Andolana originals

ಎಂಎಂಸಿ ಶವಾಗಾರ; ದುರ್ವಾಸನೆಯ ಆಗರ

ಮೈಸೂರು: ನಗರದ ಮೈಸೂರು ಮೆಡಿಕಲ್ ಕಾಲೇಜು ಅಧೀನಕ್ಕೆ ಒಳಪಡುವ ಶವಾಗಾರದಲ್ಲಿನ ಮೂರು ಶೀತಲ ಯಂತ್ರಗಳು ಕೆಟ್ಟು ನಿಂತಿರುವ ಪರಿಣಾಮ ಶವಪರೀಕ್ಷೆಗಾಗಿ ಬರುವ ಮೃತದೇಹಗಳು ಕೊಳೆತು ದುರ್ವಾಸನೆ ಬೀರುತ್ತಿವೆ. ಸಮಸ್ಯೆಯನ್ನು ಸರಿಪಡಿಸಬೇಕಾದ ವೈದ್ಯಾಧಿಕಾರಿಗಳು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆಯೇ ಶೀತಲ ಯಂತ್ರಗಳು ಕೆಟ್ಟು ಹೋಗಿವೆ. ಈ ಸಂಬಂಧ ಶೀತಲ ಯಂತ್ರಗಳನ್ನು ದುರಸ್ತಿಗೊಳಿಸುವಂತೆ ಶವಾಗಾರದ ಸಿಬ್ಬಂದಿಗಳು ಎಂಎಂಸಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎನ್ನಲಾಗಿದೆ.

ಶವಪರೀಕ್ಷೆ ನಂತರ ಮೃತದೇಹಗಳನ್ನು ಕೊಂಡೊಯ್ಯಲು ಬರುವ ಸಂಬಂಧಿಕರು ಶವಾಗಾರದ ದುಃಸ್ಥಿತಿ ಹಾಗೂ ಶವದಿಂದ ಸೂಸುವ ದುರ್ವಾಸನೆ ತಡೆಯಲಾರದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ನಡುವೆ ಶವಾಗಾರದ ಸಿಬ್ಬಂದಿ ದುರ್ವಾಸನೆಯನ್ನು ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಪಘಾತ, ಆತ್ಮಹತ್ಯೆ ಹಾಗೂ ಇನ್ನಿತರೆ ಕಾರಣಗಳಿಂದ ಮೃತಪಟ್ಟವರ ಶವಗಳನ್ನು ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿನ ಶವಾಗಾರಕ್ಕೆ ತರಲಾಗುತ್ತದೆ. ಜೊತೆಗೆ ಅಪರಿಚಿತ ಶವಗಳನ್ನೂ ಇಲ್ಲಿ ಇರಿಸಲಾಗುತ್ತದೆ.
ಅನೇಕ ಬಾರಿ ವಾರಸುದಾರರು ಇಲ್ಲದ ಕಾರಣ ಶವಪರೀಕ್ಷೆ ಎರಡು, ಮೂರು ದಿನಗಳು ವಿಳಂಬವಾಗುತ್ತದೆ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಮೃತದೇಹಗಳನ್ನು ಸಂರಕ್ಷಿಸಬೇಕಾಗುತ್ತದೆ. ಇದಕ್ಕಾಗಿ ಮೂರು ಶೀತಲ ಯಂತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ.

ಮೂರು ಶೀತಲ ಯಂತ್ರಗಳ ಪೈಕಿ ಎರಡು ಯಂತ್ರಗಳು ಸಂಪೂರ್ಣ ಕೆಟ್ಟು ನಿಂತಿದ್ದು, ಉಳಿದ ಒಂದು ಯಂತ್ರ ಕೂಡ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಒಂದು ಶೀತಲ ಯಂತ್ರದಲ್ಲಿ 6 ಮೃತದೇಹಗಳನ್ನು ಇರಿಸಬಹುದಾಗಿದೆ. ಹೀಗೆ ಮೂರು ಯಂತ್ರಗಳಲ್ಲಿ 18 ಶವಗಳನ್ನು ಇರಿಸುವ ವ್ಯವಸ್ಥೆ ಇದೆ.

ಇದೀಗ ಮೃತ ದೇಹಗಳ ನಿರ್ವಹಣೆ ಸಾಧ್ಯವಾಗದೆ ಅವು ಕೊಳೆತು ದುರ್ವಾಸನೆ ಬೀರುತ್ತಿವೆ. ಕೆಲ ಶವಗಳ ಮೇಲೆ ಹುಳುಗಳು ಹರಿದಾಡುತ್ತಿವೆ. ಶೀತಲ ಯಂತ್ರಗಳನ್ನು ದುರಸ್ತಿಗೊಳಿಸಿ ಎಂದು ಪತ್ರ ಬರೆದರೂ ಅದು ಡೀನ್ ಅವರಿಗೆ ತಲುಪೇ ಇಲ್ಲ ಎಂದು ಶವಾಗಾರದ ಸಿಬ್ಬಂದಿಯೊಬ್ಬರು ದೂರುತ್ತಾರೆ.

ಯಾರೇ ಸತ್ತರೂ ಅವರ ಮೃತದೇಹಗಳಿಗೆ ಗೌರವ ಕೊಡಬೇಕಾದುದು ಎಲ್ಲರ ಜವಾಬ್ದಾರಿ. ಆದರೆ, ಶವಾಗಾರದಲ್ಲಿ ಇರಿಸಲಾಗಿರುವ ಶವಗಳನು ನೋಡಿದಲ್ಲಿ ಇದು ವೈದ್ಯರಾದವರು ನಡೆದುಕೊಳ್ಳುವ ರೀತಿಯೇ ಎಂದು ಬೇಸರ ಹುಟ್ಟಿಸುತ್ತದೆ.

