Andolana originals

ಚಾವಣಿ, ಬಣ್ಣ, ಬೆಳಕು ಇಲ್ಲದ ಪ್ರಯಾಣಿಕರ ತಂಗುದಾಣಗಳು

ಚಿರಂಜೀವಿ ಸಿ. ಹುಲ್ಲಹಳ್ಳಿ
ಮೈಸೂರು: ವಿದ್ಯುತ್ ಇಲ್ಲ, ಚಾವಣಿ ಕಿತ್ತುಹೋಗಿದೆ, ಕಬ್ಬಿಣದ ಬೆಂಚುಗಳು ಮುರಿದಿವೆ, ಕಸದ ರಾಶಿ, ಹಗಲಿನಲ್ಲಿ ಬಿಸಿಲು, ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲದ, ಪಾಳುಬಿದ್ದ ಪ್ರಯಾಣಿ ಕರ ತಂಗುದಾಣಗಳ ದುಸ್ಥಿತಿ ಇದು!

ನಿರ್ವಹಣೆಯ ಲೋಪದಿಂದ ನಗರದ ಬಹುತೇಕ ತಂಗುದಾಣಗಳು ಇಂಥ ಶೋಚನೀಯ ಸ್ಥಿತಿಗೆ ತಲುಪಿವೆ.

ಆಕಾಶವಾಣಿ ಪಕ್ಕದ ಯಾದವಗಿರಿ ಅಂಚೆ ಕಚೇರಿಯ ಎಡಭಾಗ ಮತ್ತು ಎದುರಿನ ತಂಗುದಾಣಗಳು, ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಬಸ್ ನಿಲ್ದಾಣ, ದಾಸಪ್ಪ ವೃತ್ತ, ಕೃಷ್ಣರಾಜೇಂದ್ರ ಆಸ್ಪತ್ರೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ ವೃತ್ತ, ಚಾಮುಂಡಿಪುರಂ ವೃತ್ತ, ವಿಶೇಶ್ವರನಗರ ಗಣಪತಿ ದೇವಸ್ಥಾನ, ಮಹರ್ಷಿ ಪಬ್ಲಿಕ್ ಶಾಲೆ, ಜೆ. ಪಿ. ನಗರದ ಶನೇಶ್ವರ ಸ್ವಾಮಿ ದೇವಸ್ಥಾನ, ಜೆ. ಪಿ. ನಗರದ ಗೊಬ್ಬಳಿಮರ, ಕವಿತಾ ಬೇಕರಿ ಬಳಿಕ ನಿಲ್ದಾಣಗಳು ಸೇರಿದಂತೆ ನಗರದ ಬಹುತೇಕ ಬಸ್ ನಿಲ್ದಾಣಗಳಲ್ಲಿ ವಿದ್ಯುತ್ ಇಲ್ಲ, ಬೆಂಚುಗಳು ಮುರಿದಿವೆ, ಕಸದ ರಾಶಿ ತುಂಬಿದ್ದು, ಚಾವಣಿ ಕಿತ್ತು ಬಂದಿವೆ, ಕಬ್ಬಿಣದ ಶೀಟುಗಳು ತುಕ್ಕು ಹಿಡಿದಿವೆ. ಮೇಲ್ಕಂಡ ನಿಲ್ದಾಣಗಳ ಜೊತೆಗೆ ನಗರದ ಬಹುತೇಕ ಪ್ರಯಾಣಿಕರ ತಂಗುದಾಣಗಳ ಪರಿಸ್ಥಿತಿ ಇದೇ ಆಗಿದೆ.

