ಕೆ.ಬಿ.ರಮೇಶ್ ನಾಯಕ
ತಾಂತ್ರಿಕ ಶಾಖೆ-ನಿವೇಶನ ಶಾಖೆ ವಿಲೀನ; ದಾಖಲೆಗಳ ವಿಳಂಬಕ್ಕೆ ಇತಿಶ್ರೀ
ಮೈಸೂರು: ಹಲವು ವರ್ಷಗಳಿಂದ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿವೇಶನ ಶಾಖೆ- ತಾಂತ್ರಿಕ ಶಾಖೆಗಳನ್ನು ವಿಲೀನಗೊಳಿಸಿ ಸಾರ್ವಜನಿಕರ ಅಲೆದಾಟಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ)ಬ್ರೇಕ್ ಹಾಕಿದೆ.
ನಿವೇಶನ ಶಾಖೆಯಿಂದ ತಾಂತ್ರಿಕ ಶಾಖೆ, ತಾಂತ್ರಿಕ ಶಾಖೆಯಿಂದ ನಿವೇಶನ ಶಾಖೆಗೆ ಕಡತ ರವಾನೆಯಾಗುವ ತನಕ ಸಾರ್ವಜನಿಕರು ಪ್ರಾಧಿಕಾರಕ್ಕೆ ಅಲೆದಾಡುವ ಜತೆಗೆ, ಅನಗತ್ಯವಾಗಿ ವಿಳಂಬವಾಗುತ್ತಿರುವುದನ್ನು ಮನಗಂಡು ಈಗ ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಆಯುಕ್ತರು ಎರಡೂ ವಿಭಾಗಗಳನ್ನು ವಿಲೀನಗೊಳಿಸಿದ್ದಾರೆ. ಇದು ಎಂಡಿಎ ರಚನೆಯಾದ ಬಳಿಕ ಮೊದಲ ಹಂತದ ಸುಧಾರಣಾ ಮತ್ತು ಬದಲಾವಣೆಯ ಹೆಜ್ಜೆಯಾಗಿದೆ.
ಮೈಸೂರು ನಗರ ಮತ್ತು ಹೊರ ವಲಯದಲ್ಲಿ ರಚನೆಯಾಗಿರುವ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸುವ ಮಾಲೀಕರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡ ಮೇಲೆ ಟೈಟಲ್ ಡೀಡ್, ಗುತ್ತಿಗೆ ಕರಾರು, ಸ್ವಾಧೀನಪತ್ರ, ಚೆಕ್ಬಂದಿ ತಿದ್ದುಪಡಿ, ಪೌತಿ ಖಾತೆಗಳು , ಭೌತಿಕ ಸ್ಥಿತಿಗತಿಗಳ ಬಗ್ಗೆ ಅಳತೆಗಾಗಿ ಅರ್ಜಿ ಸಲ್ಲಿಸುತ್ತಾರೆ. ಈ ಅರ್ಜಿಗಳನ್ನು ಸ್ವೀಕರಿಸುವ ನಿವೇಶನ ಶಾಖೆಯು ದಾಖಲೆಗಳನ್ನು ಪರಿಶೀಲಿಸುವ ಜತೆಗೆ, ತಾಂತ್ರಿಕ ಶಾಖೆಗೆ ಕಳುಹಿಸಿ ವರದಿ ಕೊಡುವಂತೆ ಟಿಪ್ಪಣಿ ಬರೆದು ಕಳುಹಿಸಿಕೊಡುತ್ತಿತ್ತು. ತಾಂತ್ರಿಕ ಶಾಖೆಯು ಆಯಾಯ ಅರ್ಜಿಯನ್ನು ಸಕಾಲದಲ್ಲಿ ಪರಿಶೀಲಿಸಿ ವರದಿ ಕೊಡಬೇಕಾದರೂ ಹಲವಾರು ಕಾರಣಗಳಿಂದ ವಿಳಂಬ ಮಾಡುತ್ತಿತ್ತು.
ಸಾರ್ವಜನಿಕರು ಕೂಡ ನಿವೇಶನ ಶಾಖೆಯಲ್ಲಿ ವಿಚಾರಿಸಿದ ಮೇಲೆ ತಾಂತ್ರಿಕ ಶಾಖೆಗೂ ತೆರಳಿ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಅರಿತುಕೊಳ್ಳಲು ಅಲೆದಾಡಬೇಕಿತ್ತು. ಹೀಗಾಗಿ, ಒಂದೊಂದು ಬಾರಿ ೧೫ ರಿಂದ ೨೦ ದಿನಗಳ ಕಾಲ ಸಮಯ ತಗಲುತ್ತಿತ್ತು.
