ಮಾದರಿ ಪರೀಕ್ಷೆ ವರದಿಗಾಗಿ ತಿಂಗಳುಗಟ್ಟಲೇ ಕಾಯುವ ಪರಿಸ್ಥಿತಿ
ವ್ಯಾಘ್ರಗಳ ಕೂದಲು ಮತ್ತು ಎಂಜಲು ಹೈದರಾಬಾದ್ನ ಪ್ರಯೋಗಾಲಯಕ್ಕೆ ರವಾನೆ
ಎಸ್.ಪ್ರಶಾಂತ್
ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನುಗು, ಮೊಳೆಯೂರು ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ಮೂವರು ರೈತರನ್ನು ಬಲಿ ಪಡೆದಿದ್ದ ಹುಲಿಯ ಡಿಎನ್ಎ ಮಾದರಿ ಪರೀಕ್ಷೆಗೂ ನೆರೆಯ ತೆಲಂಗಾಣದ ರಾಜ್ಯದ ಪ್ರಯೋಗಾಲಯವನ್ನೇ ಅವಲಂಬಿಸಬೇಕಾಗಿದ್ದು, ವರದಿಗಾಗಿ ತಿಂಗಳುಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಸರಗೂರು, ನಂಜನಗೂಡು, ಹುಣಸೂರು ತಾಲೂಕಿನ ಕಾಡಂಚಿನ ಭಾಗಗಳಲ್ಲಿ ಹಾಗೂ ಮೈಸೂರು ತಾಲೂಕಿನ ಇಲವಾಲ ಸುತ್ತಮುತ್ತಲಿನಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು, ಕೂಂಬಿಂಗ್ ಕಾರ್ಯಾಚರಣೆಯೂ ಆರಂಭಗೊಂಡಿದೆ. ಅರಣ್ಯ ಇಲಾಖೆ ನಂಜನಗೂಡು ವ್ಯಾಪ್ತಿಯಲ್ಲಿ ಎರಡು ಹುಲಿಗಳನ್ನು ಸೆರೆ ಹಿಡಿದಿದೆ.
ವರದಿ ಬರಲು ವಿಳಂಬ: ಮೂವರನ್ನು ಬಲಿ ಪಡೆದ ಹುಲಿ ಯಾವುದು ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಸೆರೆಸಿಕ್ಕ ಎರಡು ಹುಲಿಗಳ ಮಾದರಿಯನ್ನು ಹೈದರಾಬಾದ್ನ ವಿಧಿವಿಜ್ಞಾನ ಪ್ರಯೋಗಾಲ ಯಕ್ಕೆ ಕಳುಹಿಸಲಾಗಿದೆ. ಇಲ್ಲಿಗೆ ದೇಶದ ವಿವಿಧ ಪ್ರಕರಣಗಳ ಮಾದರಿ ಬರುವುದರಿಂದ ವರದಿ ಬರಲು ಇನ್ನೂ ಒಂದು ತಿಂಗಳು ವಿಳಂಬವಾಗಬಹುದು ಎನ್ನಲಾ ಗಿದೆ. ಅಲ್ಲದೇ, ಬೆಂಗಳೂರಿನಲ್ಲಿ ೨.೭ ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯವನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಏಕೆ ಕಾರ್ಯಾರಂಭ ಮಾಡಿಲ್ಲ? ಎಂಬ ಪ್ರಶ್ನೆಯೂ ಮೂಡಿದೆ.
ತರಬೇತಿ ನಿರತ ಸಿಬ್ಬಂದಿ ವನ್ಯಜೀವಿಗೆ ಸಂಬಂಧಿಸಿದ ಅಪರಾಧಗಳ ತನಿಖೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತದೆ. ಈ ಪ್ರಯೋಗಾಲಯವು ಆಧುನಿಕ ಉಪಕರಣಗಳನ್ನು ಹೊಂದಿರುವುದರಿಂದ ತನಿಖೆಗೆ ಸಂಬಂಧಿಸಿದಂತೆ ಸ್ಪಷ್ಟ ವಿಶ್ಲೇಷಣೆ ಮತ್ತು ವರದಿಗಳನ್ನು ಒದಗಿಸುತ್ತದೆ. ಅಲ್ಲದೇ, ಸೆರೆಸಿಕ್ಕ ಹುಲಿಯ ಉಗುರು, ಕೂದಲು, ರಕ್ತ ಸೇರಿದಂತೆ ಇತರ ಮಾದರಿಗಳಿಂದ ಮನುಷ್ಯನನ್ನು ಕೊಂದ ಹುಲಿ ಯಾವುದು ಎಂಬುದು ತಿಳಿದು ಬರಲಿದೆ. ಆದರೆ, ರಾಜ್ಯದಲ್ಲಿ ಸ್ಥಾಪಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗೆ ತರಬೇತಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಪರೀಕ್ಷೆಗಾಗಿ ಹೈದರಾಬಾದ್ಗೆ ಕಳುಹಿಸುವುದು ಅನಿವಾರ್ಯವಾಗಿದೆ.