ಇನ್ನು ಖಾಸಗಿ ಸಂಸ್ಥೆಗಳ ಪ್ರಕಟಣೆಗಳು, ಭಿತ್ತಿಪತ್ರಗಳು ಪ್ರಯಾಣಿಕರ ತಂಗುದಾಣಗಳ ಸೌಂದರ್ಯವನ್ನು ಹಾಳು ಮಾಡಿವೆ. ಶಾಸಕರು, ಸಂಸದರು, ವಿಧಾನ ಪರಿ ಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ದಡಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಿದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಅಳವಡಿಸಿದ್ದ ಡಿಜಿಟಲ್ ಮಾಹಿತಿ ಫಲಕಗಳು ಕೆಟ್ಟು ನಿಂತಿವೆ. ಡಿಸ್‌ಪ್ಲೇ ಬೋರ್ಡ್‌ಗಳು ಒಡೆದು ಹೋಗಿವೆ. ವಿದ್ಯುತ್ ವೈರ್‌ಗಳು ಹೊರಗಡೆ ಬಂದು ಅಪಾಯಕ್ಕೆ ಆಹ್ವಾನಿಸುತ್ತಿರುವ ಪ್ರಯಾಣಿಕರ ತಂಗುದಾಣಗಳು ನಗರದಾದ್ಯಂತ ಬಹಳಷ್ಟು ಇವೆ.

ಕೆಲವು ಪ್ರಯಾಣಿಕರ ತಂಗುದಾಣಗಳು ಬಿಡಾಡಿ ದನಗಳ ಮತ್ತು ಬೀದಿ ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ. ಇದಲ್ಲದೆ, ನಗರದಲ್ಲಿ ಹೊಸ ಬಸ್ ತಂಗುದಾಣಗಳನ್ನು ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಇರುವ ತಂಗುದಾಣಗಳನ್ನು ನಿರ್ವಹಣೆ ಮಾಡದೆ ಹೊಸದಾಗಿ ನಿರ್ಮಿಸುವ ಅಗತ್ಯ ಏನಿದೆ? ಎಂಬುದಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಗುದಾಣಗಳ ಒಳಗೆ ಹೋಗುವುದಕ್ಕೆ ಹಿಂಜರಿಕೆ ಬಸ್ ತಂಗುದಾಣಗಳು ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿವೆ. ಅವುಗಳ ಒಳಗೆ ಹೋಗಲು ಪ್ರಯಾಣಿಕರು ಹಿಂಜರಿಯುತ್ತಿದ್ದಾರೆ. ಹೀಗಾಗಿ ಹಲವು ಬಸ್ ತಂಗುದಾಣಗಳ ಹಿಂದೆ-ಮುಂದೆ ನಿಂತು ಬಸ್ಸಿಗಾಗಿ ಕಾಯುವ ಸ್ಥಿತಿ ಎದುರಾಗಿದೆ. ಈಗಲಾದರೂ ಸಂಬಂಧಪಟ್ಟವರು ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸಬೇಕು. – ಚೇತನ್, ಪ್ರಯಾಣಿಕ.

ಸುಣ್ಣ ಬಣ್ಣ ಕಾಣದ ತಂಗುದಾಣಗಳು ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸುವಾಗ ಇರುವ ಉತ್ಸಾಹವನ್ನು ನಿರ್ವಹಣೆಯಲ್ಲಿ ತೋರಿಸುವುದಿಲ್ಲ. ಹಲವು ತಂಗುದಾಣಗಳು ಸುಣ್ಣ, ಬಣ್ಣ ಕಾಣದೇ ಎಷ್ಟೋ ವರ್ಷಗಳಾಗಿವೆ. ಮಳೆಗಾಲದಲ್ಲಂತೂ ಆಶ್ರಯ ಪಡೆಯುವಂತಿಲ್ಲ. ಬೇಸಿಗೆಯಲ್ಲಿ ದೂಳು ತುಂಬಿರುತ್ತವೆ. – ಚಂದ್ರು, ಪ್ರಯಾಣಿಕ. 

