉದ್ದಿಮೆದಾರರಿಗೆ ಯಾವ ರೀತಿ ಪ್ರೋತ್ಸಾಹ ನೀಡುತ್ತೀರಿ?
ಆತ್ಮಾನಂದ: ಒಕ್ಕಲಿಗ ಸಮುದಾಯದ ನಿರುದ್ಯೋಗಿ ಯುವಜನರು ಸ್ವಯಂ ಉದ್ಯೋಗ ಕೈಗೊಳ್ಳಲು ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕುಗಳಿಂದ / ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಶೇ.೫೦ ರಷ್ಟು ಅಥವಾ ಗರಿಷ್ಟ ೩ ಲಕ್ಷ ರೂ. ಸಹಾಯಧನ ಸೌಲಭ್ಯ ವನ್ನು ‘ಸ್ವಾವಲಂಬಿ ಸಾರಥಿ’ ಯೋಜನೆಯಡಿ ನೀಡಲಾಗುವುದು. ಸಾಲ ಯೋಜನೆಯನ್ನು ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರುವುದು ಶಾಸಕರು. ಅವರ ಅಧ್ಯಕ್ಷತೆಯಲ್ಲಿ ನೇಮಕ ವಾದವರಿಗೆ ಸಾಲ ನೀಡಲಾಗುವುದು. ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗೆ ಅನುಸಾರವಾಗಿ ೨ ಲಕ್ಷ ರೂ. ಗಳವರೆಗೆ ಆರ್ಥಿಕ ಸೌಲಭ್ಯ ಒದಗಿಸಲಾಗುವುದು. ಇದರಲ್ಲಿ ಶೇ.೨೦ ರಷ್ಟು ಸಹಾಯಧನ, ಉಳಿಕೆ ಶೇ.೮೦ ರಷ್ಟು ಮೊತ್ತವನ್ನು ಶೇ.೪ರ ಬಡ್ಡಿ ದರದಲ್ಲಿ ೩ ವರ್ಷಗಳಲ್ಲಿ ಮರುಪಾವತಿಸಬೇಕಾಗಿದೆ.
ಗಂಗಾ ಕಲ್ಯಾಣ ನೀರಾವರಿ ಯೋಜನೆ: ಹಿಂದುಳಿದ ವರ್ಗಗಳ ಪ್ರವರ್ಗ-೩ಎ ನಲ್ಲಿ ಬರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗು ವುದು. ಬೋರ್ವೆಲ್ ಕೊರೆಸಲು ೩.೭೫ ಲಕ್ಷ ರೂ. ಸಾಲ ನೀಡಲಾಗುವುದು. ೩.೨೫ ಲಕ್ಷ ಸಹಾಯಧನ (ಸಬ್ಸಿಡಿ), ಉಳಿಕೆ ೫೦ ಸಾವಿರ ರೂ.ಗಳನ್ನು ವಾರ್ಷಿಕ ಶೇ.೪ರ ಬಡ್ಡಿದರದಲ್ಲಿ ಮರುಪಾವತಿಸಬೇಕು. ಘಟಕ ವೆಚ್ಚದಲ್ಲಿ ಪ್ರತಿ ಕೊಳವೆ ಬಾವಿಗೆ ವಿದ್ಯುದ್ದೀಕರಣಕ್ಕೆ ೭೫ ಸಾವಿರ ರೂ.ಗಳನ್ನು ಎಸ್ಕಾಂಗೆ ಪಾವತಿಸಲಾಗುವುದು.
ಆಂದೋಲನ: ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಲ ನೀಡಲಾಗುವುದೇ?