ವರದಿ ಬಂದರೆ ಖಾತ್ರಿ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಮಾಹಿತಿ ನಿರ್ಣಾಯಕ. ಆದರೆ, ಪ್ರಯೋಗಾಲಯ ಸ್ಥಾಪನೆ ದಶಕದಿಂದ ಆಮೆಗತಿಯಲ್ಲಿದೆ.
ಎರಡು ಹುಲಿಗಳ ಮಾದರಿ ರವಾನೆ: ಅರಣ್ಯ ಇಲಾಖೆ ಅ.೨೮ರಂದು ನಂಜನಗೂಡಿನ ಈರೇಗೌಡನಹುಂಡಿಯಲ್ಲಿ ಹಾಗೂ ನ.೮ರಂದು ಮೊಳೆಯೂರು ಸಮೀಪ ಎರಡು ಹುಲಿಗಳನ್ನು ಸೆರೆಹಿಡಿದಿತ್ತು. ಈ ಎರಡೂ ಹುಲಿಗಳ ಕೂದಲು, ಎಂಜಲಿನ ಸ್ಯಾಂಪಲ್ ಸೇರಿದಂತೆ ಡಿಎನ್ಎ ಮಾದರಿಗಳನ್ನು ಹೈದರಾಬಾದ್ಗೆ ಕಳುಹಿಸಲಾಗಿದೆ. ಆದರೆ, ವರದಿ ಬರಲು ಇನ್ನೂ ತಡವಾಗುವ ಕಾರಣ ಅರಣ್ಯ ಇಲಾಖೆ ಕೂಂಬಿಂಗ್ ಮುಂದುವರೆಸಿದೆ. ಅಲ್ಲದೇ, ತೊಂದರೆ ಮಾಡದ ಹುಲಿಗಳನ್ನು ಸೆರೆ ಹಿಡಿಯುವುದು ಅನಿವಾರ್ಯವಾಗಿದೆ. ವರದಿ ತಡವಾಗಿರುವ ಕಾರಣ ಸೆರೆಸಿಕ್ಕ ಹುಲಿಯೇ ದಾಳಿ ಮಾಡಿತ್ತೇ ಅಥವಾ ಬೇರೆ ಹುಲಿಯೇ ಎಂಬ ಗೊಂದಲ ಗ್ರಾಮಸ್ಥರಲ್ಲಿ ಮೂಡಿದೆ.
” ವರದಿ ಶೀಘ್ರ ಬರಲಿ ಎಂಬ ಉದ್ದೇಶದಿಂದ ಹೈದರಾಬಾದ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸೆರೆ ಸಿಕ್ಕ ಹುಲಿಯ ಡಿಎನ್ಎ ಮಾದರಿಗಳನ್ನು ರವಾನಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಪ್ರಕರಣಗಳ ಮಾದರಿಯನ್ನು ಹೈದರಾಬಾದ್ಗೆ ಕಳುಹಿಸಿರುವುದರಿಂದ ವರದಿ ಬರಲು ತಿಂಗಳಾಗಬಹುದು.”
-ಪರಮೇಶ್, ಎಸಿಎಫ್, ಹೆಡಿಯಾಲ ಉಪವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ
ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ.…
ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ. ನಾಗರಹೊಳೆ ರಾಷ್ಟ್ರೀಯ…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದು, ಹೀಟ್ ಸ್ಟ್ರೋಕ್ ಭೀತಿ ಎದುರಾಗಿದೆ. ಹಲವೆಡೆ…
ಚಾಮರಾಜನಗರ: ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ…
ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರ ರೂ.೬೦…
ಭಾರತದಲ್ಲೇ ಮೊದಲ ಆಕಾಶವಾಣಿ ಕೇಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಆಕಾಶವಾಣಿ ಕೇಂದ್ರ ೯೦ ವಸಂತಗಳನ್ನು ಪೂರೈಸಿದ್ದು, ಪ್ರಭಾವಿ ಸಾರ್ವಜನಿಕ…