Andolana originals

ಸ್ಕೈವಾಕ್‌ ಗ್ಲಾಸ್‌ ಬ್ರಿಡ್ಜ್‌ ನಿರ್ಮಾಣಕ್ಕೆ ವ್ಯಾಪಕ ವಿರೋಧ

ನವೀನ್ ಡಿಸೋಜ

ಬೆಟ್ಟಗಳ ತುದಿಯಲ್ಲಿ ಕಾಮಗಾರಿ ಕೈಗೊಂಡರೆ ಗುಡ್ಡ ಕುಸಿಯುವ ಸಾಧ್ಯತೆ; ಆದಾಯಗಳಿಕೆಯ ಉದ್ದೇಶ; ಅನಾಹುತದ ಆತಂಕ 

ಮಡಿಕೇರಿ:ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ರಾಜಾಸೀಟ್ ಉದ್ಯಾನವನ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿದೆ. ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಐತಿಹಾಸಿಕ ಹಿನ್ನೆಲೆಯಿಂದ ಜನರನ್ನು ಆಕರ್ಷಿಸುವ ರಾಜಾಸೀಟ್‌ಗೆ ಕೊಡಗಿಗೆ ಬರುವ ಎಲ್ಲ ಪ್ರವಾಸಿಗರೂ ಭೇಟಿ ನೀಡುತ್ತಾರೆ. ಸುಂದರ ಸೂರ್ಯಾಸ್ತಮಾನ ವನ್ನು ವೀಕ್ಷಿಸಲು ಪ್ರತಿ ದಿನ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ರಾಜಾಸೀಟ್‌ಗೆ ಭೇಟಿ ನೀಡುತ್ತಾರೆ.

ರಾಜಾಸೀಟ್ ಉದ್ಯಾನವನ್ನು ಈಗಾಗಲೇ ಗ್ರೇಟರ್ ರಾಜಾಸೀಟ್ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿದ್ದು,ವ್ಯೂ ಪಾಯಿಂಟ್, ವಾಕಿಂಗ್ ಪಾತ್‌ಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಜಿಪ್ ಲೈನ್, ರಾಕೆಟ್ ಎಜೆಕ್ಟರ್ ಮುಂತಾದ ಅಡ್ವೆಂಚರ್ ಆಕ್ಟಿವಿಟಿಗೂ ಅವಕಾಶ ನೀಡಲಾಗಿದೆ. ಇದೀಗ ಅಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೂ ತೋಟಗಾರಿಕಾ ಇಲಾಖೆ ಮುಂದಾಗಿದ್ದು, ಖಾಸಗಿ ಸಂಸ್ಥೆಗಳಿಂದ ಟೆಂಡರ್ ಕರೆದಿರುವ ಮಾಹಿತಿ ಹೊರಬಿದ್ದಿದೆ.

ರಾಜಾಸೀಟ್ ಕೇವಲ ಮೋಜಿನ ತಾಣವಲ್ಲ. ಇದೊಂದು ಐತಿಹಾಸಿಕ ತಾಣವಾಗಿದ್ದು, ಹಿಂದೆ ಕೊಡಗಿನ ರಾಜರುಇಲ್ಲಿ ಬಂದು ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದ ಇತಿಹಾಸವಿದೆ. ಇದಲ್ಲದೆ ಅಲ್ಲಿಯೇ ರಾಜರು ಕುಳಿತುಕೊಳ್ಳುತ್ತಿದ್ದ ಗೋಪುರವಿದ್ದು, ಇದನ್ನು ಸ್ಮಾರಕವಾಗಿ ಸಂರಕ್ಷಿಸಲಾಗಿದೆ. ಹೀಗಿರುವಾಗಿ ಇದನ್ನು ಆದಾಯ ಗಳಿಕೆಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂಬುದು ಹಲವರ ವಾದವಾಗಿದೆ.

ಗುಡ್ಡದ ಮೇಲಿರುವ ರಾಜಾಸೀಟ್ ಉದ್ಯಾನದ ಬೆಟ್ಟಗಳ ತುದಿಯಲ್ಲಿ ಗ್ಲಾಸ್ ಬ್ರಿಡ್ಜ್ ಕಾಮಗಾರಿ ನಡೆಸುವುದು ಅಪಾಯಕಾರಿಯಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ರಾಜಾಸೀಟ್‌ನ ಪಕ್ಕದ ಇಂದಿರಾ ನಗರದಲ್ಲಿ ಭಾರೀ ಭೂಕುಸಿತಗಳು ಸಂಭವಿಸಿವೆ.  ಇದೇ ಸಾಲಿನಲ್ಲಿರುವ ರಾಜಾಸೀಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಇಲ್ಲಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ಸ್ಥಳೀಯರದ್ದಾಗಿದೆ.

ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಬಲಿಷ್ಠ ಪಿಲ್ಲರ್‌ಗಳನ್ನು ಅಳವಡಿಸಲು ಬೆಟ್ಟವನ್ನು ಆಳವಾಗಿ ಕೊರೆಯಬೇಕಾಗುತ್ತದೆ. ಇದರಿಂದ ಇಡೀ ಬೆಟ್ಟಕ್ಕೆ ಅಪಾಯ ಉಂಟಾಗಬಹುದು ಎಂಬುದು ವಿರೋಧಕ್ಕೆ ಪ್ರಮುಖ ಕಾರಣವಾಗಿದೆ.

