ಕೆ.ಬಿ.ರಮೇಶನಾಯಕ
ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಗೆ ಸಹಕಾರಿ; ಸ್ಥಳೀಯ ಉತ್ಪನ್ನಗಳ ಮಾರಾಟ, ಆದಾಯ, ಆರೋಗ್ಯ ವೃದ್ಧಿ
ಮೈಸೂರು: ಜಗತ್ತಿಗೆ ಯೋಗವನ್ನು ಪರಿಚಯಿಸಿಕೊಡುವ ಜತೆಗೆ ಯೋಗದಲ್ಲಿ ಗಿನ್ನಿಸ್ ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿರುವ ಸಾಂಸ್ಕೃತಿಕ ನಗರಿ ಮೈಸೂರನ್ನು ‘ಯೋಗ ಜಿಲ್ಲೆ’ಯಾಗಿ ಘೋಷಣೆ ಮಾಡುವ ತಯಾರಿ ನಡೆಯುತ್ತಿದ್ದು, ಇದರಿಂದ ಜಿಲ್ಲೆಗೆ ಹಲವು ಲಾಭಗಳು ದೊರೆಯಲಿದೆ.
ಮೈಸೂರನ್ನು ‘ಯೋಗ ಜಿಲ್ಲೆ’ಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ಘೋಷಣೆ ಹೊರಡಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿರುವುದು ಮತ್ತಷ್ಟು ಗಮನ ಸೆಳೆದಿದೆ. ಕಳೆದ ವರ್ಷವೇ ಯೋಗ ಜಿಲ್ಲೆ ಘೋಷಣೆ ಆಗಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಪ್ರಕ್ರಿಯೆ ಮುಂದಕ್ಕೆ ಹೋಯಿತು. ತಡವಾಗಿಯಾದರೂ ಮೈಸೂರಿಗೆ ಯೋಗ ಜಿಲ್ಲೆಯ ಪಟ್ಟ ಬರುತ್ತಿರುವುದು ಸಂತಸದ ವಿಚಾರವಾಗಿದೆ.
ಈಗಾಗಲೇ ಯೋಗದ ಮೂಲಕ ಜಗತ್ತಿನ ವಿವಿಧೆಡೆಯಿಂದ ಯೋಗಾಸಕ್ತರನ್ನು ಮೈಸೂರು ಆಕರ್ಷಿಸುತ್ತಿದೆ. ಪ್ರತಿವರ್ಷ ಯೋಗ ಕಲಿಯುವವರ ಹಾಗೂ ಯೋಗ ಕಲಿಸುವ ಗುರುಗಳ ಸಂಖ್ಯೆಯಲ್ಲೂ ವೃದ್ಧಿಯಾಗುತ್ತಿದೆ. ಅಲ್ಲದೆ, ಮೈಸೂರು ಯೋಗ ಪರಂಪರೆಗೆ ಸುದೀರ್ಘ ಇತಿಹಾಸ ಹೊಂದಿದೆ. ಇದರ ಜತೆಗೆ ಯೋಗ ಜಿಲ್ಲೆಯ ಗರಿ ಮೂಡಿದರೆ ಮೈಸೂರು ಮತ್ತಷ್ಟು ಸಂಖ್ಯೆಯಲ್ಲಿ ಯೋಗಾಸಕ್ತರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ.
ಜಿಲ್ಲೆಯಲ್ಲಿ ಈಗಾಗಲೇ ೧.೫೦ ಲಕ್ಷ ಜನರು ಯೋಗಾಭ್ಯಾಸ ಮಾಡುತ್ತಿದ್ದು, ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಜಿಲ್ಲೆಯಲ್ಲಿ ೫೦೦ಕ್ಕೂ ಹೆಚ್ಚು ಯೋಗ ಶಾಲೆಗಳು ಸಕ್ರಿಯವಾಗಿ ಕಾರ್ಯನಿರ್ವ ಹಿಸುತ್ತಿವೆ. ಮೈಸೂರಿಗೆ ಬಂದು ಯೋಗ ಕಲಿಯಲು ಸಾಧ್ಯವಾಗದೆ ಇರುವವರಿಗೆ ಯೋಗ ಗುರುಗಳು ಆನ್ಲೈನ್ ಮೂಲಕವೂ ಯೋಗ ಕಲಿಸುತ್ತಿದ್ದು, ಜಿಲ್ಲೆಯಲ್ಲಿ ೨೦೦ಕ್ಕೂ ಹೆಚ್ಚು ಆನ್ಲೈನ್ ತರಗತಿಗಳು ನಿತ್ಯ ನಡೆಯುತ್ತಿವೆ. ಪ್ರತಿ ವರ್ಷ ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ್ ಸೇರಿದಂತೆ ಯೂರೋಪ್ದೇ ಶಗಳಿಂದ ಸರಾಸರಿ ೩೦೦ಕ್ಕೂ ಹೆಚ್ಚು ವಿದೇಶಿಯರು ನಗರದ ವಿವಿಧ ಯೋಗ ಶಾಲೆಗಳಲ್ಲಿ ಯೋಗ ಕಲಿತು ವಿಶ್ವದ ವಿವಿಧೆಡೆ ಯೋಗವನ್ನು ವಿಸ್ತರಿಸುತ್ತಿದ್ದಾರೆ.