ಶವಗಳು ಕೊಳೆತಲ್ಲಿ ಅದರಿಂದ ಹೊರ ಸೂಸುವ ದುರ್ವಾಸನೆಯಿಂದ ಸಾಕಷ್ಟು ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಕೆಲಸ ಮಾಡುವವರ ಪಾಡೇನು ಹಾಗೂ ಶವಗಳನ್ನು ಪಡೆದುಕೊಳ್ಳಲು ಬರುವ ಸಂಬಂಧಿಗಳ ಆರೋಗ್ಯದ ಗತಿಯೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಶವಾಗಾರದ ಅವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಶವಾಗಾರದ ಆವರಣ ರೋಗರುಜಿನಗಳ ತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟಿರುವ ಬಗ್ಗೆ ಬುಧವಾರ ಮಧ್ಯಾಹ್ನದವರೆಗೂ ನನ್ನ ಗಮನಕ್ಕೆ ಬಂದಿಲ್ಲ. ಇಂತಹ ವಿಷಯವನ್ನು ಗಮನಕ್ಕೆ ತಾರದ ಬಯೋ ಮೆಡಿಕಲ್ ಇಂಜಿನಿಯ‌ರ್ ಹಾಗೂ ವಿಭಾಗದ ಮುಖ್ಯಸ್ಥರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಗುರುವಾರ ಸಂಜೆಯ ಒಳಗಾಗಿ ಯಂತ್ರಗಳನ್ನು ದುರಸ್ತಿಗೊಳಿಸುವಂತೆ ಸೂಚನೆ ನೀಡಲಾಗಿದೆ.

• ಕೆ.ಆರ್.ದಾಕ್ಷಾಯಿಣಿ, ಡೀನ್ ಮತ್ತು ನಿರ್ದೆಶಕರು, ಮೈಸೂರು ಮೆಡಿಕಲ್‌ ಕಾಲೇಜು.

ಹೆಚ್. ಎಸ್.‌ ದಿನೇಶ್‌ ಕುಮಾರ್

ಮೈಸೂರಿನವನಾದ ನಾನು, 1994ರಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 22 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಸಂಕ್ರಾಂತಿʼಯಿಂದ ಪ್ರಾರಂಭಿಸಿ, ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರ, ಮುಖ್ಯ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಪರಾಧ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸ.

Recent Posts

ಓದುಗರ ಪತ್ರ: ನಂಜನಗೂಡು ಕೆ.ಹೆಚ್.ಬಿ. ಕಾಲೋನಿ ರಸ್ತೆ ದುರಸ್ತಿ ಮಾಡಿ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಯಿಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು…

2 hours ago

ಓದುಗರ ಪತ್ರ: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ

ರಾಜ್ಯದಲ್ಲಿ, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡು, ಈ ಶಾಲೆಗಳು ಕುಸಿಯುವ ಹಂತ ತಲುಪಿವೆ ಎಂದು,…

2 hours ago

ಓದುಗರ ಪತ್ರ: ರಸ್ತೆ ಬದಿಯ ಒಣಗಿದ ಮರಗಳನ್ನು ತೆರವುಗೊಳಿಸಿ

ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಿಂದ ಕೆಂಡಗಣ್ಣಸ್ವಾಮಿ ಗದ್ದಿಗೆ ಮಾರ್ಗವಾಗಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿರುವ ಬಹುತೇಕ…

2 hours ago

ಓದುಗರ ಪತ್ರ: ಪಾರಂಪರಿಕ ಕಟ್ಟಡಗಳ ಮಾಹಿತಿ ಫಲಕಗಳ ದುಸ್ಥಿತಿ

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಇಂದಿಗೂ ಸದೃಢವಾಗಿ ಕಂಗೊಳಿಸುತ್ತಿರುವುದು ಮೈಸೂರಿನ ಭವ್ಯ ಪರಂಪರೆಗೆ ಸಾಕ್ಷಿಯಾಗಿವೆ. ಇಂತಹ ಪಾರಂಪರಿಕ ಕಟ್ಟಡಗಳ…

2 hours ago

ಕೊಡಗು ಜಿಲ್ಲೆಯಲ್ಲೇ ಎರಡನೇ ಸ್ಥಾನ ಪಡೆದ ರೈತ ಪುತ್ರಿ ನಂದಿತಾ

ಮಡಿಕೇರಿ: ಓದುವ ಛಲ, ಆತ್ಮವಿಶ್ವಾಸ, ಪ್ರೋತ್ಸಾಹ, ಮಾರ್ಗದರ್ಶನವಿದ್ದರೆ ಮಕ್ಕಳು ಸರ್ಕಾರಿ ಕಾಲೇಜಿನಲ್ಲಿ  ಓದಿದರೂ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ಇದಕ್ಕೆ…

2 hours ago

ಆಸ್ತಿ ವಿವಾದ: ಸೋದರಳಿಯನ ಕೊಲೆಗೆ ಸುಪಾರಿ ಕೊಟ್ಟ ಮಾವ

ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪಿರಿಯಾಪಟ್ಟಣ: ತಂಗಿಗೆ ಆಸ್ತಿಯನ್ನು ನೀಡಲೇಬಾರದು ಎಂದು ತೀರ್ಮಾನಿಸಿ ತನ್ನ ಸೋದರ ಅಳಿಯನನ್ನು ಕೊಲ್ಲಲು…

2 hours ago