Andolana originals

ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಪ್ಲಾನ್

• ಸಮೂಹ ದೇವಾಲಯಗಳ ಪರಂಪರೆ, ಇತಿಹಾಸ ಬಿಂಬಿಸುವ ಡಾಕ್ಯುಮೆಂಟರಿ • ರಥೋತ್ಸವಕ್ಕಾಗಿ ಶೈವ-ವೈಷ್ಣವ ಸಂಪ್ರದಾಯದಲ್ಲೇ ರಥಗಳ ನಿರ್ಮಾಣ

ಮೈಸೂರು: ಚಾಮುಂಡಿಬೆಟ್ಟವನ್ನು ಅಭಿವೃದ್ಧಿಪಡಿಸುವ ಜತೆಗೆ ಆಧ್ಯಾತ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಮಾಸ್ಟರ್‌ಪ್ಲಾನ್ ರೂಪಿಸಲಾಗುತ್ತಿದ್ದು, ಸಮೂಹ ದೇವಾಲಯಗಳಿಗೂ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಪರಂಪರೆ, ಇತಿಹಾಸ ಡಾಕ್ಯುಮೆಂಟರಿ ಮಾಡಲು ಚಿಂತನೆ ನಡೆಸಲಾಗಿದೆ.

ಮೈಸೂರು ನಗರಕ್ಕೆ ಬರುವ ಪ್ರವಾಸಿಗರು ಚಾಮುಂಡೇ ಶ್ವರಿ ದೇವಸ್ಥಾನ, ಉತ್ತನಹಳ್ಳಿಯ ತ್ರಿಪುರ ಸುಂದರಿ ಅಮ್ಮ ನವರ ದೇವಸ್ಥಾನಕ್ಕಷ್ಟೇ ಸೀಮಿತವಾಗುತ್ತಿರುವುದರಿಂದ ಇತರ ದೇವಾಲಯಗಳಿಗೂ ಭೇಟಿ ನೀಡಿ ದರ್ಶನ ಪಡೆಯುವಂತೆ ಮಾಡಬೇಕಿದೆ.