ಆತ್ಮಾನಂದ: ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ ತಾಂತ್ರಿಕ, ವೈದ್ಯಕೀಯ ಇತ್ಯಾದಿ ಉನ್ನತ ಕೋರ್ಸುಗಳ ವ್ಯಾಸಂಗಕ್ಕೆ ಕರ್ನಾಟಕ ಪ್ರವೇಶ ಪರೀಕ್ಷಾ ಪ್ರಾಧಿಕಾರದಿಂದ/ನೀಟ್ ಮೂಲಕ ಸೀಟು ಪಡೆದು ಕಾಲೇಜಿಗೆ ಸೇರ್ಪಡೆಯಾದವರಿಗೆ ವ್ಯಾಸಂಗಕ್ಕೆ ವಾರ್ಷಿಕ ೧ ಲಕ್ಷ ರೂ. ನಂತೆ ಕೋರ್ಸಿನ ಅವಧಿಗೆ ಗರಿಷ್ಟ ೫ ಲಕ್ಷ ರೂ.ಗಳನ್ನು ಶೇ.೨ರ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ಯೋಜನೆಯಡಿ ನೀಡಲಾಗು ವುದು.
ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಒಂದು ಸಾವಿರ ಶ್ರೇಣಿ ಒಳಗಿರುವ ಪೋಸ್ಟ್ ಡಾಕ್ಟೋರಲ್, ಪಿಎಚ್.ಡಿ. ಮತ್ತು ಮಾಸ್ಟರ್ ಡಿಗ್ರಿ ವ್ಯಾಸಂಗಕ್ಕೆ ಪ್ರವೇಶ ಹೊಂದಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಟ ೨೫ ಲಕ್ಷ ರೂ.ಗಳಂತೆ ೨ ವರ್ಷಗಳ ಕೋರ್ಸಿನ ಅವಽಗೆ ಗರಿಷ್ಟ ೫೦ ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.
ಆಂದೋಲನ: ನಿಗಮದಿಂದ ನೀಡುತ್ತಿರುವ ಸಾಲ ಯೋಜನೆ ಮೊತ್ತವನ್ನು ಹೆಚ್ಚಿಸಲು ಕ್ರಮಕೈಗೊಳ್ಳುತ್ತೀರಾ?
ಆತ್ಮಾನಂದ: ಸರ್ಕಾರ ಹಾಗೂ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಸಂಬಂಧ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರ್ಥಿಕತೆಯ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರ ಮತ್ತು ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟರೆ ಸಾಲದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗುವುದು.
” ಕೃಷಿಯನ್ನೇ ನಂಬಿ ಬದುಕುತ್ತಿರುವ ಒಕ್ಕಲಿಗ ಸಮುದಾಯವನ್ನು ಮುನ್ನೆಲೆಗೆ ತರಬೇಕೆಂಬುದು ನನ್ನ ಮಹದಾಸೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಸಹಕಾರ ಪಡೆದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ. ಒಕ್ಕಲಿಗ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಉದ್ಯೋಗ ಮೇಳವನ್ನು ಆಯೋಜಿಸುವ ಚಿಂತನೆ ಇದೆ.”
– ಎಂ.ಎಸ್. ಆತ್ಮಾನಂದ, ಅಧ್ಯಕ್ಷ, ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ
ಚಾಮರಾಜನಗರ : ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್.ಕೃಷ್ಣ ಅವರು ತಮ್ಮ ದಿಢೀರ್ ಭೇಟಿ ಸಂದರ್ಭದಲ್ಲಿ ನ್ಯೂನತೆ ಕಂಡುಬಂದಿರುವ…
ಬೆಂಗಳೂರು : ಸಭಾಪತಿಗಳ ಆದೇಶಕ್ಕೆ ಗೌರವ ನೀಡದೆ, ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ತಿನಿಂದ…
ಮಂಡ್ಯ : ಹೊಸದಾಗಿ ಬಾರ್ ಆರಂಭಿಸಲು ಸಿಎಲ್ 7 ಲೈಸೆನ್ಸ್ ನೀಡಲು ಲಂಚ ಕೇಳಿದ ಆರೋಪದಡಿ ಮಂಡ್ಯ ಅಬಕಾರಿ ಉಪ…
ಮೈಸೂರು : ಮೈಸೂರಲ್ಲಿ ಪದೇ ಪದೇ ಡ್ರಗ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ. ಈ ಸಂಬಂಧ ಹೈಕೋರ್ಟ್ ಸಹ ಕಳವಳ…
ಮಂಡ್ಯ : ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್ಎಚ್-275) ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ…
ಗಾಜಿಯಾಬಾದ್ : ಆನ್ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ…