Andolana originals

ಮುಂಗಾರು ವೈಫಲ್ಯ: ಬಿತ್ತನೆ ಶೇ.15.95ಕ್ಕೆ ಕುಸಿತ

ಮಹಾದೇಶ್ ಎಂ.ಗೌಡ

ಹನೂರು: ಕುಡಿಯುವ ನೀರು, ಮೇವಿಗೂ ತೀವ್ರ ಹಾಹಾಕಾರ

ಹನೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಬಿತ್ತನೆ, ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಸಂಕಷ್ಟ ಎದುರಾಗಿದೆ. ಬಿತ್ತನೆ ಪ್ರಮಾಣ ಜಿಲ್ಲೆಯಲ್ಲೇ ಅತಿ ಕಡಿಮೆ ದಾಖಲಾಗಿದ್ದು, ೧೬ ಪಂಚಾಯಿತಿಗಳ ೫೩ ಗ್ರಾಮಗಳಲ್ಲಿ ಕುಡಿಯುವ ನೀರಿಗೂ, ೯೪ ಗ್ರಾಮಗಳಲ್ಲಿ ಮೇವಿಗೂ ಹಾಹಾಕಾರ ಶುರುವಾಗಿದೆ.

ಕೃಷಿ ಮತ್ತು ಕಂದಾಯ ಇಲಾಖೆ ವರದಿ ಪ್ರಕಾರ, ಆಗಸ್ಟ್ ೨೬ರವರೆಗೆ ತಾಲ್ಲೂಕಿನಲ್ಲಿ ೩೩೮.೮ ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ೨೬೬ ಮಿ.ಮೀ. ಮಾತ್ರ ಮಳೆಯಾಗಿದೆ. ಶೇ.೨೧.೪೮ರಷ್ಟು ಕೊರತೆಯಾಗಿದೆ. ಇದು ಬಿತ್ತನೆ ಮೇಲೆ ಗಂಭೀರ ಪರಿಣಾಮ ಬೀರಿದೆ.

೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ೨೦,೦೪೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಆಗಸ್ಟ್ ೨೮ರವರೆಗೆ ಕೇವಲ ೩,೧೯೬ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಕೇವಲ ಶೇ.೧೫.೯೫ರಷ್ಟು ಮಾತ್ರ ಬಿತ್ತನೆಯಾಗಿದ್ದು, ಇದು ಜಿಲ್ಲೆಯಲ್ಲೇ ಅತಿ ಕಡಿಮೆಯಾಗಿದೆ.

ಬೆಳೆವಾರು ನೋಡಿದರೆ ಭತ್ತ ೧,೫೦೦ ಹೆಕ್ಟೇರ್ ಗುರಿಗೆ ೨ ಹೆಕ್ಟೇರ್, ರಾಗಿ ೫,೫೦೦ ಹೆಕ್ಟೇರ್ ಗುರಿಗೆ ೨೫೦ ಹೆಕ್ಟೇರ್, ಜೋಳ ೧,೨೦೦ ಹೆಕ್ಟೇರ್ ಗುರಿಗೆ ೧೮೦ ಹೆಕ್ಟೇರ್, ಹತ್ತಿ ೨೫೦ ಹೆಕ್ಟೇರ್ ಗುರಿಗೆ ೧೯ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕೃಷಿ ಇಲಾಖೆ ಬಳಿ ೫೬೬ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದ್ದು, ಎಂಆರ್-೧, ಎಂಎಲ್-೩೬೫ ರಾಗಿ ಮತ್ತು ಪಿಎಸಿ-೭೫೧, ಕೆಎಂಹೆಚ್-೨೫೮೯ ಮೆಕ್ಕೆಜೋಳ ತಳಿಗಳು ಲಭ್ಯವಿವೆ.

೧೬ ಗ್ರಾಪಂ, ೫೩ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತಿವೆ. ತಾಲ್ಲೂಕಿನ ೧೬ ಗ್ರಾಪಂ ವ್ಯಾಪ್ತಿಯ ೫೩ ಗ್ರಾಮಗಳಲ್ಲಿ ನೀರಿನ ಅಭಾವ ಎದುರಾಗಿದೆ. ಕೌದಳ್ಳಿ, ರಾಮಾಪುರ, ಮಾರ್ಟಳ್ಳಿ, ಎಲ್ಲೇಮಾಳ, ಕುರಟ್ಟಿಹೊಸೂರು, ಅಜ್ಜೀಪುರ, ಸೂಳೇರಿಪಾಳ್ಯ, ದೊಡ್ಡಾಲತ್ತೂರು, ಪೊನ್ನಾಚಿ, ಮ.ಮ.ಬೆಟ್ಟ, ದಿನ್ನಳ್ಳಿ, ಶಾಗ್ಯ, ಬೈಲೂರು, ಬಂಡಳ್ಳಿ, ಮೀಣ್ಯಂ, ಅಜ್ಜೀಪುರ ಮತ್ತು ಹುತ್ತೂರು ಗ್ರಾಪಂಗಳಲ್ಲಿ ಸಮಸ್ಯೆ ತೀವ್ರವಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

೩೫,೬೫೨ ಜಾನುವಾರುಗಳಿಗೆ ಮೇವಿನ ಬರ: ಪಶು ಸಂಗೋಪನೆ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಪ್ರಕಾರ, ತಾಲ್ಲೂಕಿನ ೧೬ ಪಂಚಾಯಿತಿಗಳ ೯೪ ಗ್ರಾಮಗಳ ೩೫,೬೫೨ ಜಾನುವಾರುಗಳಿಗೆ ೧೯,೨೫೨.೦೮ ಟನ್ ಮೇವು ಬೇಕಾಗಿದ್ದು, ಇರುವುದು ೭,೫೩೪.೭೯ ಟನ್ ಮಾತ್ರ. ಇದು ಕೇವಲ ೭೫ ದಿನಗಳಿಗೆ ಸಾಕಾಗಲಿದೆ.

ಕೌದಳ್ಳಿ ಪಂಚಾಯಿತಿಯ ೯ ಗ್ರಾಮಗಳಲ್ಲಿ ೨,೦೧೯ ಜಾನುವಾರುಗಳಿಗೆ ೧,೦೮೯ ಟನ್ ಮೇವು ಬೇಕು, ಇರುವುದು ೩೯೨ ಟನ್ ಮಾತ್ರ. ಶೆಟ್ಟಳ್ಳಿ ಪಂಚಾಯಿತಿಯ ೭ ಗ್ರಾಮಗಳಲ್ಲಿ ೨,೨೫೬ ಜಾನುವಾರುಗಳಿಗೆ ೧,೨೧೮ ಟನ್ ಮೇವು ಬೇಡಿಕೆ ಇದ್ದು, ಇರುವುದು ೪೩೮ ಟನ್ ಮಾತ್ರ. ಕುರಟ್ಟಿಹೊಸೂರು ಪಂಚಾಯಿತಿಯ ದಂಟಳ್ಳಿ ಗ್ರಾಮ ಒಂದರಲ್ಲೇ ೧,೪೯೬ ಜಾನುವಾರುಗಳಿಗೆ ೮೦೭ ಟನ್ ಬೇಕು. ಎಲ್ಲೇಮಾಳ ಪಂಚಾಯಿತಿಯ ೬ ಗ್ರಾಮಗಳಲ್ಲಿ ೨,೪೧೨, ಹುತ್ತೂರು ಪಂಚಾಯಿತಿಯ ೭ ಗ್ರಾಮಗಳಲ್ಲಿ ೨,೨೫೩ ಜಾನುವಾರುಗಳಿಗೆ ಮೇವು ಬೇಕು. ಹೂಗ್ಯ ಪಂಚಾಯಿತಿಯ ಪೆದ್ದನಪಾಳ್ಯದಲ್ಲಿ ೨,೩೩೯ ಜಾನುವಾರುಗಳಿಗೆ ೧,೨೬೩ ಟನ್ ಮೇವು ಬೇಕಿದ್ದು, ಇದು ತಾಲ್ಲೂಕಿನಲ್ಲೇ ಅತಿ ಹೆಚ್ಚು.

ದಿನ್ನಳ್ಳಿ ಪಂಚಾಯಿತಿಯ ೯ ಗ್ರಾಮಗಳಲ್ಲಿ ೧,೫೬೨, ಮಾರ್ಟಳ್ಳಿ ಪಂಚಾಯಿತಿಯ ೫ ಗ್ರಾಮಗಳಲ್ಲಿ ೯೯೮, ಉಳಿದ ೧೨ ಗ್ರಾಮಗಳಲ್ಲಿ ೨,೭೮೩ ಜಾನುವಾರುಗಳಿಗೆ ೧,೫೦೨ ಟನ್, ಹನೂರು ಪಟ್ಟಣದಲ್ಲಿ ೧,೦೬೫ ಜಾನುವಾರುಗಳಿಗೆ ೫೭೫ ಟನ್ ಮೇವು ಬೇಕಿದೆ. ರಾಮಾಪುರ ಪಂಚಾಯಿತಿಯ ೪ ಗ್ರಾಮಗಳಲ್ಲಿ ೯೮೪, ಬಂಡಳ್ಳಿ ಪಂಚಾಯಿತಿಯ ಬಂಡಳ್ಳಿ ಗ್ರಾಮ ಒಂದರಲ್ಲೇ ೨,೩೩೧ ಮತ್ತು ಹಲಗಾಪುರದಲ್ಲಿ ೧,೧೩೮ ಸೇರಿದಂತೆ ಒಟ್ಟು ೪,೦೨೪ ಜಾನುವಾರುಗಳಿಗೆ ಮೇವಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಪಂಚಾಯಿತಿಗಳಲ್ಲಿ ಮೇವು ಬ್ಯಾಂಕ್ ಮತ್ತು ಗೋಶಾಲೆ ತೆರೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ.

” ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿ ವಾರ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಲಾಗುತ್ತಿದೆ. ಹನೂರು ತಾಲ್ಲೂಕಿನ ೧೬ ಗ್ರಾಪಂ ವ್ಯಾಪ್ತಿಯ ೫೩ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈಗಾಗಲೇ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಳೆದ ವರ್ಷ ಬರ ಬಂದಾಗ ೧೭ ಕಡೆಗಳಲ್ಲಿ ಗೋ ಶಿಬಿರಗಳನ್ನು ತೆರೆಯಲಾಗಿತ್ತು. ಈಗಲೂ ರೈತರು ಗೋ ಶಾಲೆಗಳನ್ನು ತೆರೆಯುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ಮಾರ್ಗಸೂಚಿ ಬಂದ ಬಳಿಕ ಗೋಶಾಲೆಗಳನ್ನು ತೆರೆಯಲಾಗುವುದು. ಸದ್ಯ ಗೋ ಶಿಬಿರಗಳನ್ನು ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.”

-ಚೈತ್ರ, ತಹಸಿಲ್ದಾರ್, ಹನೂರು ತಾಲ್ಲೂಕು

” ಹಲವಾರು ತಿಂಗಳುಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಕೊಪ್ಪ ಗ್ರಾಮದಲ್ಲಿ ಗೋ ಶಾಲೆ ತೆರೆದು ನೀರು, ಮೇವು ಪೂರೈಕೆ ಮಾಡುವಂತೆ ಮನವಿ ಮಾಡಲಾಗಿದೆ.”

-ನಾಗರಾಜು, ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ, ಕೊಪ್ಪ ಘಟಕ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

29 mins ago

ಓದುಗರ ಪತ್ರ: ಬದಲಾಗುತ್ತಿದೆ ಚಾತುರ್ಮಾಸ ಪದದ ಅರ್ಥ

ಪ್ರತಿವರ್ಷ ಆಷಾಢ, ಶ್ರಾವಣ ಮಾಸದ ಸಮಯದಲ್ಲಿ ಎಲ್ಲ ಮಠಾಧೀಶರೂ ಚಾತುರ್ಮಾಸ ವ್ರತವನ್ನು ಆಚರಿಸುವುದು ವಾಡಿಕೆ. ಚಾತುರ್ಮಾಸ ಎಂದರೆ ನಾಲ್ಕು ತಿಂಗಳು.…

31 mins ago

ಓದುಗರ ಪತ್ರ: ದಸರಾ ಮಹೋತ್ಸವ ಸರಳವಾಗಿರಲಿ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಮ್ಮ ನಾಡಿನ ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ…

33 mins ago

ಓದುಗರ ಪತ್ರ: ಗೃಹಲಕ್ಷ್ಮಿ: ಅರ್ಹರಿಗೆ ಅನ್ಯಾಯವಾಗದಿರಲಿ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಆರ್ಥಿಕತೆಗೆ ನವಚೈತನ್ಯ ತುಂಬಿದೆ. ಮಹಿಳೆಯರಿಗೆ ಆರ್ಥಿಕ…

35 mins ago

ಎಚ್೧ಎನ್೧: ಕೊಡಗು ಜಿಲ್ಲೆಯಲ್ಲಿ 4 ಪ್ರಕರಣ ದೃಢ

ನವೀನ್ ಡಿಸೋಜ ಶೀತ, ಕೆಮ್ಮು, ಜ್ವರ ಸಂಬಂಧ ೩,೭೬೨ ಪ್ರಕರಣ ದಾಖಲು; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಮನವಿ ಮಡಿಕೇರಿ:…

37 mins ago

ಅಪ್ಪಂದಿರ ಬದಲು ತಾವೇ ನಾಯಕತ್ವ ಹೊರಲು ಸಜ್ಜಾದ ಪುತ್ರರು

ಕೆ.ಬಿ.ರಮೇಶನಾಯಕ ಈಗಾಗಲೇ ಜವಾಬ್ದಾರಿ ಹೊತ್ತಿರುವ ಡಾ.ಯತೀಂದ್ರ, ಸುನಿಲ್‌ಬೋಸ್, ಜಿ.ಡಿ.ಹರೀಶ್ ಗೌಡ ತಂದೆಯಂದಿರ ನಿಧನದಿಂದ ತೆರವಾದ ಸ್ಥಾನ ತುಂಬಿದ ಅನಿಲ್ ಚಿಕ್ಕಮಾದು,…

50 mins ago