ಅದಕ್ಕಾಗಿ ಸಮೂಹ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಆಧ್ಯಾತ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಿ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ನವರಾತ್ರಿಯ ದಿನಗಳು, ಆಷಾಢಮಾಸದ ಶುಕ್ರವಾರ ಸೇರಿದಂತೆ ಪ್ರತಿವರ್ಷ ಬೆಟ್ಟಕ್ಕೆ ಅಂದಾಜು 50 ಲಕ್ಷ ಮಂದಿ ಭೇಟಿ ನೀಡುತ್ತಿದ್ದು, ಕನಿಷ್ಠ 40 ಕೋಟಿ ರೂ. ಆದಾಯ ಬರುತ್ತಿದೆ. ಬಂದವ ರೆಲ್ಲರೂ ಚಾಮುಂಡಿಬೆಟ್ಟ ಭೇಟಿ ಮುಗಿಸಿ ಉತ್ತನಹಳ್ಳಿ ದೇವಸ್ಥಾನಕ್ಕೆ ಹೋಗುವುದು ಮಾಮೂಲಿಯಾಗಿದೆ. ಹಾಗಾಗಿ, ಸಮೂಹ ದೇವಾ ಲಯಗಳೂ ಪ್ರಸಿದ್ದಿ ಪಡೆಯುವಂತೆ ಮಾಡಬೇಕಿರುವ ಕಾರಣ ಮೊದಲ ಹಂತದಲ್ಲಿ ಡಾಕ್ಯುಮೆಂಟರಿ ರೂಪದಲ್ಲಿ ದೇವಸ್ಥಾನಗಳ ಇತಿಹಾಸ, ಪರಂಪರೆ ಬಿಂಬಿಸಲು ಯೋಜನೆತಯಾರಿಸಲಾಗುತ್ತಿದೆ. ಚಾಮುಂಡೇಶ್ವರಿ ಸಮೂಹ ದೇವಸ್ಥಾನಗಳಲ್ಲಿ ಮೊದಲು ಪ್ರಸನ್ನ ಕೃಷ್ಣಸ್ವಾಮಿ, ಗಾಯತ್ರಿ ಅಮ್ಮನವರು, ಶ್ರೀ ಭುವನೇಶ್ವರಿ, ಕೋಟೆ ಆಂಜನೇಯಸ್ವಾಮಿ, ವರಾಹ ಸ್ವಾಮಿ ದೇವಾಲಯಗಳನ್ನು ಅಭಿವೃದ್ಧಿಪಡಿಸುವುದು, ಚಾಮುಂಡೇಶ್ವರಿ ದೇವಾಲಯಗಳಂತೆ ಈ ದೇವಾಲಯಗಳಲ್ಲೂ ಉತ್ಸವ, ರಥೋತ್ಸವ ನಡೆಯುವಂತೆ ಮಾಡಲು ಶೈವ ಮತ್ತು ವೈಷ್ಣವ ಸಂಪ್ರದಾಯದಂತೆ 12 ಅಡಿ ಎತ್ತರದ ಎರಡು ಮರದ ರಥಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ದೇವಸ್ಥಾನಗಳ ಇತಿಹಾಸ, ಸಂಪರ್ಕ, ಯದುವಂಶದ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಡಾಕ್ಯುಮೆಂಟರಿ ಮಾಡಿ, ಅದನ್ನು ಹೆಚ್ಚು ಪ್ರಚಾರ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿಸುವುದು, ದೇವಸ್ಥಾನಗಳ ಪ್ರವೇಶದ ಸಮಯ, ಪೂಜೆ, ಮತ್ತು ವಿಶೇಷತೆ ಕುರಿತು ಇಂದಿನ ಯುವಜನರಿಗೆ ಮಾಹಿತಿ ಸಿಗುವಂತೆ ಮಾಡಲು ಯೋಜನೆಯಲ್ಲಿ ಸೇರಿಸಲಾಗುತ್ತದೆ.

24 ದೇವಸ್ಥಾನಗಳಿಗೂ ಸಂಪರ್ಕ: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ಅಲ್ಲದೆ ಮಹಾಬಲೇಶ್ವರ ದೇವಾಲಯ, ಉತ್ತನಹಳ್ಳಿ ದೇವ ಸ್ಥಾನ ಸೇರಿದಂತೆ 24 ದೇವಸ್ಥಾನಗಳಿಗೂ ಸಂಪರ್ಕ ಕಲ್ಪಿಸಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸದ್ದಿಲ್ಲದೆ ಕೈ ಹಾಕಿದೆ. ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ ಹೆಸರಾಂತ ಶಿಲ್ಪಕಲೆಗಳಿಂದ ನಿರ್ಮಾಣ ಮಾಡಿರುವ ದೇವಸ್ಥಾನ ಆಗಿದ್ದರೂ ಹೆಚ್ಚು ಜನರಿಗೆ ಪರಿಚಯವೇ ಇಲ್ಲ. ಈ ದೇವಾಲಯದಲ್ಲಿ ರಥೋತ್ಸವ ನಡೆಯುತ್ತದೆ ಎಂಬುದೂ ಗೊತ್ತಿಲ್ಲ. ಹೀಗಾಗಿ, ಶೈವ ಸಂಪ್ರದಾಯದಲ್ಲೇ ರಥವನ್ನು ನಿರ್ಮಾಣ ಮಾಡಿ ಪ್ರತಿವರ್ಷ ವೈಭವದಿಂದ ರಥೋತ್ಸವ ಆಚರಿಸಿ ಜನರನ್ನು ಸೆಳೆಯುವಂತೆ ಮಾಡಲು ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಮುಂದಿನ ದಿನಗಳಲ್ಲಿ ನಾರಾಯಣಸ್ವಾಮಿ ದೇವಸ್ಥಾನ, ಶ್ವೇತವರಹಾಸ್ವಾಮಿ, ಲಕ್ಷ್ಮೀರಮಣಸ್ವಾಮಿ, ತ್ರಿನಯನೇಶ್ವರಸ್ವಾಮಿ, ವಿಜಯವಿಶ್ವೇಶ್ವರ, ಕಾಮಕಾಮೇಶ್ವರಿ, ಚಮ್ಮನ ಪಟ್ಟಿದೇವೇಶ್ವರ, ಬೆಟ್ಟದ ಪಾದದಗುಡಿ, ಖಿಲ್ಲೆ ವೆಂಕಟರಮಣಸ್ವಾಮಿ, ಭೈರವೇಶ್ವರಸ್ವಾಮಿ, ಕೋಡಿಸೋಮೇಶ್ವರಸ್ವಾಮಿ, ಚಂದ್ರಮೌಳೇಶ್ವರಸ್ವಾಮಿ, ವಿನಾಯಕಸ್ವಾಮಿ, ಬಿಸಿಲುಮಾರಮ್ಮ, ದೇವೀರಮ್ಮಣ್ಣಿ ಅಗ್ರಹಾರ ಮತ್ತು ಗಣಪತಿ ದೇವಸ್ಥಾನ, ವಿನಾಯಕಸ್ವಾಮಿ ದೇವಸ್ಥಾನ ಉತ್ತರಬಾಗಿಲು, ಆಂಜ ನೇಯಸ್ವಾಮಿ ದೇವಸ್ಥಾನ ಉತ್ತರಬಾಗಿಲು, ಶ್ರೀಮನ್ ಮಹಾರಾಜ ಛತ್ರ ವನ್ನು ಸಂಪರ್ಕಿಸಲು ಮತ್ತಷ್ಟು ಆಕರ್ಷಿಸುವಂತೆ ಮಾಡಲು ಯೋಜನೆ ತಯಾ ರಿಸಲಾಗುವುದು ಎಂದು ಕಾರ್ಯದರ್ಶಿ ಎಂ.ಜಿ.ರೂಪಾ ಹೇಳಿದರು. ಚಾಮುಂಡಿಬೆಟ್ಟ ಆಧ್ಯಾತ್ಮಿಕ ಮತ್ತು ಪ್ರಮುಖ ಯಾತ್ರಾ ಸ್ಥಳವಾಗಿದೆ. ಇದನ್ನು ಆಧ್ಯಾತ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗುವುದು. ಬೆಟ್ಟದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುವುದಿಲ್ಲ. ಅರಸರ ಕಾಲದಿಂದಲೂ ನಡೆದುಕೊಂಡುಬಂದಿರುವ ಸಂಪ್ರದಾಯ, ಸಂಸ್ಕೃತಿ ಮುಂದುವರಿಯುವಂತೆ ಮಾಡುವುದು, ನಮ್ಮ ಸಂಪ್ರದಾಯದ ವಿಧಿವಿಧಾನಗಳು ನಿರಂತರವಾಗಿ ಸಾಗುವಂತೆ ಮಾಡುವುದು, ಪ್ರವಾಸಿಗರು ಬೆಟ್ಟಕ್ಕಷ್ಟೇ ಸೀಮಿತವಾಗದೆ ಇತರೆ ದೇವಾಲಯಗಳಿಗೂ ತೆರಳಿ ವೀಕ್ಷಣೆ ಮಾಡುವಂತೆ ಮಾಡುವುದಕ್ಕೆ ಬೇಕಾದ ಕ್ರಮಕೈಗೊಳ್ಳುವುದು ಪ್ರಾಧಿಕಾರದ ಮುಂದಿನ ಉದ್ದೇಶವಾಗಿದೆ ಎಂದರು.

ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಬೇಕಿದೆ. ನಾವು ಮೂಲಸೌಕರ್ಯಗಳನ್ನು ಒದಗಿಸಿದಷ್ಟೂ ಮತ್ತಷ್ಟು ಜನರು ಬರುತ್ತಾರೆ. ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಿದರೆ ಅವು ಇನ್ನಷ್ಟು
ಆಕರ್ಷಣೀಯವಾಗಲಿವೆ.
-ಎಂ.ಜೆ.ರೂಪಾ, ಕಾರ್ಯದರ್ಶಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.

ಕೆ.ಬಿ. ರಮೇಶ ನಾಯಕ

ಪ್ರಸ್ತುತ ಆಂದೋಲನ ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಮೂಲತಃ ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆಯ ಕಣ್ಣೇಗಾಲ ಗ್ರಾಮದವನು. ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಪ್ರಾಥಮಿಕ,ಪ್ರೌಢಶಿಕ್ಷಣ, ಚಾಮರಾಜನಗರದಲ್ಲಿ ಪಿಯುಸಿ ವ್ಯಾಸಂಗ ಮಾಡಿದ ನಾನು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದೇನೆ. 1992ರಿಂದ 2002ರವರೆಗೆ ಮೈಸೂರು ಮಿತ್ರ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ ಬಳಿಕ 2002ರಿಂದ 2012ರವರೆಗೆ ಸಂಯುಕ್ತ ಕರ್ನಾಟಕ ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವರದಿಗಾರನಾಗಿ, 2013ರಿಂದ 2015ರವರೆಗೆ ಹಾಸನ ಮತ್ತು ಮೈಸೂರಿನಲ್ಲಿ ವಿಜಯ ಕರ್ನಾಟಕ ಹಿರಿಯ ವರದಿಗಾರನಾಗಿ, 2015ರಿಂದ 2017ರವರೆಗೆ ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರನಾಗಿ, 2017ರಿಂದ 2020 ಜೂನ್‌ವರಗೆ ವಿಶ್ವವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದೇನೆ.

Recent Posts

ಟಿ.ನರಸೀಪುರ: ಕೆಎಸ್‌ಐಸಿ ಫ್ಯಾಕ್ಟರಿ ಆವರಣದಲ್ಲಿ ಸ್ಟೇಡಿಯಂ ನಿರ್ಮಿಸುವ ಪ್ರಸ್ತಾವನೆ: ಬೀದಿಗಿಳಿದ ಕಾರ್ಮಿಕರು

ಟಿ.ನರಸೀಪುರ: ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಫಿಲೇಚರ್‌ ಫ್ಯಾಕ್ಟರಿ ಆವರಣದ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಇಂದು…

5 mins ago

ಕೇರಳ ಇನ್ನು ಮುಂದೆ ಕೇರಳಂ: ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅಸ್ತು

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ…

17 mins ago

ಉದ್ಯೋಗಾಕಾಂಕ್ಷಿಗಳ ಆಶೋತ್ತರ ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಜೆಡಿಎಸ್‌ ಆಕ್ರೋಶ

ಬೆಂಗಳೂರು: ಯುವಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ಮೂರು ವರ್ಷ ಕಳೆಯತ್ತಾ ಬಂದರೂ ಒಂದೇ ಒಂದು…

29 mins ago

ಮಂಡ್ಯ| ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಸಿಇಓ ನಂದಿನಿ ಸೂಚನೆ

ಮಂಡ್ಯ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್‌ ಸಿಇಓ…

52 mins ago

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೀದಿಗಿಳಿದ ಉದ್ಯೋಗಾಕಾಂಕ್ಷಿಗಳು

ಬೆಂಗಳೂರು: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ…

1 hour ago

ಕಾಂತಾರ ವಿವಾದ: ನಟ ರಣವೀರ್‌ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

ಬೆಂಗಳೂರು: ನಟ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್-‌1 ಚಿತ್ರದ ದೈವದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ…

1 hour ago