ಗಿನ್ನಿಸ್ ದಾಖಲೆ ನಿರ್ಮಿಸಿದ್ದ ನಗರ ಯೋಗದಲ್ಲಿ ಮೈಸೂರು ಹಲವು ದಾಖಲೆಗಳನ್ನು ನಿರ್ಮಿಸಿದೆ. ನಗರದ ರೇಸ್ಕೋರ್ಸ್ ಮೈದಾನದಲ್ಲಿ ೨೦೧೭ ಜೂನ್ ೨೧ರಂದು ಹಮ್ಮಿಕೊಂಡಿದ್ದ ತೃತೀಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬರೋಬ್ಬರಿ ೫೫,೫೦೬ ಯೋಗಪಟುಗಳು ಪಾಲ್ಗೊಂಡು ಸಾಮೂಹಿಕ ಯೋಗ ಪ್ರದರ್ಶಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಜಿಲ್ಲೆಯ ಹಲವು ಯೋಗಪಟುಗಳು ಹಾಗೂ ಯೋಗ ಶಿಕ್ಷಕರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಯೋಗಕ್ಕೆ ಸಂಬಂಧಿಸಿದ ಪ್ರಶಸ್ತಿಗಗಳನ್ನು ಪಡೆಯುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
” ಮೈಸೂರನ್ನು ‘ಯೋಗ ಜಿಲ್ಲೆ’ಯಾಗಿ ಘೋಷಣೆ ಮಾಡುವುದರಿಂದ ಜಿಲ್ಲೆಗೆ ಹಲವಾರು ಲಾಭಗಳು ದೊರೆಯಲಿದೆ. ಇದರಿಂದ ಜಿಲ್ಲೆಯಲ್ಲಿ ಯೋಗ ಕಲಿಯುವವರ ಸಂಖ್ಯೆ ಹೆಚ್ಚಾಗಲಿದ್ದು, ಯೋಗ ಕಲಿಸುವ ಗುರುಗಳಿಗೆ ಉದ್ಯೋಗ ಸೃಷ್ಟಿ ಮಾಡಿದಂತೆ ಆಗುತ್ತದೆ. ಅಲ್ಲದೆ, ಯೋಗ ಚಟುವಟಿಕೆ ವಿಸ್ತರಿಸಲು ಕೇಂದ್ರ ಸರ್ಕಾರ ೧ ಕೋಟಿ ರೂ. ಅನುದಾನ ನೀಡಲಿದೆ. ಇದರಲ್ಲಿ ಯೋಗ ಭವನ ನಿರ್ಮಾಣ, ಪ್ರತಿ ತಾಲೂಕುಗಳಲ್ಲಿ ಯೋಗ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.”
-ಗಣೇಶ್ಕುಮಾರ್, ಯೋಗ ಗುರು
ನವೀನ್ ಡಿಸೋಜ ಕೊಡಗಿನ ಹೋಂಸ್ಟೇವೊಂದರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಕ್ರಮ; ಜಂಟಿ ಸರ್ವೇ ಆರಂಭ ಮಡಿಕೇರಿ: ಹೋಂಸ್ಟೇಗಳಿಗೆ…
ಭೇರ್ಯ ಮಹೇಶ್ ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲು ರೈತ ಮುಖಂಡರ ಆಗ್ರಹ ಕೆ.ಆರ್.ನಗರ: ಜಿಲ್ಲೆಯಲ್ಲಿ ಭತ್ತದ ಕಣಜ ಎಂದೇ ಪ್ರಸಿದ್ಧಿಯಾಗಿರುವ…
ಎಚ್.ಎಸ್.ದಿನೇಶ್ಕುಮಾರ್ ಮೈಸೂರು: ಎರಡು ದಿನಗಳ ಹಿಂದೆ ಸುರಿದ ಮಳೆಗೆ ಮೈಸೂರು ನಗರದ ಹಲವೆಡೆ ಮರಉರುಳಿರುವುದೂ ಸೇರಿದಂತೆ ಅನೇಕ ಅನಾಹುತಗಳು ನಡೆದಿದೆ.…
ಮೈಸೂರು : ಕೆಎಸ್ಆರ್ಟಿಸಿ ನೌಕರರು ಮೇ 20ರಿಂದ ಅನಿಧಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗೆ…
ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಸ್ ಬಂದ್ ಆಗುವುದು ನಿಶ್ಚಿತವಾಗಿದೆ. ಸೋಮವಾರ…