ಇತ್ತೀಚೆಗೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಬಿಜೆಪಿ ಪ್ರಮುಖರು, ಗ್ಲಾಸ್ ಬ್ರಿಡ್ಜ್ ನಿರ್ಮಾಣವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಸ್ಥಳೀಯರ ಗಮನಕ್ಕೆ ತಾರದೇ ಇಂತಹ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರೂ ಈ ಯೋಜನೆಯನ್ನು ವಿರೋಧಿಸಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆದಿರುವುದಾಗಿಯೂ ತಿಳಿಸಿದ್ದಾರೆ. ಸಂಸದ ಯದುವೀರ್ ಒಡೆಯರ್ ಕೂಡ ಈ ಯೋಜನೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

” ರಾಜಾಸೀಟ್ ಬೆಟ್ಟದಲ್ಲಿ ಸ್ಕೈವಾಕ್ ಗ್ಲಾಸ್ಟ್ ಬ್ರಿಡ್ಜ್ ನಿರ್ಮಾಣ ಮಾಡುವುದು ಸರಿಯಲ್ಲ. ರಾಜಾಸೀಟ್ ಐತಿಹಾಸಿಕ ತಾಣವಾಗಿದ್ದು, ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರದ್ದಾ ಗಿದೆ. ಅಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ವಾಯು ವಿಹಾರದಂತಹ ಚಟುವಟಿಕೆಗೆ ಅನುಕೂಲ ಮಾಡಿಕೊಡ ಬೇಕೇ ವಿನಾ ಇಂತಹ ಯೋಜನೆಗಳನ್ನು ತರಬಾರದು. ಈಗಾಗಲೇ ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ.”

-ಎಂ.ಸಿ. ನಾಣಯ್ಯ, ಮಾಜಿ ಸಚಿವ

” ರಾಜಾಸೀಟ್‌ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಿಸುವ ಪ್ರಯತ್ನಗಳಿಗೆ ಸ್ಥಳೀಯರ ವಿರೋಧ ಇದೆ. ಸ್ಥಳೀಯರ ಅಭಿಪ್ರಾಯವನ್ನು ಗೌರವಿಸಬೇಕು. ಹೀಗಾಗಿ ಈ ಯೋಜನೆಗೆ ನನ್ನ ಸಂಪೂರ್ಣ ವಿರೋಧವಿದೆ. ಪರಿಸರದ ತಾಣಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಅತ್ಯವಶ್ಯವಾಗಿದೆ. ಗ್ಲಾಸ್ ಬ್ರಿಡ್ಜ್ ವಿರೋಧದ ಹೋರಾಟಕ್ಕೆ ನನ್ನ ಬೆಂಬಲವಿದೆ.”

-ಯದುವೀರ್ ಒಡೆಯರ್, ಸಂಸದ

” ಕೊಡಗು ಜಿಲ್ಲೆಯಲ್ಲಿ ಗ್ಲಾಸ್ ಬ್ರಿಡ್ಜ್‌ನಂತಹ ಯೋಜನೆಗಳ ಅವಶ್ಯಕತೆ ಇಲ್ಲ. ಇಲ್ಲಿನ ಪರಿಸರವನ್ನು ಉಳಿಸುವ ಕೆಲಸವಾಗಬೇಕು. ಈಗಾಗಲೇ ನಗರೀಕರಣದಿಂದ ಪರಿಸರ ನಾಶವಾಗುತ್ತಿದ್ದು, ವನ್ಯಮೃಗಗಳ ಹಾವಳಿಯೂ ಹೆಚ್ಚುತ್ತಿದೆ. ಯಾವುದೇ ಸರ್ಕಾರ ಇದ್ದರೂ ಪರಿಸರ ಉಳಿಸುವ ಕೆಲಸ ಮಾಡಬೇಕೇ ಹೊರತು ಇಂತಹ ಯೋಜನೆಯನ್ನು ಜಾರಿಗೊಳಿಸಬಾರದು. ಇದಕ್ಕೆ ಬಳಸುವ ಕೋಟ್ಯಂತರ ರೂ. ಹಣವನ್ನು ಕಾಡಾನೆ ಕಾರಿಡಾರ್‌ನಂತಹ ಯೋಜನೆಗೆ ಬಳಸಿದರೆ ಅನುಕೂಲವಾಗಲಿದೆ.”

-ಕರ್ನಲ್ ಸಿ.ಪಿ. ಮುತ್ತಣ್ಣ, ಪರಿಸರವಾದಿ

” ಗ್ಲಾಸ್ ಬ್ರಿಡ್ಜ್‌ನಂತಹ ಯೋಜನೆಗೆ ಪಿಲ್ಲರ್ ಅಳವಡಿಕೆಗೆ ಆಳವಾಗಿ ಅಗೆಯಬೇಕಾಗುತ್ತದೆ. ಈಗಾಗಲೇ ರಾಜಾಸೀಟ್ ಸಮೀಪದಲ್ಲೇ ಮಣ್ಣು ಕುಸಿದಿದೆ. ಕೆಳಭಾಗ ಹಾಗೂ ಸಮೀಪದಲ್ಲೇ ವಾಸದ ಮನೆಗಳೂ ಇವೆ. ಇದೀಗ ಮತ್ತೆ ಇಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದರಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ.”

-ಮನೋಜ್, ಸ್ಥಳೀಯರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

36 mins ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

38 mins ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

41 mins ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

44 mins ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

49 mins ago