ಹಲವು ತಂಗುದಾಣಗಳು ಕತ್ತಲಲ್ಲಿ ತಂಗುದಾಣಗಳು ಹಲವಾರು ಪ್ರಯಾಣಿಕರ ತಂಗುದಾಣಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವು ತಂಗುದಾಣಗಳಿಗೆ ಬೀದಿ ದೀಪಗಳ ಬೆಳಕೇ ಗತಿ. ಇದರಿಂದ ರಾತ್ರಿ ವೇಳೆ ಹೆಂಗಸರು ಮತ್ತು ಮಕ್ಕಳು ದೀಪಗಳಿಲ್ಲದ ತಂಗುದಾಣಗಳಲ್ಲಿ ನಿಲ್ಲುವುದಕ್ಕೆ ಹೆದರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡಿದರೆ ಎಲ್ಲ ಸಮಸ್ಯೆಗಳನ್ನೂ ಪರಿಹಾರ ಮಾಡಬಹುದು. – ಶ್ರೀನಿವಾಸ, ಪ್ರಯಾಣಿಕ.

 

ಫೋಟೊ ಕಳುಹಿಸಿ

ನಿಮ್ಮ ಬಡಾವಣೆಗಳು ಅಥವಾ ಮುಖ್ಯ ರಸ್ತೆಗಳಲ್ಲಿ ಸಮಸ್ಯೆ ಬಿಂಬಿಸುತ್ತಿರುವ ಪ್ರಯಾಣಿಕರ ತಂಗುದಾಣಗಳ ಫೋಟೊ ಮತ್ತು ವಿಳಾಸ ಕಳುಹಿಸಿ. ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಮೊ. ಸಂ. ೯೦೭೧೭ ೭೭೦೭೧

 

ಆಂದೋಲನ ಡೆಸ್ಕ್

Recent Posts

ಗ್ಯಾರಂಟಿ ಪರಿಷ್ಕರಣೆ; ಅರ್ಹರಿಗೆ ಅನ್ಯಾಯ ಆಗಬಾರದು

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದರು. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ,…

2 mins ago

ರಾಜ್ಯ ರಾಜಕಾರಣದ ಬೆಳವಣಿಗೆಯ ಲಾಭ ಪಡೆಯಲು ಬಿಜೆಪಿ-ಜಾ.ದಳ ಮಿತ್ರಕೂಟ ಯತ್ನ

ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ  ಮುಂಬರುವ ವಿಧಾನಸಭಾ ಚುನಾವಣೆಗೆ ತಂತಮ್ಮ ಪಕ್ಷದ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲೂ ಕೂಡ ತಂತ್ರ ರಾಜ್ಯ ಕಾಂಗ್ರೆಸ್‌ನ…

6 mins ago

ಕೊಡಗಿನ ಮಲ್ಲಳ್ಳಿ ಫಾಲ್ಸ್‌ನಲ್ಲಿ ಅಭದ್ರತೆ

ಲಕ್ಷ್ಮೀಕಾಂತ್ ಕೊಮಾರಪ್ಪ ಎಚ್ಚರಿಕೆ ಫಲಕ, ಕಾವಲು ಸಿಬ್ಬಂದಿ ಇಲ್ಲ; ಪ್ರವಾಸಿಗರಿಗೆ ಇಲ್ಲಿಲ್ಲ ರಕ್ಷಣೆ ಸೋಮವಾರಪೇಟೆ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ…

13 mins ago

ಮುಚ್ಚುವ ಆತಂಕದಲ್ಲಿ ಶತಮಾನ ಕಂಡ ಶಾಲೆ

ಮಂಜು ಕೋಟೆ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆ; ಮಕ್ಕಳ ದಾಖಲಾತಿಯೇ ಇಲ್ಲದೆ ೧, ೨ನೇ ತರಗತಿಗಳು…

19 mins ago

ಸರ್ಕಾರಿ ಕಚೇರಿ; ಮೂಲ ಸೌಕರ್ಯಗಳಿಗೆ ಗೋರಿ!

ಪ್ರಶಾಂತ್ ಎಸ್. ಮೈಸೂರು : ಇಲ್ಲಿ ಕುಡಿಯಲು ನೀರಿಲ್ಲ... ಕುಳಿತುಕೊಳ್ಳಲು ಕುರ್ಚಿ ಇಲ್ಲ... ನಿಸರ್ಗ ಕರೆಗೆ ತುರ್ತಾದರೆ ಪರಿಸ್ಥಿತಿ ಏನೋ…

26 mins ago