ಆದರೆ, ಈಗ ತಾಂತ್ರಿಕ ಶಾಖೆಯಲ್ಲಿ ಈ ಅರ್ಜಿಗಳನ್ನು ಪರಿಶೀಲಿಸಿ ದಾಖಲೆಗಳನ್ನು ಪರಿಶೀಲಿಸಿ ವರದಿ ಕೊಡಬೇಕಾಗಿರುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ನಿವೇಶನ ಶಾಖೆಯಿಂದ ಸ್ವಂತ ನಿರ್ಧಾರ ಕೈಗೊಂಡು ಮುಂದಿನ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇದೀಗ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಬಂದಿರುವ ಕೆ.ಆರ್.ರಕ್ಷಿತ್ ಅವರು ಸಾರ್ವಜನಿಕರ ಕೆಲಸ, ಕಾರ್ಯಗಳು ವಿಳಂಬವಾಗದಂತೆ ತಡೆಯಲು ಈ ಎರಡೂ ಶಾಖೆಗಳನ್ನು ಒಗ್ಗೂಡಿಸಿ ಕೆಲಸ ಮಾಡಿಸಲು ಆದೇಶ ನೀಡಿದ್ದಾರೆ. ಈ ಆದೇಶ ಹೊರ ಬಿದ್ದ ತಕ್ಷಣದಿಂದಲೇ ನಿವೇಶನ-ತಾಂತ್ರಿಕ ಶಾಖೆಗಳು ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಮುಂದೆ ವಿಳಂಬಕ್ಕೆ ಬ್ರೇಕ್ ಬೀಳುವ ಜತೆಗೆ ನಿವೇಶನದಾರರ ಕೆಲಸ ಕಾರ್ಯಗಳು ಬೇಗನೆ ನಡೆಯಲು ಸಾಧ್ಯವಾಗಿದೆ.
ಮತ್ತೆ ೭೦ ಜನರ ನೇಮಕಾತಿಗೆ ಟೆಂಡರ್: ಎಂಡಿಎ ಕ್ಲೀನ್ ಮಾಡಲು ಹೊರಟಿರುವ ಆಯುಕ್ತರು ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಟೆಂಡರ್ ಪ್ರಕ್ರಿಯೆ ಶುರು ಮಾಡಿಸಿದ್ದಾರೆ. ೭೦ ಮಂದಿಯನ್ನು ನೇಮಕ ಮಾಡಿಕೊಳ್ಳಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಅದರಂತೆ ನುರಿತ ಏಜೆನ್ಸಿಯಿಂದ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ
” ನಿವೇಶನ ಶಾಖೆ ಹಾಗೂ ತಾಂತ್ರಿಕ ಶಾಖೆ ಬೇರೆ ಬೇರೆಯಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ ಎನ್ನುವ ಮಾಹಿತಿ ಬಂದಿದ್ದರಿಂದ ಎರಡೂ ಶಾಖೆಗಳು ಒಟ್ಟಿಗೆ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ.”
-ಕೆ.ಆರ್.ರಕ್ಷಿತ್, ಆಯುಕ್ತರು, ಎಂಡಿಎ
ಶೀಘ್ರದಲ್ಲೇ ಇ-ಆಡಳಿತ:
ಹಲವು ವರ್ಷಗಳಿಂದ ಬದಲಾವಣೆಗೆ ಒಗ್ಗಿಕೊಳ್ಳದೆ ಕಾಗದಪತ್ರಗಳ ಮೂಲಕವೇ ಕಾರ್ಯನಿರ್ವಹಿಸುತ್ತಿದ್ದ ಎಂಡಿಎನಲ್ಲಿ ಶೀಘ್ರ ಇ-ಆಡಳಿತದಲ್ಲಿ ಕೆಲಸ ಶುರುವಾಗಲಿದೆ. ಈಗಾಗಲೇ ಆಯುಕ್ತರ ಕಚೇರಿ, ಅಧ್ಯಕ್ಷರ ಕಚೇರಿ, ತಾಂತ್ರಿಕ ಶಾಖೆ, ನಿವೇಶನ ಶಾಖೆ, ಕಂದಾಯ ಶಾಖೆ, ಭೂ ಸ್ವಾಧಿನ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇ-ಆಡಳಿತಕ್ಕೆ ಬೇಕಾದ ಎಲ್ಲಾ ತಂತ್ರಾಂಶ ಗಳು, ಸಾಫ್ಟ್ವೇರ್ಗಳನ್ನು ಅಪ್ಡೇಟ್ ಮಾಡಲಾಗುತ್ತಿದೆ.
ಹೊಸದಿಲ್ಲಿ : ಇರಾನ್ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿರುವ…
ನಂಜನಗೂಡು : ನವಜಾತ ಶಿಶುವನ್ನು ನಾಲೆಗೆ ಎಸೆದ ದುರಂತ ಘಟನೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ…
ಬಾಗಲಕೋಟೆ : ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ…
ಹನೂರು : ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ದಾಸೋಹ, ಲಾಡು ಪ್ರಸಾದ ತಯಾರಿಸಲು ಯಾವುದೇ ರೀತಿಯ ಸಿಲಿಂಡರ್ ಕೊರತೆಯಾಗಿಲ್ಲ…
ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ…
ಮೈಸೂರು : ನಗರದ ಹೊರವಲಯದ ಕೆಂಪೇಗೌಡ ವೃತ್ತ(ಮಣಿಪಾಲ್ ಜಂಕ್ಷನ್)ದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿಗಳನ್ನು ಸಂಸದ ಯದುವೀರ್…